ಕಣ್ತುಂಬ....ಕಾಮದ ಪೊರೆಯನ್ನೆ ತುಂಬಿಕೊಂಡು
ಸುಟ್ಟುಬಿಟ್ಟೆ ನನ್ನ ಸುಕೋಮಲ ಸೌಂದರ್ಯವನ್ನು..
ಚೂರು ಕರುಣೆಯಿಲ್ಲದೆ..
ತುಸು ಪರಿಮಳವನ್ನಾದರೂ ಚೆಲ್ಲಿದ್ದರು... ಒಪ್ಪಿಕೊಳ್ಳುವ
ಮನಸ್ಸನ್ನಾದರು ಮಾಡುತ್ತಿದ್ದೆನೇನೊ..? ಅದ್ಹೇಗಾದಿತು...?
ವಿಕೃತವೆಂಬುದು ನಿನ್ನ ಮನಸ್ಸಿನಲ್ಲಿಯೆ ಮನೆ ಮಾಡಿ
ಕುಳಿತಿರುವಾಗ, ಆರಾಧಿಸುವುದಂತು ದೂರದ ಮಾತು...
ನಿ ಕೊಟ್ಟ ಕಾಣಿಕೆಯ ನೋವು... ನಿನಗರಿವಾದಿತಾದರು ಹೇಗೆ ?
ಮನೆಯ ಗೋಡೆಯ ಮೇಲಿನ ಕನ್ನಡಿ ಬೆಚ್ಚಿಬಿಳುತಿದೆಯಿಂದು
ನನ್ನೀ ಪ್ರತಿರೂಪವನೆ ತೋರಲು....
ಮರೆತಾದರೂ ಸುಳಿಯದಿರು... ನಮ್ಮ ಸುತ್ತಮುತ್ತವೆಂದು,
ಧೂಳು...ಜೇಡರಬಲೆಯನ್ನೆ ಮೈ ತುಂಬಾ ಹೊದ್ದು
ಕುಳಿತುಬಿಟ್ಟಿವೆ....ಸೌಂದರ್ಯ ವರ್ಧಕ ಸಾಧನಗಳು...
ನನ್ನ ಕಾಲ್ಗೆಜ್ಜೆಯ ಸದ್ದಿಗಾಗಿಯೆ ಕಾಯುತ್ತಿದ್ದ ಬೀದಿಯ ರೋಮಿಯೊಗಳು...ಕನಸಲ್ಲಿಯೂ ನನ್ಹೆಸರನ್ನು ನೆನಪಿಸಲು
ಭಯಬಿಳುತಿಹರಂತೆ...
ಅಪ್ಪನ ಮುದ್ದು... ಅಮ್ಮನ ಮಮತೆ... ಅಣ್ಣನ ತುಂಟಾಟ,
ಕಾಲೇಜು ಗೆಳತಿಯರೊಡಗಿನ ಮೋಜು,ಮಸ್ತಿಗಳೆಲ್ಲವು...
ಸತ್ತ ಹೆಣಕ್ಕೆ ಗಂಧದ ಕಟ್ಟಿಗೆಗಳಿಂದ ಸುಟ್ಟ ಹಾಗೆ,
ಬದುಕಿನ ಸಂತೋಷಗಳೆಲ್ಲ ಸುಟ್ಟು ಹೋಗಿಬಿಟ್ಟವು...
ಹರೆಯದ ಹುಮ್ಮಸ್ಸಿನಲ್ಲಿ ಹಾರಾಡಬೇಕಿದ್ದೀ...ಹಕ್ಕಿಯ
ರೆಕ್ಕೆಯ ಕತ್ತರಿಸಿ...ದೂಡಿಬಿಟ್ಟೆ ಗೃಹ ಬಂಧನಕೆ
ಇಷ್ಟಾದರೂ... ನಾನೇನು ಸೋತಿಲ್ಲ..., ಸುಟ್ಟದ್ದು.. ಮೂರು
ದಿನಕೆ ಮಣ್ಣಾಗುವ ಮಾಂಸವನ್ನು..., ಬದುಕಿ ಗೆದ್ದೆ..
ಗೆಲ್ಲುವೆನೆಂಬ ವಿಶ್ವಾಸದ ನಗೆಯನ್ನೇನು ನಿ.. ಕಸಿದುಕೊಳ್ಳಲಾಗಲಿಲ್ಲ.., ಅದು ನಿನ್ನಿಂದಾಗದು ಕೂಡಾ...
ಕಟ್ಟಿಕೊಳ್ಳುವೆ ಬದುಕನ್ನು... ಇದೆ ವಿರೂಪದಿಂದಲೆ, ಬೆರಗಾಗಬೇಕು... ನಿನ್ನನ್ನು ಸೇರಿಸಿ ಈ ಜಗತ್ತು...ಸೋತು
ಕುತಿದ್ದವಳು ಇವಳೇನಾ ಎಂದು...
ನೋಡಿಂದು... ನರಕದ ಬಾಗಿಲನು ದಾಟಿ, ಸಂತಸದ ಹಸೆಮಣೆಯನೇರಿರುವೆ... ನನಗಿಂದೂ ಚೂರಾದರು
ಗೆಲುವಾಗಿದೆಯೇನೊ...? ನಾನರಿಯೆ...
ಅರಳುವ ಮೊಗ್ಗುಗಳ ಕನಸುಗಳ ಉಸಿರಗಟ್ಟಿಸುವ
ವಿಷ ಗಾಳಿಗಳಂತಹ ಅಸುರರಿರುವ ತನಕ....
ನೆಮ್ಮದಿಯಾಗಿ ಉಸಿರಾಡಾವುದಾದರು ಹೇಗೆ
ನಮ್ಮಂತವರೆಲ್ಲ...
No comments:
Post a Comment