Sunday, May 19, 2019

ಅತಿ ಮುಖ್ಯ

ನಿಮ್ಮ ಜಮೀನಿನಲ್ಲಿ ಈ ನಾಲ್ಕು ಗಿಡಮರಗಳು ಇರಲಿ
**********************************************

ಅಧಿಕ ಇಳುವರಿ ಪಡೆಯಲು, ಹೆಚ್ಚು ಲಾಭ ಗಳಿಸಲು ನಾವು ಏನೆಲ್ಲ ಸರ್ಕಸ್ ಮಾಡುತ್ತೇವೆ. ಮೂಟೆಗಟ್ಟಲೇ ರಾಸಾಯನಿಕ ಗೊಬ್ಬರ ಸುರಿಯುತ್ತೇವೆ, ಲೀಟರ್ ಗಟ್ಟಲೇ ಕ್ರಿಮಿನಾಶಕ-ಟಾನಿಕ್ ಸಿಂಪಡಿಸುತ್ತೇವೆ. ಇಂಥ ವಿಪರೀತ ಹಾಗೂ ವಿನಾಶಕಾರಿ ಖರ್ಚು ಕಡಿಮೆಗೊಳಿಸಲು ಮತ್ತು ಉಪ ಆದಾಯದ ಜೊತೆಗೆ ಮುಖ್ಯ ಆದಾಯವನ್ನು ಹೆಚ್ಚಿಸಲು ನಿಮ್ಮ ಜಮೀನಿನಲ್ಲಿ ಕೆಳಗೆ ತಿಳಿಸಿದ ಐದು ಗಿಡಮರಗಳು ಇರಲಿ. ನಿಮ್ಮದು ನೀರಾವರಿ ಜಮೀನಾಗಿದ್ದರಂತೂ ಇವು ಕಡ್ಡಾಯವೆಂಬಂತೆ ಇರಲಿ.

1) ಗ್ಲೀರಿಸಿಡಿಯಾ (Gliricidia) :
ಗ್ಲಿರಿಸಿಡಿಯಾ ಎಂಬುದು ಪ್ರೋಟೀನ್-ಸಮೃದ್ಧ ಮೇವು ಮತ್ತು ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯದಿಂದಾಗಿ ಪ್ರಮುಖ ಉಷ್ಣವಲಯದ ಮೇವು ಮರಗಳಲ್ಲಿ ಒಂದಾಗಿದೆ. ಕತ್ತರಿಸಿದ ದಂಟು ಮತ್ತು ಎಲೆಗಳಿಂದ ರಾಸುಗಳಿಗೆ ಮೇವು ತಯಾರಿಸಲು ಸಹ ಸಾಧ್ಯವಿದೆ, ಇದನ್ನು ಹುಲ್ಲು ಅಥವಾ ಮೆಕ್ಕೆ ಜೋಳದೊಂದಿಗೆ ಬೆರೆಸಬಹುದು.
ಹಸಿರು ಬೇಲಿಗೆ ಇದನ್ನು ಬಳಸಬಹುದು. ಖಾಲಿ ಜಾಗ, ಕಲ್ಲು ಬಂಡಗಳಿರುವ ಪ್ರದೇಶಗಳಲ್ಲಿ, ರಸ್ತೆಯ ಅಂಚಿನಲ್ಲಿಯೂ ಇದನ್ನು ಬೆಳೆಸಬಹುದು. ಇದು ಬಹಳಷ್ಟು ಹಸಿರು ಸೊಪ್ಪನ್ನು ವೇಗವಾಗಿ ಉತ್ಪಾದಿಸುತ್ತದೆ. ಎಲೆಯು ಬೇಗನೆ ಕೊಳೆಯುತ್ತದೆ. ಅದಕ್ಕಾಗೇ ಇದನ್ನು 'ಗೊಬ್ಬರದ ಮರ' ಎಂದು ಕರೆಯುತ್ತಾರೆ.
ಇದನ್ನು ಹಸಿರು ಗೊಬ್ಬರವಾಗಿ ಬಳಸಬಹುದು. ಒಂದು ಎಕರೆಯ ಬೇಲಿಯಲ್ಲಿ ಬೆಳೆದರೆ, 2 ಎಕರೆ ಭೂಮಿಗೆ ಬೇಕಾದಷ್ಟು ಹಸಿರೆಲೆಗೊಬ್ಬರವನ್ನು ಪೂರೈಸುತ್ತದೆ. ಇದನ್ನು ಎರೆಹುಳದ ಗೊಬ್ಬರ ತಯಾರಿಕೆಗಾಗಿಯೂ ಸಹ ಬಳಸಬಹುದು. ಹೆಚ್ಚಿನ ಪ್ರೋಟೀನ್ ಅಂಶದ ಕಾರಣ ಗ್ಲಿರಿಸಿಡಿಯಾವನ್ನು ಮೇವಾಗಿ ಬಳಸಿದಾಗ ಹಾಲು ಮತ್ತು ಮಾಂಸ ಉತ್ಪಾದನೆಯು ಹೆಚ್ಚುವುದು ಸಾಬೀತಾಗಿದೆ.

