Saturday, December 31, 2016

ಶಾಂತಿ ಮತ್ತು ಮನಃಶಾಂತಿ

ತಿಳಿದವರು ಹೇಳ್ತಾರ
ಬಾಳಿಗೆ ಬೇಕು
ಶಾಂತಿ ಶಾಂತಿ ಶಾಂತಿ

ಅಯ್ಯೊ ಶಿವ್ನೆ
ಅವಳಿಂದಲೇ
ಹಾಳಾಯ್ತಲ್ಲರೀ
ನನ್ನ
ಮನಃಶಾಂತಿ

ಹೊಸ ವರುಷ

ತರಲಿ ನೂರು ಹರುಷ
ಬರುವ ನವ ವರುಷ
ಕರಗಿ ನೀರಾಗಲಿ ವಿಷ ನಿಮಿಷ
ಕರಗದೆ ಹೆಪ್ಪಾಗಿರಲಿ ರಸನಿಮಿಷ

ಕಳೆದ ದಿನಗಳ ದಿನಚರಿಯು ಬದಲಾಗಲಿ
ಕಷ್ಟಗಳು ಕೊಲ್ಲದೆ, ಜಯಿಸಿ ಹತ್ತುವ ಮೆಟ್ಟಿಲಾಗಲಿ
ಹರುಷಗಳು ಜೊತೆಗಾರರ ಮರೆಯದಂತೆ ಹಬ್ಬುತಿರಲಿ
ಕೀಳೆಂಬ ಚಿಗುರ ಬೆಳೆಯು ಸುಳಿಯದಿರಲಿ ಮನದಲಿ

ಇಂದಿನದಲಿ ಹೊಸತೇನೂ ಇಲ್ಲ ಬೆಳಕೂ ಇಲ್ಲ
ಎಲ್ಲ ದಿನ ನಿತ್ಯಕರ್ಮಗಳೆ, ಅವನು ಹುಟ್ಟುವುದು
ಪೂರ್ವದಲಿ ಮಲಗುವುದು ಪಶ್ಚಿಮದಲಿ
ಕಳೆಯುವವು ದಿನಗಳು ಹೀಗೆ ಮರದ ಬಾಡಿದ
ಎಲೆಗಳಂತೆ

ಇಂದಿನ ಈ ಕ್ಷಣ ಅನುಕ್ಷಣವು ನಿನ್ನದು
ತುಂಬು ಹರಿಸು, ಮುತ್ತಾಗಿಸು ಹೊತ್ತುಗಳ
ವರುಷ ಕಳೆಯುವದರೊಳಗೆ ರೂಪಗೊಳ್ಳಲಿ
ಒಂದು ಸುಂದರ ಹಾರದ ಹೊತ್ತುಗಳು
ನೆನೆದು ನೆನೆದು ಮುಂದಡಿಯಿಡಲು
ಕಹಿದಿನಗಳ ಸಂಜೆಯಲಿ ಜಪಿಸುವ ಜ್ಞಾನದ
ಜಪಮಾಲೆಯಾಗಲಿ

ಇನ್ನಾದರೂ....
ಮಲಗುವ ಮಗ್ಗಲನು ಹೊರಳಿಸೊಣ
ಬಾಳ ಬಾಗಿಲಿಗೆ ಕಟ್ಟುವ ಸಂತಸದ ತೋರಣ
ಹಂಚುವ ವರುಷದುದ್ದಕು ಪ್ರೀತಿ ಹೊರಣ
ದೇವನು ನೀಡಲಿ ತಮದ ಮನಕೆ ಕಿರಣ
ಚೆಲ್ಲಲಿ ಬಾಳ ಹಾದಿಗೊಂದಿಷ್ಟು ಹೊಂಗಿರಣ

ಚರಗ

ನೀನಗಿಂದೂ ತೃಪ್ತಿಯಾಯಿತೆ
ಇಂದಾದರೂ ನಿನ್ನ ಹೊಟ್ಟೆ ತುಂಬಿತೆ
ಭುವಿಗೆ ತುಸು ನೀರನು ಹೊಯ್ದಿದ್ದರೆ
ನಿನ್ನ ಜಡೆಯ ಗಂಗೆಯೇನಾದರೂ
ಸೊರಗುತ್ತಿದ್ದಳೆ ?
ಶಿರದಿಂದ ಭುವಿಗಿಳಿಸಿದ್ದರೆ ಆಕೆ
ಸಿಡುಕುತಿದ್ದಳೆ
ಇಲ್ಲವೆ
ಧರ್ಮವ ಬಿಟ್ಟು ಜಾತಿಯನೇಣಿಸುವ
ನರರಿಗೇಕೆ ನೀರೆಂದು ಸುಮ್ಮನಾದೆಯೆ

ಕಪ್ಪು ಮಣ್ಣಿನ ಈ ಭೂಮಿ ಬಾಯ್ತೆರೆದು
ಮಲಗಿದ್ದರೆ
ಅಳಿದುಳಿದ ಫಸಲುಗಳು ಇಲಿಗಳ ಪಾಲಾಗುತಿವೆ
ಇಲಿಗಳು ಹರಿದಾಡುವ ಹಾವುಗಳಿಗೆ ತುತ್ತಾಗುತಿವೆ
ಹಾವುಗಳು ಹಾರುವ ಹದ್ದಿನ ಪಾಲಾಗುತಿವೆ
ಬದುವಿನ ಹಸಿರುಸಿರು ನಿಂತ ಗರಿಕೆ ಸಸಿಗಳು
ಒಣಗಿ ಬೆಂದು ನಿಂತಿವೆ

ಬಸವನಾರ್ತನಾದವದು ಕೇಳುತಿಲ್ಲವೆ ?
ಒಣಗಿನಿಂತ ಬೆಟ್ಟಗುಡ್ಡಗಳು ಕಾಡ್ಗಿಚ್ಚಿಗೆ
ಸಿಕ್ಕು ಧಗಧಗನೆ ಉರಿಯುವ ಅವುಗಳೊಡಲ
ಬೆಂಕಿ ನಿನಗೆ ತಾಕುತಿಲ್ಲವೆ ?
ಬರದ ಬರೆಗೆ ಸಿಲುಕಿ ಕೊರಳನು
ಹಗ್ಗಕೆ ತೂಗಿಸಿ ನಿನ್ನ ಮುಂದೆ ನಿಲ್ಲುವವರ
ಸರದಿ ಸಾಲು ಸಾಲುತಿಲ್ಲವೆ ?

ಹೇಗೆ ಹೊರಡಲಿ ನಾನು ಅವಳ ಮಡಿಲಿಗೆ
ಹಸಿರಿನ ಹಾಸಿಗೆ ಹೊದ್ದದೆ ಮಲಗಿರುವಾಗ
ಯಾವ ಸವಿಯ ಎಡೆಯನೊಯ್ಯಲಿ ಚರಗ
ಚೆಲ್ಲಲು
ಭೂದೇವಿಯೆ ಸಿರಿಯಿಲ್ಲದ ಗರತಿಯಂತಿರುವಾಗ
ನಾ ಹೇಗೆ ಹೇಳಲಿ, ನಾನೇನ ತೋರಿಸಲಿ ನನ್ನ ಮಕ್ಕಳಿಗೆ
ಆ ತಾಯಿ ಪೂಜೆಯ ವೈಭವವ, ಚರಗ ಚಲ್ಲುತ
ಹೊಲವ ಸುತ್ತುವ ಸುಂದರ ಕ್ಷಣಗಳ ನಾ ಹೆಂಗ
ಚಿತ್ರಿಸಲಿ ಅವರ ಮನದಲಿ

ಇನ್ನೇನ ಬೇಡಲಿ ನಿನ್ನ ನಾನು ಶಿವನೆ
ತೆರೆಯೊಮ್ಮೆ ಅಂತರಂಗದ ಕಣ್ಣನು
ಸುರಿಸು ಗಂಗೆಯನು ಮಣ್ಣಿಗೆ
ಹಾರಲಿ ಧೂಳು ತಣಿಸಲಿ ಒಡಲು
ಮಾಡದಿರು ನಮ್ಮ ಬಾಳ ಮಣ್ಣುಪಾಲು

ಇಲ್ಲವಾದರೆ....
ನೋಡೊಮ್ಮೆ ನಡುಗಣ್ಣಿನಿಂದ ಉರಿದು
ಉಗಿಯಾಗಿ ಹಾರಲಿ ನಮ್ಮ ಬದುಕು
ರವಿಯ ಉರಿಯು ಸುಡುವ ಮುನ್ನ
ಹಸಿರಿಲ್ಲದೆ ಹಸಿದು ಹಸಿದು  ಹೆಣವಾಗುವ ಮುನ್ನ
ಉರಿಸಿಬಿಡು ಬದುಕ ಬೆಂಕಿಗೆ
ಇಲ್ಲವೆ...
ಸುರಿಸಿಬಿಡು ಮಳೆಯ ಬಾಳಿಗೆ

Friday, December 30, 2016

ನಾನು ಬರೆಯುತ್ತೇನೆ

ನಾನು ಬರೆಯುತ್ತೇನೆ
ಅಹಂನಿಂದಲ್ಲ
ನೀವು ಓದುವಿರೆಂದು

ನಾನು ಓದುತ್ತೇನೆ ನಿಮ್ಮ ಮುಂದೆ
ಎಲ್ಲ ಬಲ್ಲವನಂತಂದಲ್ಲ
ನನ್ನ ಮನದ ಹುಳುಕುಗಳ
ಹುಡುಕಿ ಹೊಸೆಯುವಿರೆಂದು

ಮನದೆಲ್ಲ ಕನಸುಗಳ ಬರೆದು
ಕೊಡುವೆ ನಿಮ್ಮ ಕೈಗೆ
ಕನಸುಗಾರನೆಂದಲ್ಲ
ಓದಿ ಆ ಕನಸುಗಳಿಗೆ
ರೆಕ್ಕೆಯ ಕತ್ತರಿಸದೆ
ಕಟ್ಟುವಿರೆಂದು

ತಿದ್ದಲೆಂದು ಬರೆಯುತ್ತಿಲ್ಲ
ಕಾಣುತಿರುವದನೇಲ್ಲವ
ನೋಡಲಾಗುತ್ತಿಲ್ಲವಲ್ಲ
ಹೇಳಿರಿ....
ಇಲ್ಲವೆ ದಾರಿಯನಾದರೂ
ತೋರಿಸಿರಿ

ನಾನೂ ಬರೆಯುವುದು
ಅಹಂನಿಂದಲ್ಲ....

