Monday, October 30, 2017

ತಾಯಿ ಭುವನೇಶ್ವರಿ

ಎಷ್ಟು ಸುಕೋಮಲೆ.... ತಾಯೆ ನೀನು ಭುವನೇಶ್ವರಿ
ಲೋಕದಲಿ ನಿನ್ನಷ್ಟು ಯಾರಿಲ್ಲವಿಲ್ಲಿ ಸುಗಂಧವತಿ
ಶಿಲ್ಪಿಯ ಶಿಲೆಯ ಕಲೆಯ ಬಲೆಯೊಳರಳಿ ನಿಂತ
ಸೌಂದರ್ಯವತಿ
ಅಷ್ಟಪೀಠಗಳಿಗೆ ಜನ್ಮವನಿತ್ತ ತಪೋ ಭೂಮಿಯು ನೀನು
ಕಾವೇರಿ ಗೋದಾವರಿಗಳ ತುಂಬಿ ಹರಿಯುವಂತ
ಜೀವ ನದಿಗಳ ಒಡಲು ನೀನು
ಕವಿ ರನ್ನ ಪಂಪ ರಾಘವಾಂಕರ ಪದಗಳಲಿ ಮಿಂದ
ನಿನ್ನನು....ನಾನಾವ ಪದಗಳಲಿ ಕಟ್ಟಿಕೊಡಲಿ ತಾಯೆ...

ಏನು ಮಾಡುತ್ತಿರುವರು ನೋಡು ? ನಿನ್ನನು..
ಗಂಧವತಿ ಎಂದೆ ಸದ್ದು ಗದ್ದಲವಿಲ್ಲದೆ ಕಡೆದು
ಕಡೆದು ಕಳ್ಳ ಸಾಗಾಣಿಕೆಯ ಮಾಡುತಿಹರು...!!
ಪ್ರೇಮ ಮೋಹದ ಮತಿಹೀನರು ನಿನ್ನ ಶಿಲೆಯ
ಕಲೆಯ ಕೊಳಕಾಗಿಸುತಿಹರು...!!
ಪುಣ್ಯದ ಮಣ್ಣೆಂದೆ ಲಾರಿ..ಲಾರಿಗಟ್ಟಲೆ ಅಗೆದು
ಬಗೆದು ಮಾರಿಬಿಟ್ಟರು...ಮಾರುತಿಹರು..ಮಾರಾಟದ
ಹೊಸ ದಾರಿಗಳನ್ನೂ... ಹುಡುಕುತಿಹರು
ಜೀವನದಿಗಳ ಹೊಂದಿದುರಿಂದಲೆ ತಾಯೆ.. ನೆರೆ
ಹೊರೆಯವರು ನಿನ್ನ ಮಕ್ಕಳು.. ಬಾಯಾರಿಕೆಯಿಂದ
ಸತ್ತರೂ ನೋಡದೆ.. ತಮ್ಮ ಹೊಲ ಗದ್ದೆಗಳಿಗೆ ಜಲವ
ಹರಿಸಿಕೊಂಡು.... ನಮ್ಮ ಬದುಕಿನಂಗಳವ ಬರಡಾಗಿಸಿ
ತಮ್ಮ ನೆಲಗಳನು ಹಸಿರಾಗಿಸಿಕೊಳ್ಳುತಿಹರು

ಸಾಕು ತಾಯೆ.. ಸಾಕಿನ್ನು ಕನ್ನಡಿಗರು ಶಾಂತಿ ಪ್ರಿಯರೆಂಬ
ಬಿರುದು... ಎಳೆದಿಕೊ ತುಕ್ಕು ಹಿಡಿಯುತ್ತಿರುವ ಖಡ್ಗವನು
ಝಳಪಳಿಸಿ ಬಿಡು.. ಎದುರಾಳಿಗಳ ಎದೆಯು ನಡಗುವಂತೆ
ಸಾರಿ ಬಿಡು ಯುದ್ಧವನು.. ಅನ್ಯರು ನಮ್ಮ ನೆಲವೆಂದು ಕಬಳಿಸಲು ಬರುವವರ ಕಾಲನು ಕತ್ತರಿಸಲು...‌
ನಮ್ಮ ನೆಲದನ್ನವನುಂಡು ಪರಕೀಯ ಭಾಷೆಯ
ಮಾತನಾಡುವ ನಾಲಿಗೆಯನ್ನು ಸೀಳಲು...
ಕಲೆಯ ಬೆಲೆಯನರಿಯದೆ ಶಿಲೆಯ ವಿರೂಪಗೊಳಿಸುವ
ಕೈಗಳನು ಕತ್ತರಿಸಲು...
ಇನ್ನೊಬ್ಬರ ಬಗೆಗೆ ಅನುಕಂಪವಿರದೆ ನೀರು..ನೀರೆನ್ನುವವರ
ನೆತ್ತರಿನ ಕಾಲುವೆಯನೆ... ಹರಿಸಲು...
ನಿನ್ನನೆ ಮಾರಿ.‌.. ಮೈ ತುಂಬಾ ರೋಗ ರುಜಿನಗಳ ಹೊಂದುವ
ಶ್ರೀಮಂತರ ದೇಹವನ್ನು ಅದೇ ಮಣ್ಣಲಿ ಮಣ್ಣಾಗಿಸಲು...

ಏನು ಮಾಡುವುದು ತಾಯೆ....‌? ಏನು ಮಾಡುವುದು ?
ನಾಡ ಕಾಯಲು ನಿಂತ ಕನ್ನಡಿಗರ ನೆತ್ತರದ ಸವಿಯನ್ನು
ಕೋವಿಯು ಸವೆಯುತಿದೆ...
ಹಿರಿಯರು ಹೊತ್ತಿಸಿದ ದೀಪವಿಂದು ಕ್ಷೀಣಿಸುತ್ತಿದೆ....
ಈಗಲೋ.. ಆಗಲೋ ಎಂಬಂತೆ ಬಿಕ್ಕುತಿದೆ...
ಬಿಸಿ ರಕ್ತದ ಯುವಶಕ್ತಿಯ ಮತಿಗಳ ಜ್ಞಾನದಾ...
ಎಣ್ಣೆಯು ಬೇಕಿದೆಯಿಂದು ತಾಯೆ....ಸೋಕಿಸೆಲ್ಲರ
ಮನದಲಿ ಜಾಗೃತಿಯ ಕಿಡಿಗಳನು.....ತಾಯಿ ಭುವನೇಶ್ವರಿ
ಮತ್ತೆ ಭೂ ಪಟದಲಿ ಹಿಂದೆಂದಿಗಿಂತಲೂ...ಪ್ರಜ್ವಲಿಸಲು

Thursday, October 26, 2017

ಯಾವ ಹಣತೆಯ ಹಚ್ಚಲಿ...

