ಕನಸು ಕಾಣುವ ಕಂಗಳಲಿ
ಕತ್ತಲ ಕವಿಸುತಿದೆ ವ್ಯಾಧಿಯ ಕಾರ್ಮೋಡ
ಬಲೆಗೆ ಸಿಕ್ಕ ಹುಳುವಿನಂತವಳ ಹೋರಾಟ
ಹೇಗೆ ಸಹಿಸಿಕೊಳ್ಳಲಿ...ಒಡಲೊಳಗಿನ ಸಂಕಟವ
ಹಾದಿ ತಪ್ಪಿ ಬಂದಿಹುದೇನೊ, ನಮ್ಮನೆಗೆ ಈ ಮಾರಿ
ಕುಳಿತುಬಿಟ್ಟಿರುವೆವಲ್ಲ ಸೂರು, ಹೊಲಗದ್ದೆಗಳ ಮಾರಿ
ತೌರ ಮನೆಯಲ್ಲಿ ತವಡು ಹಿಟ್ಟಿಗೂ ಗತಿಯಿಲ್ಲ
ಸೇರಗೊಡ್ಡಿ ನಾನೇನ ಬೇಡಿ ತರಲಿ...
ಅಪಘಾತಕೆ ಸಿಕ್ಕ ಗಂಡನ ನಡುವಲ್ಲಿ ಶಕ್ತಿಯೇ...ಇಲ್ಲ
ಹೊಂದಿಸುವುದಾದರು ಹೇಗೆ? ನೋವಿಗೆ ಮದ್ದನು..
ಎರಡ್ಹೊತ್ತು ತೊಳೆದ ಮೂಸರೆ ಮನೆಯ ಹಣವೆ...
ಗಂಜಿಗಾಗುತಿಲ್ಲ... ಇನ್ನೂ... ಏರಿರುವ ನಂಜನು
ಇಳಿಸಿಕೊಳ್ಳುವುದಾದರು ಎಲ್ಲಿ...
ಕಾಲಕ್ಕಿಲ್ಲ ಚೂರು ಅನುಕಂಪ...
ಕ್ಷಣಕ್ಷಣಕೂ ಹೆಚ್ಚಿಸುತಿದೆ, ತಡೆಯಲಾರದಷ್ಟು ನೋವ
ಮುಷ್ಟಿಯ ಚಾಚಿ ಎಷ್ಟು ದೂರವೆಂದು ನಡೆಯಲಿ?
ಕೈಯಲಿ ಬಿದ್ದದ್ದು ಬರೀ...ಬಿಡಿಗಾಸುಗಳೆ, ಭಕಾಸುರನ
ಹೊಟ್ಟೆಗೆ ಅರಿ ಕಾಸಿನ ಮಜ್ಜಿಗೆಯಂತೆ
ಸಿರಿವಂತರೆ...ಉಣ್ಣಲಾಗದೆ ತಿಪ್ಪೆಗೆ ಚೆಲ್ಲುವ ಮುನ್ನ...
ಕೂಡಿಟ್ಟು...ಕೂಡಿಟ್ಟು...ಸರಳುಗಳ ಎಣಿಸುವ ಮುನ್ನ...
ಬೊಗಸೆ ತುಂಬ ಧನವನಿತ್ತು...ಉಸಿರನ್ನುಳಿಸಿರಿ...
ನಮಗೊ...ದುಡಿದುಣ್ಣಲೇ.... ಗತಿಯಿಲ್ಲದಿರುವಾಗ,
ಸಿರಿವಂತರ ವ್ಯಾಧಿಯೊಂದು ಬೆಯಿಸುತಿಹುದಲ್ಲ..!!
ನಿಜ...ನಿಜ...ಸಾವು ನೋವಿಗೆ, ಬಡವ ಬಲ್ಲಿದನೆಂಬ
ಭೇದವೆಲ್ಲಿ?..
ಉಸಿರಾಡುತ್ತಿರುವ... ಹೌದು ಅಲ್ಲಗಳನರಿತಿರುವ,
ನೋವೆಂಬುದೇನೆಂದು ಅರಿತವರೂ.... ಕಣ್ಮುಚ್ಚಿ
ಕುಳಿತುಕೊಂಡಿರುವಾಗ, ನಮ್ಮಂಥವರ ಭಾದೆಯು
ಅರಿವಾಗುವುದಾದರು ಯಾರಿಗೆ ?
ಕೈ ಚಾಚುತ್ತಿದ್ದೇವೆ... ಕೈಲಾಗದವರೆಂದಲ್ಲ,
ಅಸಹಾಯಕತೆಯ ಉರುಳು ನಮ್ಮ ಉಸಿರನ್ನು
ಕಟ್ಟಿಸುತ್ತಿದೆ..
ಸ್ವಾಭಿಮಾನವ ಬಿಟ್ಟು ಬಂದವರಲ್ಲ...
ಕರುಳಬಳ್ಳಿ.... ಕಣ್ಮುಂದೆಯೆ ಕಮರುತಿಹುದಲ್ಲ...
ಸುಳ್ಳು ಹೇಳಿ ಸೌಧವ ಕಟ್ಟಿಸಿಕೊಳ್ಳಾವಸೆ ನಮಗಿಲ್ಲ.
ನಿಮ್ಮಂಥ ದಾನಿಗಳಾಸರೆ ಇಲ್ಲದೆ ಹೋದರೆ......
ಹಣವಿಲ್ಲದೆ, ಹೆಣವಾಗುವ ಮಗಳ ಕಟ್ಟೆಗೆ ನಾವೆ
ಕಲ್ಲನು ಹೊರಬೇಕಾಗುವುದಲ್ಲ..!!!
No comments:
Post a Comment