Thursday, December 29, 2016

ನಿನ್ನ ಚರಣಕೆ ಬಂದವರು

ನಿನ್ನ ಚರಣಕೆ ಬಂದವರು
ನಿನಗೆ ಶರಣೆಂದು ನಿಂತವರು
ನಾನೆಂಬುದ ಬಿಟ್ಟು ಬರದವರು
ಏನೊಂದ ಬಿಡದೆ ಬೇಡುವವರು
ಇವರು ನಿನ್ನ ವರಕೆ ಕಾಯುವವರು

ನಾ ಮುಂದು ತಾ ಮುಂದೆನ್ನುವರು
ಪಂಚಾಮೃತಕೆ
ಸಮಯ ಸರಿದು ಕಾಲ ಕರೆಯ ಬರಲು
ಪಂಚಪಕ್ಷಿಯ ಬಿಡಲೆಲ್ಲರಿಗೂ ಹಿಂಜರಿಕೆ

ನಿನ್ನ ದರ್ಶನಕ್ಕಾಗಿ ಬೆಳಗಿನ ಜಾವದಲೆದ್ದೂ
ತಣ್ಣೀರ ಸ್ನಾನ ಮಾಡಿ, ಬಾಯಲ್ಲಿ ಅಗಳನ್ನು
ಹಾಕದೆ ದೂರದೂರಿಂದ, ವಾಹನದಿಂದ
ವಾಹನಕ್ಕೆ ಹತ್ತಿ ಇಳಿದು ಮತ್ತಷ್ಟು ದೂರ
ನಡೆದು ಬಂದು, ಸರತಿ ಸಾಲಲಿ ನಿಂತು
ಇಷ್ಟೇಲ್ಲಾ ಕಷ್ಟಗಳ ಪಟ್ಟು ಬಂದವರು
ನಿನ್ನ ನೆರಳಲಿ ಒಂದು ಕ್ಷಣವು ನಿಲ್ಲದೆ
ಕುಳ್ಳದೆ ಅರೇ ಮನಸ್ಕರಾಗಿ ನಡೆದು ಬಿಡುವರಲ್ಲ
ನಿನ್ನ ಮೊಗವ ಕಂಡ ಕ್ಷಣವೆ

ಇನ್ನೂ ....
ಮಂಗಳಾರತಿ ತಟ್ಟೆಗೆ ಒಂದು ರೂಪಾಯಿಯನ್ನು
ಹಾಕಲು ಯೋಚಿಸುವರು, ಕೈ ಚೀಲಗಳ ಜಾಲಡಿಸುವರು
ಜೇಬುಗಳ ತಡಕಾಡುವರು ಸಿಗದ ಪಕ್ಷದಲ್ಲಿ
ನೋಟನ್ನು ಹಾಕಿ ಆ ತಾಟಿಂದ ಚಿಲ್ಲರವ ಎತ್ತುವರು
ಯಾಕೆಂದರೆ ಅಷ್ಟು ಹಣದ ಅವಶ್ಯಕತೆ ನಿನಗಿಲ್ಲವಲ್ಲ
ನಿನಗೇನೂ ಶಾಲೆಗೆ ಹೋಗುವ ಮಕ್ಕಳೇ
ಮೊಮ್ಮಕ್ಕಳೆ, ಬಟ್ಟೆ ಬರೆಯ ಆಸೆಯೆ, ತಿಂಗಳ
ಕೊನೆಗೆ ರೇಷನ್ ಇಲ್ಲವೆಂಬ ಚಿಂತೆಯೆ,
ಆಸ್ಪತ್ರೆಗೆ ಹೋಗಲು ರೋಗ ಭಾದೆಗಳೆ
ನಿಂತು ನಿಂತು ಕಾಲು ನೋವುಗಳೆ
ಕುಳಿತು ಕುಳಿತು ಬೆನ್ನು ನೋವೆ ಇಲ್ಲವೆ
ಮಡದಿ ಒಡವೆ ಕೇಳುವಳೆಂಬ ಭಯವೆ ಇದಾವದೂ
ಇಲ್ಲದಿರುವಾಗ ಹೆಚ್ಚಿಗೆ ದಕ್ಷಿಣೆ ಹಾಕುವುದಾದರೂ
ಏಕೇ?

ಬೇಡುವದಾದರೂ ಕೋಟಿಗಟ್ಟಲೆಯಿದೆ
ನೀನು ಹರಸಿಬಿಡುವೆಯೊ ಇಲ್ಲ ಕೊಟ್ಟು
ಕಳಸಿಬಿಡುವೇಯೊ ಕೇಳಿದ ತಕ್ಷಣವೆ
ನಿನ್ನೆದುರು ನಿಂತಾಗ
ಹೆಂಗಳೆಯರು ಧಾರಾವಾಹಿಗಳ
ನೋಡುವಾಗ ಇರುವ ತದೇಕಚಿತ್ತತೆ
ವ್ಯಾಪಾರಿಯು ಹಣವನೇಣಿಸುವಾಗ
ತೋರುವ ಏಕಾಗ್ರತೆ
ನೌಕರಿದಾರರೂ ತಿಂಗಳ ಸಂಬಳ
ವರುಷದ ರಜೆಯ ದಿನಗಳ ಬಳಕೆಗಳ
ಬಗ್ಗೆ ಅವರ ಜಾಗೃತ ಮನಸ್ಸು
ಯುವಕ ಅವಳ ಸಂದೇಶಗಳ ಓದುವಾಗ
ತೋರುವ ನಿಷ್ಠೆ
ಅವಳು ಇವನ ಮಾತಲಿ ತೇಲಿ ಹೋಗುವ
ಮೋಹಕತೆ ಇದಾವುದು ನಿನ್ನ ಎದುರಿಗೆ
ನಿನ್ನ ನೆರಳಲಿ ನಿಂತವರಾರೂ ತೋರರು

ಹೇಳುವರು, ಬರೆಸುವರು ಕಲ್ಲು ಗೋಡೆಗಳ
ಮೇಲೆ ಇದು ನನ್ನ ಕಾಣಿಕೆ
ದೇವ ನೀಡದಿದ್ದರೆ ಈ ದೇಹ ಕಾಣಿಕೆ
ಜನಿಸಿ ಬರುತ್ತಿದ್ದೆಯೊ ಈ ಲೋಕಕೆ
ಅವಕೊಟ್ಟದ್ದು ಅವನಿಗರ್ಪಿಸಲು
ನಿನ್ನದೇನು ಕಾಣಿಕೆ

ಒಂದ ಇರಬೇಕ

ಮಾಡೊ ಅಡಿಗಿಗೆ ವಗ್ಗರಣಿನ
ಒಂದ ಕೈಲೆ ಹಾಕಬೇಕ
ತುಂಬಿದ ಬಿಂದಿಗೆನ ಎರಡು
ಕೈಲೆ ಎತ್ತಬೇಕ

ಒಂದ ಮಾತ ಮಾತಾಡಾಕ
ನೂರು ಸರ್ತಿ ವಿಚಾರ ಮಾಡಬೇಕ
ಎರಡ ಸಾಲ ಬರೀತಿವಂತಂದ್ರ
ಸಾವಿರ ಸಲ ಯೋಚಿಸಬೇಕ

ಕಣ್ಣು ಎರಡಿದ್ರನೂ ನೋಡೊ
ನೋಟ ಒಂದ ಇರಬೇಕ
ಮನಸ್ಸ ಒಂದ ಇದ್ರನೂ ಎಲ್ಲಾ
ನೋವನ್ನ ನುಂಗಬೇಕ

ಕಾಯೋ ದೇವ್ರು ಮೂಕ್ಕೊಟಿ ಇದ್ರುನೂ
ವರ ಕೊಡೊ ದೇವ್ರು ಒಬ್ಬನಿದ್ರ ಸಾಕ
ಅನ್ನದಾನ ನೀಡೊರೊ ಎಷ್ಟ ಇದ್ರೂ
ಬೆಳೆಯಾಕ ಒಬ್ಬ ರೈತಿದ್ರ ಸಾಕ

ಮರಳಿ ಬಾರವು

ಆಡಿ ಹೋದ ಮಾತು
ಕಳೆದು ಹೋದ ಸಮಯ
ಹರಿದು ಹೋದ ನೀರು
ಒಡೆದು ಬಿದ್ದ ಕನ್ನಡಿ
ಎಷ್ಟೇ ಪ್ರಯತ್ನಿಸಿದರೂ
ಮರಳಿ ಬಾರವು

ಹುಟ್ಟುವ ಮುಂಜಾವು
ಕರಗುವ ದಿನವು
ಇಬ್ಬನಿಯ ಮಬ್ಬು
ಅಪ್ಪುವ ಮುಪ್ಪು
ಹಿಡಿಯಲದಷ್ಟು ಪಟ್ಟು
ಪಟ್ಟರು ನಿಲ್ಲಲಾರವು

ಮರೆತ ಪದಗಳು
ತೊರೆದ ಕವನಗಳು
ನಷೀಸಿದ ವಿಷಯವು
ಅರಿಯದ ಸಾಹಿತ್ಯವು
ಬರೆಯಲದಷ್ಟೇ ಕುಳಿತರು
ತಿರುಗಿ ಮೂಡಲಾರವು

ಅರಿವಿನ ಜ್ಞಾನ

ನೀನುಣ್ಣವ ಮೊದಲೇ ಅನ್ನವ
ನೀಡಿದರೆ ಅದು ಪ್ರಸಾದವಾಗುತ್ತದೆ
ನೀನುಂಡು ಮಿಕ್ಕ ಅನ್ನವ
ಹಂಚಿದರೆ ಅದು ಭಿಕ್ಷೆಯಾಗುತ್ತದೆ

ನೀನೊದದೆ ಪರರಿಗೆ ನೀಡುವ
ಪುಸ್ತಕ ನಿನ್ನ ಅಜ್ಞಾನವಾಗುತ್ತದೆ
ನೀನೊದಿ ಸಂಗಡಿಗರಿಗೆ ಕೊಡುವ
ಪುಸ್ತಕವು ನಿನ್ನ ಜ್ಞಾನವನ್ನು ಹೇಳುತ್ತದೆ