ಯಾವ ಹಣತೆಯ ಹಚ್ಚಲಿ ತಾಯಿ....
ಬಾಯೊಳು ಸವಿತುಂಬಿ..ಅಂಗಾಲೊಳು
ಜಾಲಿಯ ಮುಳ್ಳೆ ಮುರಿದಿರುವಾಗ..
ಸವಿಯ ಸವಿದು ನೋವು ಅನುಭವಿಸಲೊ..
ನೋವನುಂಡು ಸಿಹಿಯ ಸವಿಯನನುಭವಿಸಲೊ..
ನೋವು ನಲಿವುಗಳ ಹದವಾಗಿ ಸಮರಸಗೊಳ್ಳದ
ಮನವು ಅಪಕ್ವವಾಗಿರುವಾಗ
ಅಹಂ..ನ ಪೊರೆಯು ಕಣ್ಣುಗಳನೆ ಮಂಕಾಗಿಸಿರುವಾಗ

ಬಿಟ್ಟು ಬಿಡಲೆ ಬದುಕಿಗೆ ಎಳ್ಳು ನೀರು

ಬಿರು ಬಿಸಿಲಲ್ಲಿ ಮಾರತ್ತಿದ್ದೆ... ಕಾಯಿ
ಮುನಿದ ವರುಣ ಸುರಿದ ಮಳೆಯ...
ಕಾದು ಕೆಂಡವಾಗಿದ್ದವಳು ತಂಪಾದಳು ಹನಿಗಳಿಗೆ ಭೂತಾಯಿ...
ತಣಿದರೆ ಧರಣಿ...ಕೊಳ್ಳುವನೇನು ಕಾಯನ್ನು ಗ್ರಾಹಕ ಧಣಿ
ಹಣವಿಲ್ಲದೆ...ಹೊಟ್ಟೆಗೆ ತಣ್ಣೀರ ಬಟ್ಟೆಯ ಸುತ್ತಿಕೊಂಡು
ಮಲಗಬೇಕಿದೆ ಈ ಬಡಪಾಯಿ...

ಕುಡಿಯದಿರಿ...ಸುಸಂಸ್ಕೃತರೆ ಬಾಟಲೊಳಗಿನ ಪೇಯ
ಕುಡಿಯಿರಿ ಎಳೆನೀರನ್ನು ನಿಮ್ಮೆಲ್ಲ ರೋಗರುಜಿನಗಳು ಮಾಯ
ಹೊತ್ತೊಯ್ವರು ಹಣದ ಥೇಲಿಯನು ಹೊರಗಿನವರು ಬಂದು
ಹಣ ಹಣವೆಂದೆ ಹೆಣವಾಗುತಿರುವ ನಮಗೆ.... ನೇರವಾಗಿರಿಂದು
ಕುಡಿದು ಎಸೆಯದಿರಿ ಬಾಟಲುಗಳನ್ನು ಪ್ರಕೃತಿಗೆ ಮಾರಕ
ನಿಮ್ಮ ಸಹಕಾರವು ಇರಲಿ ಬಡ ರೈತರ ವ್ಯವಸಾಯಕ್ಕೆ ಪ್ರೇರಕ

ಹೇಗೆ ತಾಳಲಿನ್ನು ಬಡತನದ ಬಡಿತಕ್ಕೆ ಬಾಗಿ ಹೋಗಿದೆ ಬೆನ್ನು..
ಕಷ್ಟಗಳ ಭಾರಕ್ಕೆ ಸೋತು ಸೋರಗಿವೆ ಹೆಗಲುಗಳು
ತಲೆತಗ್ಗಿಸಿ...ಕೈ ಕಟ್ಟಿಕೊಂಡು ಕುಳಿತುಬಿಟ್ಟಿರುವೆ,
ನಿನಗೆ ಸೋತೆನೆಂದಲ್ಲ...!!!! ಕಾಲವೆ...ಮರೆಯದಿರು
ಹೋರಾಟದ ಕಿಚ್ಚು ಹೊಟ್ಟೆಯೊಳಗಡೆ ಇನ್ನೂ ಉರಿಯುತ್ತಲೆ ಇದೆ...

ಸಿಕ್ಕು ನೋಡು ಒಮ್ಮೆ... ಓ.. ಕ್ರೂರ ವಿಧಿಯೆ..
ಕಾಯಿಯ ತಲೆಯನ್ನು ಕೊಚ್ಚಿದ ಹಾಗೆ ಚಕಚಕನೆ
ಕೊಚ್ಚಿ ಹಾಕುವೆ, ಕಣ್ಣೇದುರಿಗೆ ತುತ್ತನಿಕ್ಕಿ ಸಲುಹಿದ
ಎಲ್ಲರನ್ನೂ... ಬಡಿದು ಬಾಯಿಗೆ ಹಾಕಿಕೊಂಡುಬಿಟ್ಟೆ..
ಚಿಂತೆಯಿಲ್ಲದೆ ಚಿತೆಯೇರಿ ಬೂದಿಯಾಗಬೇಕಿದ್ದ ನನ್ನನು
ಕ್ಷಣಕ್ಷಣವು ಚಿಂತೆಗಳ ಕಿಡಿಯಲ್ಲೆ ನರಳುವಂತೆ ಉಳಿಸಿಬಿಟ್ಟೆ

ತಗ್ಗುವೆ.... ಬಗ್ಗುವೆ...ತಲೆ ತಗ್ಗಿಸಿಯೂ...ನಡೆಯುವೆ
ಹೆಮ್ಮರವಾಗಲಿ....ನನ್ನದೊಂದು ಉರುಗೋಲು
ನೆರಳಲಿ ನಿಂತು ತೊಡೆತಟ್ಟಿ ಕರೆಯುವೆ ನಿನ್ನನಾಗ ವಿಧಿಯೆ,
ಮಳೆಯೊ.... ಬಿಸಿಲೊ...‌ ಇದೆ ರಸ್ತೆಯಲ್ಲಿ ದುಡಿದುಣ್ಣುತ್ತೇವೆ.
ನಿನ್ನಾಟಕೆ ಸಿಕ್ಕು ಹಸಿವಿನಿಂದ ಸತ್ತರೂ....ಸರಿಯೆ...
ಹಸುಳೆಯ ಮುಂದುರಿಸಿಕೊಂಡು ಭಿಕ್ಷೆಯನ್ನಂತು ಬೇಡಲಾರೆ

ಮಾರದೆ ಹೋದರೆ ಎಳೆನೀರು...
ಬದುಕುವೆವು ಕುಡಿದಾದರು ಕಣ್ಣೀರು
ನಿನಗಿಷ್ಟವಾಗದಿದ್ದರೆ......ಬಿಟ್ಟುಬಿಡು
ನಮ್ಮಿಬ್ಬರ ಬಾಳಿಗೆ ಎಳ್ಳು...ನೀರು..

ಕಣ್ಣ ಕಾಂತೀಯ ಕರಗಿಸಿದ ಪಟಾಕಿ

ಬಾಳಿನ ಕಣ್ಣಾದವನ ಕಣ್ಣುಗಳಿಗೆ
ಕತ್ತಲು ಕವಿಯಿತು....
ಸಂತಸಕೆಂದು ತಂದ ಪಟಾಕಿಯು
ಮಗ್ಗುಲಿಗೆ ಮುಳ್ಳಾಯಿತು....

