Thursday, August 31, 2017

ಬರಮುಕ್ತ ನಾಡು

ಏನೀ... ನಿಮ್ಮಿಬ್ಬರ
ಮೊಗದಲಿ ಮಂದಹಾಸ
ಕಾಣುತಿಲ್ಲವೆ.. ಮಣ್ಣ
ಮಕ್ಕಳು ಅನುಭವಿಸುತಿರುವ
ವನವಾಸ
ಅಗುಳಗುಳ ಖೂಳಿಗೂ
ಪಡುತ್ತಿರುವವರಲ್ಲ ಹರಸಾಹಸ
ದುಡಿದುಣ್ಣುವ ಮಕ್ಕಳ ಮೇಲೆ
ಏಕೀ.. ನಿಮ್ಮಿಬ್ಬರ... ಅಟ್ಟಹಾಸ

ಉತ್ತು ಬಿತ್ತಿದ ಬೀಜಗಳೆಲ್ಲ
ಸುಡು ಸೂರ್ಯನ ತಾಪದ ಪಾಲು
ಬತ್ತಿದ ಕೆರೆಯ ದಂಡೆಗುಂಟ ನೀರಿಲ್ಲದೆ
ಪ್ರಾಣಬಿಟ್ಟ ಪಕ್ಷಿ ಸಂಕುಲಗಳ ಸಾಲು
ನಿನ್ನ ಹನಿ ಹನಿಯ ಅಮೃತವು
ಬಿತ್ತುವವನಿಗಾಗುವುದಲ್ಲ ಊರುಗೋಲು
ಮಾಡದಿರು ನಿನ್ನನೆ ನಂಬಿ
ಬದುಕುತಿರುವವರ ಬಾಳು ಬುಡಮೇಲು

ದಯೆತೋರಿ ಹರಿಸಿಬಿಡು ಗಂಗೆಯ
ಹಸಿರಾಗಿ ನಳನಳಿಸು ಜಗದ ಸಂತೆಯ
ತೀರಿಸಬೇಕಿದೆ ತುಂಬಿದ ಗಂಗವ್ವನೊಡಲ
ಬಾಗಿನ ಬಯಕೆಯ
ನಿಗೀಸು ನೀರು.. ನೀರೆಂದು ಬಿಕ್ಕುತಿರುವ
ಜೀವ ಸಂಕುಲದ ಬಾಯಾರಿಕೆಯ
ತಲೆ ಎತ್ತಿ ಬದುಕುವವರೆ.‌‌.. ಹೊಸೆದು
ಕೊಳ್ಳದಿರಲಿ ತಮ್ಮ ಕೊರಳಿಗೆ ಕುಣಿಕೆಯ

ಕಾಲ ಮಿಂಚುವ ಮುನ್ನವೇ.. ಕಣ್ತೇರೆದು
ನೋಡು
ಗಂಗೆಯ ಧರಣಿಗೆ ಹರಿಸಿ ಹಾಡು
ಮುಕ್ತಿಯು ಸಿಗಲಿ ಬದುಕುತಿರುವ
ನಾಯಿ ಪಾಡು
ನಿನ್ಕರುಣೆಯಿಂದ ಕಟ್ಟಬೇಕಿದೆ
ಹೊಸದೊಂದು ಗೂಡು
ಕೊಟ್ಟ ಭಿಕ್ಷೆಯಲಿ ಬಲಪಡಿಸಿ ರಟ್ಟೆಯ
ಕಟ್ಟಬೇಕಿದೆ ಬರಮುಕ್ತ ನಾಡು

Tuesday, August 29, 2017

ಕಾವಿಗೂ... ಕಾವು ಬೇಕೆ ?

ಕಾವಿಗೂ... ಕಾವು ಬೇಕೆ ?
ಆಧ್ಯಾತ್ಮದ ಯಜ್ಞಕುಂಡಕ್ಕೂ
ಕಾಮದ ತುಪ್ಪ ಬೇಕೆ ?
ನಿಷ್ಕಲ್ಮಷ ಮನದಿ ದೇವರಡಿದಾವರೆಗಳ
ಪೂಜೆಗೆ ಸಲ್ಲಬೇಕಾಗಿದ್ದ ಹೂವುಗಳೆಲ್ಲ..
ಕೊಂದ ವ್ಯಾಘ್ರದ ಚರ್ಮದ ಮೇಲೆ
ಕುಳಿತು ಶಾಂತಿ ಮಂತ್ರವ ಬೋಧಿಸುವವರ
ಶಯನದಲಿ ಅಹಿಂಸೆಯಿಂದ ನಲಗುತಿವೆಯಲ್ಲ ....

ಕಾಲನ ಗರ್ಭದಲಿ ಅಬಲೆಯರದದೇಷ್ಟೊ
ಕೂಗುಗಳು ಹೂತು ಹೋಗಿವೆಯಲ್ಲ
ಕಾಮುಕರ ಕೋಣೆಯಲಿ ನತದೃಷ್ಟೆಯರ
ಮೈ ಮನಗಳು ಇನ್ನೂ ಮುದುಡುತಿಹುವೆಯಲ್ಲ
ಹುಲಿಯ ವೇಷದ ನರಿಯ ಮನಸುಗಳು
ಧರ್ಮನಿಷ್ಠೆಯ ಶರಣರನು ಭಕ್ತರ ಅನುಮಾನದ
ಅಲಗು ಕಣ್ಣಿಗೆ ನೂಕುತಿಹುವಲ್ಲ

ರಂಭೆ.. ಊರ್ವಶಿ.. ಮೇನಕೆ.. ತಿಲೋತ್ತಮೆ
ಯಂತಹ ಸುರಲೋಕದ ವೇಶ್ಯೆಯರು
ಋಷಿಮುನಿಗಳ ತಪವ ಭಂಗಗೊಳಿಸಿ.. ಅವರ
ಮನಕಾಮನೆಯ ಬಡಿದೆಬ್ಬಿಸಿ.. ಬದುಕಿನ
ಮಹೋನ್ನತ ಗುರಿಯ ತಪಕೆ ತಮ್ಮ ಕಾಮದ
ಕಿಡಿಯ ಸೊಕಿಸಿ ಹೊತ್ತಿ ಉರಿಸಿಬಿಡುತ್ತಿದ್ದರಂದು..

ಮನದ ಶಾಂತಿಗಾಗಿ... ಬಾಳ ಜಂಜಾಟಗಳ
ಗಂಟುಗಳ ವಿಮುಕ್ತಿಗಾಗಿ ಶರಣೆಂದು ಚರಣಕೆ
ಶರಣಾದವರಸಹಾಯಕತೆಯ ಹಾಸಿಗೆ ಮಾಡಿಕೊಂಡು
ದೇಹದ ತುಂಬ ಮಾಸದ ಮುಳ್ಳು ಗುರುತುಗಳ
ಮೂಡಿಸಿ.. ಲೌಕಿಕ ಅಲೌಕಿಕಗಳ ಸಹವಾಸವೆ 
ಸಾಕೆಂದು ಸಾಯಲು ಸಿದ್ದಗೊಳ್ಳುವಂತೆ ಮಾಡುವ
ಕಾಮಾ...ಸ್ತಿಕರೆ.. ಸ್ವಲ್ಪವಾದರೂ ಅಂತರಾತ್ಮದ
ಭಯವಿಲ್ಲವೆ ?

ಬದುಕಿದು ನಶ್ವರವೆಂದು ಸಾರುವವರು
ಸಾವಿರಾರು ಕೋಟಿಯ ಆಸ್ತಿಯ ಹೊಂದುವರು
ಹೆಣ್ಣು... ಹೊನ್ನು.. ಮಣ್ಣುಗಳೆಂಬ ಮೋಹವ
ತೊಡೆಯಲು ಬಯಲಿಗೆ ಬಂದು...ಮಣ್ಣನು
ಗಳಿಸಿ..ಮಣ್ಣಲಿ ಹೊನ್ನಿನ ಹಾಸಿಗೆಯ ಹಾಸಿ
ಮುಕ್ತಿಯ ನೆಪದಲಿ ಹೆಣ್ಣನು ಹರಿದು ಮುಕ್ಕುವರಲ್ಲ

ಇಂಥ ಧುರುಳರ ಪೂಜಿಸಬೇಕೆ..?
ಇವರ ದುರ್ಮಾರ್ಗವ ಅನುಸರಿಸಬೇಕೆ...?
ತಪ್ಪಿನ ಶಿಕ್ಷೆಗೆ ಒಳಗಾದವರನ್ನು ಅಪ್ಪಿಕೊಂಡು
ಪರರ ಆಸ್ತಿಯನ್ನು ಸುಟ್ಟು ಹಾಕುವುದು ಸರಿಯೆ..?
ನ್ಯಾಯಾಂಗದ ಮುಂದೆ ಎಲ್ಲರೂ ಒಂದೆ ಎಂಬ
ಉಕ್ತಿಗೆ.. ಅಗೌರವ ತೋರಿದಂತಾಗುವುದಿಲ್ಲವೆ..?
ಎಚ್ಚೆತ್ತುಕೊಳ್ಳುವುದಾದರೂ ಯಾವಾಗ..?
ಕಾವಿಯ ಕಾವು ನಮ್ಮ ಮನೆಯ ಬಾಗಿಲನ್ನು
ತಾಕುವವರೆಗೂ ಕಾಯಬೇಕೇನೊ...?