ಅನುಭವಿಸದೆ ಆಡುವ ಮಾತುಗಳು
ಬಾಲಿಷತನ ತೋರಿದರೆ
ಬದುಕಲಿ ಕಲಿತ ಪಾಠಗಳ ಹೇಳಿದರೆ
ಹಿರಿಮೆಯನ್ನು ತೋರುತ್ತದೆ

ದುಡಿಯದೆ ಉಂಡು ಮಲುಗುವದು
ಸೋಮಾರಿತನವನ್ನು ಸೂಚಿಸುತ್ತದೆ
ದುಡಿದು ನೀನುಂಡು ಇನ್ನೊಬ್ಬರಿಗೆ
ಸಹಾಯ ಮಾಡುವದು ಏಳಿಗೆಯನ್ನು
ಸಾರುತ್ತದೆ

Monday, December 26, 2016

ಗಲ್ಲದ ಬಿಂದಿಗೆ

ನಿನ್ನ ಗಲ್ಲದ ಮ್ಯಾಲಿನ ಬಿಂದಿಗೆ
ಎಷ್ಟರ ಹುಚ್ಚು ಹಿಡಿಸೈತೊ ಈ
ಮಂದಿಗೆ

ಗಡಿಗೆಯೊಳಗಿನ ಸಿಂಧಿಗೆ
ಫಿರ್ಯಾದು ನೀಡುತಿದೆ ಈಕೆಗೆ
ಕುಡಿದರೂ ಮತ್ತೇರುತಿಲ್ಲವಂತೆ
ಜನಕೆ

ನೋಡಿದರೆ ಸಾಕಾಗಿದೆ
ಮತ್ತೇರಲು ಇವರಿಗೆ
ಇವಳ ಗಲ್ಲದ ಬಿಂದಿಗೆ

ಕುಡಿಯದೆ ಬಾಯಾರಿ ಬಾಯಾರಿ
ಬಿದ್ದರು ಬೀದಿಗೆ
ಸಾಕಾಗಲಿಲ್ಲ ಎಷ್ಟು ಕುಡಿದರು ಸಿಂಧಿಗೆ
ಅವಳ ಮತ್ತು ಇಳಿಯುತ್ತಿಲ್ಲ
ಕುಡಿದರದೇಷ್ಟು ತಂಬಿಗೆ

ಇತಿಹಾಸದ ಪುಟಗಳು

ಬರೆಯುವ ಹಾಳೆಗಳೆಲ್ಲವು
ಇತಿಹಾಸದ ಪುಟಗಳಾಗುವುದಿಲ್ಲ
ಆಡುವ ಮಾತುಗಳೆಲ್ಲವು
ಶಾಸನಗಳಾಗುವುದಿಲ್ಲ

ಕಟ್ಟಿರುವ ಎಲ್ಲ ಗುಡಿಯೊಳಗು
ದೇವರಿರುವುದಿಲ್ಲ
ಬರುವ ಎಲ್ಲ ಭಕ್ತರ ಮನದಲಿ
ಭಯ ಭಕ್ತಿಗಳಿರುವುದಿಲ್ಲ

ಪ್ರೀತಿಸುವ ಪ್ರೇಮಿಗಳೆಲ್ಲರೂ
ಮದುವೆಯಾಗುವುದಿಲ್ಲ
ತಾಯಿ ಹಡೆಯುವ ಪ್ರತಿ
ಮಗುವು ಗಂಡಾಗಿರುವುದಿಲ್ಲ

ಎಲ್ಲ ಲೇಖನಗಳು ಓದುಗರ
ಮನ ತಲುಪುವುದಿಲ್ಲ
ಬರೆದ ಪುಸ್ತಕಗಳೆಲ್ಲವು
ಇತಿಹಾಸದ ಸಾಕ್ಷಿಗಳಾಗುವುದಿಲ್ಲ

ನೋವಿನ ಸ್ನೇಹಿತೆಗೆ

ಗೆಳತಿ.....
ಅಳದಿರು ದಿನವು ಹೀಗೆ
ಅವನ ನೆನಸಿ ನೆನಸಿ
ಸುರಿಸದಿರು ಕಣ್ಣೀರನು
ಸೊಸಿ ಸೊಸಿ
ಜಾರಿದ ಕಣ್ಣ ಹನಿಗಳಿಗೆ
ಅವನು ಯೋಗ್ಯನಿಲ್ಲದಿರುವಾಗ

ನಲುಗದಿರು ಅವನ ಮಾತನು
ನೆನೆದು ನೆನೆದು
ಕೊರಗದಿರು ಹಳೆಯ ದಿನಗಳ
ತೆರೆದು ತೆರೆದು
ಮನಸಿನ ಭಾವದ ಗೀತೆಗೆ
ಅವನೊಂದು ಅಪಶೃತಿಯಾಗಿರುವಾಗ

ಎದೆಯ ದುಃಖವ ತಡೆಹಿಡಿಯದಿರೂ
ಅದುಮಿ ಅದುಮಿ
ಮೌನಿಯಾಗದಿರು ಅವನ ಸಂಜೆಗಳ
ಬೇಡಿ ಬೇಡಿ
ಬಾಳ ಬದುಕಿನ ಮನಗೆ ಅವನೊಬ್ಬ
ತೆರೆಯದ ಕದವಾಗಿರುವಾಗ

ಬದುಕಬೇಕಿದೆ ಅವನ ಮರೆತು
ನಡೆದು ನಡೆದು
ಎಷ್ಟು ವಸಂತಗಳಿಲ್ಲ ಇನ್ನೂ ಬಾಳಲಿ
ನಗಲು ಗೆಲ್ಲಲು
ಸುಂದರವಾಗಿರುವದೇಷ್ಟು ಜಗತ್ತು
ಜಯಿಸು ಸಾಧಿಸು

ನಿನ್ನ ನೀ ಪ್ರೀತಿಸು
ತುಟಿಯಲಿ ನಗುವ ಸೇರಿಸು
ಬಾಳಲಿ ಸಂತಸ ಹರಿಸು
ಇದೊಂದೆ ನನ್ನ ಕನಸು

Friday, December 23, 2016

ಸಂಸಾರ ಭ್ರಷ್ಟ

ಬಾರದಿರು ನನ್ನೆದುರಿಗೆ
ಹೊರಳಿ ಹೊರಳಿ
ತೋರದಿರು ಬಿಸಿ ನೋಟವ
ಮರಳಿ ಮರಳಿ
ನೋಡದಿರು ಕಣ್ಣಿಂದಲೇ
ನುಂಗಿ ನುಂಗಿ
ಮಾಡದಿರು ನನ್ನನ್ನು
ಸಂಸಾರ ಭ್ರಷ್ಟನನ್ನಾಗಿ

ಮಾತನಾಡದಿರು ಬಳಿಬಂದು
ಕೆದಕಿ ಕೆದಕಿ
ನಗದಿರು ತುಟಿಯಂಚಲಿ ಮನವ
ಬೆಯಿಸಿ ಬೆಯಿಸಿ
ಮತ್ತೇರಿಸದಿರು ಮುಡಿಯ ಮಲ್ಲಿಗೆಯ
ತೋರಿಸಿ ಸೋಕಿಸಿ
ಇರಲು ಬಿಟ್ಟುಬಿಡು ನನ್ನನ್ನು
ಗೃಹಸ್ಥ ಸನ್ಯಾಸಿಯನ್ನಾಗಿ

Thursday, December 22, 2016

ಹುಟ್ಟದ ಕವನಗಳು

ಹುಟ್ಟದ ಕವನಗಳ ನಾ
ಹೇಗೆ ಹುಟ್ಟಿಸಲಿ ಕೇವಲ
ಪದಗಳ ತುರುಕಿ ತುರುಕಿ

ಇಲ್ಲದ ಭಾವನೆಗಳ ನಾ
ಹೇಗೆ ತುಂಬಿಸಲಿ ಅದರಲಿ
ಬಿಂಬಿಸಿ ಬಿಂಬಿಸಿ

ಹೇಳದ ಮಾತುಗಳ ನಾ
ಹೇಗೆ ಬರೆಯಲಿ ಕವಿತೆಯ
ಸಾಲನು ನಿಲ್ಲಿಸಿ ನಿಲ್ಲಿಸಿ

ಏನೆಂದು ತಿಳಿಸಲಿ ನಾ
ನಿನಗೆ ಮನಸಿನ ಮಾತುಗಳೆ
ಮುದುಡಿರುವಾಗ ನಲುಗಿ ನಲುಗಿ

Tuesday, December 13, 2016

ತಿಜೋರಿ

ನೋಡು ಒಮ್ಮೆ ಈ ಮನದ
ತಿಜೋರಿಯ ತೆರೆದು
ಬೆಳ್ಳಿಯಿಲ್ಲ ಬಂಗಾರವಿಲ್ಲ
ವಡವೆ ಹಾರಗಳಿಲ್ಲ
ಮುತ್ತು ರತ್ನಗಳಿಲ್ಲ
ನಿನ್ನ ನಗುವ
ಒಡುವೆಯೊಂದನು ಹೊರತುಪಡಿಸಿ

ಕಸಿದುಕೊಳ್ಳಬೇಡ
ಕಿತ್ತುಕೊಳ್ಳಬೇಡ
ತೆಗೆದು ಅಡವಿಡಬೇಡ
ನಿನ್ನ ನೆನಪಿಗಂತಿರುವದೊಂದೆ
ನಗುವಿನೊಡವೆ

ಮನದ ಲಕ್ಷ್ಮೀ ನೀನು
ಒಲವ ಫಲವನಿಯ್ಯುವ ದೇವಿ ನೀನು
ಪೂಜಿಸೊ ಪೂಜಾರಿ ನಾನು
ದರ್ಶನವ ಬೇಡುವ ಭಕ್ತನು ನಾನು
ಪ್ರಸನ್ನಳಾಗೇಯಾ
ಮನಸಿರಿಯ ದೇವಿಯೆ

ಕೀಲಿಯಿರುವದು ನಿನ್ನ ಕೈಯಲ್ಲೆ
ತೆರದಿಡದಿರು ಬಾಗಿಲ ನಲ್ಲೆ
ಕದಿಯುವವರು ಎಷ್ಟಿಲ್ಲ ಇಲ್ಲೆ
ನಿನ್ನಂತರಂಗವ ನಾನೇನ ಬಲ್ಲೆ