ಬಣ್ಣ..ಬಣ್ಣಗಳ ಪಟಾಕಿಗಳಾಟವ
ನೋಡುವಾ ಬಯಕೆ ಬರಿದಾಯಿತು
ರಂಗು ರಂಗೀನ ಕನಸು ಕಾಣುವ
ಕಣ್ಣುಗಳು ಕಿಡಿಯ ಕಾವಿಗೆ ಕತ್ತಲಾಯಿತು

ಹಾಂಗ ನೋಡಬೇಡ ಹೆಣ್ಣೆ

ಆ ತಿಳಿ ಕೊಳದ ಕಣ್ಣಿಲೆ ಹಾಂಗ್‌
ನೋಡಬ್ಯಾಡ ನನ್ನ
ಸಿಂದಿ ಕುಡ್ದ ಮಂಗ್ಯಾನ ಮಾಡ್ದಂಗ
ಮಾಡ್ತಾವು ನನ್ನ ಮನಸನ್ನ
ತಡ್ಕೊಳ್ಳದಾದ್ರೂ ಹ್ಯಾಂಗ ಕಣ್ಣಿನ
ಕಾಡ್ಗಿ ಕಾಡಾಕ ಹತ್ತಾವಲ್ಲ ಕತ್ಲನ್ನ

ಯಾ.. ಹೂವಿನ ಬಣ್ಣಾನ ತುಟಿಗೆ ಹಚ್ಕೊಂಡಿ...
ಒಮ್ಮೆರ... ಸವರಿ ನೋಡ್ಲೇನ
ಯಾ.. ಹಣ್ಣಿನ ಸವಿ ತುಂಬ್ಕೊಂಡಿದಿ
ಅದರಾಗ... ಒಮ್ಮೆರ ಕಚ್ಚಿ ನೋಡ್ಲೇನ
ಅಷ್ಟ.. ಸವಿಜೇನ ಸಿಹಿ ತುಂಬಕೊಂಡು
ಸುಮ್ನ ನಿಂತಿಯಲ್ಲ... ಇದ ನಿನ್ಗ ಸರಿಯೇನ..

ನನ್ನ ನೆನಪನ್ಯಾಗ ಸೀರಿ ಸೆರಗ ಕಚ್ಚಿ ಹರಿದ್ರೇನಾತ.. ಹೊಸದೊಂದು ಸೀರಿ ನಾ ತರತೇನ

ನಿನ್ನಕೀನ ನಿನ್ನ ಮುಂಗುರುಳಿಗೆ ಭಾಳ ಆಸೆ ಪಟ್ಟಾವ

ನಡು ಬಿದ್ಯಾಗ ನಿಂತ ನಿನ್ನ ಹೆಸರ್ಲೆ ಇರೋ ಜೀವಾ ಇದು

ನಿನ್ನ ನಡುವು

ಎಷ್ಟರ ತೋರ್ಸ್ತಿದಿ.. ನಿನ್ನ
ನಡುವಿನ ಬಳಕು
ನಿಂಗೇನ ಗೊತ್ತೈತಿ ಅದನ್ನು
ಮುಟ್ಟಾಕ ಎಷ್ಟೋ ಅದಾವು ತೊಡಕು

ಕಣ್ಣ.. ಕುಕ್ಕತಾವ

ಸೋಮುರೆಡ್ಡಿ

ಗೆಳತಿ...
ಹೂ ಹಾಸಿನ ಮೇಲೆ ನಿನ್ನ
ನಡೆಸಿಕೊಂಡು ಬರಲೆ.. ಬೇಡ..ಬೇಡ
ಹೂ ಕೂಡ ನಿನ್ನ ಅಂಗಾಲ ಚುಚ್ಚ್ಯಾವು
ನನ್ನ ಹೆಗಲ ಮೇಲೆಯೆ ನಿನ್ನ ಮದುವೆ ಮಂಟಪಕೆ
ಹೊತ್ತು ತರುವೆ

ಮುಡಿಸುವೆ ಮಲ್ಲಿಗೆ

ಮುಡಿಸುವೆ ಮನದರಸಿ ಮುಡಿಗೆ ಮಲ್ಲಿಗೆ
ಮುನಿಸು ಮರೆತು ಮಾತನಾಡೆ ಮೆಲ್ಲಗೆ
ಮಡುಗಟ್ಟಿದ ಮೌನ ಮೋಹಕವಲ್ಲವಾ..ಮೊಗಕೆ
ಮುಂಜಾವು ಮಂಜಿನ ಮುತ್ತಾಗಬಾರದೆ ಮನಕೆ

ಬದುಕಿನ ಬವಣೆಗಳಷ್ಟು ಭಾರವಲ್ಲವಿದು
ಬಡಪಾಯಿಯ ಬಹುಮಾನವಿದು ಬಾಡದು
ಬೇಡ ಭಾಗ್ಯವತಿ

ಬೆಳಗದೆ ಈ ಹಣತೆ ನಿಮ್ಮ ಮನದಲಿ

ಹಣತೆಗಳು ಎಷ್ಟೋ ಇವೆ ನನ್ನಲಿ
ಎಣ್ಣೆಯ ತರಲು ಬಲವಿಲ್ಲ ತೋಳಲಿ
ಖರೀದಿಸಲು ಎಷ್ಟೊಂದು ಹಣವಿದೆ ನಿಮ್ಮ ಜೇಬಲಿ
ಪಣತೆ ದೀಪವ ಹೊತ್ತಿಸುವಾಸೆಯಿಲ್ಲವಲ್ಲ ಮನದಲಿ

ಮಾಡಿಟ್ಟ ಹಣತೆಯ ಕೊಂಡೊಯ್ದು... ಮನೆಯ
ಕತ್ತಲು ಕಳೆಯಲು ದೀಪವ ಹಚ್ಚುವಿರಿ
ನೀವು ಕೊಟ್ಟ ಹಣದಲ್ಲಿ ನನ್ನ ಮನೆಯ
ಮೂಲೆಯ ಒಲೆಯು ಉರಿದು... ಸಂಸಾರ
ನೌಕೆಯೊಳಗಿನ ಪಯಣಿಗರ ಹೊತ್ತಿನೂಟವು
ದೊರೆಯುವುದು
ನೂರು ಸಾವಿರಗಳ ಕೊಟ್ಟು ರಂಗು ರಂಗೀನ
ವಿದ್ಯುತ್ ದೀಪಗಳ ಕೊಂಡೊಯ್ಯುವಿರಿ..
ಮನದ ಕೋಣೆಯ ಕತ್ತಲಲಿರಿಸಿ...ಮನೆಯ
ಮೈ ತುಂಬ ಬೆಳಕ ಚೆಲ್ಲುವಿರಿ...ವೈಭೋಗದ
ಹೆಸರಿನಲಿ...

ಶರಣ ೫

ಜ್ಯೋತಿ ಹೊತ್ತಿಸುವರಯ್ಯಾ
ಮಂದಿರಗಳಲಿ...ಪೂಜಾ ಕೋಣೆಗಳಲಿ
ಹೊರಗೆ ಹೊತ್ತಿಸಿದ ದೀಪವು
ಹೊರಜಗದ ಕತ್ತಲೆಯ ಕಳೆಯುವುದಲ್ಲದೆ
ಅಂತರಂಗದ ತಮವವನೆಂತು
ಹೋಗಲಾಡಿಸಿತು...
ಎನ್ನಂತರಂಗದ ಕೋಣೆಯ ಜ್ಞಾನದ
ಜ್ಯೋತಿಯಿಂದ ಹೊತ್ತಿಸದಾ ಹೊರತು
ಅರಿವೆಂತು ಮೂಡುವುದಯ್ಯಾ ಮಸ್ತಕಕೆ
ಕಾಣಬಲ್ಲೆನೆ ಹೊಸಬೆಳಕನು ಈ ಜಗದಿ
ಕೇವಲ ಎಣ್ಣೆ ಬತ್ತಿಯ ಸುಟ್ಟು ಲೋಕದಂತರಂಗದ
ಕತ್ತಲೆಯ ಕಳೆಯುವ ಹಾಗಿದ್ದರೆ....
ನರರು ಮಾಡಿದ ಪಾಪದ ಮೂಟೆಗಳ
ಗಂಟುಗಳ ಭಾರಕೆ ಅವರ ಬೆನ್ನು ಗೂನವಾಗುತ್ತಿರಲಿಲ್ಲವಲ್ಲಾ
ಶರಣಬಸವ