Monday, August 28, 2017

ಬೆಂಕಿಯ ಹಚ್ಚಿ

ಕುಂತಿದ್ನೆಲ್ಲ... ಗೆಳತಿ ನೀ..
ಬರುವ ದಾರಿಯ ನೆಚ್ಚಿ
ಹೊರಟ ಹೋದೆಯಲ್ಲ ನಮ್ಮ
ಪ್ರೀತಿಯ ತೋಟಕ್ಕ.. ಬೆಂಕಿಯ ಹಚ್ಚಿ

ಎಷ್ಟಂತ... ತಡೆಹಿಡಿಲೇ..ಮಂದಿಮುಂದ
ಎದಿ ದುಃಖಾನ... ಅವುಡಗಚ್ಚಿ
ಎದುರಿಗೆ ಅತ್ತಂಗ ಮಾಡಿ.. ನಗ್ತಾರಲ್ಲೆ
ಎಲ್ಲಾ.. ಮನಿ ಬಾಗಿಲ ಮುಚ್ಚಿ

ನಿನ್ನ ನಂಬಿ ಕಟ್ಟಿದ್ನಲ್ಲೆ...
ಎಷ್ಟೋ ಆಶಾಗೋಪುರಗಳ... ಹುಚ್ಚಿ
ಕಂಡ ಕನಸಿನ ಕನ್ನಡಿ ಒಡ್ದ...
ನಕ್ಕೊತ ನಿಂತಿಯಲ್ಲ... ಮನಸ್ಸಿಗೆ
ಮುಳ್ಳನ್ನ ಚುಚ್ಚಿ

ಮಾಡಿದೆಲ್ಲ ಮಾಯದ ಗಾ...ಯಾನ
ವಾಸಿನರ.. ಹೆಂಗ್ ಮಾಡ್ಕೊಲಿ ನಾನು
ಪ್ರೀತಿ ಇಲ್ಲದ ಮುಲಾಮ ಹಚ್ಚಿ
ಬದುಕೊದು ಆಗೋದಿಲ್ಲಿನ್ನ ಹುಡುಗಿ
ಇಷ್ಟು ದಿವಸ ಬದುಕಿದ್ದ ಹೆಚ್ಚಾಗಿತ್ತು
ನೀ ಕೊಟ್ಟ ಮಾತನ್ನ ಮೆಚ್ಚಿ

ನಿಂಗೇನ ಗೊತ್ತೈತೊ... ಬೆಡಗಿ ನಿನ್ನ
ನೆಪ್ಪುಗಳು ಕೊಲ್ಲಾಕ ಹತ್ತಾವ ನನ್ನ
ಹಗಲಿರುಳು ಕೊಚ್ಚಿ... ಕೊಚ್ಚಿ...
ಕಿವಿಯೊಳಗ ಕುಂತ ನಗಾಡೋ.. ನಿನ್ನ
ನಗುವಿನ ಸದ್ಧಿಗೆ ಈರುಳೆಲ್ಲ
ಬಿಳ್ತೀನಿ ನಾ.. ಬೆಚ್ಚಿ ಬೆಚ್ಚಿ

ಕಡಿಗೊಂದ ಮಾತ ಕೇಳ್ತಿನಿ..
ಹಿಂಗ ನೀ ಬಿಟ್ಟ ಹೋಗೊದಾಗಿದ್ರ..
ಯಾಕರ ಮಳ್ಳ ಮಾಡೀದಿ ಮನಸನ್ನ
ಮಾತಿನ ಬೆಣ್ಣಿ ಹಚ್ಚಿ.. ಹಚ್ಚಿ..
ಬಿಟ್ಟ ಹೋದೆಲ್ಲ.. ನಿನೀಗ... ದುರ್ಗವ್ವನ
ಬಲಿಗೆ ಬಿಟ್ಟ ಕ್ವಾಣದ್ಹಂಗ.. ನಿನೀಲ್ಲದ
ನೋವಿನ ಬ್ಯಾನಿ ಸುಡ್ಲಾಕ ಹತ್ತೈತಿ ನನ್ನ ಕಿಚ್ಚಿ.. ಕಿಚ್ಚಿ..

ಬೆಂಕಿಯ ಹಚ್ಚಿ

ಕುಂತಿದ್ನೆಲ್ಲ... ಗೆಳತಿ ನೀ..
ಬರುವ ದಾರಿಯ ನೆಚ್ಚಿ
ಹೊರಟ ಹೋದೆಯಲ್ಲ ನಮ್ಮ
ಪ್ರೀತಿಯ ತೋಟಕ್ಕ.. ಬೆಂಕಿಯ ಹಚ್ಚಿ

ಎಷ್ಟಂತ... ತಡೆಹಿಡಿಲೇ..ಮಂದಿಮುಂದ
ಎದಿ ದುಃಖಾನ... ಅವುಡಗಚ್ಚಿ
ಎದುರಿಗೆ ಅತ್ತಂಗ ಮಾಡಿ.. ನಗ್ತಾರಲ್ಲೆ
ಎಲ್ಲಾ.. ಮನಿ ಬಾಗಿಲ ಮುಚ್ಚಿ

ನಿನ್ನ ನಂಬಿ ಕಟ್ಟಿದ್ನಲ್ಲೆ...
ಎಷ್ಟೋ ಆಶಾಗೋಪುರಗಳ... ಹುಚ್ಚಿ
ಕಂಡ ಕನಸಿನ ಕನ್ನಡಿ ಒಡ್ದ...
ನಕ್ಕೊತ ನಿಂತಿಯಲ್ಲ... ಮನಸ್ಸಿಗೆ
ಮುಳ್ಳನ್ನ ಚುಚ್ಚಿ

ಮಾಡಿದೆಲ್ಲ ಮಾಯದ ಗಾ...ಯಾನ
ವಾಸಿನರ್ ಹೆಂಗ್ ಮಾಡ್ಕೊಲಿ ನಾನು
ಪ್ರೀತಿ ಇಲ್ಲದ ಮುಲಾಮ ಹಚ್ಚಿ
ಬದುಕೊದು ಆಗೋದಿಲ್ಲಿನ್ನ ಹುಡುಗಿ
ಇಷ್ಟು ದಿವಸ ಬದುಕಿದ್ದ ಹೆಚ್ಚಾಗಿತ್ತು
ನೀ ಕೊಟ್ಟ ಮಾತನ್ನ ಮೆಚ್ಚಿ

ನಿಂಗೇನ ಗೊತ್ತೈತೊ... ಬೆಡಗಿ ನಿನ್ನ
ನೆಪ್ಪುಗಳು ಕೊಲ್ಲಾಕ ಹತ್ತಾವ ನನ್ನ
ಹಗಲಿರುಳು ಕೊಚ್ಚಿ... ಕೊಚ್ಚಿ...
ಕಿವಿಯೊಳಗ ಕುಂತ ನಗಾಡೋ.. ನಿನ್ನ
ನಗುವಿನ ಸದ್ಧಿಗೆ ಈರುಳೆಲ್ಲ
ಬಿಳ್ತೀನಿ ನಾ.. ಬೆಚ್ಚಿ ಬೆಚ್ಚಿ

ಕಡಿಗೊಂದ ಮಾತ ಕೇಳ್ತಿನಿ..
ಹಿಂಗ ನೀ ಬಿಟ್ಟ ಹೋಗೊದಾಗಿದ್ರ..
ಯಾಕರ ಮಳ್ಳ ಮಾಡೀದಿ ಮನಸನ್ನ
ಮಾತಿನ ಬೆಣ್ಣಿ ಹಚ್ಚಿ.. ಹಚ್ಚಿ..
ಬಿಟ್ಟ ಹೋದೆಲ್ಲ.. ನಿನೀಗ... ದುರ್ಗವ್ವನ
ಬಲಿಗೆ ಬಿಟ್ಟ ಕ್ವಾಣದ್ಹಂಗ.. ನಿನೀಲ್ಲದ
ನೋವಿನ ಬ್ಯಾನಿ ಸುಡ್ಲಾಕ ಹತ್ತೈತಿ ಕಿಚ್ಚಿ.. ಕಿಚ್ಚಿ..

Friday, August 25, 2017

ಭಾರ... ಭಾರ

ಮರೆತು ಹೋದ ಅವನ
ನೆನೆದು ಮನವಿದು ಭಾರ
ಅವನ ಕೈ ಬೆರಳುಗಳ ಸ್ಪರ್ಶವಿಲ್ಲದೀ..
ಮುಂಗರುಳುಗಳು
ಇನ್ನೂ ಭಾರ.. ಭಾರ..

Wednesday, August 23, 2017

ನೀನೂ... ದೇವರಾದೆಯಲ್ಲೊ..

ನೀನು ದೇವರಾದೆಯಲ್ಲೊ...ಎಸುಳೆ
ಹನ್ನೊಂದು ಮಾಸಗಳಷ್ಟೇ ಬೆಳಗಿ
ಮಡಿಲಿಗೆ ಮುಳ್ಳನಿಟ್ಟು.. ಆಸೆ ಕಂಗಳಲಿ
ಕಣ್ಣೀರ ಕೆರೆಯ ಕಟ್ಟಿ.. ಕತ್ತಲಿನ ದಿನಗಳ
ಉಳಿಸಿ ಹೋದೆಯಲ್ಲೊ ಕಾಲನ ಕರೆಗೆ ಕರಗಿ

ತುಂಬಿದೆದೆಯಿದು ಬಿಗಿದು... ಮೊಲೆಯ ತೊಟ್ಟಿನಿಂದ
ಅಮೃತವು ಜಿನುಗಿ... ರವಿಕೆಯಲ್ಲ ಹಸಿಯಾಗಿಹುದು
ಉಸಿರಿಡಿದು ಅಳುವ ನಿನ್ನ ಸಂತೈಸಲು
ನನ್ನಜ್ಜಿಯಿಂದ ಕಲಿತ ಜೋಗುಳ ಪದಗಳು
ನೀನಿಲ್ಲದೆ ಉಸಿರುಗಟ್ಟಿವವು....

