Saturday, September 22, 2018

ಜಾರದ ಕಂಬನಿ

ನೊಂದುಕೊಳ್ಳದಿರು.... ಕಂದ
ಚುಚ್ಚಿರುವುದು ಚಿಕ್ಕ ಮುಳ್ಳು..
ಹೊಸತೆನಲ್ಲ ನನಗೆ, ಬಾಳಿನ ಗಡಿಯಾರದಲ್ಲಿ
ಎಂದು ಕಿತ್ತು ಹೋಗಿದೆ ಸಂತಸದ ಮುಳ್ಳು

ಹೊತ್ತಿರುವ ಬಿಂದಿಗೆ ಭಾರವಾಗಿಲ್ಲ..
ಹೆತ್ತಿರುವ ನೀವಿಬ್ಬರೇನು ಬೇಸರವಾಗಿಲ್ಲ...
ಹಸಿವಿನ ಕಾವಿಗಿಂತ, ಸುಡುವ ಸೂರ್ಯನ ಉರಿಯೇನು ದೊಡ್ಡದೆನಲ್ಲ..
ಮೈ ತುಂಬಾ ಬೆಂಕಿಯನ್ನೆ ತುಂಬಿಕೊಂಡವಳಿಗೆ, ಕಾದ
ಹಾದಿಯೊಂದು ಲೆಕ್ಕವೇನಲ್ಲ...

ಅರಿವಿದೆ..ಬಾಳಿನುದ್ದದ ಹಾದಿ ಹೂಹಾಸುವೇನಲ್ಲ,
ತುಸು ನಕ್ಕರೆ, ಕರೆದು ಮಂಚಕೆ ಹೂವನು ಹಾಸುವವರೆ ಎಲ್ಲ
ಮುಂಜಾವು ಕಾಸಿದಂಬಲಿ ಸಂಜೆಗಿಲ್ಲ..., ಅಂಜಿಲ್ಲ
ನಡುವಲ್ಲಿ ಶಕ್ತಿಯಿದೆ, ಬಂಧು ಬಳಗದ ಮುಂದೆ ನಾನೆಂದು ಬಾಗೋಲ್ಲ

ಬಡತನದ ಬೇಗೆಗಂಜಿ ಗಂಡನು ಸತ್ತು ಹೋದನಲ್ಲ..!!!
ಒಂಟಿ ಬಾಳಿಗಂಜಿ, ಮರದ ರೆಂಬೆಗೆ ಭಾರವಾಗುವುದಿಲ್ಲ
ಬಳ್ಳಿಯೊಳಗಿನೆರಡು ಕಾಯಿಗಳಿವೆ, ಹಣ್ಣಾಗಿಸಬೇಕಲ್ಲ..
ಹೆಣ್ಣು ಬಾಳಿನ ಕಣ್ಣೆಂಬುದನು ಜಗಕೆ ಅರಿವಾಗಿಸಬೇಕಲ್ಲ..

ಬಾಳಿನ ದಾರಿ ಎಷ್ಟಿದೇಯೊ...? ನಡೆಯಲೆಬೇಕಲ್ಲ..
ಯಾವ ತಿರುವಿನಲಿ...ಕಾಲನದಾವ ಹೊಂಚಿದೆಯೊ ಅರಿವಿಲ್ಲ...
ಬದುಕಾಡಿಸುವಾಟಕಕೆ ಸೋಲದೆ, ನಡೆಯಲೆಬೇಕಲ್ಲ..
ಅತ್ತು ಎದೆ ಭಾರವ ಹಗುರು ಮಾಡಿಕೊಳ್ಳಬೇಕಿದೆ ಈಗ
ಕಣ್ಣಂಚಲಿ ಏಕೋ... ಕಂಬನಿಯೊಂದು ಜಾರುತಿಲ್ಲವಲ್ಲ..

No comments:

Post a Comment