ಬಸವಣ್ಣ... ಕಿತ್ತು ಬಿಸಾಕಿದುದು
ದಾರವನ್ನಲ್ಲ... ಜಾತಿಯ ಮೌಡ್ಯವನ್ನ....
ಒಪ್ಪಿ...ಎದೆಗೊತ್ತಿಕೊಂಡದ್ದು, ತಾಮ್ರದ
ತಟ್ಟೆಯಲ್ಲಿ ಝಣಝಣಿಸುವ ನಾಣ್ಯಗಳ
ಸುರಿಮಳೆಯ ಸುರಿಸುವ ಕಲ್ಲನ್ನಲ್ಲ...!!!
ಆತ್ಮವನುದ್ಧರಿಸುವ ಲಿಂಗವನ್ನ.....
ಹೇಳಿದೆ ನೀನು... ಕೇಳಲಿಲ್ಲ ನಾನು, ಮುಳುಗೆದ್ದೆ
ಗಂಗೆ...ತುಂಗೆ..ಭದ್ರೆ....ಕಾವೇರಿಗಳ ತಟಗಳಲಿ
ತೊಳೆದದ್ದು, ಪರಸ್ತ್ರೀಯ ಅಂದವ ಕಂಡು, ಮೈಯಲಿ
ಉಕ್ಕಿದ ಬೇವರಿನ ವಾಸನೆಯಷ್ಟೇ...,ಕಾಮನೆಗಳ
ಕಾವಿನಲಿ ಬೇಯುತಿರುವ ಮನಸೆಂದು ನಿಷ್ಕಲ್ಮಷವಾಗುವುದು
ಮುಪ್ಪಾವರಿಸಿ...ಸಾವೆದುರು ಬಂದು ನಿಂತಾಗ ಸಜ್ಜನನಾದರೇನು...?
ನಾನೇಕೆ..ಅಪ್ಪಿಕೊಳ್ಳಲಯ್ಯಾ ನಿನ್ನನು...?
ನಿನ್ನನುಭಾವಮೃತವನೆ ನಾ ಸವಿಯದಿದ್ದಾಗ...!!!
ಹಾಕಿಕೊಟ್ಟ ಸನ್ಮಾರ್ಗವ ತೊರೆದು, ಬದುಕಿನ
ಭವ ಜಂಜಾಟಗಳ ನರಕದ ಹಾದಿಯನು ತುಳಿದಿರುವಾಗ
ಹೊಟ್ಟೆ ಹಿಡಿಯುವಷ್ಟೆ ಉಣ್ಣುವ ನಾವುಗಳು..ಮತ್ತೇಕೆ
ಅನುಭವಿಸಲಾರದಷ್ಟು ಹೆಣ್ಣು...ಹೊನ್ನು..ಮಣ್ಣನ್ನು ಹೊಂದುವೇವು...
ಈ....ಕಲಿಗಾಲದಲ್ಲಿ ನೀ.....ಕಳಬೇಡ ಕೊಲಬೇಡವೆಂದರೆ
ನಾನೆಲ್ಲಿ ಹೋಗಲಿ....ಬಸವಣ್ಣ..
ಅಸತ್ಯ ನುಡಿಯದೆ ಅರುಣೋದಯವಾಗದ ಭವದಲ್ಲಿ
ಬಾಳುತಿರುವ ನಾನೆಂತು ನಿಮ್ಮನಪ್ಪಿ ನಡೆಯಲಯ್ಯ
ಬರಬೇಡವೊ...ಮರಳಿ ಈ ನಾಡಿಗೆ, ಎಲ್ಲರ ಕ್ರಾಂತಿಯ ಕಿಚ್ಚು
ಕುಲ..ಕಾಮ...ಧನಕನಕಗಳನ್ನು ಅನುಭವಿಸದರಲ್ಲಿಯೆ
ಉರಿದು ಹೋಗುತ್ತಿದೆ...
ಇವರಿಗೆಲ್ಲ ಬೇಕಿರುವುದಿಗ ಜ್ಞಾನದ ಬೆಳಕೆನಲ್ಲ..!!!
ಹೊಟ್ಟೆಗೆ ಒಂದಿಷ್ಟು ಹಿಟ್ಟು...ಜುಟ್ಟಿಗೊಂದಿಷ್ಟು ಹೂವು
ಸಾಗುವುದು ಸಂಸಾರ...ಇಲ್ಲದಿದ್ದರೂ ನಿನ್ನ ಸಾರ
No comments:
Post a Comment