ಅಪ್ಪ ತಂದಿಟ್ಟ ಗೊಂಬೆಯ ಆಡಿಸಲಿಲ್ಲ.. ಬೀಳಿಸಲಿಲ್ಲ
ಆಡಿಸಿ.. ಬೀಳಿಸಿ ನಕ್ಕು ನಮ್ಮನು ನಗಿಸಲಿಲ್ಲ
ಅಜ್ಜಿ ಮಾಡಿಸಿಟ್ಟ ಕಾಲ್ಗೆಜ್ಜೆಯ ತೊಡಲಿಲ್ಲ.. ನಡೆಯಲಿಲ್ಲ
ತೊಟ್ಟು.. ಓಡಾಡಿ.. ಮನೆಯಂಗಳದ ತುಂಬ
ಕಾಲ್ಗೆಜ್ಜೆಯ ನಾದವ ತುಂಬಿಸುವ ಮೊದಲೆ
ಮರೆಯಾಗಿಬಿಟ್ಟೆಯಲ್ಲೊ... ಮಗುವೆ..

ಎರಡೆರಡು ಬಾರಿ ಹೃದಯಾಘಾತವಾದರೂ..
ನಿನ್ನಜ್ಜನೆದೆಯ ಬಯಲು ನಿನ್ನ ಮುದ್ದು ಪಾದಗಳ
ಹೆಗ್ಗುರುತಿಗಾಗಿ ಕಾಯುತ್ತಿತ್ತಲ್ಲ... ಬಯಲು ಬರೀ..
ಬಯಲಾಗಿಯೇ.. ಉಳಿಯಿತೆಂಬ ಸತ್ಯವು ಗೊತ್ತಾದ
ಮೇಲೆಯೂ ನೀ.. ಬಂದೆ ಬರುವೆ ಎಂಬ ನಂಬಿಕೆಯಿಂದ
ಮಿಡಿಯುತಿಹುದಲ್ಲ

ಮೌನವಾದೆಯಲ್ಲೊ... ಮಗುವೆ ಕಲ್ಲು
ದೇವರ ಹಾಗೆ..ತೊಟ್ಟಿಲು ‌ನಿಂತಿದೆ.. ಜೋಗುಳ
ಕಾದಿದೆ..ಎಣ್ಣೆ ನೀರದು ಆರುತಿದೆ... ನೀನ್ನಳುವ
ಕೇಳದೆ ಮನೆಯ ಮೂಲೆ ಮೂಲೆಯಲೂ..
ಮೌನದ ತಾಂಡವ ನೃತ್ಯವೆ ವಿಜೃಂಭಸಿದೆ...
ಸಂತೈಸುವ ಮಡಿಲು ಬರಿದಾಗಿದೆ... ನೀನ್ನೆನೆದು
ಸುರಿಸುವ ಕಂಬನಿಗೆ ಕೊನೆಯಿಲ್ಲದಾಗಿದೆ...
ದೇವರಾಗಿಬಿಟ್ಟೆಯಲ್ಲೊ..‌ ಮಗುವೆ..
ವಂಶದ ಚಿಗುರು ಚಿಗಿಯುವ ಮೊದಲೆ...

ನನಗೇಕಿ ಬಾಳು

ನನಗೇತಕಿ ಬಾಳು..
ಅರಿಯದಾಯಿತೆ ಜಗವಿದು
ಎನ್ನೆದೆಯ ಗೋಳು... ಅರ್ಥವಿಲ್ಲದ
ದಾರಿಯಲ್ಲಿ ... ಗೊತ್ತು ಗುರಿಯಿಲ್ಲದೆ
ಸಾಗುತಿಹುದಲ್ಲ ಬಾಳು

ಅಪ್ಸರೆಯ ರೂಪವ ತುಂಬಿದಿ ದೇಹಕೆ
ಬುದ್ಧಿಮಾಂದ್ಯತೆಯ ಕೊಡುಗೆಯು
ಯಾರಿಲ್ಲದ ಹೊತ್ತಿನಲಿ ಹೊಂಚು ಹಾಕಿದ
ಹದ್ದಿಗೆ ಬೇಟೆಯಾದ ಹಕ್ಕಿಯಿದು

ಹೂವಾದ ದೇಹವಿದು
ಮಧುಮಂಚಕೆ ಶೃಂಗಾರವಾಗಲಿಲ್ಲ
ಕಾಮದ ಕಾವಿಗೆ ಸಿಕ್ಕು...
ಸುಟ್ಟ ಚಿಟ್ಟೆಯಾದೆನಲ್ಲ

ನನ್ನದಲ್ಲದ ತಪ್ಪಿಗೆ... ಮನೆತನದ
ಮರ್ಯಾದಕ್ಕೆ ಹೆತ್ತವರು ಹೊರ
ದೂಡಿದರಲ್ಲ..
ಹಗಲಿರುಳೆನ್ನದೆ... ಗಂಡು ನಾಯಿಗಳೆನ್ನ
ಕಾಮದ ಹಾಸಿಗೆಯನ್ನಾಗಿಸಿಹರಲ್ಲ

ಬದುಕೆಂದರೇನು....?
ಎಂದರಿಯುವ ಮೊದಲೇ...
ಜಗವರಿಯದ ಕರುಳಿಗೆ.. ಕಣ್ಣೀರನರಿಯದ
ಪಾಪದ ಪಿಂಡವೊಂದು ಕಂಕುಳಲಿ
ಕೂತಿದೆಯಲ್ಲ..

ಎದೆಯು ಬಿಗಿಯುವಷ್ಟು ದಿನಗಳ
ವರೆಗಷ್ಟೇ.. ಇದಕೆ ಉಸಿರು
ರವಿಕೆ ಸಡಿಲಗೊಂಡ ಮೇಲೆ... ಇದರ
ಕೊರಳಿಗೆ ಕುಣಿಕೆ ಹೆಣೆಯುವುದೇನೊ..
ಆ ವಿಧಿ... ನಾನಂತೂ ಅರಿಯೇ..

ತುಂಬಿದ ಸೌಂದರ್ಯದಲರ್ದದಷ್ಟಾದರೂ
ಬುದ್ಧಿಯನ್ನಾದರೂ ತುಂಬಿದ್ದರೆ..
ನನಗಿಂತ ದುರ್ಗತಿ ಬರುತ್ತಿರಲಿಲ್ಲ
ಬಂದರೂ... ಎದುರಿಸಿ ನಿಲ್ಲದೆ
ಸೋಲುತ್ತಿರಲಿಲ್ಲ...

ಏನು ಮಾಡಲಿ..? ಕೊನೆಯದಾಗಿ
ಬಾಳಿನ ದಾರಿ ಗೋಚರಿಸುತ್ತಿಲ್ಲ
ನನಗೆ ಹಸಿವಿನ ಬಯಕೆ ನಿಗ್ತಾಯಿಲ್ಲ
ಏಕೊ.. ಏನೋ... ಸಾವಿಗೆ ಬಾಯಾರಿಕೆ ಆಗ್ತಾಯಿಲ್ಲ

Tuesday, August 22, 2017

ನಂಟು ಅಂಟು ಚು ೪೧೫

ಬರೆಯುವ ಪ್ರತಿ
ಪದಗಳ ಒಳಗೆ
ನಿ ನೀಡಿದ
ನೋವಿನ
ಅಂಟಿದೆ...

ಕಣ್ಣಂಚಲಿ ಜಿನುಗುವ
ಹನಿಗಳಿಗೆ ನಿನ್ನದೆ...
ನೆನಪುಗಳ
ನಂಟಿದೆ...

Sunday, August 20, 2017

ಆತ್ಮಬಂಧು

ಓ.. ಆತ್ಮಬಂಧು ನೀನೆಲ್ಲಿರುವೆ
ಮನದ ದುಗುಡವಿದು ಕೇಳುತಿಲ್ಲವೆ
ನನ್ನ ನೋವುಗಳೆಲ್ಲವು ನಿನಗೆ ಭಾರವೆ ?
ಕೇಳಿಯೂ ಕೇಳದ ಹಾಗಿರುವುದು ತರವೆ

ಎಲ್ಲ ಬಂಧುಗಳ ಬಂಧನವ ಮರೆತು
ನಿನ್ನಲ್ಲಿ ತೊಡಿಕೊಳ್ಳುತ್ತಿರಲಿಲ್ಲವೆ ನನ್ನೆಲ್ಲ ಮಾತು
ಕುಹಕಿಗಳ ಮಾತಿಗೆ ಮನನೊಂದು
ಬಂದಿರುವೆ ನಿನ್ನೆದುರು ಸೋತು
ಅಡಿಗಡಿಗೂ ಅವರಾಡುವ ಮಾತಿಗೆ
ಅಡಿಪಾಯವ ಮಾಡಿಕೊಂಡು ಹಾಕಿದರೆಲ್ಲನ್ನ ಹೂತು

ಓ.. ಬಂದು ತೆರೆಯೊ ಮನದ ದ್ವಾರವನು
ಆಲಿಸೊ.. ಉಸಿರು ನಿಲ್ಲುತಿರುವ ಮಾತುಗಳನು
ವಿಷಮನದವರಾಡುವ ಸೂಜಿ ನುಡಿಗಳನೇದುರಿಸಲು ನೀಡು ಸಂಜೀವಿನಿಯನು

ನಿನ್ನ ಸ್ಪೂರ್ತಿ ನುಡಿಗಳಿಂದಲೆ
ಹತ್ತಬೇಕಿದೆ ಬದುಕ ಬೆಟ್ಟವನು
ಹೊಸೆಯುವವರ ಹತ್ತಿಕ್ಕಿ.. ತಲೆಎತ್ತಿ
ಕಟ್ಟಬೇಕಿದೆ ಒಂದು ಹೊಸಬಾಳನು

ಓ.. ವಿಧಿಯೆ..

