ನಿನ್ನ ಚರಣಕೆ ಬಂದವರು
ನಿನಗೆ ಶರಣೆಂದು ನಿಂತವರು
ನಾನೆಂಬುದ ಬಿಟ್ಟು ಬರದವರು
ಏನೊಂದ ಬಿಡದೆ ಬೇಡುವವರು
ಇವರು ನಿನ್ನ ವರಕೆ ಕಾಯುವವರು
ನಾ ಮುಂದು ತಾ ಮುಂದೆನ್ನುವರು
ಪಂಚಾಮೃತಕೆ
ಸಮಯ ಸರಿದು ಕಾಲ ಕರೆಯ ಬರಲು
ಪಂಚಪಕ್ಷಿಯ ಬಿಡಲೆಲ್ಲರಿಗೂ ಹಿಂಜರಿಕೆ
ನಿನ್ನ ದರ್ಶನಕ್ಕಾಗಿ ಬೆಳಗಿನ ಜಾವದಲೆದ್ದೂ
ತಣ್ಣೀರ ಸ್ನಾನ ಮಾಡಿ, ಬಾಯಲ್ಲಿ ಅಗಳನ್ನು
ಹಾಕದೆ ದೂರದೂರಿಂದ, ವಾಹನದಿಂದ
ವಾಹನಕ್ಕೆ ಹತ್ತಿ ಇಳಿದು ಮತ್ತಷ್ಟು ದೂರ
ನಡೆದು ಬಂದು, ಸರತಿ ಸಾಲಲಿ ನಿಂತು
ಇಷ್ಟೇಲ್ಲಾ ಕಷ್ಟಗಳ ಪಟ್ಟು ಬಂದವರು
ನಿನ್ನ ನೆರಳಲಿ ಒಂದು ಕ್ಷಣವು ನಿಲ್ಲದೆ
ಕುಳ್ಳದೆ ಅರೇ ಮನಸ್ಕರಾಗಿ ನಡೆದು ಬಿಡುವರಲ್ಲ
ನಿನ್ನ ಮೊಗವ ಕಂಡ ಕ್ಷಣವೆ
ಇನ್ನೂ ....
ಮಂಗಳಾರತಿ ತಟ್ಟೆಗೆ ಒಂದು ರೂಪಾಯಿಯನ್ನು
ಹಾಕಲು ಯೋಚಿಸುವರು, ಕೈ ಚೀಲಗಳ ಜಾಲಡಿಸುವರು
ಜೇಬುಗಳ ತಡಕಾಡುವರು ಸಿಗದ ಪಕ್ಷದಲ್ಲಿ
ನೋಟನ್ನು ಹಾಕಿ ಆ ತಾಟಿಂದ ಚಿಲ್ಲರವ ಎತ್ತುವರು
ಯಾಕೆಂದರೆ ಅಷ್ಟು ಹಣದ ಅವಶ್ಯಕತೆ ನಿನಗಿಲ್ಲವಲ್ಲ
ನಿನಗೇನೂ ಶಾಲೆಗೆ ಹೋಗುವ ಮಕ್ಕಳೇ
ಮೊಮ್ಮಕ್ಕಳೆ, ಬಟ್ಟೆ ಬರೆಯ ಆಸೆಯೆ, ತಿಂಗಳ
ಕೊನೆಗೆ ರೇಷನ್ ಇಲ್ಲವೆಂಬ ಚಿಂತೆಯೆ,
ಆಸ್ಪತ್ರೆಗೆ ಹೋಗಲು ರೋಗ ಭಾದೆಗಳೆ
ನಿಂತು ನಿಂತು ಕಾಲು ನೋವುಗಳೆ
ಕುಳಿತು ಕುಳಿತು ಬೆನ್ನು ನೋವೆ ಇಲ್ಲವೆ
ಮಡದಿ ಒಡವೆ ಕೇಳುವಳೆಂಬ ಭಯವೆ ಇದಾವದೂ
ಇಲ್ಲದಿರುವಾಗ ಹೆಚ್ಚಿಗೆ ದಕ್ಷಿಣೆ ಹಾಕುವುದಾದರೂ
ಏಕೇ?
ಬೇಡುವದಾದರೂ ಕೋಟಿಗಟ್ಟಲೆಯಿದೆ
ನೀನು ಹರಸಿಬಿಡುವೆಯೊ ಇಲ್ಲ ಕೊಟ್ಟು
ಕಳಸಿಬಿಡುವೇಯೊ ಕೇಳಿದ ತಕ್ಷಣವೆ
ನಿನ್ನೆದುರು ನಿಂತಾಗ
ಹೆಂಗಳೆಯರು ಧಾರಾವಾಹಿಗಳ
ನೋಡುವಾಗ ಇರುವ ತದೇಕಚಿತ್ತತೆ
ವ್ಯಾಪಾರಿಯು ಹಣವನೇಣಿಸುವಾಗ
ತೋರುವ ಏಕಾಗ್ರತೆ
ನೌಕರಿದಾರರೂ ತಿಂಗಳ ಸಂಬಳ
ವರುಷದ ರಜೆಯ ದಿನಗಳ ಬಳಕೆಗಳ
ಬಗ್ಗೆ ಅವರ ಜಾಗೃತ ಮನಸ್ಸು
ಯುವಕ ಅವಳ ಸಂದೇಶಗಳ ಓದುವಾಗ
ತೋರುವ ನಿಷ್ಠೆ
ಅವಳು ಇವನ ಮಾತಲಿ ತೇಲಿ ಹೋಗುವ
ಮೋಹಕತೆ ಇದಾವುದು ನಿನ್ನ ಎದುರಿಗೆ
ನಿನ್ನ ನೆರಳಲಿ ನಿಂತವರಾರೂ ತೋರರು
ಹೇಳುವರು, ಬರೆಸುವರು ಕಲ್ಲು ಗೋಡೆಗಳ
ಮೇಲೆ ಇದು ನನ್ನ ಕಾಣಿಕೆ
ದೇವ ನೀಡದಿದ್ದರೆ ಈ ದೇಹ ಕಾಣಿಕೆ
ಜನಿಸಿ ಬರುತ್ತಿದ್ದೆಯೊ ಈ ಲೋಕಕೆ
ಅವಕೊಟ್ಟದ್ದು ಅವನಿಗರ್ಪಿಸಲು
ನಿನ್ನದೇನು ಕಾಣಿಕೆ
No comments:
Post a Comment