ಸಿಡಿದೆದ್ದಿದೆ..ಮೈ ಕೊಡವೆದ್ದಿದೆ..ನ್ಯಾಯಾಂಗ ವ್ಯವಸ್ಥೆ..!!!! ಭೂಗಳ್ಳರ ಮೈ ಚಳಿಯನ್ನು ಬಿಡಿಸುತಿದೆ...ಅಕ್ರಮದ ಮಣ್ಣಿನಲ್ಲಿ ಹೂತಿಹ ಹೆಣಗಳಿಗೂ ಭಯ ಬೀಳಿಸುತಿದೆ...
ಅಟ್ಟುತಿದೆ, ಜೈಲಿಗಟ್ಟುತಿದೆ...ನ್ಯಾಯ ದೇವತೆ ಕಣ್ಣಿಗೆ
ಬಟ್ಟೆಯ ಕಟ್ಟಿಕೊಂಡೆ ದಬ್ಬುತಿದೆ... ಕಗ್ಗತ್ತಲೆಯ ಕೋಣೆಗೆ
ಸಿಕ್ಕವರು...ಸೆರೆಯ ಹೊಕ್ಕವರು ಧನಿಕರೆನಲ್ಲ
ಕೆರೆಯ ಮಾಯವಾಗಿಸಿ, ಕಟ್ಟಡಗಳ ಕಟ್ಟಿದ ಬಿಲ್ಡರ್ ಗಳೆನಲ್ಲ
ಆಶ್ರಯಾಸೆಯ ತೋರಿಸಿ... ಲಕ್ಷ..ಲಕ್ಷಗಟ್ಟಲೆ ಹಣವ
ನುಂಗಿ, ಜನತೆಗೆ ನೀರು ಕುಡಿಸಿದ ವಸತಿ ವಂಚಕರಲ್ಲ
ಶಾಸಕರ ಹೊಟ್ಟೆಯ ತುಂಬಿಸುವ ದಲ್ಲಾಳಿಗಳಲ್ಲ..
ಬಲೆಗೆ ಬಿದ್ದದ್ದು... ಚಿಕ್ಕ ಚಿಕ್ಕ ಮೀನಗಳೆ...😢😢
ಕರಿದು...ಹುರಿದು ಮುಕ್ಕುತಿರುವುದು ಇವರನ್ನೆ...
ಹೊಟ್ಟೆಪಾಡಿಗಾಗಿ.. ಗೇಣುದ್ದ ಭೂಮಿಯ ಊಳಿದ
ಊಳಿಗರನ್ನೆ...
ಬಿಸಿಲೊ..ಮಳೆಯೊ.. ಒಂದೆಣಿಸದೆ ದುಡಿಯುವ
ಮಣ್ಣ ಮಕ್ಕಳನ್ನ...
ಮಳೆ-ಬೆಳೆಯಿಲ್ಲದೆ ಊರೂರು ಅಲೆಯುವ
ಅಲೆಮಾರಿಗಳನ್ನ....
ಬೆಳೆದ ಬೆಳೆಗೆ ಬೆಂಬಲ ಬೆಲೆಯನ್ನು ಕೊಡುವ
ಯೋಗ್ಯತೆಯಿಲ್ಲ... ಹೊಲದ ಬದುವಿನ ಗಿಡಕ್ಕೆ
ನೇಣುಕೊಟ್ಟವರ ಬದುಕಿನ ಬಂಡಿಗೆ ನೇರವಾದವರಿಲ್ಲ
ಸಾಲದ ಶೂಲಕ್ಕೆ ಸಿಕ್ಕು ನರಳಾಡುತಿರುವವರ
ಉಪಚರಿಸುವವರಿಲ್ಲ...ಓಟಿಗಾಗಿ ಇವರುಗಳ
ಮನೆಯ ಕದವ ತಟ್ಟದವರೆ ಇಲ್ಲ... ಮೇವು
ನೀರಿಲ್ಲದೆ ಸಾಯುವ ದನಕರಗಳ ಗೋಳು..
ಇವರಿಗೆ ಬೇಕಿಲ್ಲ...
ಅಂತೂ...ಇಂತು ಹೂಡಿದೆ ಯುದ್ದ, ಭೂಗಳ್ಳರ ವಿರುದ್ಧ
ನ್ಯಾಯಾಂಗ ಬೀಸಿದ ಬಲೆಯಲ್ಲೂ ರಂಧ್ರಗಳುಂಟು
ಉಳ್ಳವರು ನುಣುಚಿಕೊಳ್ಳುವರು... ಹೊಟ್ಟೆಗೆ ಹಿಟ್ಟೆ
ಇಲ್ಲದವರು... ನುಣುಚಿಕೊಳ್ಳುವ ಮಾತೆಲ್ಲಿ...ನ್ಯಾಯ
ದೇವತೆ ಕಣ್ಣಿಗೆ ಬಟ್ಟೆಯನ್ನೆ ಕಟ್ಟಿಕೊಂಡು ತೀರ್ಪು
ನೀಡಿಬಿಟ್ಟಿರುವಳಲ್ಲ... ಒಂದು ವರ್ಷ ಜೈಲು...
ಹತ್ತು ಸಾವಿರ ದಂಡ...!!!!!! ಇನ್ನೇನುಳಿಯಿತು..?
ಅವನ ಸಂಸಾರದ ಬಾಗಿಲಿಗೊಂದು ಇಡಬೇಕಿದೆಯಲ್ಲ
ಪಿಂಡ...
No comments:
Post a Comment