ಓ.. ವಿಧಿಯೆ.. ನಿಲ್ಲಿಸದಿರು
ಬದುಕಿನ ಜೋಕಾಲಿ..
ಕರುಳಿಲ್ಲದ ಈ ಕಾಲ್ಬಳ್ಳಿಗೆ
ಮಲಗಿಸಿ ಹಾಡಬೇಕಿದೆ ಲಾಲಿ

ತಂದು ನಿಲ್ಲಿಸಿರುವೆ ಮಧ್ಯದಲಿ
ಸವಾರನಿಲ್ಲದ ಬದುಕಿನ ಬಂಡಿ
ಭಯವಾಗುತಿಹುದು ಭಾರ ಹೊರಲಾರದ ನಡುವು ಕಳಚುವುದೆಲ್ಲೊ..? ಭಾಂದವ್ಯದ ಕೊಂಡಿ

ಬಲವಿಲ್ಲದ ರೆಟ್ಟೆಯ ಹಚ್ಚಿಬಿಟ್ಟು
ಹಸಿವಿನ ಹೊಟ್ಟೆಯ ಕಟ್ಟಿಕೊಟ್ಟೆ
ಸಾವನು ಕಣ್ಮುಚ್ಚಿ ಕುಳ್ಳರಿಸಿಬಿಟ್ಟು
ಕಣ್ಣೀರ ಸವಿಯನು ಸವಿಯಬಿಟ್ಟೆ

ಬಾಳ ಆಶಾಕಿರಣಗಳನ್ನೆಲ್ಲವ ಕಷ್ಟದ
ಕಾರ್ಮೋಡಗಳಲ್ಲಿ ಮರೆಯಾಗಿಸಿ
ದಿನ... ದಿನವು..ಕ್ಷಣ.. ಕ್ಷಣವು ಹಂಬಲಿಸುವಂತೆ
ನೀಡಿದೆಯಲ್ಲ ಹಸಿವೆಯನ್ನು ಹೊರೆಯಾಗಿಸಿ

ಅಲೆಯಲದೇಷ್ಟು ದೂರ... ಸಾಗುವ
ಹಾದಿ ರಹದಾರಿಯಾಗಿರುವಾಗ
ಹೊತ್ತಾದರೂ ಕರೆದೊಯ್ಯಲ್ಹೇಗೆ..ಇವನನು
ಪಿಷ್ಠವಿರದ ಕಾಲುಗಳು ಸೋತಿರುವಾಗ

ಮಾರಿಕೊಳ್ಳಲೆ ನನ್ನೆ... ನಾನು
ಎರಡ್ಹೊತ್ತಿನ ಅಗುಳಿಗಾಗಿ
ಕೊಳ್ಳುವುವರಾದರೂ ಯಾರಿಲ್ಲಿ...?
ಹುಟ್ಟಿಸಿ ಕೈ ಬಿಡುವವರೆ ಎಲ್ಲ ಕಾಮದ ತೀಟೆಗಾಗಿ

ಓ.. ವಿಧಿಯೆ... ಇಲ್ಲೊ.. ಅಲ್ಲೊ...
ನಿಂತಿದ್ದರೆ ಕೂಗಿ ಕರೆದುಬಿಡು
ನಿನ್ನ ಮಡಿಲ ಮಕ್ಕಳಂತೆ ತೆಕ್ಕೆಯಲಿ
ಬರಸೆಳೆದು...‌ ಕಣ್ತೆರಯದ ಜೋಗುಳವ ಹಾಡಿಬಿಡು

Tuesday, August 15, 2017

ನೀ ಬರುವವರೆಗೂ

ನಿನ್ನ ನೆನಪಿನ
ಬಿಸಿಗೆ ಕಾದ ತನುವಿದು
ಬೆವೆತು ಒದ್ದೆಯಾಗಿದೆ
ನೀ ಕಳುಹಿಸಿದ
ಹನಿಗಳಲಿ ದೇಹವಿದು
ತಣಿದು ತಂಪೇರಲಿ
ನೀ.. ಬರುವವರೆಗೂ

ಗುಲಾಬಿ

ನಾ ಕೊಟ್ಟ ಗುಲಾಬಿ
ಕೊನೆಗೂ ನಗುತಿದೆ
ಅವಳ ಮುಡಿಯಲಲ್ಲ
ನನ್ನ ಗೋರಿಯ ಮೇಲೆ

Monday, August 14, 2017

ವಂದೇ ಮಾತರಂ

ಬಿಸಿ..ಬಿಸಿ ನೆತ್ತರನುಂಡು ಹಸಿಯಾಗಿ
ಹದಗೊಂಡ ನೆಲವಿದು..
ಮೀಸೆಯೂ ಮೂಡದ ರುಂಡಗಳ
ತ್ಯಾಗದ ಬಲಿದಾನದಲರಳಿದ ಮಣ್ಣಿದು
ಮಣ್ಣ ಕಣಕಣದಲೂ...ತಾಯಿ..ಮಡದಿ
ಸಹೋದರಿಯವರ ಕಣ್ಣೀರ ಹನಿಗಳ
ಬೇಸಗೊಂಡ ಭೂಮಿಯಿದು..
ಅವರ ಕಪಿಮುಷ್ಟಿಯೊಳು ಬಂಧಿಯಾದ ನಮ್ಮ
ಪಂಜರದ ಹಕ್ಕಿಯ ಬಿಡುಗಡೆಗೆ
ಯೌವ್ವನ..ಕುಂಕುಮ..ಶೀಲವನ್ನೆ
ಧಾರೆಯರೆದ ಪುಣ್ಯಭೂಮಿಯಿದು

ಅರಿವಿಲ್ಲದಾಗಿ ಹೋಯಿತೆ ಇಂದು....
ಬಂಧನದ ಹಕ್ಕಿಯ ಬಿಡುಗಡೆಗಾಗಿ..
ತಮ್ಮೆದೆಗೂಡಿನ ಹಕ್ಕಿಗಳನೆ ಹಾರಿಬಿಟ್ಟವರ
ನಾಳೆಗಳ ಕನಸುಗಳಿಗೆ ರಕ್ಕೆಯ ಕಟ್ಟಿಕೊಟ್ಟವರ
ಮನೆ ಮನಗಳಲು ಸಂತಸದ ದೀಪವ ಹಚ್ಚಿದವರ
ದುಡಿದನ್ನವನುಧರವು ಸಂತೃಪ್ತಗೊಳ್ಳುವಷ್ಟು
ಉಣ್ಣಲು..‌ ಅವಕಾಶಗಳ ಮಾಡಿಕೊಟ್ಟವರ
ಮರೆತು ಮಾತನಾಡುವೆವಲ್ಲ "ಬ್ರೀಟಿಷರ ಕಾಲದಲ್ಲೆ
ಚೆನ್ನಾಗಿತ್ತು " ಎಂದು..

ದುಡಿಯದುಣ್ಣುವವನಿಗೇನು ಗೊತ್ತು.. ಬೆವರಿನ ಬೆಲೆ
ಓದದೆ.. ಅರಿಯದೆ ಮಾತನಾಡುವ ಮೂಢನಿಗೇನು
ಗೊತ್ತು.. ಆಡುವ ಮಾತಿನ ಬೆಲೆ
ತಂದೆಯ ಹಣದಲ್ಲಿ ಮೋಜು ಮಾಡುವ..
ಇನ್ನೊಬ್ಬರನು ತುಳಿದಾದರೂ ಸರಿ ನಾ
ಮೇಲೆರಬೇಕೆಂಬುವ ಹುಚ್ಚು ಹಂಬಲ..
ಪರ ನಾರಿಯರನು ಗೌರವಿಸದೆ.. ಕಾಮದ
ಗೊಂಬೆಗಳಂತೆ ನೋಡುವ.. ನಾವು ಕುಳಿತ
ಮೃಗಜಾತಿ ಚರ್ಮವ ಬಿಟ್ಟೆಳದೆ.. ದಿನವಿಡಿ ಅವರಿವರ
ಕಾಲೆಳೆತದಲೆ ಕಾಲ ಕಳೆಯುತಿರುವ ತಾಂತ್ರಿಕ
ಯುಗದ.. ಯಾಂತ್ರಿಕ ಜನರಿಗೆಂದು ಅರಿವಾದಿತು
ಬಿಡುಗಡೆಯ ಬಲಿದಾನದ ಜೀವಗಳ ಬೆಲೆಯ