ನಿಲ್ಲದು

ಮಳೆ ನಿಂತರು ಮರದ ಹನಿ ನಿಲ್ಲದು
ಮಾತು ಮುಗಿದರೂ ಕಣ್ಣೀರು ನಿಲ್ಲದು
ಹಾಡಿದ ನಂತರ ಅದರ ಗುಂಗು ಬಿಡದು
ಮರೆತ ಮೇಲೂ ಮನದ ನೆನಪು ಬಿಡದು

ಆಸೆ ಮಣ್ಣಾದರೂ ಕಾಣುವ ಕನಸು ಬಾಡದು
ಕಾರ್ಯ ಕೈಗೂಡದಿದ್ದರು ಆತ್ಮಸ್ಥೈರ್ಯ ಬಾಡದು
ದಾರಿ ಮರೆತರು ಹುಡುಕುವದು ಮರೆಯದು
ಸರಿ ಮಾಡಿದರೂ ತಪ್ಪು ಎಂದಿಗೂ ಮರೆಯದು

ಬದುಕು ಕೈ ಬಿಟ್ಟರು ಕಟ್ಟುವದು ಬಿಡಬಾರದು
ಸೋಲು ಕೈ ಹಿಡಿದರೂ ಗೆಲ್ಲಲು ಹೆದರಬಾರದು
ಊರು ನಿನ್ನ ಮರೆತರು ನಾಡ ಮರೆಯಬಾರದು
ನಾಡ ಮರೆತರೇನು ನಿನ್ನ ನೀ ಮರೆಯಬಾರದು

ಬದುಕಿನ ಬಂಡಿಯ ಹಾದಿ ನಿಲ್ಲದು
ಹೆದರಿ ಹಿಂದೆ ಉಳಿಯುವದು ಸಲ್ಲದು
ನುಗ್ಗಬೇಕಿದೆ ಮುನ್ನುಗ್ಗಿ ಯಾಕೆಂದರೆ
ನಾಳೆ ನಿನ್ನದು

Monday, December 12, 2016

ಹೊತ್ತು ಮತ್ತು ಹೊತ್ತಿಗೆ

ಹೊತ್ತು ಹೊತ್ತಿಗೂ ಹೊಟ್ಟೆಗೆ
ಬೀಳುತ್ತಿದ್ದರೆ ಹೊಟ್ಟು
ಹೊತ್ತಿಗೆಯ ಮರೆಯುತ್ತಿದ್ದೇನೆ

ಹೊತ್ತು ಹೊತ್ತಿಗೂ ಹೊತ್ತಿಗೆಯ
ಓದಿದ್ದರೆ ಹೊತ್ತಿನೂಟ ನನಗೆ
ಹೊರೆಯಾಗುತ್ತಿತ್ತೆ?

ನನ್ನ ಹೊಟ್ಟೆಯ ಹೊರೆಯಲು
ತಂದೆಗೆ ಬುಜದಲಿ ಶಕ್ತಿಯಿಲ್ಲದಿರುವಾಗ
ಯಾವ ಹೊತ್ತಿಗೆಯನೊದಲಿ

ಹೊತ್ತಿಗೆಯ ಓದಲು ಕುಳಿತರೆ
ನನ್ನ ಹೊಟ್ಟೆಯ ನಾ ಹೇಗೆ ಹೊರೆಯಲಿ
ದುಡಿಯಲು ಹೊರಗೆ ಹೋಗಲೆ ಬೇಕಾಗಿರುವಾಗ

ಹೊತ್ತು ಹೊತ್ತಿಗೂ ಹೊತ್ತಿಗೆಯ ಓದುತ್ತ
ಕುಳಿತರೆ ನನ್ನ ಹೊಟ್ಟೆಯ ಪಾಡೇನು?
ಹೊತ್ತು ಹೊತ್ತಿಗೂ ಹೊಟ್ಟೆಯ ಹೊರೆಯಲು
ಅಲೆದರೆ ಹೊತ್ತಿಗೆಯ ಬೆಳಕನು ಕಾಣಬಲ್ಲೆನೇನು?

Sunday, December 11, 2016

ನಾನೊಂದು ಕಾಡಿನ ಹೂ

ನಾನೊಂದು ಕಾಡಿನ ಹೂ
ಕನ್ನಡ ನಾಡಿನ ಪಶ್ಚಿಮ ಘಟ್ಟದಂತಹ
ಸಾಹಿತ್ಯ ವನದಲಿ ಯಾರಿಗೂ
ಕಾಣದ, ಅರಿಯದ, ಅರಳಿ ಉದುರಿ
ಬೀಳುವ ಒಂದು ನಿಷ್ಪ್ರಯೋಜಕ ಹೂ

ಬೆಳೆದೆದ್ದು ನಾ ಎಂಜಲು ತೊಳೆಯುವ
ಮನೆಯಲ್ಲಿ ಇದನ್ನು ಎದೆತಟ್ಟಿ ನಾ ಹೇಳುವೆ
ಅಕ್ಷರಗಳ ಗಂಧವಿರದ ತಂದೆ ತಾಯಿ ಚಹಾದ
ಅಂಗಡಿಯ ದುಡಿಮೆಯ ಪ್ರತಿಫಲದ ಕುರುಹುವಾಗಿ
ಬೆಳೆದಿರುವೆ ನಾನು

ಮನೆತನದಲ್ಲಾರಿಗೂ ಸಾಹಿತ್ಯ ಸೇವೆಯ
ಓದುವ, ಕೇಳುವ, ಮಾತನಾಡುವ ಕಲೆಯಂತೂ
ಇಲ್ಲವೇ ಇಲ್ಲ ಅದ್ಹೇಗೆ ನುಸುಳಿದಳೊ ನನ್ನೊಳಗೆ
ಕವನ ಕವಿತೆ ಎಂಬ ಮಾಯೆ ಅದು ಎಂಜಲು
ಎತ್ತಿ , ಶಾಲೆಯ ಅಭ್ಯಾಸ ಮುಗಿಸಿ, ಅಂಗಡಿಯ
ದಿನಸಿ ಮುಗಿಸಿ ಉಂಡು ಮಲಗುವ ವೇಳೆಗೆ
ನೀ ಬಂದು ಮೂಡುತ್ತಿದ್ದೆ ಎರಡು ಮೂರು ಸಾಲಿನೊಳಗೆ

ಬರೆದು ಬರೆದು ಕೊಟ್ಟೆ ನಿಮ್ಮನು ಸ್ನೇಹಿತರ
ಪ್ರೇಮ ನೀವೇದನೆಗಳಿಗೆ, ಕಾಲೇಜು ಬಿಳ್ಕೋಡುವ
ದಿನಗಳಿಗೆ ಯಾರೂ ಗುರುತಿಸಲಿಲ್ಲ ಕಾರಣ
ನಿನ್ನರಿವು ನನಗಿರಲಿಲ್ಲ, ನಾಡಿನ ಸಾಹಿತ್ಯ ವನದಲಿ
ನೀವೆಂತಹ ಮೊಗ್ಗುಗಳೆಂದು ನಾನರಿತಿರಲಿಲ್ಲ
ಎಷ್ಟೇಯಾದರೂ ನಾನೊಂದು ಕಾಡಿನ ಹೂವಲ್ಲವೆ

ಹಾಗಂತ ಯಾರೂ ನನ್ನನ್ನೂ ನಿರಾಕರಿಸದಿರಿ
ಎಂದಾದರೂ, ಎಲ್ಲಿಯಾದರೂ, ಯಾರೊಬ್ಬರಾದರೂ
ಗುರುತಿಸಿ, ವಾಸನೆಯ ಗ್ರಹಿಸಿ ಆಘ್ರಾಣಿಸಿ ಒಂದು
ಸ್ಥಳವ ನೀಡಿ ತಾಯಿ ಭುವನೇಶ್ವರಿಯ ಪಾದದಲ್ಲಾಗಲಿ, ಭುಜದ ಮೇಲಾಗಲಿ, ತಾಯಿ ಮುಕುಟದ ಮೇಲಾಗಲಿ ಇರಿಸದಿದ್ದರೂ ಅವಳ ಮಕ್ಕಳು ನಡೆಯುವ  ಹಾದಿಯಲ್ಲಾದರೂ ಹಾಕಿ ಅವರ ಪಾದದ ಧೂಳಿಂದ
ಪಾವನವಾಗುವೆ

ನನಗೂ ಅನ್ನಿಸುತಿದೆ ಈ ಕಾಡ ಹೂವಿನ
ಬೇರುಗಳಿಗೆ ಎದೆತುಂಬಿ ಬರಲಿ ತಮ್ಮ
ಗಿಡದ ಹೂ ನಾಡ ವನದಲಿ ಗುರುತಿಸಿಕೊಂಡಿದೆಯಲ್ಲ
ವನದ ವೈಭವವ ಸಾರುತಿಹುದಲ್ಲ ಎಂದು
ಹೊಸುಕದಿರಿ, ಮರೆಯದಿರಿ, ತೊರೆಯದಿರಿ
ನಾನೀರುವೆ  ಎತ್ತರದ ವೃಕ್ಷಗಳ ಬುಡದಲಿ
ಸೊಂಪಾಗಿ ದಟ್ಟವಾಗಿರುವ ಪೊಟರೆಯ
ಮಧ್ಯದಲಿ, ಕಾಣದೆ ಇರುವೆ ಎಲೆಯ ಮರೆಯಲಿ

ನೋಡದೆ ಇರದಿರಿ
ಅರಳಿ ಮುದುಡಿ
ಉದುರುವ ಈ ನಿಷ್ಪ್ರಯೋಜಕ
ಕಾಡಿನ ಹೂವನು

ಮನದ ಗೋಡೆ

ಎಷ್ಟು ದಿನಗಳಾಯ್ತು ನಿನ್ನ ಮನದ
ಕಬ್ಬಿಣದ ಬಾಗಿಲನು ತಟ್ಟುತಿರಲು
ಒಂದಿನವಾದರೂ ತೆರೆಯಲಿಲ್ಲ ಆ ಬಾಗಿಲು
ನಾನೇಷ್ಟು ತಟ್ಟಿದರೂ....
ಸೀಳಲಿಲ್ಲ ಮುರಿಯಲಿಲ್ಲ ತಟ್ಟಿದ ಕೈಗೆಳೆರಡೂ
ಮೆತ್ತಗಾದರೂ ಮನಸ್ಸು ಮಾತ್ರ ಮೆತ್ತಗಾಗಲಿಲ್ಲ