ಶರಣ ೪

ಅಂಕೆಯಿರದಾ ಮನವು
ಆಸೆಗೆ ದಾಸವಾಗಿಹುದಯ್ಯ
ನುಡಿದಂತೆ ನಡೆಯದ ಬದುಕಿದು
ನರಕದ ಕದವ ತಟ್ಟುತಿಹುದಯ್ಯ
ನಿನ್ನ ನಾಮದಲಿ‌ ನಂಬಿಕೆಯಿಲ್ಲದವರ
ಮೆಚ್ಚಿ ಮರುಳನಾಗಿಹೆನಯ್ಯ
ಕಣ್ಣಿಗೆ ಕಟ್ಟಿರುವ ಅಹಂಕಾರದ
ಪೊರೆಯ ಕಳಚಿ ಸತ್ಯದ ಬೆಳಕನು
ನೀ ಕರುಣಿಸಯ್ಯಾ .....
ಶ್ರೀ ಶರಣಬಸವ

ಸಾವಾದರೂ ಬರಬಾರದೆ ಕಂದ ನಿನಗೆ

ಸಾವಾದರೂ.... ಬರಬಾರದೆ ಕಂದ ನಿ‌ನಗೆ ?
ಶಕ್ತಳಾಗಿಲ್ಲ ನಾನು... ನೋವಿನ ದಿನಗಳಿಗೆ ಕಟ್ಟಲು ತೆರಿಗೆ !!!
ಎಷ್ಟೋ ಕನಸುಗಳ ಕಟ್ಟಿಕೊಂಡು... ತವರು ಮನೆಯಲ್ಲಿ
ಮಾಡಿಸಿಕೊಂಡಿದ್ದೆ ಹೆರಿಗೆ !!!
ಪಟ್ಟ ಆಸೆಗಳೆಲ್ಲ.... ಹರೆವ ಹೊಳೆಯಲ್ಲಿ ಹಿಂಡಿದ
ಹಣ್ಣಂತಾಯಿತು ಬಾಳ್ವೆಗೆ !!!

ನವಮಾಸಗಳ ಗರ್ಭದಲಿ ಹೊತ್ತ ನನಗೆ
ಇನ್ನೂ... ಹೊರೆಯಾಗಿಯೆ ಇರುವೆಯಲ್ಲ
ಇಪ್ಪತ್ತೇರಡು ವಸಂತಗಳ ಕಂಡರೂ ನನ್ನ ಕಂಕುಳಿಗೆ!!!
ಅದೇಷ್ಟು ಪ್ರೀತಿಯೊ ಆ ಶಿವನಿಗೆ ನಿನ್ನ ಮೇಲೆ
ಕಲ್ಮಷವಿರದ ನಗುವ ಮೊಗದಲಿಟ್ಟು...ಹಾಲಂತ
ಮನದ ಸಜೀವ ಬೊಂಬೆಯನ್ನಾಗಿಸಿ.....
ಕಾಣಿಕೆಯನ್ನಾಗಿಸಿದನಲ್ಲ ನನ್ನ ಮಡಿಲಿಗೆ !!!

ಹಠಮಾಡಿ...... ಯಾವುದಕ್ಕಾದರೂ ಒಂದಿನವು
ಅಳಲಿಲ್ಲ...
ಒಂದಕ್ಕಾದರೂ.. ನಕ್ಕು ನಮ್ಮನು ನಗಿಸಲಿಲ್ಲ
ಆಡುವ ಮಾತುಗಳಿಗೆ ನಿನ್ನಲಿ ಪ್ರತಿಸ್ಪಂದನೆಯಿಲ್ಲ
ವಂಶದ ಬಳ್ಳಿಯ ಚಿಗುರು ಸತ್ವಹೀನವಾಗಿಹುದಲ್ಲ
ಮುಪ್ಪಾವಸ್ಥೆಗೆ ನಿನ್ನಯ ನೆರಳು ನಮ್ಮ ನೆತ್ತಿಯ ಕಾಯುವುದಿಲ್ಲ
ಇಹಲೋಕವ ತ್ಯಜಿಸಿದ ನಮ್ಮ ದೇಹಗಳಿಗೆ ಅಗ್ನಿಯನ್ನಾದರೂ.... ಸ್ಪರ್ಶಿಸುವೆಯೋ..? ಇಲ್ಲವೊ..?

ನಾನಳಿದ ಮೇಲೆ ಇನ್ನಾರು ಕಂದ ದಿಕ್ಕು ನಿನಗೆ ?
ಜಗದಪವಾದವು ಬಂದರೂ.... ಬರಲೇನಗೆ
ನಾನೆ ಹಾಡಬೇಕೆಂದಿರುವೆ ಕಂದಾ..‌‌. ಚರಮಗೀತೆ
ನಿನ್ನ ಬದುಕಿಗೆ
ನನ್ನ ಮಡಿಲಲ್ಲಿಯೆ ಬಂದರೂ... ಬರಲಿ ಸಾವು ಕೊನೆಗೆ
ಓ..ದೇವರೆ ಇಂಥ ಫಲವ ಕೊಡುವ ಬದಲು
ಬಂಜೆಯ ಪಟ್ಟವನ್ನಾದರೂ... ಕೊಟ್ಟಿದ್ದರೆ ಸಾಕಿತ್ತೆನೆಗೆ

ಓ.. ಕಂದಾ... ಸಾವಾದರೂ ಬರಬಾರದೆ ನಿನಗೆ

Wednesday, October 25, 2017

ಶರಣ ೧

ಸತ್ತ ಹೆಣದ ಮುಂದೆ ಹಳೆಯ ನೆನಪುಗಳು
ಎದ್ದು ಕುಣಿಯುತ್ತಿದ್ದವಯ್ಯಾ...
ಪೂಜೆ ಮಾಡಿದ ಪೂಜಾರಿಯ ಕೈಯಲ್ಲಿ
ಲಕ್ಷ್ಮೀಯು ಕುಣಿಯುತ್ತಿದ್ದಳಯ್ಯ...
ಬಂಧು ಭಾಂಧವರ ಕಣ್ಣ ಹನಿಗಳು
ಉದುರಿ ಉಪ್ಪಾಗುತ್ತಿದ್ದವಯ್ಯ..
ಮೂರು ದಿನದ ಸಂತೆಗೆ ಗುದ್ದಾಡಿದ
ಈ ದೇಹವ ಸಿಂಗರಿಸಿ ಗೋಳಾಡುತ್ತಿದ್ದರಯ್ಯ
ಶರಣ...
ಇದ್ದಾಗ ಅವನ ದುಃಖವನಾಲಿಸದ ಜಗವು
ಸತ್ತಾಗ ನೆನೆ ನೆನೆದು ಅಳುತಿರುವರಯ್ಯ
ಶರಣಬಸವ