ಎಚ್ಚೇತ್ತುಕೊಳ್ಳಬೇಕಿದೆ ನಾವೆಲ್ಲರೂ...
ನಮ್ಮ ಬೇಲಿಯ ದಾಟಿ ನಮ್ಮ ಮಧ್ಯದಲ್ಲಿ
ಬೇರು ಬಿಟ್ಟಿರುವ ಅಕ್ರಮ ವಲಸಿಗರ ಹೊರದಬ್ಬಬೇಕು
ನಮ್ಮ ನೆಲದನ್ನವನುಂಡು ನಮಗೆ ವಿಷ ಕಾರುವ
ತಾಯ್ಗಂಡ ಹುಳುಗಳ ಹೊಸಕಿ ಹಾಕಬೇಕು
ಪದೆ.. ಪದೆ.. ಶಾಂತಿ.. ಕ್ರಾಂತಿಗಳ ಹೆಸರಲಿ
ಧರ್ಮ ಪ್ರಚೋದಕರ.. ಮತಾಂತರಗೊಳಿಸುವವರ
ಗಡಿಪಾರು ಮಾಡಬೇಕು... ಎಲ್ಲದಕ್ಕಿಂತಲೂ
ಬಹು ಮುಖ್ಯವಾಗಿ.. ಇದು ನನ್ನ ಮನೆ.. ನನ್ನ
ಓಣಿ.. ನನ್ನೂರು... ನನ್ನ ರಾಜ್ಯ.. ನನ್ನ ದೇಶ ಎಂದು
ಎದೆಯುಬ್ಬಿಸಿ ನಡೆಯುವ ಛಾತಿ ನಮ್ಮಲಿ ಹೊತ್ತಬೇಕು

ಹೊತ್ತಬೇಕು.. ಹೊತ್ತಿಸಬೇಕು..ತಾಯಿ
ಭಾರತಾಂಬೆಯ ಭೂ ಪಟದಲಿ ಮಿನುಗಿಸಬೇಕು
ವಂದೇ ಮಾತರಂ

Friday, August 11, 2017

ಅರಳಿದ ಕ್ಷಣವೆ

ಕಲಿಯ ಬಂದಿಹೆ ನಾನು
ನಿನ್ನ ಮನಕೆ ನೋವುಂಟು ಮಾಡುವ
ನನ್ನೀ.. ಅಧರಗಳಿಗೆ ಬೆಣ್ಣೆ ಮಾತುಗಳ
ಕಲಿಸಲು
ನನ್ನೆರಡು ತೋಳುಗಳನ್ನು ಇನ್ನಷ್ಟು
ಬಲಪಡಿಸಿ.. ಅಪ್ಪಿದ ನಿನ್ನನು ಬಾಳಲೆಂದು
ಕೈ ಬಿಡದ ಹಾಗೆ ಬಲಪಡಿಸಿಕೊಳ್ಳಲು
ನಿನ್ನಂದಕೆ ಮಾತ ಮುತ್ತುಗಳಷ್ಟೇ ಸಾಕೆ
ತೀರದಾಳದ ಹೊಳೆಯುವ ಮುತ್ತುಗಳ
ನಿನ್ನ ಕೊರಳಿಗೆ ಹಾರವಾಗಿಸಲು ಮುತ್ತುಗಳ
ಹೆಕ್ಕಲು ಬಂದಿರುವೆನು
ನಾವಿಬ್ಬರು ನೆಟ್ಟ ಮಲ್ಲಿಗೆ ಬಳ್ಳಿ ಇನ್ನೆನು
ಮೈ ನೆರೆದು ಮೈ ತುಂಬ ತಾರೆ ಮೊಗ್ಗುಗಳ
ಹೊರಲಿದೆ.. ಎಲ್ಲವ ಅರಳಿಸಿ ದಂಡೆಯ ಕಟ್ಟಿ
ನಿನ್ನ ಮುಡಿಗೆ ಮುಡಿಸಲೆಂದು ಕಾದಿರುವೆ
ಬರುವೆ ನಲ್ಲೆ.. ಮೊಗ್ಗುಗಳರಳಿದ ಕ್ಷಣವೆ..

Thursday, August 10, 2017

ಕಣ್ಣೀರ ಕಾಣಿಕೆ

ಕಣ್ಣ ಕಪಾಟಿನಲಿ ಕವಿತಿದ್ದ ಹನಿಯೊಂದು
ಜಾರಿದೆ.. ನಿನ್ನ ಹೆಸರನೆ ನೆನೆದು
ಮನದಲಿ ಮೆತ್ತಗಿ ಮಲಗಿ ಮುತ್ತಾಗಿದ್ದವನು
ಮಾತಿಲ್ಲದೆ ಮರೆಯಾದೆಯಲ್ಲ
ಮುಸ್ಸಂಜೆಯಲಿ

ಒಲವಲದೇಷ್ಟೊ ಮುತ್ತುಗಳ ಒಟ್ಟಿದ್ದೆ
ಈ ಕಂಗಳಲಿ... ಮರಳಿ
ಬೇಡುತಿರುವೆಯೇನೊ... ವಿರಹದ
ಹನಿಗಳ ನೀಡಿ

ಕಂಗಳು ಕಂಡ ಕನಸುಗಳೆಲ್ಲ ಕಪಟವಾಗಿಸಿ
ಕಹಿಯ ಕಾರವ ಕಣ್ತುಂಬಿಸಿ ಕರಗಿದೆಯಲ್ಲೊ
ಕಾಣದ ಕತ್ತಲಿನ ಕಾಲ್ದಾರಿಯಲಿ
ಕೆಂಬೆಳೆಕೆಂದುಕೊಂಡಿದ್ದೆ
ಕತ್ತಲಲೂ ಕುರುಡಿಯನ್ನಾಗಿಸಿ
ಕೊಟ್ಟಯಲ್ಲೊ ಕಣ್ಣೀರ ಕಾಣಿಕೆಯ

ನಿರಾಸೆಗೊಳ್ಳದಿರು ಮಲ್ಲಿಗೆ

ಬರುತಿರುವೆ ಗೆಳತಿ ನಿನ್ನ ಮಡಿಲಿಗೆ
ಮುತ್ತಿಡಬೇಕಿದೆ ದಾರಿ ಕಾದಿಹ ಕಂಗಳಿಗೆ
ತಂಪಗೈಯ್ಯಬೇಕಿದೆ ಬಿಸಿಯಾದ ಮನಸಿಗೆ

ನಿನ್ನ ಸೇರಲೆಂದೆ ಹೊಸ ಹೊಸ ಕನಸುಗಳ
ಅಲೆಗಳು ನನ್ನ ಮನದಲಿ ಉಕ್ಕುತಿವೆ
ನಿನ್ನೊಡನೆ ಮಾತನಾಡಲೆಂದೆ ನೂರೆಂಟು
ಮಾತುಗಳು ಹಸಿದು ಕೂತಿವೆ

ನಿನ್ನ ಸೇರಲೆಂದು ಹಾತೊರೆದು
ಬರುತಿರಲು...  ದಾರಿಯು ದೂರವೆಂದೆನಿಸಿದೆ
ನೂರಾನೆಗಳ ಬಲವ ಪಡೆದಾದರೂ ಸರಿ
ಬಂದು ಸೇರುವೆ ನಿನ್ನಲ್ಲಿಗೆ..
ಕಾಯುವ ಭರದಲ್ಲಿ... ಸೋತು
ನಿರಾಸೆಗೊಳ್ಳದಿರು ಮಲ್ಲಿಗೆ

ಗಾಯವ ಮಾಸಿಸಿ

ನೀನೆನೊ ಮನಸೊಳು ನಾಟ್ಯವಾಡು
ಎಂದಿರುವೆ..  ಎಂದಾದರು ಆ ಗೆಜ್ಜೆಯ ಸದ್ದುಗಳನೇನಾದರೂ ಆಲಿಸಿರುವೆಯಾ
ಅವುಗಳ ಸದ್ದಲಿ ನನ್ನ ನೋವನು
ಅರಿತಿರುವೆಯಾ...

ನೋಡು ನಿನ್ನಗಲಿಯ ವಿರಹದುರಿಯ
ತಣಿಯಲೆಂದು ತೀರದಲಿ ಕುಳಿತಿರುವೆ
ನಾದರೂ.... ಸಾಗರದಲೆಗಳದೇಷ್ಟು
ತೀರದ ಮರುಳನು ಪದೆ ಪದೆ ಬಂದು
ತಣಿಸಿದರು ತೀರದ ದಾಹದಂತೆ..
ನಿನ್ನ ನೆನಪುಗಳ ಹಸಿಯನ್ನು
ಎಷ್ಟೇ ಒಣಗಿಸಲೆತ್ನಿಸಿದರೂ
ಆರದಾಗಿದೆ..

ಕಣ್ಣೀರ ಮುತ್ತುಗಳನೆ ಸವಿದ
ಈ ಕೆನ್ನೆಗಳು.... ನಿನ್ನ ಸಾಂತ್ವಾನದ
ಬೆರಳುಗಳ ಸ್ಪರ್ಶಕೆ ಕಾದಿವೆ..
ನೀ ನೀಡುವ ಬಿಸಿ ಮುತ್ತಿನ ತಾಪಕೆ
ತಡಪಡಿಸುತಿವೆ...

ಬಾರೋ.... ಒಲವೆ ನಮ್ಮೊಲವ
ದೋಣಿಯನೇರಿ... ನೋವಿನುಬ್ಬರಗಳ
ಸಿಳಿ... ನನ್ನ ಕರೆದೊಯ್ಯಲಾರೆಯಾ..?
ಮನಸಿಗಾದ ಗಾಯವ ಮಾಸಿಸಿ...

