Saturday, December 3, 2016

ಯಾವುದು ಹೌದು ಅದು ಅಲ್ಲಾ

" ಯಾವುದು ಹೌದು ಅದು ಅಲ್ಲಾ
ಯಾವುದು ಅಲ್ಲಾ ಅದು ಹೌದು "
ಎಂಥ ನುಡಿಯ ನುಡಿದು ಕುಳಿತುಬಿಟ್ಟೆ
ನೆತ್ತಿಯ ಮೇಲೆ ಯಾವ ಸೂರನು ಬಯಸದೆ

ಈಗ್ಗೆ ಹದಿನೇಳು ವರ್ಷಗಳ ಹಿಂದೆ
ನನ್ನಣ್ಣ ಹಾಗೂ ತಂಗಿಯ ಇವರಿಬ್ಬರ
ಮದುವೆ ನಿನ್ನ ಸನ್ನಿದಾನದಲೆ ತಾನೆ ನಡೆಯಿತು
ಶುಭ ಘಳಿಗೆಯಲಿ ತಾನೆ ಅವರು ನಿನ್ನ
ನೆರಳಲಿ, ನೂರಾರು ಜನರ ಹಾರೈಕೆಯಲಿ
ಮಂತ್ರದಕ್ಷತೆಯೊಂದಿಗೆ ಕೈ ಹಿಡಿದುದು

ತಂಗಿಗೆ ನೀ ನೀಡಿದ್ದ ಬಾಳಿನ ವರವಾದರೂ
ಎಂತಹದು ರಾಮನ ಗುಣದಂತಹ ಗಂಡ
ಮರು ಮಾತಾಡದ ಅತ್ತೆ ಮಾವ
ಒಂದು ಹೊತ್ತಿಗೆ ಕಸ ಗುಡಿಸಲಾಗದಂತಹ
ಅರಮನೆಯಂತಹ ಮನೆ
ಜಗಲಿಯ ತುಂಬ ಕಾಳುಕಡಿ, ಎರಡಂಕಣವೂ ಹಿಡಿಯಲಾರದಷ್ಟು  ಎಮ್ಮೆಯಾಕಳು
ತಿಜೊರಿ ಹಿಡಿಯಲಾರದಷ್ಟು ಬಟ್ಟೆಯಾಭರಣ
ಮುದ್ದಾದ ಎರಡು ಗಂಡು ಮಕ್ಕಳು ಇವೆಲ್ಲವ ಪಡೆದ
ಇಂಥ ಭಾಗ್ಯವತಿಯ ಹೆಸರು
ಗೌರಮ್ಮ

ಏಕೇ?
ಅವಳುಣ್ಣುವ ಸುಖವ ನಿನಗೆ ಸಹಿಸದಾಯಿತೆ
ಸವತಿಯರು ಯಾರಾದರೂ ದೂರು ಕೊಟ್ಟರೆ
ಸಹಿಸದವರು ನಿನ್ನ ಕಿವಿ ಊದಿದರೆ
ಕ್ಷಣದಲ್ಲಿ ಸಿಡಿಲ ಹೊಡೆತಕ್ಕೆ ಸುಟ್ಟ ಮರದಂತೆ
ಬಂಡೆಗೆ ಬಡೆದು ಚೂರಾಗಿ ಹೋದ ನಾವಿಯಂತೆ
ಅವಳಿಗೆ ಬೋನ್ ಕ್ಯಾನ್ಸರ್ ಅನ್ನೊ ಬಾಳಿನ
ಬೋನಸ್ ಅನ್ನು ಕೊಟ್ಟು ಹಬ್ಬಕ್ಕೆಂದು ತವರಿಗೆ
ಬಂದ ತಂಗಿ ಹೆಣವಾಗಿ ಗಂಡನ ಮನೆಯ
ಸುಡುಗಾಡಿಗೆ ಹೋಗುವಂತೆ ಮಾಡಿದೆಯಲ್ಲ
ನಡೆದು ಬಂದವಳನ್ನು ನಾಲ್ಕು ಜನ ಹೊತ್ತು
ಒಯ್ಯುವಂತೆ ಮಾಡಿದೆಯಲ್ಲ ನ್ಯಾಯವೇ?
ತಾಯಿಲ್ಲದ ಗಂಡು ಮಕ್ಕಳು ಇನ್ನಾರಲಿ
ತಾಯಿಯ ರೂಪವ ಕಾಣಬಲ್ಲರು
ಅರ್ಧಾಂಗಿಯಿಲ್ಲದೆ ಬದುಕಬೇಕಾದ
ಅರ್ಧ ಜೀವನವನ್ನು, ಮರಗಳ ನೆರಳಿಲ್ಲದ
ಹಾದಿಯನು ಅವನಿಗೆ ಬಿಟ್ಟೆಯಲ್ಲ

ಇನ್ನೂ ನಮ್ಮಣ್ಣನ ಸರತಿಗೆ ಬಂದರೆ
ಹೆಂಡತಿ ಸೀತೆಯ ಗುಣದವಳು
ಅಂದವತಿ, ಸುಗುಣವತಿ ಪತಿ, ಅತ್ತೆ ಮಾವಂದಿರ
ಮುದ್ದಿನ ಸೊಸೆ
ಹೆಸರು
ಕವಿತಾ

ಹೆಸರೇನೊ ಕವಿತಾ ಎಂಬುದಿದೆ ಇವರ ಬಾಳಲಿ
ಪಲ್ಲವಿನೇ ಹುಟ್ಟಿಸದೆ ಹೋದೆಯಲ್ಲ
ಮಡಿಲಿಗೊಂದು ಮಗುವ ನೀಡದೆ
ವಂಶಕ್ಕೊಂದು ಕಳಸವ ಕೊಡದೆ ಅನುದಿನವು 
ಜೀವ ಹಿಂಡುತಿರುವೆಯಲ್ಲ
ಹದಿನೇಳು ಸಂವತ್ಸರಗಳು
ಕಳೆದು ಹೋದವು ನೋಡ ನೋಡುತ್ತಿದ್ದಂತೆಯೆ

ಇನ್ನೂ ಕಣ್ಮುಚ್ಚಿಯೇ ಕುಳಿತಿರುವೆ
ತಂಗಿಯನು ಸ್ಮಶಾನಕ್ಕೆ ಕಳುಹಿಸಿ ಗಂಡ
ಮಕ್ಕಳಿಗೆ ದಿನ ನಿತ್ಯದ ಸಾವನು ಕೊಟ್ಟೆ
ಅಣ್ಣನಿಗೆ ಸಂತಾನ ಭಾಗ್ಯವ ನೀಡದೆ
ದಿನವು ಮನಕೆ ನರಕ ಯಾತನೆಯನು ನೀಡಿದೆ
ಒಬ್ಬರಿಗೆ ಇದ್ದು ಸತ್ತಂತಹ ಬದುಕು
ಇವರಿಬ್ಬರಿಗೆ ಬದುಕಿದ್ದರೂ ಸಾಯುವಂತ ಸ್ಥಿತಿ

No comments:

Post a Comment