Tuesday, May 1, 2018

ಮತದಾರ...

ಹಾಕಬೇಕಿದೆ ನನ್ನದೊಂದು ಓಟು
ಪಡೆಯದೆ ಏಂಜಲು ಕಾಸಿನ ನೋಟು..!!!
ತೆರೆದಿರಿಸಬೇಕಿದೆ ನನ್ಮನೆಯ ಗೇಟು
ಅಪರೂಪದ ದಿನವಿದು.. ಖಾದಿಗಳು ಬರುವರಲ್ಲ
ಹಿಡಿದುಕೊಂಡು ತಾಟು

ಈಗ ಊರ ಹೊರಗೆಲ್ಲ ಮಸಾಲೆಯದ್ದೆ ಘಾಟು
ರಸಗೊಬ್ಬರ ಗುಂಡಿಗಳಲ್ಲಿ ಕರಗದೆ ಮಲಗಿದೆ ಪ್ಲಾಸ್ಟಿಕ್ ತಾಟು
ನಾಚಿಕೆಯಿಲ್ಲವೆ...? ಮರೆತಿರುವಿರಾ..ಲಾಠಿ, ಗುಂಡಿನೇಟು
ಬೆಳೆದ ಬೆಳೆಗಳು ಮನೆಯಲ್ಲಿ ನುಸಿ ತಿನ್ನುತ್ತಿವೆ....
ಇನ್ನೂ ಏರಿಸಿಲ್ಲ ಬೆಂಬಲ ಬೆಲೆಯ ರೇಟು

ಈ ಮಣ್ಣಲ್ಲಿ....ಮತಕ್ಕೆ ಕಟ್ಟುವರು ಎಷ್ಟಾದರು ವೇಯ್ಟು
ಕಾರಣ...ಮೂಗುದಾರವಿರದೆ ನಾಗಾಲೋಟದಲ್ಲಿರುವುದಲ್ಲ ಜನಸಂಖ್ಯೆಯ ಓಟ
ಎಲ್ಲಿರುವುದು ಐಕ್ಯತೆ.. ಗಲ್ಲಿಗಲ್ಲಿಗೊಂದು ಹಾರುತಿವುದು ಬಾವುಟ
ಅಭಿಮಾನ ಹೆಚ್ಚಾದರೆ....!!!!! ಕೂಡಿಸುವರು ಬಡಿದು ಗೂಟ

ಕಿತ್ತೊಗೆದು ಬಿಡಿ, ಹಾಳ ಕೆರೆಯಲ್ಲಿ ಭಾಗ್ಯಗಳ ಮೂಟೆ,
ಶಾಂತಿ... ನೀರು..ಬೆಳಕು..ಗಾಳಿ..ಒಂದಿಷ್ಟು ದುಡಿಮೆ
ಇವೆಲ್ಲವ ಪಡೆಯುವುದರಲ್ಲಿ ತೋರಿಸಿ ನಿಮ್ಮ ಭರಾಟೆ
ಹೊತ್ತಿನ ಮುತ್ತು ಕೈ ಜಾರಿದ ಮೇಲೆ ಮಾಡಬೇಡಿರಿ ಗಲಾಟೆ
ಸತ್ತ ಹೆಣದ ಮುಂದೆ ಬಾರಿಸಿದರೇನು ಬಂತು...ತಮಟೆ

ಇವರದ್ದು..ವಂಶಪಾರಂಪರೆಯ ಅಧಿಕಾರ
ನಿಲ್ಲುವ ಅಭ್ಯರ್ಥಿ ಯಾರೊಬ್ಬನಿಲ್ಲ ಸಾಲಗಾರ
ಸಾಲ ಹೆಚ್ಚಾಗಿ ಸಾಯುವುದು ಮಾತ್ರ ಮತದಾರ
ಸತ್ತಾಗಲೂ...ಜಾತಿ ರಾಜಕೀಯ ಮಾಡಿ ಹರಿಯುವರು ಉಡದಾರ
ಅದಕ್ಕೂ...ಮೊದಲೆ ನೀವೆ ಹಾಕಿಬಿಡಿ ಇವರಿಗೆ ಬಿಗಿದಾದ ಮೂಗುದಾರ

No comments:

Post a Comment