ಅವರು
ವಿರಹವಿದು
ಕೊನೆಯಾಗಬೇಕಿದೆ
ಮಿಲನಕಾಗಿ ಹೃದಯ
ಕಾತರಿಸುತಿದೆ
ಅವನ ನೋಟದಲಿ
ನನ್ನ ಕಳೆದುಕೊಳ್ಳಬೇಕಿದೆ
ಅವನ ಭಾವದಲಿ
ನನ್ನ ಹುಡುಕಬೇಕಿದೆ
ನನ್ನ ಮೌನಕೆ ಅವನ
ಮಾತಿನ ಸ್ಪರ್ಶ ಬೇಕಿದೆ
ಅವನು ಜೊತೆಯಿಲ್ಲದ ಕ್ಷಣಗಳ
ಹೂಮಾಲೆಯಂತೆ ಪೋಣಿಸಬೇಕಿದೆ
ಇರುಳೆಲ್ಲ ಅವನ
ಮಾತುಗಳ ಆಲಿಸಬೇಕಿದೆ
ಹಗಲಲ್ಲಿ ಅದ ನೆನೆದು
ಮುದಗೊಳ್ಳಬೇಕಿದೆ
ಅವನ ತುಟಿಯಂಚಿನ
ನಗುವಿನಲಿ ಕರಗಬೇಕಿದೆ
ಹುಸಿಮುನಿಸ ತೋರಿ
ಅವನ ತೋಳ ಬಳಸಬೇಕಿದೆ
ಅವನೆದೆಯ ಹರವಿನಲಿ
ಹೊಳೆಯಾಗಿ ಹರಿಯಬೇಕಿದೆ
ಸಾಗರ ಸೇರುವ ನದಿಯ ತವಕ
ನನ್ನ ಕಣ್ಣಲಿ ತುಳುಕುತಿದೆ
ಈ ಹುಚ್ಚು ಆಸೆಗಳ
ಅವನಲ್ಲಿ ಹೇಳಬೇಕಿದೆ
ಮೊದಲು ವಿರಹವಿದು
ಕೊನೆಯಾಗಬೇಕಿದೆ
# ಗೀತಾ ಶ್ರೀ.
ನಿನ್ನ ಕಣ್ಣ ಕೊಳಗಳಲ್ಲೊಮ್ಮೆ
ಜಿಗಿಯಬೇಕಿದೆ....
ಪ್ರೇಮ ಭಾವಗಳೊಡಗೂಡಿ
ಈಜಬೇಕಿದೆ...
ಮಾತಿನ ಮಲ್ಲಿಗೆಯ ತಂದು..
ಮೌನದ ನಿನ್ನಂಗಳಕೆ ಸುರಿಯಬೇಕಿದೆ..
ನೀನಿಲ್ಲದೆ..... ಕಳೆದ ದಿನಗಳನು
ಮೂಟೆಕಟ್ಟಿ ಒಗೆಯಬೇಕಿದೆ..
ನಿನ್ನ ಮನಕೊಂದು...
ಪ್ರೇಮ ಸೇತುವೆಯ ಕಟ್ಟಬೇಕಿದೆ
ಕಂಡ ಕನಸುಗಳ...
ಹೊಳೆಯನ್ನೆ ಹರಿಸಬೇಕಿದೆ
ಹೃದಯದ ಕಾಯಿಯದು
ಕಾದು... ಕಾದು.. ಹಣ್ಣಾಗಿದೆ...
ವಿರಹದ ಹುಳುಗಳು ಹೊಕ್ಕು..
ಹುಳುಕು ಮನಸಿನ ಜನರೆದುರು
ಕೊಳೆತು ನಾರುತಿದೆ..
ಮರಳಿ ಉತ್ತಿ, ಬಿತ್ತಬೇಕಿದೆ..
ನಮ್ಮ ಪ್ರೇಮ ಬೀಜವನು
ಕತ್ತರಿಸಿ..... ನಮ್ಮ ಪ್ರೀತಿಗೆ
ಬೇಲಿಯಾಗಿಸಬೇಕಿದೆ...
ವಿರಹವನು..
No comments:
Post a Comment