ಕನ್ನಡಿಗರ ನೀರು
ಕುಡಿದು ಬದುಕಬಲ್ಲಿರಿ
ಕನ್ನಡಿಗರ ಕಣ್ಣೀರ
ಕುಡಿದು ಬದುಕಬಲ್ಲೀರಾ?
ಜಯಮ್ಮ
ಒಪ್ಪಿದೆ ನೀವು ಈ ಮಣ್ಣ
ಮಗಳೆಂದು ಮಾತ್ರಕೆ ನೀವು
ಮಾಡುತಿರುವ ಅನ್ಯಾಯವನೆಲ್ಲವ
ಸಹಿಸಲಾದಿತೆ? ಅಥವಾ ಹುಟ್ಟಿದ
ಋಣವ ಈ ರೀತಿಯೂ ತೀರಿಸಬಹುದೆಂದು
ತೋರಿಸಿಕೊಟ್ಟಿರೆ?
ನಿಮ್ಮ ಮೊಂಡುತನದ ಹೋರಾಟಕ್ಕೆ
ಕಾವೇರಿಯು ನಾಡಲ್ಲೆಲ್ಲೂ ನಿಲ್ಲದೆ
ಬಸಿದು ಬಸಿದು ನಿಮ್ಮ ಮನೆಯಂಗಳವ
ತೊಯಿಸಿಹಳು
ಕಾಣುತಿಲ್ಲವೆ ಆ ನೀರಲಿ ತವರೂರ ಮಕ್ಕಳ
ಬರದ ಕಣ್ಣೀರು, ಆ ಕೆಂಪು ಬಣ್ಣದ ನೆತ್ತರು
ನಿಮ್ಮ ನೆಲಕಂಟಿ ನಂಜಾಗುತಿರುವದು
ಇಷ್ಟು ವರ್ಷಗಳಲ್ಲಿ ಅದೇಷ್ಟೊ ಆಣೆಕಟ್ಟಿನ
ನೀರನ್ನು ನ್ಯಾಯಾಂಗದಲಿ ನಾಡನು ಪೇಚಿಗೆ
ಸಿಲುಕಿಸಿ ಪಡೆದಿರುವಿರಿ
ಈ ವರ್ಷದ ಬರದ ಬೆಗೆ ನಿಮಗೆ ತಿಳಿಯದೆ
ಇರುವಂತದ್ದಲ್ಲ ಇದನ್ನರಿತು ನೀರು ನೀರು
ಎಂದು ನಮ್ಮೆಲ್ಲರ ನೆತ್ತರು ಹೀರಿ ಬಿಟ್ಟಿರಿ
ಕುಡಿಯಲಿಕ್ಕೆ ನೀರನೂ ಬಿಡದೆ
ಮೆಚ್ಚಬೇಕಾದುದೊಂದಿದೆ
ಐನೂರು, ಸಾವಿರ ಕೊಟ್ಟರೂ ಸಮಾವೇಶಕ್ಕೆ
ಸೇರದ ಜನ ನಿಮ್ಮ ಆರೋಗ್ಯದ ಸಲುವಾಗಿ
ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಜನ
ಸ್ವಯಂ ಪ್ರೇರಿತರಾಗಿ ಕುಂಭಮೇಳ ಮಾಡಿದರೆಂದರೆ
ಸಾಮಾನ್ಯದ ಮಾತೆ
ಎಷ್ಟಾದರೂ ಕನ್ನಡದ ಹೆಣ್ಣಲ್ಲವೆ ಜನರ
ಮೆಚ್ಚುಗೆಯ, ಅವರೆದೆಯ ಮನದಲಿ
ಮನೆಮಾಡುವ ಕಲೆ ರಜನೀಕಾಂತ್ ರ
ರೀತಿಯಲ್ಲಿಯೇ ಇದೆ
ನಿನ್ನಂಥ ಒಬ್ಬ ದಿಟ್ಟ ಮಹಿಳೆ ನಮ್ಮ
ನಾಡ ರಾಜಕಾರಣದಲಿ ಇದ್ದಿದ್ದರೆ....
ಗಡಿಯ ಸಮಸ್ಯೆ, ಭಾಷಾ ಸಮಸ್ಯೆ,
ಸ್ವಾಭಿಮಾನದಂತಹ ಸಮಸ್ಯೆಗಳು
ಹುಟ್ಟುತ್ತಿರಲಿಲ್ಲವೇನೊ...
ನಾಡ ಕಷ್ಟಗಳ ಮರೆತು ನಿದ್ರಿಸುವ
ಅರೆಹೊಟ್ಟೆಯ ತುಂಬಿಸದೆ
ರೆಟ್ಟೆಗೊಂದಿಷ್ಟು ಕೆಲಸವ ನೀಡದ
ನಾಯಕರಿಗೆ ಮಾದರಿಯಾಗುತಿದ್ದಿರೇನೊ?
ಏನೇಯಾದರೂ ಕಾವೇರಿಗೆ ಕಿಚ್ಚು
ಹಚ್ಚಿದ ಸ್ವಾರ್ಥ ನಾಯಕಿ ನೀವು
ಸತ್ತರೆ ಆನಂದ ಪಡುವ ಜನಕ್ಕೇನೂ
ಕೊರತೆಯಿಲ್ಲವಿಲ್ಲಿ
ಬದುಕಿದ್ದಗಾಲೇ ಹರಿಸಿದ್ದೇವೆ ಸಾಕಷ್ಟು
ನೀರನ್ನು ನಿಮ್ಮ ಅಂಗಳಕೆ
ಇನ್ನೂ ಸತ್ತ ನಿಮ್ಮ ಹೆಣಕ್ಕೆ ಎರಡು ಹನಿ
ಕಣ್ಣೀರು ಹರಿಸಲು
ನಮಗೇನೂ ಭಾರವಾಗದು
ಜೀವಗಂಗೆಯನೆ ಹರಿಬಿಟ್ಟವರು ನಾವು
ನಯನ ಗಂಗೆಯ ಹರಿಬಿಡಲಾರೆವೆ ನಾವು
ಹುಟ್ಟಿ ಬಾ ಇನ್ನೊಮ್ಮೆ
ಈ ನಾಡಿಗೆ
ಮುಳುವಾಗಿಯಲ್ಲ
ನಾಡನಾಳುವ ಮಗಳಾಗಿ
No comments:
Post a Comment