Wednesday, August 9, 2017

ಸ್ನೇಹಿತರು

ಸ್ನೇಹಿತರು.. ನಾವು ಸ್ನೇಹಿತರು
ಹೆಗಲಮೇಲೊಂದು.. ಹೆಗಲಿಗೆ ಕೈ ಹಾಕಿ
ಊರ ಬೀದಿ ಹೊಲಗದ್ದೆಗಳ ಉಳಿಸದೆ ಬಾಕಿ
ಹಾದಿಗೆದುರು ಬಿದ್ದವರ ಸೋಲಿನ ಪ್ರಪಾತಕೆ ನೂಕಿ
ಜಾತ್ರೆ ಜಪ್ಪಡಿಗಳಲ್ಲಿ ಕುಣಿದು ಕುಪ್ಪಳಿಸಿ ಕೇಕೆ ಹಾಕಿ
ರಜೆಯ ದಿನಗಳಲ್ಲಿ ಮಜೆಯ ಜೋಕಾಲಿಯ ಜೀಕಿ
ಬದುಕಿನೊಳಗೆ ವಿಸ್ಮಯದ ಕ್ಷಣಗಳ ಕೆತ್ತಿಡುವ ಶಿಲ್ಪಿಗಳು

ಸ್ನೇಹಿತರು... ನಾವು ಸ್ನೇಹಿತರು
ಪರೀಕ್ಷೆಯಲ್ಲಿ ಹಿಂದೆ ಬಿದ್ದವನಿಗೆ ಕಾಫಿ ತೋರಿಸಿ
ಬದುಕಲು ಬೇಕಾಗುವ ಪತ್ರಗಳ ಜಯಿಸಿ
ಜಿಂಕೆ ಕಂಗಳಿಗೆ ಸೋತವನನ್ನು ಬಲೆಯಲ್ಲಿ ಬಿಳಿಸಿ
ಅವನ ಪಾಲಿನ ಒದೆಗಳನ್ನು ನಾವಿಷ್ಟು ಅನುಭವಿಸಿ
ಭಾವನೆಗಳನರಿಯದ ವಾಸ್ತವಲೋಕವ ಎದುರಿಸಿ
ಕೋಮಲಾಂಗನೆಯ ಕೊರಳಿಗೆ ತಾಳಿಯ ಕಟ್ಟಿಸಿ
ಹೀಗೂ ಬದುಕಿ ಬಾಳಬಹುದೆಂಬುದನು ಹೇಳುವೆವು ಸೊಸಿ
ಬರಡಾದ ನೆಲದಲ್ಲೂ ಸಂಜೀವಿನಿಯನ್ನು ಬೆಳೆಯುವ
ಬೆಳೆಗಾರರು

ಸ್ನೇಹಿತರು... ನಾವು ಸ್ನೇಹಿತರು
ಗಾಡಿ ಗುದ್ದಿ ಬಿದ್ದವನಿಗೆ ಆಸ್ಪತ್ರೆಯಲ್ಲಿ ರಕ್ತವ ನೀಡಿ
ಅವನು ಬದುಕಿ ಬರಲೆಂದು ಸಾಮೂಹಿಕ ಪ್ರಾರ್ಥನೆ ಮಾಡಿ
ಕಿವಿಯ ಕೇಳದ ದೇವರು ಅವನ ಉಸಿರನ್ನು ಕಸಿದು
ಗಂಡನಿಲ್ಲದ ಕಷ್ಟಗಳ ಮೂಟೆಯ ಅವಳಿಗೆ ಹೊರೆಸಿ ನಿಲ್ಲಿಸಿಬಿಟ್ಟನು ಅವನ ಮನೆಯ ಗಾಡಿ..
ನಮ್ಮ ಸಂತೋಷದ ಗುಡಿಸಲಿಗೆ ಬೆಂಕಿಯನಿಟ್ಟು
ನಗುತಿರಬಹುದವನು ಹಾಡಿ ಹಾಡಿ
ಅವನೆ ಕೊಟ್ಟ ಬದುಕಿದು ಸೋಲೊಪ್ಪಿಕೊಳ್ಳುವೆವೆ..
ಗೊತ್ತಿರಲಿರ್ಕಿಕ್ಕಿಲ್ಲ ನಾವೆಂತ ಖಿಲಾಡಿ
ಅಪ್ಪಿದೆವು ನೀನೆ ಕೊಟ್ಟ ತಂಗಿಯೆಂದು ಹಾರಾಡಿ
ಹೊಸಬದುಕ ಕಟ್ಟಿಕೊಟ್ಟೆವು ಸಮಾಜದಲ್ಲಿ ಹೋರಾಡಿ
ಎಂತಹ ಕಷ್ಟಗಳ ಭಾರಕ್ಕೂ ಹೆದರದೆ ಸೋಲದಂತ
ಹೆಗಲುಗಳಿವು

ಸ್ನೇಹಿತರು... ನಾವು ಸ್ನೇಹಿತರು
ನಗುವೆವು... ಅಳುವೆವು... ಕಿತ್ತಾಡುವೆವು...
ಒಂದುಗೂಡುವೆವು... ಊರೂರು ಸುತ್ತುವೇವು
ಆಗದೆಂಬುದನೆಲ್ಲವ ಸಾಧಿಸಿ ತೋರಿಸುವೆವು
ಒಬ್ಬನೊಬ್ಬನ ಸಾಧನೆಗಳಿಗೆ ಮೆಟ್ಟಿಲಾಗುವ
ಸ್ನೇಹಿತರು.. ನಾವು ಸ್ನೇಹಿತರು

Tuesday, August 8, 2017

ಕೇಳೆ ನನ್ನೊಳೆ

ಕೇಳೆ ನನ್ನೊಳೆ..

ನೀನಿಲ್ಲದ ಈ ಏಕಾಂತದಲ್ಲಿ
ನಿನ್ನಯ ನೆನಪುಗಳ ನೆನೆದು
ಮೈ ಮರೆಯಬೇಕೆಂದಿದ್ದೆ..

ಏನು ಮಾಡಲಿ...
ನಿನ್ನಂತೆ ನಿನ್ನ ನೆನಪುಗಳು
ಮುನಿದು ಕೂತಿವೆ

ನಿನ್ನ ಮುನಿಸ ಮರೆತು
ಬಾಡಿದ ನೆನಪುಗಳಿಗೆ ನೀರೆರೆದು
ನಾಳೆಯ ಕನಸುಗಳಿಗೆ ಜೀವವ
ತುಂಬಲಾದರೂ ಬರಬಾರದೆ..

ಕೊಲ್ಲುವುದಾದರೆ

ಕೊಲ್ಲುವುದಾದರೆ ಕೊಂದುಬಿಡು
ಮಾತಿನ ತಿವಿತಗಳಿಂದ
ತಳ್ಳುವುದಾದರೆ ತಳ್ಳಿಬಿಡು ನಿನ್ನ ಹೆಸರ
ಹಿಡಿದು ಮತ್ತೆದ್ದು ಬಾರದ ಪ್ರಪಾತದಲಿ

ಕುಡಿಸುವುದಾದರೆ ಕುಡಿಸಿಬಿಡು
ಕಾರ್ಕೋಟವನು ಮಡಿಲಲಿ ಮಲಗಿಸಿಕೊಂಡು
ನಿಲ್ಲಿಸುವದಾದರೆ ನಿಲ್ಲಿಸಿಬಿಡು
ಈ ಉಸಿರನು ಮತ್ತುಸುರದಂತೆ

ನೀಡು ಜಗದ ನೋವುಗಳನೆಲ್ಲವ
ನನಗೆ ಭರಿಸುವೆ ಸಹಿಸುವೆ.... ನಲ್ಲೆ
ಒಂದೆ ಒಂದು ಹನಿ ನಿನ್ನ ಕಣ್ಣಿಂದ
ಜಾರಿದರೂ.. ಎದೆಯ ಬಡಿತವಿದು
ಮತ್ತೆ ಮಿಡಿಯದು

ನಿನ್ನ ಕಣ್ಣ ಬಿಂಬದಲ್ಲಿ ನನ್ನ ಬಿಂಬವೊಂದೆ
ತುಂಬಿರಬೇಕೆ ಹೊರತು ಕಣ್ಣೀರ ಕೊಳವದು
ಕಟ್ಟುವದು ತರವಲ್ಲ ನಾ ಸಹಿಸೊಲ್ಲ

ಮರೆತುಬಿಡು ನಾ ನಾಡಿದ ಮಾತುಗಳ
ಕೊಟ್ಟುಬಿಡು ಉಸಿರು ಬಿಡದೆ ಸವಿ ಮುತ್ತುಗಳ

Monday, August 7, 2017

ಶ್ರಾವಣದ ನೆನಪುಗಳು

ಬೇಡ ಬೇಡವೆಂದರೂ.. ಮತ್ತೆ ಮತ್ತೆ
ನೆನಪಾದವು ಶ್ರಾವಣದ ನೆನಪುಗಳು
ಮರಳಿ ಮರಳಿ ಕರೆದೊಯ್ದವು ಮನಸ್ಸನ್ನು
ಗತಕಾಲದಿ ಕಳೆದ ದಿನಗಳಿಗೆ...

