ಹೊತ್ತು ತುತ್ತಿಗಾಗಿ ಬದುಕುತ್ತಿರುವೆವು ನಾವು
ತಟ್ಟುತ್ತಿಲ್ಲವಿಲ್ಲಾರಿಗೂ ನಮ್ಮೊಡಲಿನ ಸುಡುವ ಕಾವು
ಆರಿಸುವವರಾರು ಅನ್ನವ ನೀಡಿ ಹೊತ್ತಿನ ಹಸಿವು
ಇಳಿಸುವವರೆ ಇಲ್ಲವಿಲ್ಲಿ...ಬೆನ್ನೇರಿ ಕುಳಿತಿಹ ಹಸಿವಿನ ನೋವು
ಬದುಕಲಿಬ್ಬರಲ್ಲಿಯೂ... ಬೇರೆತಿಹುದು ಬರೀ...ಬೇವು
ಸುಡುತಿಹುದು ನೆತ್ತಿಯ ಸೂರ್ಯನ ಕೋಪ
ನಮಗೊ... ಸಹಿಸಿಲಾಗುತ್ತಿಲ್ಲ ತುತ್ತು ಚೀಲದ ತಾಪ
ಹೋಗಿ ಬರುವವರೆಲ್ಲ ನೋಡಿ ಹೇಳುವರು ಅಯ್ಯೋ ಪಾಪ
ಪಾಪವೆಂದವರೆಲ್ಲ ತೋರುತ್ತಿರುವವರು ಕೇವಲ ಸಂತಾಪ
ಹಿಡಿಸದಿವರ ಮನಕೆಂದೂ..ಉದರ ಪಾಡುವ ಹಸಿವಿನಾಲಾಪ
ನಡೆಯುವುದೇಷ್ಟು ದಿನಗಳ ನಮ್ಮಿಬ್ಬರ ಅಲೆದಾಟ
ಹೋಗುವ ದಾರಿಗಳಿಗೋ...ಸುಂಕವ ಕಟ್ಟಿಲ್ಲ....ಹಳ್ಳ..
ಕೊಳ್ಳಗಳಲಿ ಮಿಂದಿಲ್ಲ....ಚುಚ್ಚಿದ ಮುಳ್ಳುಗಳ ಮರೆತಿಲ್ಲ...
ಹೂವಿನ ಹಾದಿಯ ಅರಿವಿಲ್ಲ...ಹಾದಿಯುದ್ದಕೂ
ಹಸಿವಿನ ಹೊರೆಯ ಹೊತ್ತು ಸಾಗುವುದು ತಪ್ಪಲಿಲ್ಲ...
ಇರುವುದೊಂದೆ ತುತ್ತು...ತಿನ್ನೋಣ ಇಬ್ಬರು
ಹಂಚಿಕೊಂಡು..ಬದುಕಬೇಕಲ್ಲ ಇನ್ನೊಂದು
ಹೊತ್ತು....ಯಾವ ಗಲ್ಲಿಯ ಮೂಲೆಯಲಿ
ಕಾದಿದೆಯೊ... ವಿಪತ್ತು..ಬರುವುದು ಇಬ್ಬರಲ್ಲೊಬ್ಬರಿಗೆ
ಆಪತ್ತು...ಹೀಗೆ ಇರಲಿ ಕಣೋ ಗೆಳೆಯ ಉಸಿರಿರುವವರೆಗೂ
ಸ್ನೇಹ ಸಂಪತ್ತು..
ಹಸಿವಿಗಿಲ್ಲ ಸಾವು... ನೋವಿಗಿಲ್ಲ ವಿರಾಮ
ನಿಲ್ಲುತಿಲ್ಲ ಕಾಲಚಕ್ರ... ನಡೆಯಲೊ..ಕಾಲುಗಳು
ನಿಶ್ಯಕ್ತವಾಗಿರುವಾಗ... ಕಾಲನೊಡಗೂಡಿ ಸಾಗುವುದಾವಾಗ
ಬಾಳಯುದ್ಧವ ಗೆಲ್ಲಲು ವಿದ್ಯೆಯಿಲ್ಲ... ಅಸ್ತ್ರಗಳಿಲ್ಲ..
ಶಸ್ತ್ರಗಳಿದ್ದರೂ... ಎತ್ತಲು ತೋಳ್ಬಲವೆ ಕುಂದಿರುವಾಗ
ಹೋರಾಡುವುದಾದರೂ....ಹೇಗೆ.... ಎಷ್ಟಿದ್ದರೂ.....
ಗೆಲುವೆನ್ನುವುದು ಹಸಿವೆಯ ಜೋಳಿಗೆಯಲಿ
ನಿದ್ರಿಸುತ್ತಿರುವಾಗ....
No comments:
Post a Comment