ಹೋಗಲಿ ಒಂದು ಕಲ್ಲಲ್ಲಾದರೂ ನಿನ್ನನ್ನು
ಕೆತ್ತಬೇಕೆಂದೆ ದೇವಿಯಂತೆ ಪೂಜಿಸಲು
ಎಷ್ಟೋ ಕಲ್ಲುಗಳ ಕಡಿದೆ ಉಳಿಗಳೆ ಮುರಿದು ಹೋದವು
ಕಲ್ಲುಗಳೆ ಸೀಳಿ ಹೋದವು ನಿನ್ನಂದದ
ಶಿಲ್ಪ ಮಾತ್ರ ರೂಪಗೊಳ್ಳಲಿಲ್ಲ

ಬರೆಯಬೇಕೆಂದಿದ್ದೆ ನೂರಾರು ಕವನಗಳ
ಮನದಾಸೆಯ ನಿವೇದಿಸಲು
ಬರೆದೆ ಬರೆದೆ ಬರೆದೆ ಹಾಳೆಗಳೆ ಮುಗಿದವು
ಪುಸ್ತಕಗಳೆ ಸಾಲದಾದವು ನನ್ನ ಜ್ಞಾನ
ಭಂಡಾರವೆ ಬರಿದಾಯಿತಾದರೂ....
ನಿನ್ನ ಚೆಲುವಿಕೆಗೊಂದಾವ ಕವನವು
ಸಾಟಿಯಾಗಲಿಲ್ಲ

ಎಷ್ಟು ಗಟ್ಟಿಯಾಗಿ ಕಟ್ಟಿಕೊಂಡಿರುವೆ
ಮನದ ಗೋಡೆಯನು ಚಿತ್ರದುರ್ಗದ
ಕೋಟೆಯ ಹಾಗೆ ಈ ಮನದ ಮಾತುಗಳು
ನಿನ್ನಲಿ ತಲುಪದಂತೆ, ಕೋಟೆಗಿರುವ ರಂಧ್ರದಂತೆ
ನಿನ್ನ ಮನದ ಕೋಟೆಗೊಂದು ಸುರಂಗವಿದ್ದಿದ್ದರೆ
ನಾನು ನುಸುಳಿ ಬರುತ್ತಿದ್ದೆ ಮನದೊಳಗೆ

ನನಗೇನು ಗೊತ್ತು ನಿಜಾಮನ ಸೈನಿಕರ
ತಲೆಯ ಓಬವ್ವ ಕುಟ್ಟಿದಂತೆ ನನ್ನ
ಪ್ರೀತಿಯ ತಲೆಯನ್ನು ನೀನು ಜಜ್ಜುವುದಿಲ್ಲ
ಎಂದು
ಕಾಯುತಿರುವೆಯಾ ಮನದಲಿ ಒನಕೆಯ
ಹಿಡಿದು ಅಥವಾ ಹೂಮಾಲೆಯ ಹಿಡಿದು

Saturday, December 10, 2016

ಜಯಮ್ಮ

ಕನ್ನಡಿಗರ ನೀರು
ಕುಡಿದು ಬದುಕಬಲ್ಲಿರಿ
ಕನ್ನಡಿಗರ ಕಣ್ಣೀರ
ಕುಡಿದು ಬದುಕಬಲ್ಲೀರಾ?
ಜಯಮ್ಮ

ಒಪ್ಪಿದೆ ನೀವು ಈ ಮಣ್ಣ
ಮಗಳೆಂದು ಮಾತ್ರಕೆ ನೀವು
ಮಾಡುತಿರುವ ಅನ್ಯಾಯವನೆಲ್ಲವ
ಸಹಿಸಲಾದಿತೆ? ಅಥವಾ ಹುಟ್ಟಿದ
ಋಣವ ಈ ರೀತಿಯೂ ತೀರಿಸಬಹುದೆಂದು
ತೋರಿಸಿಕೊಟ್ಟಿರೆ?

ನಿಮ್ಮ ಮೊಂಡುತನದ ಹೋರಾಟಕ್ಕೆ
ಕಾವೇರಿಯು ನಾಡಲ್ಲೆಲ್ಲೂ ನಿಲ್ಲದೆ
ಬಸಿದು ಬಸಿದು ನಿಮ್ಮ ಮನೆಯಂಗಳವ
ತೊಯಿಸಿಹಳು
ಕಾಣುತಿಲ್ಲವೆ ಆ ನೀರಲಿ ತವರೂರ ಮಕ್ಕಳ
ಬರದ ಕಣ್ಣೀರು, ಆ ಕೆಂಪು ಬಣ್ಣದ ನೆತ್ತರು
ನಿಮ್ಮ ನೆಲಕಂಟಿ ನಂಜಾಗುತಿರುವದು

ಇಷ್ಟು ವರ್ಷಗಳಲ್ಲಿ ಅದೇಷ್ಟೊ ಆಣೆಕಟ್ಟಿನ
ನೀರನ್ನು ನ್ಯಾಯಾಂಗದಲಿ ನಾಡನು ಪೇಚಿಗೆ
ಸಿಲುಕಿಸಿ ಪಡೆದಿರುವಿರಿ
ಈ ವರ್ಷದ ಬರದ ಬೆಗೆ ನಿಮಗೆ ತಿಳಿಯದೆ
ಇರುವಂತದ್ದಲ್ಲ ಇದನ್ನರಿತು ನೀರು ನೀರು
ಎಂದು ನಮ್ಮೆಲ್ಲರ ನೆತ್ತರು ಹೀರಿ ಬಿಟ್ಟಿರಿ
ಕುಡಿಯಲಿಕ್ಕೆ ನೀರನೂ ಬಿಡದೆ

ಮೆಚ್ಚಬೇಕಾದುದೊಂದಿದೆ
ಐನೂರು, ಸಾವಿರ ಕೊಟ್ಟರೂ ಸಮಾವೇಶಕ್ಕೆ
ಸೇರದ ಜನ ನಿಮ್ಮ ಆರೋಗ್ಯದ ಸಲುವಾಗಿ
ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಜನ
ಸ್ವಯಂ ಪ್ರೇರಿತರಾಗಿ ಕುಂಭಮೇಳ ಮಾಡಿದರೆಂದರೆ
ಸಾಮಾನ್ಯದ ಮಾತೆ

ಎಷ್ಟಾದರೂ ಕನ್ನಡದ ಹೆಣ್ಣಲ್ಲವೆ ಜನರ
ಮೆಚ್ಚುಗೆಯ, ಅವರೆದೆಯ ಮನದಲಿ
ಮನೆಮಾಡುವ ಕಲೆ ರಜನೀಕಾಂತ್ ರ
ರೀತಿಯಲ್ಲಿಯೇ ಇದೆ
ನಿನ್ನಂಥ ಒಬ್ಬ ದಿಟ್ಟ ಮಹಿಳೆ ನಮ್ಮ
ನಾಡ ರಾಜಕಾರಣದಲಿ ಇದ್ದಿದ್ದರೆ....

ಗಡಿಯ ಸಮಸ್ಯೆ, ಭಾಷಾ ಸಮಸ್ಯೆ,
ಸ್ವಾಭಿಮಾನದಂತಹ ಸಮಸ್ಯೆಗಳು
ಹುಟ್ಟುತ್ತಿರಲಿಲ್ಲವೇನೊ...
ನಾಡ ಕಷ್ಟಗಳ ಮರೆತು ನಿದ್ರಿಸುವ
ಅರೆಹೊಟ್ಟೆಯ ತುಂಬಿಸದೆ
ರೆಟ್ಟೆಗೊಂದಿಷ್ಟು ಕೆಲಸವ ನೀಡದ
ನಾಯಕರಿಗೆ ಮಾದರಿಯಾಗುತಿದ್ದಿರೇನೊ?

ಏನೇಯಾದರೂ ಕಾವೇರಿಗೆ ಕಿಚ್ಚು
ಹಚ್ಚಿದ ಸ್ವಾರ್ಥ ನಾಯಕಿ ನೀವು 
ಸತ್ತರೆ ಆನಂದ ಪಡುವ ಜನಕ್ಕೇನೂ
ಕೊರತೆಯಿಲ್ಲವಿಲ್ಲಿ
ಬದುಕಿದ್ದಗಾಲೇ ಹರಿಸಿದ್ದೇವೆ ಸಾಕಷ್ಟು
ನೀರನ್ನು ನಿಮ್ಮ ಅಂಗಳಕೆ
ಇನ್ನೂ ಸತ್ತ ನಿಮ್ಮ ಹೆಣಕ್ಕೆ ಎರಡು ಹನಿ
ಕಣ್ಣೀರು ಹರಿಸಲು
ನಮಗೇನೂ ಭಾರವಾಗದು

ಜೀವಗಂಗೆಯನೆ ಹರಿಬಿಟ್ಟವರು ನಾವು
ನಯನ ಗಂಗೆಯ ಹರಿಬಿಡಲಾರೆವೆ ನಾವು
ಹುಟ್ಟಿ ಬಾ ಇನ್ನೊಮ್ಮೆ
ಈ ನಾಡಿಗೆ
ಮುಳುವಾಗಿಯಲ್ಲ
ನಾಡನಾಳುವ ಮಗಳಾಗಿ

Friday, December 9, 2016

ಕವನ

ಕವನ ಎಂದರೆ
ಎಲ್ಲರೂ
ಓಡುವರಲ್ಲ

ಕವನಾ ಎಂದರೆ
ಎಲ್ಲರೂ
ಕುಣಿಯುವರಲ್ಲಾ?