ಜೋಡೆತ್ತಿನ ಬಂಡಿ.. ಎತ್ತುಗಳ ಕೊರಳಿಗೆ
ಕಟ್ಟಿದ ಗಂಟೆಗಳ ಘಳ ಘಳ ನಾದದಿ
ಸಾಗುತಿರಲು.. ಮುದ್ದು ಅಮ್ಮನ ಮಡಿಲಲಿ
ಕುಳಿತು.. ಸಾಲು ಸಾಲು ಬಸಿರು ಗಿಡದಲಿ
ಚಿಲಿಪಿಲಿಗುಟ್ಟುವ ಗಿಳಿ ಹಿಂಡುಗಳ ಕಾಣುತ
ಹಾದಿಯ ಪಕ್ಕದಿ ಬೆಳದ ಶೇಂಗಾ ಹೊಲದಲ್ಲಿ
ಸ್ವಚ್ಛಂದವಾಗಿ ವಿಹರಿಸುತ್ತಿರುವ ಕೊಕ್ಕರೆಗಳು
ಝುಳು ಝುಳೆಂದು ಹರೆಯುವ ಗಂಗಾಧರ
ಹಳ್ಳವ ಮೆಲ್ಲಗೆ ದಾಟಿಕೊಂಡು.... ಕಾಲಕಾಲೇಶ್ವರವ
ಪ್ರವೇಶಿಸಿದರೆ.. ಗುಡ್ಡಗಳ ಇಳಿಜಾರಿನಿಂದ ಸರಸರನೆ
ಹರಿದು ಹೋಗುವ ಹಾವಿನಂತೆ ಚಿಕ್ಕ ಹಳ್ಳವ ದಾಟಿ
ಬಲಕ್ಕೆ ಅಶ್ವತ್ಥ ಗಿಡದ ಕೆಳಗೆ ಬಂಡಿಯ ನಿಲ್ಲಿಸಿ
ಪೂಜೆಗೆಂದು ಎಲ್ಲರೂ ಹೊರಡುವರು..

ಅದೇಷ್ಟು ಗಾಢವಾಗಿ ಬೆಳೆದಿದ್ದವು ಮರಗಿಡಗಳು ಆ
ಮರಗಿಡಗಳ ತುಂಬಾ ಕೆಂಪು ಮಂಗಗಳು..‌.
ಬೆಟ್ಟವ ಹತ್ತಲು ಹೆದರಿಕೆಯಾಗುತ್ತಿತ್ತು ಕೈಯಲ್ಲಿರುವ ಪ್ರಸಾದಗಳನ್ನು ಅವುಗಳು ಕಿತ್ತುಕೊಂಡು ಹೋಗುವುದಕ್ಕೆ
ಹೇಗೊ ಅವರಿವರ ಬೆನ್ನ ಹಿಂದೊ ನಮ್ಮ ಚಹಾದಂಗಡಿಯ
ಕೆಲಸದವರ ಭುಜದ ಮೇಲೊ ಕುಳಿತು ಬೆಟ್ಟವ ಹತ್ತುತ್ತಿದ್ದೇವು
ಜೋಡು ಕಾರ್ತಿಕದ ಕಂಬಗಳು ಕೈ ಬೀಸಿ ಕರೆಯುತ್ತಿದ್ದವು
ಕಳಕಮಲ್ಲಯ್ಯನ ಪೂಜೆಯ ನಂತರ.. ಧುಮ್ಮಿಕ್ಕಿ ಸುರಿಯುತ್ತಿದ್ದ ಅಂತರಗಂಗೆಯ ಕೆಳಗೆ ನಿಂತು.. ತೋಯಿಸಿಕೊಂಡು.. ಅವ್ವನೊಡನೆ ಬಡಿಸಿಕೊಂಡು..
ಅಪ್ಪನೊಡನೆ ಬೈಸಿಕೊಂಡು ನಮ್ಮನ್ನು ಕೆಳಗೆ ಕರೆತರುವುದೆ
ಅವರಿಗೊಂದು ಸಾಹಸವಾಗುತ್ತಿತ್ತು... ಅಂತರಗಂಗೆಯ
ದಾಟಿ ಮುಂದೆ ಬಂದು ವೀರಭದ್ರೇಶ್ವರನ ಮುಂದೆ ನಿಂತು
ಆ ಒಂದು ವಿಹಂಗಮ ನೋಟವ ನೋಡಿದರೆ.. ಆಹಾ..
ನೆನೆದಷ್ಟು ಮನ ಹಸಿಯಾಗುವುದು.. ಹಚ್ಚ ಹಸಿರನೆ ಹೊದ್ದು ಮಲಗಿದ ಹೊಲಗಳು ಗಿಡಮರಗಳಿಂದ ತುಂಬಿ ತುಳುಕುತ್ತಿದ್ದ
ಬೆಟ್ಟ ಗುಡ್ಡಗಳು... ಆ ಗುಡ್ಡಗಳಲ್ಲಿ ಮೇವಿಗಾಗಿ ಅಲೆಯುತ್ತಿದ್ದ ದನಕರುಗಳ ಹಿಂಡು..  ಅಲ್ಲಲ್ಲಿ ಕುರಿಗಳ ಗುಂಪು... ಆಗೊಮ್ಮೆ ಈಗೊಮ್ಮೆ ಜಿಟಿ ಜಿಟಿ ಸುರಿಯುತ್ತಿದ್ದ ಮಳೆ.. ಮಳೆ ಸುರಿದು
ಸರಿದು ಬಿಸಿಲಿನ ಕಿರಣಕೆ ಗಿಡಗಳಲೆಯ ಮೇಲೆ ಕುಳಿತ
ಮಳೆ ಹನಿಗಳ ಮಿಂಚಿನ ನರ್ತನ... ಆಹಾ...ಹಾ..

ಅಬ್ಬಬ್ಬಾ.. ಆ ದಿನಗಳು.. ಕೆಳಗೆ ಬಂದ ತಕ್ಷಣವೆ ಜಡೆಯಂತೆ ಜೋತುಬಿದ್ದ ಬೇರುಗಳ ಹಿಡಿದು ಆಡುತ್ತಿದ್ದ ಜೋಕಾಲಿ
ಅದರ ಹಿಂದೆಯೆ ಇದ್ದ ಭತ್ತದ ಗದ್ದೆಯಲಿ ಯಾರಿಗೂ
ಗೊತ್ತಾಗದ ಹಾಗೆ ಓಡಾಡಿ ಸಸಿಗಳನೆಲ್ಲ ಕಿತ್ತು ತಂದದ್ದು
ನಮ್ಮಜ್ಜ.. ಅವರೆಲ್ಲ ಸ್ನೇಹಿತರು ಆಡುತ್ತಿದ್ದ ಅರ್ಥವಾಗದ
೫೨ ಎಲೆಗಳ ಆಟ.. ಗೆದ್ದವರು ನಮಗೆ ನೀಡುತ್ತಿದ್ದ ಭಕ್ಷಿಸು
ಅದರಲ್ಲಿ ತಂದು ತಿನ್ನುತ್ತಿದ್ದ ಪುಡಿ ಬಜಿ... ಕಾಡಿಸಿ ಪೀಡಿಸಿ
ಮನೆಯವರೊಂದಿಗೆ ಕೊಡಿಸಿಕೊಳ್ಳುತ್ತಿದ್ದ ಆಟದ ಸಾಮಾನುಗಳು... ಪಣತಿ ಸಾಲಿನಲ್ಲಿ ಊಟಕ್ಕೆ ಕುಳಿತವರಿಗೆ
ಉಂಡೆ ಸಂಡಿಗೆ ಮೊಸರು ಚಟ್ನಿ ರೊಟ್ಟಿ ನೀಡುವ ಸಂತೋಷ
ಉಂಡು ಹೊರಡುವಾಗ ಅವರು ನಮಗೆ ನಲ್ಮೆಯಿಂದ
ನೀಡುತ್ತಿದ್ದ ಏಂಟಾಣೆ.. ನಾಲ್ಕಾಣೆಯಿಂದ ಮರುದಿನ
ಶಾಲೆಯಲ್ಲಿ ನಮ್ಮದೆ ದರ್ಬಾರು ಕಾಸಿರುವ ತನಕ..

ಅಬ್ಭಾ...!!! ಅದೇಷ್ಟು ನೆನಪುಗಳು ಬಿಚ್ಚಿದಷ್ಟು ಹೆಚ್ಚಾಗ್ತಾನೆ
ಇದೆ.. ಒಂದು ಕಡೆ ಸಂತೋಷ ಇನ್ನೊಂದೆಡೆ ದುಃಖ..
ನಮಗಿದ್ದ ಆ ಸಂತೋಷ ಸಡಗರ ನಮ್ಮ ಮಕ್ಕಳಿಗಿಲ್ಲವಾಗಿದೆಯಲ್ಲ.... ಕಡೆದು ಹಾಕಿದ ಮರಗಳು
ವಲಸೆ ಹೋದ ಮಂಗಗಳು ಆಧುನಿಕ ಭರಾಟೆಯಲ್ಲಿ ತಲೆ
ಎತ್ತಿರುವ ಅಂಗಡಿಗಳು... ಮಳೆ ಬೆಳೆಯಿಲ್ಲದೆ ಪಾಳು
ಪಾಳಾಗಿ ಮಲಗಿರುವ ಹೊಲಗದ್ದೆಗಳು.. ಒಣಗಿ ನಿಂತ
ಬೆಟ್ಟಗುಡ್ಡಗಳ ಸಸ್ಯರಾಶಿ ಎಲ್ಲವು ತದ್ವಿರುದ್ದ ಆಗಿನದಕ್ಕೂ ಈಗೀನದಕ್ಕೂ... ಗಾಡಿಯಲ್ಲಿ ಹೋದೆವು ಬಂದೆವು
ಯಾಂತ್ರಿಕವಾಗಿ...ಇಂದು ಹಣವಿದೆ ಸುಖವಿಲ್ಲ.. ಅಂದು
ಸುಖವಿತ್ತು.. ಹಣದ ಬಗ್ಗೆ ಚಿಂತೆಯಿರಲಿಲ್ಲ

