Wednesday, May 9, 2018

ನಿಶ್ಚಿಂತೆ

ಬದುಕ ಬವಣೆಯ ಬಂಡಿಯ
ನೊಗಲುಗಳ ಹೊರವಷ್ಟು ಬಲವಲ್ಲ
ನಮ್ಮಯ ಹೆಗಲುಗಳು...
ನಿನ್ನ ನೆರಳಿಲ್ಲದಿರುವ ನಮ್ಮನು,
ಬೀದಿ ಕಾಮಣ್ಣರ ಕಣ್ಣುರಿಯಲ್ಲಿ
ಬೇಯಿಸಲು ಹಾತೊರೆಯುತ್ತಿವೆ ಹಗಲುಗಳು.

ನಾವೇನು ಬಲಹೀನರೇನು....? ನಾಡ
ನಾರಿಯರ ಹೋರಾಟದ ಕಿಡಿಗಳನ್ನು ಮನದಲ್ಲಿ
ತುಂಬಿಲ್ಲವೇನು..?, ಮೋಸದಿ....ಕಿಂಡಿಯಿಂದ
ನುಸುಳುವವರ ತಲೆಯನ್ನು ಚಚ್ಚುವ ಕಿಚ್ಚನ್ನು...
ಆಕ್ರಮಿಸಲು ಬಂದವರ ರುಂಡ ಮುಂಡಗಳ
ಚೆಂಡಾಡುವ ಕೆಚ್ಛನ್ನು...ಕಣಕಣದಲ್ಲಿ ಹರಿಸಿಲ್ಲವೇನು?

ಅಪ್ಪ... ಗಂಡು ಗಂಡೆಂದು ಅರೆಘಳಿಗೆಯು ನೀ.. ಕೊರಗಲಿಲ್ಲ
ಹೆಣ್ಣು ಹುಣ್ಣುಗಳೆಂದು ಒಂದಿನವು ಜರಿಯಲಿಲ್ಲ
ಗಂಡುಗಳಿಗಿಂತಲೂ ಹೆಚ್ಚು ಮನೊಸ್ಥೈರ್ಯವ ತುಂಬಿರುವೆಯಲ್ಲ
ಕಷ್ಟದ ಗೋಡೆ ಯಾವುದಾದರೇನು..? ಬದುಕಿನಲ್ಲಿ...
ತೋಳಿನಲ್ಲಿ ಹೋರಾಡಿ ಕೆಡುವವಷ್ಟು ಬಲವನ್ನು ತುಂಬಿರುವೆಯಲ್ಲ
ಸೋಲಿಗೂ...ಬೆವರಿಳಿಸುವ ಕಲೆಯ ಕರಗತಗೊಳಿಸಿರುವೆಯಲ್ಲ

ಬರದೆ ಹೋದರೇನಾಯಿತು..? ಹೊನ್ನು ಮಣ್ಣಿನಾಸೆಯ
ಬಂಧುಗಳು...
ಸ್ವರ್ಗದ ಬಾಗಿಲು ತೆರೆಯದಿರುವುದೆ..? ಭೂ ದೇವಿಯು
ತನ್ನೊಡಲಲಿ ಜಾಗವ ನೀಡದಿರುವಳೆ...?
ಬೇಡ ನಮಗೆ ಸ್ವಾರ್ಥ ಜಗದ ಜನರ ಶಕುನಿಯ ಅನುಕಂಪ
ಕನಿಕರದಿ ಬಂದರೆ ಹೊರುವೆವು ಯಾರದ್ದಾದರೂ ಚಟ್ಟ...!!!
ಕೆಣಕಲು ಬಂದರೆ ಕಟ್ಟುವೆವು ನಾವೆ ಅವರಿಗೆ ಚಟ್ಟ..!!!!

ಸಿಗಲಿ ಅಪ್ಪ... ಅನಂತದಲ್ಲಾದರೂ ನಿಶ್ಚಿಂತೆ
ಬೇಡ ನಿನಗಿನ್ನೂ.. ಈ ಲೋಕದ ಚಿಂತೆ..
ನಿನ್ನ ಬಳುವಳಿಯಿವುದು ಬದುಕಿಗೆ ಅನುಭವದ ಕಂತೆ
ಗೆಲ್ಲುತ್ತೇವೆ...ಸೋತು...ಸೋತು ಗೆಲ್ಲುತ್ತೇವೆ ಬಾಳಿನ ಸಂತೆ
ದೈಹಿಕವಾಗಿ ನಮ್ಮ ಜೊತೆಯಲ್ಲಿ ನೀನಿಲ್ಲದಿದ್ದರೆನಂತೆ....
ನೀಲಾಗಾಸದಿ ನಿಂತು ಹರಸಿದಿರೆ ಸಾಕು, ಜಗವನ್ನೆ ಗೆದ್ದಂತೆ

No comments:

Post a Comment