ಹಣೆಯಲ್ಲಿದ್ದರೆ.. ಬಂದು ಹೋಗುವುದು
ನಾಳೆಯೊಂದು ದಿನ ಸಾಕಿ...
ಕಳೆದುಹೋಗುವ ಚಿಂತೆಯೊಂದು ಚಿತೆಯಾಗಿ
ಸುಡುತಿಹುದಲ್ಲ..!!!
ಏನನ್ನು ತರಲಿಲ್ಲ.. ತಂದವರಾರು ಇಲ್ಲ.
ಬಿಟ್ಟು ಹೋದವರುಂಟು, ನನ್ನಲೇನಿದೆ
ಮುದ್ದೆ ಮಾಂಸವೊಂದ ಹೊರತುಪಡಿಸಿ..
ಸತ್ತಾಗ ಹೊರುವವರಿಗೂ ಭಾರ.
ಕಷ್ಟ-ಸುಖ, ನೋವು-ನಲಿವು, ಸೋಲು-ಗೆಲುವು,
ಏಳು-ಬೀಳುಗಳು... ಒಂದೆ ನಾಣ್ಯದ ಎರಡು ಮುಖಗಳಾಗಿರುವಾಗ, ಬರುವ ದಿನಗಳಲ್ಲಿ
ಬರೀ ಸುಖವನ್ನೆ ಬಯಸುವುದು ಸ್ವಾರ್ಥವಲ್ಲವೆ?
ಸಾಕಿ...
ಬಂದುದನೆಲ್ಲವನುಂಡು ಅರಿತು-ಬೆರೆತು,
ಕೆಡಕಿಂದ ಪಾಠವ, ನಡೆ ನುಡಿಗಳಿಂದ, ಸಜ್ಜನರ
ಸಂಗದಿಂದ, ಬದುಕಿನ ಹಾದಿಯನ್ನು
ರೂಪಿಸಿಕೊಳ್ಳಬೇಕಲ್ಲವೆ?
ಹುಟ್ಟಿನೊಂದಿಗೆ ಸಾವನ್ನು ಕಟ್ಟಿಕೊಂಡು
ಬಂದವರು ನಾವು ಸಾಕಿ...
ಹಾಗಂತ, ಸಾಧಿಸದೆ ಸತ್ತು ಹೋಗುವುದು,
ಸೃಷ್ಟಿ ಲಯಕಾರನಿಗೆ ಮಾಡುವ ಅಪರಾಧವಲ್ಲವೆ.
ಜೀವ ತುಂಬಿದ ಋಣಕ್ಕಾದರು.....ಏನನ್ನಾದರು ಸಾಧಿಸಬೇಕಲ್ಲ!!!
ಬೆಟ್ಟದಷ್ಟಲ್ಲದಿದ್ದರೂ... ಸಾಸಿವೆ ಕಾಳಿನಷ್ಟಾದರು ಸರಿ
ಎರಡು ಹೆಜ್ಜೆ ಗುರುತನು ಮೂಡಿಸಬೇಕಲ್ಲ
ಕಟ್ಟಿಕೊಂಡು ಹೋಗುವುದಕ್ಕೇನಿದೆ? ಸತ್ತಾಗ...
ನಮ್ಮನೆ ನಾಲ್ಕು ಹೆಗಲುಗಳು ಹೊತ್ತೊಯ್ಯುವಾಗ
ಸಾಕಿ....
ದಿನಗಳಿಗೇನು...ಹೊಸತು ಹಳತುಗಳ ಭೇದವಿಲ್ಲ
ಹರೆಯದ ಹೊಳೆ ಹರಿದ್ಹೊದ ಮೇಲೆ...ನೆರೆಗಳ
ಬಿರುಕು ಬಿಡಬೇಕಲ್ಲ...
ಆಗು ಹೋಗುಗಳು ನಿನ್ನ ಕೈಲಿಲ್ಲ...ಚಿಂತಿಸಬೇಡ
ಬರೆದು ಕಳಿಸಿದವನು... ಯಾವುದನ್ನೂ... ಅಳಿಸುವುದಿಲ್ಲ
ನಿನ್ನ ಪಾಲಿನದು ನಿನಗೆ...ನನ್ನ ಪಾಲಿನದು ನನಗೆ...
ಕಸಿದುಕೊಳ್ಳಲು... ಕಾಲ ಬಿಡುವುದೇ....ಇಲ್ಲ
No comments:
Post a Comment