ದಡ ಸೇರಲು ಹುಟ್ಟುಗಳಿಲ್ಲ
ಈಜಲು ತೋಳಲಿ ಬಲವಿಲ್ಲ
ತಮ್ಮನ ಹಸಿವಿಗೆ ಚೂರು ಅಗುಳಿಲ್ಲ
ಅತ್ತು ಸೊರಗುವ ಆ ಕಂಗಳ ಕಣ್ಣೀರ
ಒರೆಸಲು.... ನನ್ನೆದೆಯಲಿ ಲಾಲಿ ಹಾಡಿನ ಪದಗಳಿಲ್ಲ
ನೀರ ಮಧ್ಯದಲಿ ಅರ್ಧಕ್ಕೆ ನಿಂತಿದೆ ಬದುಕು
ಹಸಿವ ನೀಗಿಸಿಕೊಳ್ಳಲು ನಮ್ಮ ಬಳಿಗಿಲ್ಲಾವ ಸರಕು
ತೊಟ್ಟ ಬಟ್ಟೆಗಳೆಲ್ಲಾಗಿವೆ ಹರಕು ಕೊಳಕು
ಓಲಾಡುತಿರುವ ದೋಣಿಯು ಆಗಿದೆ ಮುರುಕು
ಸಮಯಕ್ಕೇಕೆ ಹುಟ್ಟುತಿಲ್ಲವೊ ನಮ್ಮ ಮೇಲೆ ಮರುಕು
ಕಾರ್ಗತ್ತಲೊಳಗೆ ಕಾಗುಣಿತಕೆ ಸಿಗದ
ತಾರೆಗಳ ಲೋಕ... ಇನ್ನೇಷ್ಟು ಕತ್ತಲುಗಳೊಂದಿಗೆ
ನಿಮ್ಮ ಹೋರಾಟವೆಂದು... ತನುವಿನಣುವಣುವಿನೊಳಗಣ
ನೆತ್ತರನು ಹೆಪ್ಪುಗಟ್ಟಿಸಿ... ನಮ್ಮಿಬ್ಬರ ನುಂಗಲು
ಹಾತೊರೆಯುತ್ತಿರುವುದು ಪ್ರತಿ ರಾತ್ರಿಯ ಕೊರೆವ ಚಳಿ
ಹನಿ..ಹನಿಯ ಬೇವರು ಉಕ್ಕದಂತೆ...
ಹದವಾಗಿ ದೇಹವ ಹೊತ್ತೊತ್ತಿಗೆ ಕಾಯಿಸಿ..ಕಾಯಿಸಿ
ನೀರಿಲ್ಲದೆ ಒಣಗುವ ಬಳ್ಳಿಯಂತೆ... ದಿನಕ್ಕಿಷ್ಟಿಷ್ಟೇ..
ಎಂಬಂತೆ ಹಸಿದ ಹದ್ದಿನ ಹಾಗೆ ಹುರಿದು ಮುಕ್ಕುತ್ತಿರುವನು
ರವಿಯು..... ತನ್ನ ತಾಪದ ಮೊನಚಿನಿಂದ
ಬದುಕೇಕೊ.. ನಮ್ಮನು ಹತ್ತುವ ಮೊದಲ ಮೆಟ್ಟಿಲಲ್ಲೆ
ಎಡವಿಸಿಬಿಟ್ಟಿದೆ.. ಬಾಳ ಹಣತೆಯು ಪ್ರಕಾಶಿಸುವ ಮುನ್ನವೆ ಆರಿಸಲು ಕಾತುರತೆಯಿಂದ ಕಾಯುತಿದೆ.... ಮನುಜರ ತ್ಯಾಜ್ಯಕೆ ಪ್ರಕೋಪಗೊಂಡ ಶರಧಿಯು.... ತಂದು ನಿಲ್ಲಿಸಿದೆ
ನಮ್ಮಿಬ್ಬರನು..... ಅನಾಥವಾಗಿ ತನ್ನನಂತ ಶರಧಿಯಲಿ
ಸಾವೆ ಹೊರಟು ಹೋಗು ನಮ್ಮಿಂದ ನಿ ದೂರ
ತಲುಪಬೇಕಿದೆ ಕುಣಿದು ಕುಪ್ಪಳಿಸಬೇಕೆಂದಿರುವ ತೀರ
ಯಾವ ದಾಳವ ಉರುಳಿಸುವನೊ ಜಗದಾಟಗಾರ !!!
ಎಷ್ಟು ಗಟ್ಟಿಯಾಗಿ ಹಿಡಿದಿರುವನೊ ಜೀವದ ಸೂತ್ರ...ದಾರ
ಬೇಸತ್ತು... ಈ ನೋವಿನಂಕಣಕೆ ಪರದೆಯ ಎಳೆದು
ಬಿಡುವನೇನೊ.... ? ನಾಟಕಕಾರ
No comments:
Post a Comment