ನೀನಗಿಂದೂ ತೃಪ್ತಿಯಾಯಿತೆ
ಇಂದಾದರೂ ನಿನ್ನ ಹೊಟ್ಟೆ ತುಂಬಿತೆ
ಭುವಿಗೆ ತುಸು ನೀರನು ಹೊಯ್ದಿದ್ದರೆ
ನಿನ್ನ ಜಡೆಯ ಗಂಗೆಯೇನಾದರೂ
ಸೊರಗುತ್ತಿದ್ದಳೆ ?
ಶಿರದಿಂದ ಭುವಿಗಿಳಿಸಿದ್ದರೆ ಆಕೆ
ಸಿಡುಕುತಿದ್ದಳೆ
ಇಲ್ಲವೆ
ಧರ್ಮವ ಬಿಟ್ಟು ಜಾತಿಯನೇಣಿಸುವ
ನರರಿಗೇಕೆ ನೀರೆಂದು ಸುಮ್ಮನಾದೆಯೆ
ಕಪ್ಪು ಮಣ್ಣಿನ ಈ ಭೂಮಿ ಬಾಯ್ತೆರೆದು
ಮಲಗಿದ್ದರೆ
ಅಳಿದುಳಿದ ಫಸಲುಗಳು ಇಲಿಗಳ ಪಾಲಾಗುತಿವೆ
ಇಲಿಗಳು ಹರಿದಾಡುವ ಹಾವುಗಳಿಗೆ ತುತ್ತಾಗುತಿವೆ
ಹಾವುಗಳು ಹಾರುವ ಹದ್ದಿನ ಪಾಲಾಗುತಿವೆ
ಬದುವಿನ ಹಸಿರುಸಿರು ನಿಂತ ಗರಿಕೆ ಸಸಿಗಳು
ಒಣಗಿ ಬೆಂದು ನಿಂತಿವೆ
ಬಸವನಾರ್ತನಾದವದು ಕೇಳುತಿಲ್ಲವೆ ?
ಒಣಗಿನಿಂತ ಬೆಟ್ಟಗುಡ್ಡಗಳು ಕಾಡ್ಗಿಚ್ಚಿಗೆ
ಸಿಕ್ಕು ಧಗಧಗನೆ ಉರಿಯುವ ಅವುಗಳೊಡಲ
ಬೆಂಕಿ ನಿನಗೆ ತಾಕುತಿಲ್ಲವೆ ?
ಬರದ ಬರೆಗೆ ಸಿಲುಕಿ ಕೊರಳನು
ಹಗ್ಗಕೆ ತೂಗಿಸಿ ನಿನ್ನ ಮುಂದೆ ನಿಲ್ಲುವವರ
ಸರದಿ ಸಾಲು ಸಾಲುತಿಲ್ಲವೆ ?
ಹೇಗೆ ಹೊರಡಲಿ ನಾನು ಅವಳ ಮಡಿಲಿಗೆ
ಹಸಿರಿನ ಹಾಸಿಗೆ ಹೊದ್ದದೆ ಮಲಗಿರುವಾಗ
ಯಾವ ಸವಿಯ ಎಡೆಯನೊಯ್ಯಲಿ ಚರಗ
ಚೆಲ್ಲಲು
ಭೂದೇವಿಯೆ ಸಿರಿಯಿಲ್ಲದ ಗರತಿಯಂತಿರುವಾಗ
ನಾ ಹೇಗೆ ಹೇಳಲಿ, ನಾನೇನ ತೋರಿಸಲಿ ನನ್ನ ಮಕ್ಕಳಿಗೆ
ಆ ತಾಯಿ ಪೂಜೆಯ ವೈಭವವ, ಚರಗ ಚಲ್ಲುತ
ಹೊಲವ ಸುತ್ತುವ ಸುಂದರ ಕ್ಷಣಗಳ ನಾ ಹೆಂಗ
ಚಿತ್ರಿಸಲಿ ಅವರ ಮನದಲಿ
ಇನ್ನೇನ ಬೇಡಲಿ ನಿನ್ನ ನಾನು ಶಿವನೆ
ತೆರೆಯೊಮ್ಮೆ ಅಂತರಂಗದ ಕಣ್ಣನು
ಸುರಿಸು ಗಂಗೆಯನು ಮಣ್ಣಿಗೆ
ಹಾರಲಿ ಧೂಳು ತಣಿಸಲಿ ಒಡಲು
ಮಾಡದಿರು ನಮ್ಮ ಬಾಳ ಮಣ್ಣುಪಾಲು
ಇಲ್ಲವಾದರೆ....
ನೋಡೊಮ್ಮೆ ನಡುಗಣ್ಣಿನಿಂದ ಉರಿದು
ಉಗಿಯಾಗಿ ಹಾರಲಿ ನಮ್ಮ ಬದುಕು
ರವಿಯ ಉರಿಯು ಸುಡುವ ಮುನ್ನ
ಹಸಿರಿಲ್ಲದೆ ಹಸಿದು ಹಸಿದು ಹೆಣವಾಗುವ ಮುನ್ನ
ಉರಿಸಿಬಿಡು ಬದುಕ ಬೆಂಕಿಗೆ
ಇಲ್ಲವೆ...
ಸುರಿಸಿಬಿಡು ಮಳೆಯ ಬಾಳಿಗೆ
No comments:
Post a Comment