ಮುಡಿ

ನನ್ನಾಕೆ
ದಿನಕ್ಕೆರಡು ಬಾರಿ
ನಿಲ್ಲುತ್ತಾಳೆ
ಕನ್ನಡಿ ಮುಂದೆ
ಮುಡಿಯುತ್ತಾಳೆ
ಮಲ್ಲಿಗೆ

ಯಾಕೆಂದರೆ
ಮೊನ್ನೆ ನನ್ನ
ಮುಡಿಯ
ಕೊಟ್ಟಿರುವೆನಲ್ಲ
ತಿರುಪತಿಗೆ

ಜಯ

ಕಾವೇರಿ
ವಿಷಯದಲ್ಲಿ
ಯಾವಾಗಲೂ
ಅಮ್ಮನಿಗೆ ಜಯ
ಯಾಕೆಂದರೆ ಅವರ
ಹೆಸರಿನಲ್ಲಿಯೇ
ಇದೇಯಲ್ಲ
ಜಯ

ಗೊರಕೆ

ಕಳ್ಳರು ರಾತ್ರಿಗೆ
ನಮ್ಮ ಮನೆಗೆ
ಬರಲು ಅವರಿಗೆ
ವಿಪರೀ..ತ
ಹೆದರಿಕೆ

ಏಕೆಂದರೆ ಅರ್ಧ
ಊರನ್ನೇ
ಎಬ್ಬಿಸಿರುತ್ತದೆ
ಇವರ
ಗೊರಕೆ

ನಗ ದು

ಶ್ರೀಮಂತರು
ಯಾವಾಗಲೂ
ನಗುವದಿಲ್ಲ
ಕಾರಣ ಅವರ
ಬಳಿ ಸಾಕಷ್ಟಿದೆ
ನಗದು

ಬಡವರೂ
ಯಾವಾಗಲೂ
ನಗುವದಿಲ್ಲ
ಕಾರಣ
ಇವರ ಬಳಿ
ಎಷ್ಟೂ ಇಲ್ಲ
ನಗದು

Thursday, December 8, 2016

ಒಂದೇ ಹೃದಯ ಸಾಲದೇ

ನಿನ್ನೊಟ್ಟಿಗೆ ಕಳೆದ ಎಷ್ಟೋ ಕ್ಷಣಗಳ
ಸವಿ ನೆನಪುಗಳನ್ನ ಹೃದಯ ಬಾಚಿ ಬಾಚಿ
ಒಂದು ನೆನಪು ಕಳೆಯದಂತೆ ಹಿಡಿದಿಡುತ್ತಿತ್ತು
ಎಷ್ಟೇ ಬಾಚಿದರು, ಎಷ್ಟೋ ತುಂಬಿದರು ಅದು
ಯಾಕೋ ಬರಿದೇ ಅನ್ನಿಸುತ್ತಿತ್ತು

ನಿನ್ನದರದ ಮಾತುಗಳು, ನಿನ್ನೊಂದಿಗಿನ ಕಳೆದ
ದಿನಗಳ ರಸನಿಮಿಷಗಳು ಇನ್ನೂ ಬೇಕು ಬೇಕು
ಎಂದು ನಿದ್ರಿಸಲು ಬಿಡದೆ ಬೇಡುತ್ತಿತ್ತು ಹೃದಯ

ನೀನು ಬಿಟ್ಟು ಹೋದ ಕ್ಷಣ....
ನೀನು ಬಿಟ್ಟು ಹೋದ ಕ್ಷಣವಿದೆಯಲ್ಲಾ
ಆತ್ಮ ವಂಚಕಿ
ಆ ಒಂದು ಕ್ಷಣದ ನೆನಪನ್ನ ನನ್ನೆದೆಯು
ಹೊರಲಾಗುತ್ತಿಲ್ಲ, ಹಿಡಿದಿಡಲಾಗುತ್ತಿಲ್ಲ
ತಡೆಯದೆ ಒಡೆದು ಬಿಡುವುದೇನೊ?
ಎನ್ನುವಂತಾಗಿದೆ ಈ ಬೀಭತ್ಸ ಕ್ಷಣ
ನೋಡು ನನಗೆ ಸಾಲದಾಗಿದೆ ಈ ನೋವಿಗೆ
ಒಂದೇ ಹೃದಯ

Tuesday, December 6, 2016

ಮನಸಿನ ಗಾಯ

ನೀ ಮನಸಿಗೆ ಮಾಡಿದ ಗಾಯಗಳು
ಮಾಸಿ ಮರೆಯಾದರೂ ಗಾಯದ
ಗುರುತುಗಳು ಮಾಸಲಿಲ್ಲ
ಅವು ಕಂಡಾಗಲೆಲ್ಲ ನಿನ್ನ ನೆನಪುಗಳು
ಮತ್ತೆ ಚುಚ್ಚಿ ಚುಚ್ಚಿ ಇರಿದು ಇನ್ನಷ್ಟು
ಗಾಯವ ಮಾಡುತ್ತಿವೆ

ಹಳ್ಳವಾಗಿದ್ದರೆ ಹರಿದು ನೋವು
ಮರೆಯಾಗುತ್ತಿತ್ತು ಇದೊಂದು
ಕೊಳ ಸವಿನೆನಪುಗಳ ಸಿಹಿನೀರಿನ
ಕೊಳ | ನಿನ್ನ ಅಮೃತದ ಕ್ಷಣಗಳನೆಲ್ಲ
ಸಂಗ್ರಹಿಸಿಕೊಂಡ ಕೊಳ
ನೀನಿಲ್ಲದೆ ಬಾಯಾರಿದಾಗ ಮೊಗೆಮೊಗೆದು
ಸವಿಯುವ ಕೊಳವಾಗಿತ್ತು

ಈ ಕೊಳವೀಗ ನನ್ನ ಕಂಗಳಿಂದ ಜಾರಿದ
ಉಪ್ಪು ಹನಿಗಳಿಂದ ಕಹಿಯಾಗಿ ಸವಿಯಲು
ಬಾರದಂತಾಗಿದೆ | ನೀನಿಲ್ಲದ ಈ ವೇಳೆಯಲಿ
ನನ್ನ ಮನಸ್ಸೊಂದು ಹೆಪ್ಪು ಹಾಕಿದ ಹಾಲಂತಾಗಿದೆ
ಕಟ್ಟುವದು ಹುಳಿ ಮೊಸರೊ ಕಡೆಯುವದು ಹುಳಿ
ಮಜ್ಜಿಗೆಯೊ

ಆರದ ಗಾಯಕೆ ಮಾಸದ ಕಲೆಗಳ ನೀಡಿ
ಮಾಸದ ಕಲೆಗಳಿಗೆ ಮರೆಯದ ನೋವನು ನೀಡಿ
ಒಲವಿನ ರಾಗಕೆ ವಿರಹದ ಶೃತಿಯ ಕೊಟ್ಟು
ಹೊರಟು ಹೋದೆಯಲ್ಲ ನನ್ನ ಬಿಟ್ಟು

ಭವಿಷ್ಯ ನಿರ್ಧಾರ

ಹಣವಿಲ್ಲದ ನಿನ್ನ ಜೇಬು
ತಂದೆಯನ್ನು ನೆನಪಿಸಿದರೆ
ಅನ್ನವಿಲ್ಲದ ಗಡಿಗೆ ನಿನ್ನ
ತಾಯಿಯನ್ನು ನೆನಪಿಸುತ್ತದೆ

ಪೆಟ್ರೋಲ್ ಇರದ ಗಾಡಿ ನಿನ್ನ
ಗೆಳತಿಯನ್ನು ನೆನಪಿಸಿದರೆ
ಗೆಳೆಯರಿಲ್ಲದ ರಸ್ತೆ ನಿಮ್ಮೆಲ್ಲರ
ಹರಟೆಯನು ನೆನಪಿಸುತ್ತದೆ

ದುಡಿಮೆಯಿಲ್ಲದ ಬದುಕು
ಓದನ್ನು ನೆನಪಿಸಿದರೆ
ಓದಿಲ್ಲದೆ ಕಳೆದ ದಿನಗಳು
ನಿನ್ನ ಭವಿಷ್ಯವನ್ನು ನಿರ್ಧರಿಸುತ್ತವೆ

Monday, December 5, 2016

ಕಲ್ಲೆದೆಯ ಗಂಡು

ನೀನೊಬ್ಬ ಕರಗದೆದೆಯ ಗಂಡ ನನಗೆ
ಮರುಳುಗಾಡಿನ ಮರಳಿನಂತೆ
ಕಟ್ಟಲಿಕ್ಕೆ, ಮಾರಲಿಕ್ಕೆ, ಉಳಲಿಕ್ಕೆ
ಹೆಣವ ಮುಚ್ಚಲಿಕ್ಕೂ ಬಾರದಂತಹ
ಮರಳು ನೀನು

ನೀನು ಕಡಲ ನೀರಂತೆ
ಕುಡಿಯಲಿಕ್ಕಾಗಲಿ, ಕಟ್ಟಡಕ್ಕಾಗಲಿ
ತೊಳೆಯಲಿಕ್ಕಾಗಲಿ, ಬಳೆಯಲಾಗಲಿ
ಬಳಸಲಿಕ್ಕಾಗಲಿ, ಬೆಳೆಗೆ ಹಾಯಿಸಲಿಕ್ಕೆ
ಬಾರದಂತ ನೀರು ನೀನು

ನೀನೊಬ್ಬ ಬಾಳರಸವನರಿಯದ ಗಂಡು
ಬದುಕ ಸಿರಿಯ ನೀಡದ ಕಲ್ಲುಗುಂಡು
ಹೆಣ್ಣಿನ ಕಾಮನೆಗಳರಿಯದ
ಬಯಕೆಗಳನೀಡೇರಿಸದ
ಅತ್ತ ಸನ್ಯಾಸಿಯು ಅಲ್ಲದ
ಇತ್ತ ಸಂಸಾರಿಯು ಅಲ್ಲದ
ಜಡತ್ವದ ಶೀಲೆಯು

ಸನ್ಯಾಸಿಗಾದರೂ ದೇವರ ಮೇಲೆ
ವ್ಯಾಮೋಹ, ಭಕ್ತಿ ಅವನ ಕಾಣಬೇಕೆಂಬ
ಉತ್ಕಟ ಬಯಕೆಗಳ ದಾಸನಾಗಿರುತ್ತಾನೆ
ಸಂಸಾರಿಯಾದರೂ ಹೆಣ್ಣಿನ ಬಯಕೆ
ಎಲ್ಲ ಆಸೆಗಳಲ್ಲದಿದ್ದರೂ ಚಿಕ್ಕ ಆಸೆಗಳನಾದರೂ
ಈಡೇರಿಸುವ ಗಂಡನಾಗಿರುತ್ತಾನೆ