ಯಾವ ತೀರವ ಮುಟ್ಟಲಿ

ದಡ ಸೇರಲು ಹುಟ್ಟುಗಳಿಲ್ಲ
ಈಜಲು ತೋಳಲಿ ಬಲವಿಲ್ಲ
ತಮ್ಮನ ಹಸಿವಿಗೆ ಚೂರು ಅಗುಳಿಲ್ಲ
ಅತ್ತು ಸೊರಗುವ ಆ ಕಂಗಳ ಕಣ್ಣೀರ
ಒರೆಸಲು.... ನನ್ನೆದೆಯಲಿ ಲಾಲಿ ಹಾಡಿನ ಪದಗಳಿಲ್ಲ

ನೀರ ಮಧ್ಯದಲಿ ಅರ್ಧಕ್ಕೆ ನಿಂತಿದೆ ಬದುಕು
ಹಸಿವ ನೀಗಿಸಿಕೊಳ್ಳಲು ನಮ್ಮ ಬಳಿಗಿಲ್ಲಾವ ಸರಕು
ತೊಟ್ಟ ಬಟ್ಟೆಗಳೆಲ್ಲಾಗಿವೆ ಹರಕು ಕೊಳಕು
ಓಲಾಡುತಿರುವ ದೋಣಿಯು ಆಗಿದೆ ಮುರುಕು
ಸಮಯಕ್ಕೇಕೆ ಹುಟ್ಟುತಿಲ್ಲವೊ ನಮ್ಮ ಮೇಲೆ ಮರುಕು

ಕಾರ್ಗತ್ತಲೊಳಗೆ ಕಾಗುಣಿತಕೆ ಸಿಗದ
ತಾರೆಗಳ ಲೋಕ... ಇನ್ನೇಷ್ಟು ಕತ್ತಲುಗಳೊಂದಿಗೆ
ನಿಮ್ಮ ಹೋರಾಟವೆಂದು... ತನುವಿನಣುವಣುವಿನೊಳಗಣ
ನೆತ್ತರನು ಹೆಪ್ಪುಗಟ್ಟಿಸಿ... ನಮ್ಮಿಬ್ಬರ ನುಂಗಲು
ಹಾತೊರೆಯುತ್ತಿರುವುದು ಪ್ರತಿ ರಾತ್ರಿಯ ಕೊರೆವ ಚಳಿ

ಹನಿ..ಹನಿಯ ಬೇವರು ಉಕ್ಕದಂತೆ...
ಹದವಾಗಿ ದೇಹವ ಹೊತ್ತೊತ್ತಿಗೆ ಕಾಯಿಸಿ..ಕಾಯಿಸಿ
ನೀರಿಲ್ಲದೆ ಒಣಗುವ ಬಳ್ಳಿಯಂತೆ... ದಿನಕ್ಕಿಷ್ಟಿಷ್ಟೇ..
ಎಂಬಂತೆ  ಹಸಿದ ಹದ್ದಿನ ಹಾಗೆ ಹುರಿದು ಮುಕ್ಕುತ್ತಿರುವನು
ರವಿಯು..... ತನ್ನ ತಾಪದ ಮೊನಚಿನಿಂದ

ಬದುಕೇಕೊ.. ನಮ್ಮನು ಹತ್ತುವ ಮೊದಲ ಮೆಟ್ಟಿಲಲ್ಲೆ
ಎಡವಿಸಿಬಿಟ್ಟಿದೆ.. ಬಾಳ ಹಣತೆಯು ಪ್ರಕಾಶಿಸುವ ಮುನ್ನವೆ  ಆರಿಸಲು ಕಾತುರತೆಯಿಂದ ಕಾಯುತಿದೆ.... ಮನುಜರ ತ್ಯಾಜ್ಯಕೆ ಪ್ರಕೋಪಗೊಂಡ ಶರಧಿಯು.... ತಂದು ನಿಲ್ಲಿಸಿದೆ
ನಮ್ಮಿಬ್ಬರನು..... ಅನಾಥವಾಗಿ ತನ್ನನಂತ ಶರಧಿಯಲಿ

ಸಾವೆ ಹೊರಟು ಹೋಗು ನಮ್ಮಿಂದ ನಿ ದೂರ
ತಲುಪಬೇಕಿದೆ ಕುಣಿದು ಕುಪ್ಪಳಿಸಬೇಕೆಂದಿರುವ ತೀರ
ಯಾವ ದಾಳವ ಉರುಳಿಸುವನೊ ಜಗದಾಟಗಾರ !!!
ಎಷ್ಟು ಗಟ್ಟಿಯಾಗಿ ಹಿಡಿದಿರುವನೊ ಜೀವದ ಸೂತ್ರ...ದಾರ
ಬೇಸತ್ತು... ಈ ನೋವಿನಂಕಣಕೆ ಪರದೆಯ ಎಳೆದು
ಬಿಡುವನೇನೊ.... ? ನಾಟಕಕಾರ

ಶರಣ ೩

ಉಪ್ಪರಿಗೇಯೊ...ತಿಪ್ಪೆಯೊ...
ಕಹಿಯೊ..ಹೇಸಿಗೆಯಂಬ ದುರ್ವಿಚಾರಗಳ
ಮೇಲಣ ಕೂರುವ ನೊಣದಂತಾಗಿಸದಯ್ಯ
ಎನ್ನ ಮನವ...
ಸದಾ ನಿನ್ನ ಭಕ್ತರ ಲೋಕದಲಿ ಸದ್ವಿಚಾರದ
ಸುಮದೆದೆಯ ಸವಿರಸಧಾರೆಯ
ಸವಿಯುವ ಜೇನ್ನೊಣವಾಗಿರಿಸಯ್ಯ
ಶರಣಬಸವ

Tuesday, October 24, 2017

ಶರಣ ೨

ಕತ್ತಿಯ ಹೊಡೆತಕ್ಕೆ ಗಾಯಗೊಂಡವನನ್ನು
ಉಳಿಸಿಕೊಳ್ಳಬಹುದು
ಹಾವು ಕಚ್ಚಿ ವಿಷವೇರಿದವನನ್ನು
ಬದುಕಿಸಿಕೊಳ್ಳಬಹುದು
ನದಿಯ ಸುಳಿಗೆ ಸಿಕ್ಕು ಸಾಯುತ್ತಿರುವವನನ್ನೂ
ಕಾಪಾಡಿಕೊಳ್ಳಬಹುದು
ಆದರೆ... ಎಲುಬಿಲ್ಲದೆ ಆಡುವ ನಾಲಿಗೆಯ
ಬೆಂಕಿಯ ಮಳೆಗೆ ಸಿಕ್ಕವರನ್ನು
ಉಳಿಸಿಕೊಳ್ಳಲಾದಿತೆ..
ಶರಣಬಸವ

Tuesday, October 17, 2017

ವಿರಹದ ನೋವು

ವಿರಹದ ಬಿಸಿ ಶಾಯಿಗೆ
ಎದೆಯ ಬಿಳಿ ಹಾಳೆಯು
ಉರಿಯುತಿವುದು...!!!

ಬರೆಯಲಿ ಹೇಗೆ ?
ಪದಗಳ...
ಎದೆಹಾಳೆಗೆ
ಸಹಿಸಿಕೊಳ್ಳಲಾರದಷ್ಟು
ನೋವಿರುವಾಗ...!!!

