ನಾನು ಒಕ್ಕಲಿಗ
ಕೋಳಿ ಕೂಗುವ ಮೊದಲೇ
ರವಿಯ ಕಿರಣಗಳು ಭೂದೇವಿಯ
ಚರಣವ ಸ್ಪರ್ಶಿಸುವ ಮುನ್ನವೇ
ರೆಕ್ಕೆಯ ಬಿಚ್ಚದೆ ಬೆಚ್ಚಗೆ ಗೂಡೊಳು
ಮಲಗಿರುವ ಹಕ್ಕಿಗಳು ಕಲರವದ
ಸದ್ದನುಗೈಯುವ ಮುಂಚೆಯೆ
ಭೂ ಮಾತೆಯ ಸೇವೆಗೆ ಹೊರಟು
ನಿಲ್ಲುವವನು ನಾನು
ಸುರಿಯುವ ಮಳೆಯೊ, ಉರಿಯುವ
ಬಿಸಿಲೊ, ಬೀಸುವ ಬಿರುಗಾಳಿಯೊ
ತರತರಗಟ್ಟಿಸುವ ಚಳಿಯೊ
ಎಲ್ಲವನ್ನು ಕಲ್ಲು ಬಂಡೆಯಂತೆ ಸಹಿಸಿಕೊಂಡು
ಬದುಕ ಸಂಗಾತಿಗಳಾದ ನನ್ನೆರಡು
ಎತ್ತುಗಳನು ಹೂಡಿಕೊಂಡು
ಬರಡಾದ, ಹೆಂಟೆಗಳಿಂದ ಕೂಡಿದ
ಬಿಸಿಲಿಗೆ ಕಾದು ಕಾದು ಬಂಡೆಯಾದ
ಹೊಲವನ್ನು, ಸೀಳಿ, ಹದಮಾಡಿ
ಬೀಜವ ಬಿತ್ತಿ, ಹಸಿರನು ಬೆಳಸಿ
ಬಂಗಾರದ ಬೆಳೆಯನು ಬೆಳೆದು
ಜಗಕೆ ಅನ್ನವ ನೀಡುವ ನನ್ನಿಂದೀನ
ಪರಿಸ್ಥಿತಿಯನ್ನು
ನೋಡಿರುವಿರಾ ? ಕೇಳಿರುವಿರಾ?
ವರುಣನ ಹಂಗನೊಂದನು ಹೊರತು
ಪಡಿಸಿ, ಇನ್ನಾರಲ್ಲೂ ಕೈ ಚಾಚದ
ದುಡಿಯುವ ಕೈಗಳಿಗೆ ಕಂಕಣವ
ಕಟ್ಟಲು ಯಾರು ಒಪ್ಪುತ್ತಿಲ್ಲ
ಎಷ್ಟೋ ಮನೆಯ ಎಷ್ಟೋ
ಬಾಗಿಲುಗಳ ನಾ ತಟ್ಟಿ ಬಂದರೂ
ಅವರ ಮಗಳನ್ನು ಈ ಮಣ್ಣ ಮಗನಿಗೆ
ಧಾರೆಯರೆಯುವುದಿಲ್ಲವಂತೆ
ಕಾರಣ, ಅವಳ ಮಗಳು ಹೊಲದ
ಮೊಖವ ನೋಡಿಲ್ಲವಂತೆ, ಸಗಣಿಯ
ಪುಟ್ಟಿಯನೆತ್ತಿಲ್ಲವಂತೆ, ಸರಕಾರಿ
ನಲ್ಲಿಯ ನೀರನು ಹೊತ್ತು ತಂದಿಲ್ಲವಂತೆ
ಹೆಚ್ಚು ಓದಿರುವಳಂತೆ ಹೀಗೆ ಇಲ್ಲಸಲ್ಲದ
ಜೊಳ್ಳು ಕಂತೆಗಳ ಮೂಟೆಯನ್ನೇ ತೋರಿಸಿ
ಬಾಗಿಲನ್ನು ಹಾಕುತಿಹರು ನನ್ನನು ಹೊರದೂಡಿ
ಇನ್ನೂ ಕೆಲವರಂತೂ ನಾನು ಒಕ್ಕಲಿಗನೆಂದರೆ
ಸಾಕು ಕನ್ಯೆಯೆ ಇಲ್ಲವೆಂದು ಮುಖಕ್ಕೆ ಹೊಡೆದ
ಹಾಗೆ ಹೇಳಿಬಿಡುತ್ತಾರೆ
ನನಗೆ ಬೇಕಿರುವುದೊಂದು ಕನ್ಯೆ
ನನ್ನ ಕುಲವ ಹಬ್ಬಿಸಲು, ಭೂದೇವಿಯ
ಸೇವೆಯ ಗೈಯ್ಯುವದಕ್ಕಾಗಿ, ನಾಳೆ ನಾ
ಸತ್ತರೆ ಮಣ್ಣ ಮಾಡಲಿಕ್ಕಾದರೂ ಮಕ್ಕಳನ್ನು
ಹೇರುವುದಕ್ಕಾಗಿ
ನನ್ನ ಬರಗಾಲದ ಬದುಕಲ್ಲಿ ಚಿಗುರಾಗಿ
ಹಬ್ಬಲು, ನೋವಿನ ದಿನಗಳಲಿ ನಗೆಯ
ಅಮೃತ ಸಿಂಚನವ ಚೆಲ್ಲಲು
ನನಗೊಬ್ಬ ಕನ್ಯೆಯು ಬೇಕು
ಹುಡುಕಿ ಕೊಡುವಿರಾ ?
ನನ್ನ ಕನ್ನಡದ ಬಂಧುಗಳೆ
No comments:
Post a Comment