ನೀನು ನೀರೊಳಿದ್ದ ಕಲ್ಲಂತೆ
ದಂಡೆಗೆ ಹಾಕಿದ ಬಂಡೆಯಂತೆ
ಎಷ್ಟು ವರ್ಷ ಕಲ್ಲು ನೀರೊಳಿದ್ದರೂ
ಅದು ಕರಗಲಾರದು
ಕಡಲ ಅದೇಷ್ಟು ಅಲೆಗಳು ಅಪ್ಪಳಿಸಿದರೂ
ಅದು ಮೆತ್ತಗಾಗದು

ನೀನು ಅಷ್ಟೆ ನನ್ನ ಭಾವನೆಗಳಿಗೆ
ಕರಗದ
ನನ್ನ ನೋವುಗಳಿಗೆ ಮೆತ್ತಗಾಗದ
ಕಲ್ಲೆದೆಯ ಗಂಡು ನೀನು

Sunday, December 4, 2016

ಎಂಥಹ ಬದುಕು

ಎಂಥ ಬದುಕ ನೀಡಿದೆ ನೀನು
ಯಾರ ಕಾಗೆ ಕಣ್ಣಿಗೆ ಸೋಕಿಸಿ
ಯಾವ ಪಾಪದ ಕೈಯಿಂದ
ಉಡಿಯಕ್ಕಿ ಹಾಕಿಸಿ ಕಳಿಸಿದೆ ನೀನು

ಮೆಟ್ಟಿದ ಮನೆಯ ಗಂಡನು
ಬಿಟ್ಟು ಹೋಗಿಹನು
ನಾಲ್ಕು ಮಕ್ಕಳ ನೀಡಿ
ಅತ್ತೆ ಮಾವಂದಿರು ಹೊರಗೆ
ದೂಡಿ ಕುಳಿತಿರುವರು ಕೈ ಚೆಲ್ಲಿ

ಎಷ್ಟಾದರೂ ತವರ ಕರುಳು
ನೀಡಿದರು ಮುಖ್ಯರಸ್ತೆಯಲಿ
ಒಂದಂಗಡಿಯನು ದುಡಿದು
ಬದುಕಲು, ಹೊಟ್ಟೆ ಹೊರೆಯಲು

ಎಂಥ ದುಡಿಮೆ ನೀಡಿದೆ ನೀನು
ಬೇವಿನಮರದ ನೆರಳಲಿ ಕಬ್ಬಿನ
ಹಾಲನು ಮಾರುವ ಕಾಯಕವ
ನೀಡಿದೆ

ಮುದ್ದಾದ ಮನೆಯಲಿ ಮುದ್ದಾಗಿ
ಬೆಳೆದ ನಾನು ಹೊರಗೆ ಹೋದರೆ
ದೃಷ್ಟಿಯಾಗುವದೆಂದು ಹೊಸಿಲು
ದಾಟಿಸದೆ ಇದ್ದ ತಾಯಿ

ಇಂದು ನೂರಾರು ಜನರ
ಕಾಮದ ನೋಟವನೆದುರಿಸುವ
ಕೆಟ್ಟ ನುಡಿಗಳನರಗಿಸಿಕೊಳ್ಳುವ
ಐದು ಹೊಟ್ಟೆಗಳ ಹಸಿವು ನೆನೆದು
ನನ್ನ ತಾಯಿ ಅದೇಷ್ಟು ಕುದ್ದಿರುವಳೊ
ಮನದಲಿ

ಕಹಿಯನರಿಯದ ನನ್ನ ನಾಲಿಗೆಗೆ
ಕಹಿಯ ಸವಿಯ ಉಣ್ಣಲೆಂದೆ
ಈ ಬದುಕ ನೀಡಿದೇಯೆ?

ಇಷ್ಟಲ್ಲದೆ ನೀನು
ಕಾಲ ಮೇಲೆ ಬಂಡೆ ಜಾರಿದಂತೆ
ದುಡಿಯಲು ಬಲಗೈ ಆಗಿದ್ದ
ಹಿರಿಮಗನ ಬಲಗೈಯ ಮೂರು
ಬೆರಳುಗಳನೇ ಯಂತ್ರದಲಿ ಸಿಕ್ಕು
ಕತ್ತರಿಸುವಂತೆ ಮಾಡಿಬಿಟ್ಟೆ ನೀನು
ಹೆತ್ತಕರುಳು ಉರಿಯುವಂತೆ ಮಾಡಿ
ಹಿಮಗಿರಿಯಲಿ ತಣ್ಣಗೆ ಧ್ಯಾನ
ಮಗ್ನವಾಗಿರುವೇಯಾ?

ನೀ
ಕೊಟ್ಟ ವರವ ನಾನೆಂಥ ಮರೆಯಲಿ

ಕಹಿಯ ಬುಡದಲಿ 
ಸಿಹಿಯ ಮಾರುವ
ಬಾಳನು

ಜಿಡ್ಡು

ಕವಿಗೆ
ಕವಿತೆ
ಜಿಡ್ಡು

ಧನಿಕನಿಗೆ
ಧನದ
ಜಿಡ್ಡು

ಪ್ರೇಮಿಗೆ
ಪ್ರೀತಿಯ
ಜಿಡ್ಡು

ವಾಚಕರಿಗೆ
ವಾಚನದ
ಜಿಡ್ಡು

ಹೆಣ್ಣಿಗೆ
ಹೊನ್ನಿನ
ಜಿಡ್ಡು

ಪತಿಗೆ
ಸತಿಯ
ಜಿಡ್ಡು

ಸತಿಗೆ
ಸಂತಾನದ
ಜಿಡ್ಡು

ಲೋಭಿಗೆ
ಲಾಭದ
ಜಿಡ್ಡು

ಗುಳಿಕೆನ್ನೆ

ನಿನ್ನ ಕೆನ್ನೆ ಗುಳಿ
ಅದರಲ್ಲಿ
ಜಾರಿ ಬೀಳುವವರು
ಎಷ್ಟು ಮಂದಿ

ಬಿದ್ದಾಗ
ಅರಿವಾಗುವದು
ಅದೊಂದು
ಸುಳಿ

Saturday, December 3, 2016

ನಾನು ಭಕ್ತನಲ್ಲ

ತೊಡೆಯ ಚರ್ಮವ ಕೆತ್ತಿ
ಹದವಾಗಿ ತೊಗುಲನು ತಟ್ಟಿ ತಟ್ಟಿ
ಅಣ್ಣನ ಕಾಲಿಗೆ ಮೆಟ್ಟನು ಮಾಡಿದ
ಹರಳಯ್ಯನಂತಹ ಭಕ್ತನು ನಾನಲ್ಲ

ಮಗನ ಶಿರವನೆ ಕತ್ತರಿಸಿ
ಒರಳೊಳು ಹಾಕಿ ಕುಟ್ಟಿ ಕುಟ್ಟಿ
ಹರನಿಗೆ ಎಡೆಯ ಮಾಡಿಕೊಟ್ಟ
ಸಿರಿಯಾಳನಂತಹ ಭಕ್ತನೂ ನಾನಲ್ಲ

ಹರನ ಕಣ್ಣೀರಧಾರೆಯ ತಡೆಯಲು
ಶರದಿಂದ ತನ್ನೇರಡು ಕಣ್ಣನೇ ಕಿತ್ತಿ ಒತ್ತಿ
ಶಿವನಿಗೆ ಕಣ್ಣನು ನೀಡಿದ ಬೇಡರ ಕಣ್ಣಪ್ಪನಂತಹ
ಭಕ್ತನೂ ನಾನಲ್ಲ

ಬಸವಣ್ಣನವರ ವಚನಗಳ ಉಳಿಸಲು
ಆಸ್ತಿಯ ಮಾರಿ ಅಚ್ಚುಯಂತ್ರದಿಂದ
ಅಣ್ಣನ ವಚನವ ನಾಡಿಗೆ ನೀಡಿದ
ಫ.ಗು. ಹಳಕಟ್ಟಿಯಂತಹ ಭಕ್ತನೂ ನಾನಲ್ಲ

ನಾನೊಬ್ಬ ಕನ್ನಡದ ಕರು
ಈ ಮಣ್ಣಲಿ ಹುಟ್ಟಿದ ಚಿಕ್ಕ ಗರಿಕೆ
ಕನ್ನಡವ ಮನದಲಿರಿಸಿ ತನುವ
ನಾಡಿಗರ್ಪಿಸುವ ಧೂಳು ಕಣದೊಳಗಿನ
ಚಿಕ್ಕ ಕಣದ ಸೇವಕನು

ಸಾಲ

ಆಗ
ಯಾರು ಬೇಕಾದರೂ
ನೀಡುತ್ತಿದ್ದರೂ
ಸಾಲ
ಕೇಳಿದಾಗ
ಮೂರು, ಆರು
ಬಡ್ಡಿ ದರದಲ್ಲಿ

ಈಗ
ಯಾರೂ ನೀಡುತ್ತಿಲ್ಲ
ಬೇಡಿದರೂ ಸಾಲ
ಯಾಕೆಂದರೆ
ಐ ಟಿ ಅಧಿಕಾರಿಗಳು
ತೋಡುತ್ತಿದ್ದಾರಂತೆ ಇವರಿಗೆ
ಆರಡಿ, ಮೂರಡಿ
ಜಾಗ