ಗಜಲ್

ನಾ ಹೋಗೊ ಬರೋ ದಾರ್ಯಾಗ ನಿಂತ ನೀ ಕಣ್ಣ ನೀ ಹೊಡಿಬ್ಯಾಡ
ಮೂಲಿಮನಿ ಗಂಗಿ ಕೈಯ್ಯಾಗ ಮೊಳ ಮಲ್ಗಿ ಕೊಟ್ಟ ನೀ ಕಳ್ಸಬ್ಯಾಡ
ಊರಿನ ಜಾತ್ರ್ಯಾಗ ನಿನ್ನ ವಾರ್ಗೆಯೊರ ಕೂಡ ಕೂಡ್ಕೊಂಡ ಹಿಂದಿದ ನೀ ಬರಬ್ಯಾಡ
ಮೂವತ್ತು ರೂಪಾಯಿ ಮುತ್ತಿನ ಸರಾ ತಂದು ನನ್ನ ಕೊರಳಿಗೆ ನೀ ತೋಡ್ಸಬ್ಯಾಡ
ಮೊಸರ ಕೊಡೊ ನೆಪದಾಗ ನಮ್ಮನಿಗೆ ಬಂದು ನನ್ನ ಕೆನ್ನಿ ನೀ ಕೆಂಪಗಾಗಿಸಬ್ಯಾಡ
ಈ ಥಂಡಿ ದಿನದಾಗೂ ನಿನ್ನ ನಗುವಿಲೆ ನನ್ನ ಮೈಯಿಗೆ ಬೆಂಕಿ ನೀ ಹಚ್ಚಬ್ಯಾಡ
ಹೇಳೊರು..‌ ಕೇಳೊರು ಯಾರಿಲ್ಲಂತಂದು ಮನಸ್ಸನ್ಯಾಗನ ನೀ ನುಗ್ಗಬ್ಯಾಡ
ಕತ್ಲನ ಕನಸಿಗೆ ಬಾಗ್ಲಿಲ್ಲಂತಂದು ಹೊಳ್ಳೆ.. ಮುಳ್ಳೆ ಬಂದು ನನ್ನ ನೀ ಕಾಡಬ್ಯಾಡ
ಮನಿಮುಂದ ರಂಗೋಲಿ ಹಾಕೊಮುಂದ ಮಾಳಗಿ ಮ್ಯಾಲ ನಿಂತ ನೀ ನಗಬ್ಯಾಡ
ಮನಸಿನ ಅಂಗಳ್ದಾಗ ಮಾತಿಲೆ ಮನಿ ಕಟ್ಟಿ ಪ್ರೀತಿ ಅನ್ನೊ
ಜೋಗುಳಾ ನೀ ಹಾಡಬ್ಯಾಡ
ಮತ್ತೆ ಮತ್ತೆ ನನ್ನ ಕಾಡಿ ಕಾಡಿ ನಿನ್ನ ಪ್ರೇಮದ ಬಲ್ಯಾಗ ಬೀಳುವಂಗ ನೀ ಮಾಡಬ್ಯಾಡ
ಇನ್ನೊಬ್ಬರ ಮನಿ ಹೊನ್ನಾಗಿ ಹೊಂಟೇನ ನಾನು ಇದನ್ನ ಕೇಳಿ ನೀ ಕಲ್ಲಾಗಬೇಡ

ಕರುನಾಡ ಮಣ್ಣಲ್ಲಿ ಜನಿಸಿದವರು

ಎಂಥೆಂಥವರಿಗೆ ಜನ್ಮವನಿತ್ತೆ
ತಾಯಿ ಕನ್ನಡತಿ

ಕಾಯಕವೇ ಕೈಲಾಸವೆಂದ
ಬಸವಣ್ಣನ ನಾಡಿನಲ್ಲಿ
ಕಾಯಕವಗೈಯದೇ ತಳಪಾಯ
ತುಂಬುವಷ್ಟು ಧನವ
ತುಂಬಿಹರು

ಕುಲಕುಲವೆಂದು ಹೊಡೆದಾಡದಿರಿ
ಎಂದ ಕನಕದಾಸರ ನಾಡಲ್ಲಿ
ಕುಲಕುಲಗಳನೇಣಿಸುವ
ನಾಡನಾಳುವ ನಾಯಕರಿಹರಲ್ಲ
ಮನಗಳ ತುಂಬ ಮತ್ಸರವ
ಬಿತ್ತಿಸುತಿಹರೆಲ್ಲ

ಮೈಸೂರು ಮಹಾರಾಜರು ಜನರ
ಒಳಿತಿಗಾಗಿ ಅರಮನೆಯ ಕನಕವನೆಲ್ಲವ
ಕರಗಿಸಿ ಆಣೆಕಟ್ಟನ್ನು ಕಟ್ಟಿದರು...
ಹೊಲ..ಹೊಲಗಳಲಿ ಕೆರೆಗಳ ಕಟ್ಟಲು
ಹಣವನು ಕೊಟ್ಟರೆ ಅಧಿಕಾರಿಗಳೆಲ್ಲ
ಗಂಟನು ಕಟ್ಟುತಿಹರಲ್ಲ...

ಎಂತೆಂಥವರಿಗೆ ಜನ್ಮವನಿತ್ತೆ.. ತಾಯಿ ಕನ್ನಡತಿ
ನೆರೆ ರಾಜ್ಯದ ಜನರು ನಮ್ಮ ಕೆಲಸವ ಕಿತ್ತುಕೊಂಡಿಹರು...
ಮಣ್ಣನು ಕಬಳಿಸುತಿಹರು...ನೀರನು ಬಸಿಯುತಿಹರು
ನೆತ್ತರನು ಹರಿಸುತಿಹರು...ಕಾಲುವೆಯ ನೆಪದಲ್ಲಿ
ಅಮಾಯಕರ ಸೂರುಗಳ ನೆಲಸಮವಾಗಿಸಿಹರು...
ಕಾಯ್ದೆಗಳ ತಿದ್ದಿ... ಕೆರೆಗಳ ಬಾಯಿಗೆ ಮಣ್ಣನು ತುಂಬಿ
ಸರಕಾರದ ಬೊಕ್ಕಸಕ್ಕೆ ಹೊರೆಯಾಗಿಸಲು.... ಹೊಸ
ಹೊಸ ಕೆರೆಗಳಿಗೆ ಜೀವ ತುಂಬಲು ಹವಣಿಸುತಿಹರು..

ಎದೆಯುಬ್ಬಿಸಿ ಕೇಳುಗರನ್ನೆಲ್ಲ..‌ ಹೆಣವಾಗಿಸುತಿಹರು
ಸಿಡಿದೇಳುವ ಜನರಿಗೆ ಹಣ- ಹೆಂಡಗಳ ಮತ್ತಲಿ
ತೇಲಿಸುತಿಹರು...
ಎಂತೆಂಥವರಿಗೆ ಜನ್ಮವಿತ್ತೆ ತಾಯಿ ಕನ್ನಡತಿ...
ನಿನ್ನನುಳಿಸಿಕೊಳ್ಳಲು ಹೋರಾಡಬೇಕೆನ್ನುವರ
ಮನಗಳಲ್ಲಿ ಕಿಚ್ಚಿನ ಬದಲು ಬೂದಿಯೆ..‌‌‌...
ತುಂಬಿಕೊಂಡಿಹುದಲ್ಲ.... ಮತ್ತೆ ಹುಟ್ಟಿಸಿ ಕಳಿಸು
ತಾಯೆ... ನಿನ್ನ ತಲೆಯತ್ತಿ ನಿಲ್ಲುವಂತೆ ಮಾಡುವ
ಉರಿವ ಕಿಡಿಗಳ ಕುಡಿಗಳ

Sunday, October 15, 2017

ಬೆಲ್ಲ ೪೩೨

ಗೆಳತಿ...
ನಿನ್ನ ಮನೆ ಬಾಗಿಲಿಗೆ
ಬಂದು ಬೇಡಿದ್ದೆ...
ನನ್ನ ಗಲ್ಲಕೆ ಒಂದು
ಬೆಲ್ಲ...

