Saturday, April 1, 2017

ಗೋವು

ನಾನೇಕೆ ಇಲ್ಲಿಗೆ ಬಂದೆನೆಂದು
ಗೊತ್ತಿಲ್ಲದಿರುವುದೆ ನಿನಗೆ ?
ಗೊತ್ತಿದ್ದರೂ....
ಸುಮ್ಮನೆ ಕುಳಿತಿರುವೆ ಏಕೆ ?
ನಿನ್ನ ಹಾಗೆ ನನ್ನನು ಹಸಿವು
ಬಾಯಾರಿಕೆಯಿರದ ಶಿಲೆಯನ್ನಾಗಿ
ರೂಪಿಸಿದ್ದರೆ ಎಷ್ಟೊ ಸುಖವಿರುತ್ತಿತ್ತು
ಈ ಜಗದಲಿ

ನಿನಗೊ.. ಬರುವ ಭಕ್ತರು
ಉರಿ ಬಿಸಿಲಲಿ ಬೆಯುವೆಯೆಂದು
ಈಗೊ ಇಲ್ಲಿರುವೆರಡು ತಾಮ್ರದ
ಕೊಡಗಳಿಂದ ನಿನ್ನನು ಸ್ನಾನಿಸಿ
ತಂಪಗೈವರು, ಪೂಜಿಸುವರು
ತರತರದ ನೈವೇದ್ಯವ ಎಡೆಗೈವರು

ನೋಡು ನನ್ನತ್ತ ಒಮ್ಮೆ...
ನನ್ನ ನೇಗಿಲೊಡೆಯನು
ಹೊಲಗದ್ದೆಗಳಲಿ ಮೇವಿಲ್ಲವೆಂದು
ಕೊಟ್ಟಿಗೆಯಲಿ ಕಟ್ಟಿ ಸಾಕಲಾಗದೆಂದು
ಅಂಬಾ.... ಎಂಬ ಎನ್ನೊಡಲ ಹಸಿವಿನ
ಕೂಗನು ಕೇಳಲಾಗದೆ
ಕಲ್ಲೆದೆಯ ಮಾಡಿ ಕಟುಕನಿಗೆ ಕತ್ತರಿಸಲು
ಮಾರಲಾಗದೆ
ಕೈ ಬಿಟ್ಟಿಹನು ನನ್ನನು ನೀರಿಲ್ಲದೆ ಒಣಗಿ
ಮಲಗಿದ ಕೆರೆಯ ದಂಡೆಯಲಿ

ಮೇವಿಗಾಗಿ ಅಲೆದು ಅಲೆದು
ನೀರಿಗಾಗಿ ತಪತಪಿಸಿ ಹಪಹಪಿಸಿ
ಕಾಲುಗಳು ಬಲವಿಲ್ಲದೆ ನಿತ್ರಾಣಗೊಂಡು
ಬಂದು ಕುಳಿತಿರುವೆ ನಿನ್ನೆದುರಿಗೆ
ಪ್ರಾರ್ಥಿಸು ಆ ನಿನ್ನ ಶಿವನಲ್ಲಿ
ನಾಕು ಹನಿ ಅಮೃತವೆಂಬ ಮಳೆಯ
ಸಿಂಚನವಗೈಯಲಿ ಧರೆಗೆ

ಇಲ್ಲದಿದ್ದರೆ...
ಹಸಿವು ಬಾಯಾರಿಕೆಯಿಂದ ಬಳಲಿ
ಸಾಯುತ್ತಿರುವ ಈ ನನ್ನ ದೇಹಕೆ
ಮುಕ್ತಿಯ ನೀಡಲಿ, ಮುಂದಿನ ಜನ್ಮದಲಿ ನಿನ್ನಂತೆ
ನನ್ನನ್ನೂ ಕಣ್ಣೀರಿಟ್ಟರು ಕರಗದ
ಶಿಲೆಯಂತಾಗಿಸಲಿ

No comments:

Post a Comment