Tuesday, October 17, 2017

ಕರುನಾಡ ಮಣ್ಣಲ್ಲಿ ಜನಿಸಿದವರು

ಎಂಥೆಂಥವರಿಗೆ ಜನ್ಮವನಿತ್ತೆ
ತಾಯಿ ಕನ್ನಡತಿ

ಕಾಯಕವೇ ಕೈಲಾಸವೆಂದ
ಬಸವಣ್ಣನ ನಾಡಿನಲ್ಲಿ
ಕಾಯಕವಗೈಯದೇ ತಳಪಾಯ
ತುಂಬುವಷ್ಟು ಧನವ
ತುಂಬಿಹರು

ಕುಲಕುಲವೆಂದು ಹೊಡೆದಾಡದಿರಿ
ಎಂದ ಕನಕದಾಸರ ನಾಡಲ್ಲಿ
ಕುಲಕುಲಗಳನೇಣಿಸುವ
ನಾಡನಾಳುವ ನಾಯಕರಿಹರಲ್ಲ
ಮನಗಳ ತುಂಬ ಮತ್ಸರವ
ಬಿತ್ತಿಸುತಿಹರೆಲ್ಲ

ಮೈಸೂರು ಮಹಾರಾಜರು ಜನರ
ಒಳಿತಿಗಾಗಿ ಅರಮನೆಯ ಕನಕವನೆಲ್ಲವ
ಕರಗಿಸಿ ಆಣೆಕಟ್ಟನ್ನು ಕಟ್ಟಿದರು...
ಹೊಲ..ಹೊಲಗಳಲಿ ಕೆರೆಗಳ ಕಟ್ಟಲು
ಹಣವನು ಕೊಟ್ಟರೆ ಅಧಿಕಾರಿಗಳೆಲ್ಲ
ಗಂಟನು ಕಟ್ಟುತಿಹರಲ್ಲ...

ಎಂತೆಂಥವರಿಗೆ ಜನ್ಮವನಿತ್ತೆ.. ತಾಯಿ ಕನ್ನಡತಿ
ನೆರೆ ರಾಜ್ಯದ ಜನರು ನಮ್ಮ ಕೆಲಸವ ಕಿತ್ತುಕೊಂಡಿಹರು...
ಮಣ್ಣನು ಕಬಳಿಸುತಿಹರು...ನೀರನು ಬಸಿಯುತಿಹರು
ನೆತ್ತರನು ಹರಿಸುತಿಹರು...ಕಾಲುವೆಯ ನೆಪದಲ್ಲಿ
ಅಮಾಯಕರ ಸೂರುಗಳ ನೆಲಸಮವಾಗಿಸಿಹರು...
ಕಾಯ್ದೆಗಳ ತಿದ್ದಿ... ಕೆರೆಗಳ ಬಾಯಿಗೆ ಮಣ್ಣನು ತುಂಬಿ
ಸರಕಾರದ ಬೊಕ್ಕಸಕ್ಕೆ ಹೊರೆಯಾಗಿಸಲು.... ಹೊಸ
ಹೊಸ ಕೆರೆಗಳಿಗೆ ಜೀವ ತುಂಬಲು ಹವಣಿಸುತಿಹರು..

ಎದೆಯುಬ್ಬಿಸಿ ಕೇಳುಗರನ್ನೆಲ್ಲ..‌ ಹೆಣವಾಗಿಸುತಿಹರು
ಸಿಡಿದೇಳುವ ಜನರಿಗೆ ಹಣ- ಹೆಂಡಗಳ ಮತ್ತಲಿ
ತೇಲಿಸುತಿಹರು...
ಎಂತೆಂಥವರಿಗೆ ಜನ್ಮವಿತ್ತೆ ತಾಯಿ ಕನ್ನಡತಿ...
ನಿನ್ನನುಳಿಸಿಕೊಳ್ಳಲು ಹೋರಾಡಬೇಕೆನ್ನುವರ
ಮನಗಳಲ್ಲಿ ಕಿಚ್ಚಿನ ಬದಲು ಬೂದಿಯೆ..‌‌‌...
ತುಂಬಿಕೊಂಡಿಹುದಲ್ಲ.... ಮತ್ತೆ ಹುಟ್ಟಿಸಿ ಕಳಿಸು
ತಾಯೆ... ನಿನ್ನ ತಲೆಯತ್ತಿ ನಿಲ್ಲುವಂತೆ ಮಾಡುವ
ಉರಿವ ಕಿಡಿಗಳ ಕುಡಿಗಳ

No comments:

Post a Comment