2) ಚೆಂಡು ಹೂವು (Marigold) :
ನೀವು ಯಾವುದೇ ಬೆಳೆ ಬೆಳೆಯಿರಿ, ಆದರೆ ಅದರಲ್ಲಿ ಅಲ್ಲಲ್ಲಿ ಚೆಂಡು ಹೂ ಬೆಳೆಯಬೇಕು. ಇವು ಜೇನುಹುಳುಗಳನ್ನು ಆಕರ್ಷಿಸುತ್ತದೆ. ಪರಾಗ ಸ್ಪರ್ಶಕ್ರಿಯೆಗೆ ದುಂಬಿಗಳನ್ನು ಆಕರ್ಷಿಸಲು ಬೆಳೆಯ ಸುತ್ತಲೂ ಚೆಂಡು ಹೂವಿನ ಗಿಡ ಹಾಕಿದರೆ, ಪರಾಗ ಕ್ರಿಯೆ ನಡೆದು ಹೆಚ್ಚು ಇಳುವರಿ ಪಡೆಯಬಹುದು. ಇದರ ಬೇರುಗಳಲ್ಲಿ ಸಾರಜನಕ ಸ್ಥಿರೀಕರಿಸುವ ರೈಜೋಬಿಯಂ ಗಂಟುಗಳು ಇರುತ್ತವೆ. ಇದರಿಂದ ಮಣ್ಣಿನಲ್ಲಿ ಸಾರಜನಕ ಅಂಶ ಹೆಚ್ಚಾಗುತ್ತದೆ. ಪ್ರತಿ ಎರಡು ಸಾಲುಗಳ ಮಧ್ಯೆ ಈ ಹೂವಿನ ಒಂದು ಸಾಲು ಇರುವಂತೆ ಮಾಡಿದರೆ, ಕೀಟಗಳ ಮತ್ತು ರೋಗಗಳ ಭಾಧೆಯನ್ನು ಕೂಡ ತಡೆಗಟ್ಟಬಹುದು. ಯಾವುದೇ ಹಣ್ಣಿನ ತೋಟದಿಂದ ಹಿಡಿದು ಕಬ್ಬು ಬೆಳೆಯವರೆಗೆ ಅಲ್ಲಲ್ಲಿ ಮಧ್ಯೆ ಅಥವಾ ಬದುವಿಗೂಂಟ ಚೆಂಡು ಹೂವಿನ ಗಿಡ ಇರುವಂತೆ ನೋಡಿಕೊಳ್ಳಿ. ಆವಾಗಾವಾಗ ಹೂವು ಮಾರಿ ಗಳಿಸುವ ಆದಾಯಕ್ಕಿಂತ ಇದು ನಿಮ್ಮ ಮುಖ್ಯ ಬೆಳೆಗೆಮಾಡುವ ಸಹಾಯ ದೊಡ್ಡದು.