ನೀನು...
ನಿಮ್ಮಪ್ಪನಿಗೆ
ಹೇಳಿ...‌
ಉಬ್ಬಿಸಿದೆ ನನ್ನ
ಗಲ್ಲ...

Wednesday, October 11, 2017

ಹಸಿವಿನ ಗೆಲುವು

ಹೊತ್ತು ತುತ್ತಿಗಾಗಿ ಬದುಕುತ್ತಿರುವೆವು ನಾವು
ತಟ್ಟುತ್ತಿಲ್ಲವಿಲ್ಲಾರಿಗೂ ನಮ್ಮೊಡಲಿನ ಸುಡುವ ಕಾವು
ಆರಿಸುವವರಾರು ಅನ್ನವ ನೀಡಿ ಹೊತ್ತಿನ ಹಸಿವು
ಇಳಿಸುವವರೆ ಇಲ್ಲವಿಲ್ಲಿ..‌.ಬೆನ್ನೇರಿ ಕುಳಿತಿಹ ಹಸಿವಿನ ನೋವು
ಬದುಕಲಿಬ್ಬರಲ್ಲಿಯೂ... ಬೇರೆತಿಹುದು ಬರೀ...ಬೇವು

ಸುಡುತಿಹುದು ನೆತ್ತಿಯ ಸೂರ್ಯನ ಕೋಪ
ನಮಗೊ... ಸಹಿಸಿಲಾಗುತ್ತಿಲ್ಲ ತುತ್ತು ಚೀಲದ ತಾಪ
ಹೋಗಿ ಬರುವವರೆಲ್ಲ ನೋಡಿ ಹೇಳುವರು ಅಯ್ಯೋ ಪಾಪ
ಪಾಪವೆಂದವರೆಲ್ಲ ತೋರುತ್ತಿರುವವರು ಕೇವಲ ಸಂತಾಪ
ಹಿಡಿಸದಿವರ ಮನಕೆಂದೂ..ಉದರ ಪಾಡುವ ಹಸಿವಿನಾಲಾಪ

ನಡೆಯುವುದೇಷ್ಟು ದಿನಗಳ ನಮ್ಮಿಬ್ಬರ ಅಲೆದಾಟ
ಹೋಗುವ ದಾರಿಗಳಿಗೋ...ಸುಂಕವ ಕಟ್ಟಿಲ್ಲ....ಹಳ್ಳ..
ಕೊಳ್ಳಗಳಲಿ ಮಿಂದಿಲ್ಲ....ಚುಚ್ಚಿದ ಮುಳ್ಳುಗಳ ಮರೆತಿಲ್ಲ...
ಹೂವಿನ ಹಾದಿಯ ಅರಿವಿಲ್ಲ...ಹಾದಿಯುದ್ದಕೂ
ಹಸಿವಿನ ಹೊರೆಯ ಹೊತ್ತು ಸಾಗುವುದು ತಪ್ಪಲಿಲ್ಲ...

ಇರುವುದೊಂದೆ ತುತ್ತು...ತಿನ್ನೋಣ ಇಬ್ಬರು
ಹಂಚಿಕೊಂಡು..ಬದುಕಬೇಕಲ್ಲ ಇನ್ನೊಂದು
ಹೊತ್ತು....ಯಾವ ಗಲ್ಲಿಯ ಮೂಲೆಯಲಿ
ಕಾದಿದೆಯೊ... ವಿಪತ್ತು..ಬರುವುದು ಇಬ್ಬರಲ್ಲೊಬ್ಬರಿಗೆ
ಆಪತ್ತು...ಹೀಗೆ ಇರಲಿ ಕಣೋ ಗೆಳೆಯ ಉಸಿರಿರುವವರೆಗೂ
ಸ್ನೇಹ ಸಂಪತ್ತು..

ಹಸಿವಿಗಿಲ್ಲ ಸಾವು... ನೋವಿಗಿಲ್ಲ ವಿರಾಮ
ನಿಲ್ಲುತಿಲ್ಲ ಕಾಲಚಕ್ರ... ನಡೆಯಲೊ..ಕಾಲುಗಳು
ನಿಶ್ಯಕ್ತವಾಗಿರುವಾಗ... ಕಾಲನೊಡಗೂಡಿ ಸಾಗುವುದಾವಾಗ
ಬಾಳಯುದ್ಧವ ಗೆಲ್ಲಲು ವಿದ್ಯೆಯಿಲ್ಲ... ಅಸ್ತ್ರಗಳಿಲ್ಲ..
ಶಸ್ತ್ರಗಳಿದ್ದರೂ... ಎತ್ತಲು ತೋಳ್ಬಲವೆ ಕುಂದಿರುವಾಗ
ಹೋರಾಡುವುದಾದರೂ....ಹೇಗೆ.... ಎಷ್ಟಿದ್ದರೂ...‌..
ಗೆಲುವೆನ್ನುವುದು ಹಸಿವೆಯ ಜೋಳಿಗೆಯಲಿ
ನಿದ್ರಿಸುತ್ತಿರುವಾಗ....

Monday, October 9, 2017

ಬೆಲೆ ಕಟ್ಟಲಾಗದ ಮುತ್ತು

ನನ್ನೀ... ರೂಪವ ಕಂಡು ನನಗೆ ಎದೆಯುಮ್ಮಳಿಸಿ
ಬರುತ್ತಿದ್ದ.. ದುಃಖದ ಬಾಗಿಲಿಗೆ ಮೊಳೆ
ಜಡೆದು ಕಾದಿದ್ದು ವ್ಯರ್ಥವಾಗಲಿಲ್ಲ...
ಮಣ್ಣೊಳು ಹುಗಿದು ಗೆದ್ದಲುಗಳಿಗೂಟವಾಗುವ
ವೀ..ಮಾಸಂದ ಮುದ್ದೆಯ ಮೇಲಿನ
ಮೋಹವ ತೊರೆದದ್ದು ಸಾರ್ಥಕವಾಯಿತಲ್ಲ...