ಸಮಸ್ಯೆ ಪರಿಹಾರ

ಎಲ್ಲರೂ
ಹಣವ ಕೊಟ್ಟು
ಸಮಸ್ಯೆಯನ್ನು
ಮುಚ್ಚುತ್ತಿದ್ದರೂ 

ಇವರು
ಹಣವ ಮುಚ್ಚಿ
ಸಮಸ್ಯೆಯನೆಲ್ಲವ
ಮುಚ್ಚಿದರೂ

ಮುತ್ತಿನ ಸಂಪತ್ತು

ಮಾತು ಮಾತಿಗೂ
ನನ್ನಾಕೆ ಕೊಡುತ್ತಾಳೆ
ಮುತ್ತು 

ಅದಕ್ಕೆ ಚೆನ್ನಾಗಿ
ಗಿಟ್ಟಿಸುತ್ತಾಳೆ
ಬಾಬತ್ತು 

ನಾನಂತೂ
ಸೋತಿದ್ದೆ
ಬೇಸತ್ತು 

ಗುಜರಾತಿ
ತಂದ ನೋಡ್ರಿ
ವಿಪತ್ತು 

ಮರುದಿನ
ನನ್ನ ಮುಂದಿತ್ತು
ಮುತ್ತಿನ
ಸಂಪತ್ತು

ಚಿಲ್ಲರೆ

ಮೋದಿ ಏನು
ಮಾಡಿದೆ ಮೋಡಿ

ಅಂದು
ಚಿಲ್ಲರೆ ಎಂದರೆ
ತಳ್ಳುತ್ತಿದ್ದರು
ನಗಾಡಿ

ಇಂದು
ಚಿಲ್ಲರೆ ಎಂದರೆ
ಅಪ್ಪುವರು
ಮುದ್ದಾಡಿ

ಬರಗಾಲ

ಯಾವಾಗಲೂ
ಮಣ್ಣಿನ ಮಕ್ಕಳೆ
ಉಣ್ಣುತ್ತಿದ್ದರೂ
ಬರಗಾಲ 

ಇವತ್ತು
MONEYಯ ಮಕ್ಕಳೂ
ಉಣ್ಣುವಂತಾಗಿದೆ
ಬರಗಾಲ

ಕಾಲಾಧನ್

ಕಾಳಧನಿಕರು ದಿನವೂ
ಕಾಯುತ್ತಿದ್ದರೂ
ಧನ ಧನ ಧನ

ಇಂದು ಕಾಯಲೂ
ಯೋಗ್ಯವಿಲ್ಲ ಅವರು
ದನ ದನ ದನ

ತಂಪು ಕೆಂಪು

ಮೋಡ ಅತ್ತರೆ
ಭೂಮಿ ತಂಪು
ನೀನು ಅತ್ತರೆ
ಕಣ್ಣು ಕೆಂಪು 

ಮೋಡ ಅಳಲೆಂತ
ಎಲ್ಲಾರೂ ಬಯಸ್ತಾರ
ನೀನು ಅಳೊದು
ನಾನ್ ಬಯಸ್ತೀನೇನೂ?

ಕಡಲು ನಕ್ಕರೆ
ಕಿನಾರೆ ಮುತ್ತು
ನೀನು ನಕ್ಕರೆ
ಬಾಯ್ತುಂಬ ಮುತ್ತು

ಕಡಲು ನಗಲಂತ
ಎಲ್ಲಾರೂ ಬಯಸ್ತಾರ
ನೀನೂ ನಗಬೇಕ
ಅನ್ನೋದ ನಾನ್
ಬಯಸ್ಬಾರ್ದೇನು?

ಹಕ್ಕಿ ಹಾಡಿದ್ರ
ಕಿವಿಗಿಂಪು
ಈ ಹಕ್ಕಿ ಹಾಡಿದ್ರ
ನನ್ನೆದಿ ತಂಪು

ಹಕ್ಕಿ ಹಾಡಬಾರ್ದಂತ
ಯಾರರ ಹೇಳ್ತಾರನೂ
ಈ ಹಕ್ಕಿ ಹಾಡೂದನ್ನ
ನಾನ್ ಕೇಳಬಾರ್ದನು?

ಮುಳುಗೊ ಸೂರ್ಯ
ಎಲ್ಲರಿಗೂ ಪ್ರೀತಿ
ಹುಟ್ಟೊ ಚಂದ್ರ
ನನಗ ಪ್ರೀತಿ

ಮುಳಗೊ ಸೂರ್ಯನ್ನ
ಯಾರರ ತಡಿತಾರನೂ?
ನಿನಗಂತ ಹುಟ್ಟಿದ ಈ
ಪ್ರೀತಿನ ತಡಿಲಿಕ್ಕಾಕ್ಕದೇನು?

ಯಾವುದು ಹೌದು ಅದು ಅಲ್ಲಾ

" ಯಾವುದು ಹೌದು ಅದು ಅಲ್ಲಾ
ಯಾವುದು ಅಲ್ಲಾ ಅದು ಹೌದು "
ಎಂಥ ನುಡಿಯ ನುಡಿದು ಕುಳಿತುಬಿಟ್ಟೆ
ನೆತ್ತಿಯ ಮೇಲೆ ಯಾವ ಸೂರನು ಬಯಸದೆ

ಈಗ್ಗೆ ಹದಿನೇಳು ವರ್ಷಗಳ ಹಿಂದೆ
ನನ್ನಣ್ಣ ಹಾಗೂ ತಂಗಿಯ ಇವರಿಬ್ಬರ
ಮದುವೆ ನಿನ್ನ ಸನ್ನಿದಾನದಲೆ ತಾನೆ ನಡೆಯಿತು
ಶುಭ ಘಳಿಗೆಯಲಿ ತಾನೆ ಅವರು ನಿನ್ನ
ನೆರಳಲಿ, ನೂರಾರು ಜನರ ಹಾರೈಕೆಯಲಿ
ಮಂತ್ರದಕ್ಷತೆಯೊಂದಿಗೆ ಕೈ ಹಿಡಿದುದು

ತಂಗಿಗೆ ನೀ ನೀಡಿದ್ದ ಬಾಳಿನ ವರವಾದರೂ
ಎಂತಹದು ರಾಮನ ಗುಣದಂತಹ ಗಂಡ
ಮರು ಮಾತಾಡದ ಅತ್ತೆ ಮಾವ
ಒಂದು ಹೊತ್ತಿಗೆ ಕಸ ಗುಡಿಸಲಾಗದಂತಹ
ಅರಮನೆಯಂತಹ ಮನೆ
ಜಗಲಿಯ ತುಂಬ ಕಾಳುಕಡಿ, ಎರಡಂಕಣವೂ ಹಿಡಿಯಲಾರದಷ್ಟು  ಎಮ್ಮೆಯಾಕಳು
ತಿಜೊರಿ ಹಿಡಿಯಲಾರದಷ್ಟು ಬಟ್ಟೆಯಾಭರಣ
ಮುದ್ದಾದ ಎರಡು ಗಂಡು ಮಕ್ಕಳು ಇವೆಲ್ಲವ ಪಡೆದ
ಇಂಥ ಭಾಗ್ಯವತಿಯ ಹೆಸರು
ಗೌರಮ್ಮ

ಏಕೇ?
ಅವಳುಣ್ಣುವ ಸುಖವ ನಿನಗೆ ಸಹಿಸದಾಯಿತೆ
ಸವತಿಯರು ಯಾರಾದರೂ ದೂರು ಕೊಟ್ಟರೆ
ಸಹಿಸದವರು ನಿನ್ನ ಕಿವಿ ಊದಿದರೆ
ಕ್ಷಣದಲ್ಲಿ ಸಿಡಿಲ ಹೊಡೆತಕ್ಕೆ ಸುಟ್ಟ ಮರದಂತೆ
ಬಂಡೆಗೆ ಬಡೆದು ಚೂರಾಗಿ ಹೋದ ನಾವಿಯಂತೆ
ಅವಳಿಗೆ ಬೋನ್ ಕ್ಯಾನ್ಸರ್ ಅನ್ನೊ ಬಾಳಿನ
ಬೋನಸ್ ಅನ್ನು ಕೊಟ್ಟು ಹಬ್ಬಕ್ಕೆಂದು ತವರಿಗೆ
ಬಂದ ತಂಗಿ ಹೆಣವಾಗಿ ಗಂಡನ ಮನೆಯ
ಸುಡುಗಾಡಿಗೆ ಹೋಗುವಂತೆ ಮಾಡಿದೆಯಲ್ಲ
ನಡೆದು ಬಂದವಳನ್ನು ನಾಲ್ಕು ಜನ ಹೊತ್ತು
ಒಯ್ಯುವಂತೆ ಮಾಡಿದೆಯಲ್ಲ ನ್ಯಾಯವೇ?
ತಾಯಿಲ್ಲದ ಗಂಡು ಮಕ್ಕಳು ಇನ್ನಾರಲಿ
ತಾಯಿಯ ರೂಪವ ಕಾಣಬಲ್ಲರು
ಅರ್ಧಾಂಗಿಯಿಲ್ಲದೆ ಬದುಕಬೇಕಾದ
ಅರ್ಧ ಜೀವನವನ್ನು, ಮರಗಳ ನೆರಳಿಲ್ಲದ
ಹಾದಿಯನು ಅವನಿಗೆ ಬಿಟ್ಟೆಯಲ್ಲ

ಇನ್ನೂ ನಮ್ಮಣ್ಣನ ಸರತಿಗೆ ಬಂದರೆ
ಹೆಂಡತಿ ಸೀತೆಯ ಗುಣದವಳು
ಅಂದವತಿ, ಸುಗುಣವತಿ ಪತಿ, ಅತ್ತೆ ಮಾವಂದಿರ
ಮುದ್ದಿನ ಸೊಸೆ
ಹೆಸರು
ಕವಿತಾ

ಹೆಸರೇನೊ ಕವಿತಾ ಎಂಬುದಿದೆ ಇವರ ಬಾಳಲಿ
ಪಲ್ಲವಿನೇ ಹುಟ್ಟಿಸದೆ ಹೋದೆಯಲ್ಲ
ಮಡಿಲಿಗೊಂದು ಮಗುವ ನೀಡದೆ
ವಂಶಕ್ಕೊಂದು ಕಳಸವ ಕೊಡದೆ ಅನುದಿನವು 
ಜೀವ ಹಿಂಡುತಿರುವೆಯಲ್ಲ
ಹದಿನೇಳು ಸಂವತ್ಸರಗಳು
ಕಳೆದು ಹೋದವು ನೋಡ ನೋಡುತ್ತಿದ್ದಂತೆಯೆ

ಇನ್ನೂ ಕಣ್ಮುಚ್ಚಿಯೇ ಕುಳಿತಿರುವೆ
ತಂಗಿಯನು ಸ್ಮಶಾನಕ್ಕೆ ಕಳುಹಿಸಿ ಗಂಡ
ಮಕ್ಕಳಿಗೆ ದಿನ ನಿತ್ಯದ ಸಾವನು ಕೊಟ್ಟೆ
ಅಣ್ಣನಿಗೆ ಸಂತಾನ ಭಾಗ್ಯವ ನೀಡದೆ
ದಿನವು ಮನಕೆ ನರಕ ಯಾತನೆಯನು ನೀಡಿದೆ
ಒಬ್ಬರಿಗೆ ಇದ್ದು ಸತ್ತಂತಹ ಬದುಕು
ಇವರಿಬ್ಬರಿಗೆ ಬದುಕಿದ್ದರೂ ಸಾಯುವಂತ ಸ್ಥಿತಿ