3) ಬೇವು (Neem) :
ಬೇವಿನ ಪ್ರತಿಯೊಂದು ಭಾಗವೂ ಉಪಯುಕ್ತವೆಂದು ಕಂಡುಬಂದಿದೆ. ಬೇವಿನ ಮರವು ವಾತಾವರಣದಲ್ಲಿನ ಕಲುಷಿತ ಹವೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಹೀರಿಕೊಳ್ಳುವುದರಿಂದ ಬೇವು ಪರಿಸರ ಶುದ್ಧೀಕರಣದಲ್ಲಿಯೂ ಮಹತ್ವದ ಪಾತ್ರವಹಿಸುತ್ತದೆ.
ಕೃಷಿಯಲ್ಲಿ ಬೇವಿನ ಉಪಯೋಗ ಹೊಸದೇನಲ್ಲ. ಕೃಷಿಯಲ್ಲಿ ಗೊಬ್ಬರದ ಬಳಕೆ ಪ್ರಾರಂಭವಾದಾಗಿನಿಂದ ಒಂದಲ್ಲ ಒಂದು ವಿಧದಲ್ಲಿ ಬೇವನ್ನು ಬಳಸಲಾಗುತ್ತಿದೆ. ಬೇವಿನಹಿಂಡಿಯು ಸಸ್ಯಜನ್ಯವಾಗಿರುವುದರಿಂದ ಮಣ್ಣಿನ ಕಣರಚನೆ ಸುಧಾರಿಸುವಲ್ಲಿ ಹಾಗೂ ಜೈವಿಕ ಕ್ರಿಯೆ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಬೇವಿನ ಹಿಂಡಿಯು ಶೇ.4.5 ಸಾರಜನ, ಶೇ 1.1 ರಂಜಕ ಹಾಗೂ ಶೇ 1.5 ಪೊಟ್ಯಾಷ್ ಅಂಶಗಳನ್ನು ಹೊಂದಿದೆ. ಬೇವಿನ ಎಲೆ, ಮತ್ತು ಬೀಜಗಳನ್ನು ಸಾವಯವ ಗೊಬ್ಬರ ಅಥವಾ ಕೀಟನಾಶಕ ವಾಗಿ ಉಪಯೋಗಿಸುತ್ತಾರೆ. ಒಂದು ಬೇವಿನ ಮರ ವರ್ಷಕ್ಕೆ ಸುಮಾರು 50 ಕೆ.ಜಿ.ಯಷ್ಟು ಹಣ್ಣು ಕೊಡುತ್ತದೆ. ಇವುಗಳನ್ನು ಗೊಬ್ಬರದ ಜೊತೆ ಬೆರೆಸಬಹುದು, ಇಲ್ಲವೇ ಜಜ್ಜಿ ನೀರಲ್ಲಿ ನೆನೆಸಿ ಕೀಟನಾಶಕವಾಗಿ ಬಳಸಬಹುದು. ಬೇವು ಲೇಪಿತ ಯೂರಿಯಾಗೂ ಇದು ಬೇಕು, ಹಲವಾರು ಕೀಟನಾಶಕ ತಯಾರಿಸಲು, ಪೇಸ್ಟು – ಸೋಪ್ ತಯಾರಿಸಲು ಬೇವು ಅಗತ್ಯ, ವರ್ಷಕ್ಕೊಮ್ಮೆ ಇದರ ಬೀಜ ಶೇಖರಣೆ ಮಾಡಿ ಮಾರಿದರೂ ಸಾಕಷ್ಟು ಉಪ ಆದಾಯ ಸಿಗುತ್ತದೆ. ಆದ್ದರಿಂದ ಜಮೀನಿನ ಸುತ್ತಲೂ ಬೇವು ಬೆಳೆಯುವದು ಸೂಕ್ತ.

4) ನುಗ್ಗೆ (Drumstick) :
ನೀವು ನಿಮ್ಮ ಜಮೀನಿನಲ್ಲಿ ಭಾಗ್ಯ ತಳಿಯ ನುಗ್ಗೆ ನಾಟಿ ಮಾಡಿದ್ದೇ ಆದಲ್ಲಿ ಇದು ವರ್ಷದ ಹನ್ನೆರಡೂ ತಿಂಗಳು ಕಾಯಿ ಬಿಡುತ್ತದೆ. ನಿರಂತರವಾಗಿ ಮನೆಬಳಕೆಗೆ ಹಾಗೂ ಕಾಯಿಗಳನ್ನು ಮಾರಿದರೆ ನಿರಂತರ ಉಪ ಆದಾಯ ಕೂಡ ಸಿಗುತ್ತದೆ. ನುಗ್ಗೆ ಎಲೆಗಳನ್ನು ಪಲ್ಯ ಮಾಡಲು ಬಳಸಬಹುದು ಜೊತೆಗೆ ದನಗಳಿಗೆ ಮೇವಾಗಿ ಬಳಸಬಹುದು. ಹಸು ಅಥವಾ ಮೇಕೆಗಳು ಇದನ್ನು ಇಷ್ಟಪಟ್ಟು ತಿನ್ನುತ್ತವೆ. ಜಾನುವಾರುಗಳ ಜೀರ್ಣಶಕ್ತಿ ಹೆಚ್ಚಾಗಿ, ಹಾಲಿನ ಪ್ರಮಾಣ ಹೆಚ್ಚಿಸಲು ನುಗ್ಗೆ ಸಹಕಾರಿ.

-ಎಸ್ ಕೆ ಪಾಟೀಲ್
(ಕೃಷಿ, ಪಶು ಸಂಗೋಪನೆ ಹಾಗೂ ಇನ್ನಿತರ ಮಾಹಿತಿಗೆ ನಮ್ಮ ಮಾಧ್ಯಮ ಪೇಜ್ ಲೈಕ್ ಮಾಡಿ)

No comments:

Post a Comment