ಬದುಕಿನ ಸಸಿಯು ಮೊಳಕೆಯೊಡೆಯದಂತೆ
ಆಸೆಯ ಬೀಜವು ಮಣ್ಣಿಲ್ಲದೆ ಬಿದ್ದಿತ್ತಲ್ಲ
ನಿನ್ನೀ.. ಚುಂಬನದ ಸಿಂಚನವೊಂದೆ
ಬಾಳಿನಂಗಳಕೆ.... ನೆಮ್ಮದಿಯ ನೆರಳನೀಯ್ವ
ಹೊಂಗೆಯ ಮರದ ವರವಾಯಿತಲ್ಲ
ಪ್ರೇಮ ಭಿಕ್ಷುಕಿಗೆ ಕರಗದ ನಿಧಿಯಾದೆಯಲ್ಲ

ವಿಧಿಯು ಬೀಸಿದ ಬಲೆಗೆ ಸಿಕ್ಕು ನಾನದೇಷ್ಟು
ನರಳಾಡಿದೆನಲ್ಲ... ಸುಂದರ ಜಗದಲಿ ಮುಕ್ಕಾದ
ಮೊಗವ ಹೊತ್ತು ನಗುವನ್ನೆ ಮರೆತಿದ್ದೆನಲ್ಲ... ಕಾಲವೆ
ನಿನ್ನ ಶಪಿಸದ ಕ್ಷಣಗಳಿಲ್ಲ... ಬೈದು ಮಲಗಿದ ರಾತ್ರಿಗಳಿಲ್ಲ
ಸುಟ್ಟ ರೂಪವ ನೆನೆ ನೆನೆದು ಅಳದ ದಿನಗಳೆ ಇರಲಿಲ್ಲ
ಆದರೂ.. ಕಾದು ಕಾದು ಪಡೆಯುವ ಫಲ ಯಾವ
ಸುರಲೋಕದ ಸುರಪಾನಕ್ಕಿಂತಲೂ... ಕಡಿಮೆಯಿಲ್ಲವೆಂದು
ಮಗನ ಮುತ್ತಿನ ವಾತ್ಸಲ್ಯದಲಿ ತೋರಿದೆಯಲ್ಲ

ಯಾವ ರೂಪವಾದರೇನು ಕರುಳ ಬಳ್ಳಿಗೆ
ಬಟ್ಟೆ ಕಟ್ಟಲಾದಿತೇನು ಕಾಣದ ಒಳಗಣ್ಣಿಗೆ
ನೋವಿನ ಜ್ವಾಲೆಯನೆ ಸವಿಯುತ್ತಿದ್ದ ಹೊಟ್ಟೆಗೆ
ಪ್ರೀತಿಯ ಸುಧೆಯ ಸುರಿದು ತಣಿಸಿದೆಯಲ್ಲ ಕೊನೆಗೆ
ಯಾವ ಬೆಲೆಯ ಕಟ್ಟಲೊ ಕಂದಾ ಈ ಮುತ್ತಿಗೆ
ಹೊನ್ನಿನ ಚೌಕಟ್ಟನ್ನೆ ಹಾಕಿಸಿಬಿಡಲಾ ಈ ಹೊತ್ತಿಗೆ

Friday, October 6, 2017

ವಿಧವೆಯ ಬಾಳು

ಮತ್ತೊಮ್ಮೆ ನಳನಳಿಸುವುದೆ ಈ
ಬಯಲು ಹಣೆಯ ಮೇಲೆ ಆ ಕೆಂಪು ಸಿಂಧೂರ
ತಿರುಗಿ ತಳಿರು ತೋರಣಗಳಿಂದ ಸಿಂಗರಿಸಲ್ಪಡುವುದೆ
ಮನೆಯಂಗಳದ ಮುಂದಿನ ಚಪ್ಪರ
ಬರಡು ಕೊರಡಾದ ಬದುಕಿನ ದಿನಗಳಲಿ
ಉಸುರುವುದೆ..? ಚಿಗುರೆಲೆಯ ಸಂಸಾರ

ದೊಡ್ಡವರ ಎಡವಿಗೆ ಆದ ಬಾಲ್ಯ ವಿವಾಹ
ಸಂಸಾರದ ತಕ್ಕಡಿಯನೇರುವ ಮೊದಲೆ...
ವಿಧಿಯಟ್ಟಹಾಸದ ಭಾರಕೆ ಹರಿದುಬಿದ್ದಿತ್ತು
ನನ್ನ ಕರಿಮಣಿಯ ಸರವು..‌.ತುಂಬಿದ
ಯೌವ್ವನಕ್ಕೆ ಉತ್ತರವನು ಕೊಡದೆ...
ಹಿರಿಯರನು ಪ್ರಶ್ನಿಸುವ ಹಕ್ಕನು ನೀಡದೆ

ಮತ್ತಾಗಲೆ ನಾನೀಗ ಮರುಮದುವೆ.. ಹೇಗೆ ?
ಅಡಿಪಾಯಗಳಿಲ್ಲದೆ ಬಿದ್ದಿರುವ... ಮನವು
ಕಂಡ ಕನಸುಗಳಿಗೆ ಅವನಾಗಬಲ್ಲನೆ ಆಧಾರ
ನಂಬಿಕೆಯಲಿ ನಡೆಸಿಕೊಂಡು ಹೋಗುವನೆ..?
ಪ್ರೀತಿಯ ಕಡಲೊಡಲಲಿ ತೇಲಿಸುವನೆ..?
ಹಣೆಗೆ ಹತ್ತಿದ ಕಳಂಕದ ಗ್ರಹಣವ ಕಳೆದು
ಬಾಳಂಗಳದ ತುಂಬ ಒಲುಮೆಯ ಚೆಂಬೆಳಕ
ಚೆಲ್ಲುವನೆ...? ಇಲ್ಲವೆ...‌‌‌... ಮಂಚದ ಮೇಲಿನ
ಮಲ್ಲಿಗೆಗಳ ಹೊಸಕಲಷ್ಟೇ ಬಳಸುವನೆ...?

ಗಂಡಿಗಿಲ್ಲದ ಪ್ರಶ್ನೆಗಳ ಸರಪಳಿಗಳು ನನ್ನ ಕಾಲಿಗೇಕೆ?
ಉತ್ತರವಿಲ್ಲದೆ ವಿಲವಿಲಿಸುವ ಮನವು ನನಗೇ..ಏಕೆ?
ಗಂಡನೆಲ್ಲದುರ ತಪ್ಪಿಗೆ ನನ್ನ ಕಾಲ್ಗುಣವೇಕೆ..?
ಅವನ ಸಾವಿಗೆ ನನ್ನ ಹಣೆಯೆ...ಹೊಣೆಯೆಕೆ..? ಅವನ
ಹೆಸರಲಿ ಅದು ಬಂಡೆಯಾಗುವುದೇಕೆ...?
ಮತ್ತೆ... ಮತ್ತೆ... ನನ್ನ ಬದುಕಿನ ನಿರ್ಧಾರಗಳನ್ನೆಲ್ಲವ
ಅವರು ನಿರ್ಧರಿಸುವ ನೀತಿಗೆ ನಾ ತಲೆ ಬಾಗಿ
ಒಪ್ಪಿಕೊಳ್ಳಲೆಬೇಕೆ...?

ಒಪ್ಪಲೆಬೇಕು.. ನಾನು ಹೆಣ್ಣು...ಹೆಚ್ಚು ದಿನವಿದ್ದರೆ
ಆ ಮನೆಗೆ ನಾನಾಗುವೆನಲ್ಲವೆ ಹುಣ್ಣು...
ಜಗವಿದು ತೆರೆಯುವುದೆಂದೊ ಅಂತರಂಗದ ಕಣ್ಣು
ಒಪ್ಪುವುದು...ಅತ್ತು.. ನಾ ಸತ್ತು ಸೇರಿದ ಮೇಲೆ
ಮಣ್ಣು..