ಹೊರಟುಬಿಡಿ ನೆನಪುಗಳೆ... ಕಣ್ಣಿಂದ
ನೋವಿನ ಹನಿಗಳು ಜಾರುವ ಮುನ್ನ

ಸವಿ ಕಹಿ ೪೪೧

ಸವಿಯಬೇಕೆಂದಿದ್ದೆ
ಅವಳ
ಅಧರಸುಮಗಳ
ಜೇನ ಸವಿ
ಮುತ್ತಿಟ್ಟಾಗ ಸವಿದದ್ದು
ಕೆಂದುಟಿಗಳಿಗೆ ಹಚ್ಚಿದ್ದ
ಕೆಂಪು ಬಣ್ಣದಾ
ಕಹಿ

ಒಲವೆ ಬಲವೆ

ಗೆಳತಿ..
ಎರಡು ತೋಳೊಳಗೆ ಬಂಧಿಯಾಗಿಬಿಡು
ಬಂದು ಲತೆಯು ಮರವ ತಬ್ಬುವ ಹಾಗೆ

ಮಲಗಿ ಎದೆಯ ಮೇಲೆ ಸುರಿಸೆ ನಿನ್ನೆಲ್ಲ
ದುಃಖದಶ್ರುಗಳನು ಚೂರು ಬಿಡದೆ

ಕಳೆದುಕೊಂಡು ಬಿಡು ನಿನ್ನೆಲ್ಲ ನೋವುಗಳ
ಗಂಗೆಯಲಿ ಭಸ್ಮವನೆಲ್ಲವ ಕರಗಿಸಿದ ಹಾಗೆ

ಇಳಿಸಿಬಿಡು ನಿನ್ನೆದೆಯ ಭಾರವನೆಲ್ಲವ
ನನ್ನೆದೆಯ ಗೂಡಿಗೆ.. ಹೊತ್ತು ಹಗುರಾಗಿಸುವೆ
ನಿನ್ನ ಮನವನು

ಮಾತಿನ ಹಕ್ಕಿಗಳ ರೆಕ್ಕೆಗಳ ಬಿಚ್ಚಿಬಿಡು
ಸ್ವಚ್ಛಂದವಾಗಿ ಹಾರಾಡಿ ಬರಲಿ ನಮ್ಮೊಲವಲಿ

ಮರೆಯದಿರು ಒಲವೆ ನೀ ನನ್ನ ಬಲವೆ
ನೀ ಹೀಗೆ ಅಳುವುದು ನಮ್ಮೊಲವಿಗೆ ತರವೆ

ಸಹೋದರಿಯವರು

ಹೇಗೆ ಮರೆಯಲಿ ಅವರೆಲ್ಲರ  ಪ್ರೀತಿಯ..
ಈ ದಿನವಾದರೂ ನೆನೆಯದೆ ಹೋದರೆ..
ಬಾಳೊಂದು ಅರ್ಧಚಂದ್ರನಂತಾಗದೆ
ಈ ಮುಖಪುಟದಲ್ಲಿ ಬರೆಯುವುದಕ್ಕೂ
ಅರ್ಥವಿಲ್ಲದಂತಾಗದೆ

ಮುಖಪುಟಕ್ಕೆ ಬಂದಾಗ ನನ್ನ ಸಾಲುಗಳಿಗೆ
ಪ್ರೋತ್ಸಾಹಿಸುತ್ತಾ ಬೆಳಸಿದ ಗೀತಾಧರ ಅವರು
ಮರಳಿ ಈ ಪುಟದಿಂದ ನಿರ್ಗಮಿಸುವ ನಿರ್ಧಾರಕ್ಕೆ
ಬಂದಾಗ ತಡೆದು.. ತಾವು ಬರೆದ ಕವನದ
ಸಾಲುಗಳಿಗೆ ಜಗಳವಾಡಿಯಾದರೂ ಸರಿ ಪ್ರತಿ
ಸಾಲುಗಳ ಬರೆಯಿಸಿಕೊಳ್ಳುತ್ತಿದ್ದ ಜಯಾ. ಬಿ. ಶೆಟ್ಟಿ
ಇವರ ನಾ ಹೇಗೆ ಮರೆಯಲಿ

ಸ್ತ್ರೀಯರ ನೋವಿನ ಸಾಲುಗಳಿಗೆ ಸದಾ ಸ್ಪಂದನೆ
ನೀಡಿ ಬೆಳಸಿದ ಸಿ. ಶಶಿಕಲಾ ಅವರು
ಕವನಕ್ಕೆ ಕವನವ ಕಟ್ಟಿ ಎರಡೆ ಎರಡು ತಾಸಿನಲ್ಲಿ
ಮೂವತ್ತೆರಡು ಪ್ರೇಮ ಕವನಗಳನ್ನು ಬರೆಯುವ
ಜುಗಲ್ ಬಂದಿಯನ್ನು ಬರೆಯಿಸಿದ.. ಬರೆಸುತ್ತಿರುವ
ಜಯಲಕ್ಷ್ಮೀ ಸಹೋದರಿಯವರು
ಕವನದ ಸಾಲುಗಳ ಒಳಾರ್ಥವನ್ನು ಅರಿತು
ಹುರಿದುಂಬಿಸುವ ಶರ್ಮೀಳಾ ಶೆಟ್ಟಿಯವರು
ವಾಸ್ತವಿಕ.. ಹೋರಾಟದ ಸಾಲುಗಳಿಗೆ ಮೆಚ್ಚಿ
ತಿದ್ದಿ.. ಅಭಿಪ್ರಾಯವ ನೀಡುವ ಪ್ರವೇಣಿ ಸ್ಪೂರ್ತಿ ಅಕ್ಕನವರು

ಪ್ರತಿ ಕವನದ ಸಾಲುಗಳಲ್ಲೂ ಹೊಸತನವ ಹೆಕ್ಕಿ
ನನ್ನಿಂದಲೂ ಹೊಸತನಕ್ಕಾಗಿ ಮೀಡಿಯುವಂತಹ
ಸಾಲುಗಳ ಬರೆಯುವ ಸುಧಾಕೃಷ್ಣ ಪಾಂಡವಪುರ ಅವರು
ಚುಟುಕಾದರೂ ಸರಿ ಗದ್ಯವಾದರೂ ಸರಿ ಎಂದು ಬರೆದು
ಹಾಕುವ ತ್ರೀವೇಣಿ ಪಾಂಡವಪುರ ಅವರು
ಒಡಹುಟ್ಟಿದನಕ್ಕನಂತೆ ಸಂತೆಯಲ್ಲಿ ಕಾವ್ಯದೂಟದೊಂದಿಗೆ
ಮನೆಯೂಟವನ್ನು ಬಡಿಸಿದ ನಾಗವೇಣಿ ಅವರು
ಚಿತ್ರದೊಂದಿಗೆ ಅದ್ಭುತ ಸಾಲುಗಳ ಕಟ್ಟಿಕೊಡುವ
ಚೈತನ್ಯ ಸಹೋದರಿಯವರು
ದಿನಕ್ಕೆ ಎರಡು ಮೂರು ಕವನಗಳನ್ನು
ಬರೆದು ಹಾಕುವ ಸುರಭಿ ಲತಾ ಅವರು

ಸದಾ ಸೊಗಸಾದ ಸಾಲುಗಳ ಹೊತ್ತು ಬರುವ
ಸುಮಾ ಸಂತೋಷ್ ಸಹೋದರಿಯವರು
ಸುಧಾ..ಸುಮಾ ಸತೀಷ..ಸಾನ್ವಿ ದೇಶಪಾಂಡೆ..
ಶಾರದಾ ಪಾಪು ಬೆಳಿಗ್ಗೆಯಿಂದ ಸಂಜೆವರೆಗೂ ಸದಾ ಕಾಲೆಳೆದು ಗೋಳು ಹೊಯ್ದುಕೊಳ್ಳುವ ಸುರಭಿ ಅವರು
ನಿತ್ಯ ಹಸನ್ಮುಖಿ ಮಂಜುಳಾ ಮೃತ್ಯುಂಜಯ ಸಹೋದರಿಯವರು
ಇಲ್ಲಿ ಹೆಸರು ಹಾಕದೆ ಮರೆತಿದ್ದರೆ ಕ್ಷಮಿಸಿ
ಎಂದು ಕೇಳಿಕೊಳ್ಳುತ್ತಾ
ಎಲ್ಲ ಸಹೋದರಿ ಅಕ್ಕಂದಿರಿಗೆ ರಕ್ಷಾ ಬಂಧನದ
ಶುಭಾಶಯಗಳು
ನಿಮ್ಮ ಬೆಂಬಲ ಆಶೀರ್ವಾದ ಸದಾ ಹೀಗೆ ಇರಲೆಂದು
ಆಶೀಸುತ್ತಾ.. ಆ ದೇವರು ತಮ್ಮೆಲ್ಲರಿಗೂ ಸಿರಿ ಸಂಪತ್ತು
ನೀಡದಿದ್ದರೂ.. ತಾಳಿಯ ಭಾಗ್ಯವನ್ನು ಗಟ್ಟಿಯಾಗಿ
ಬರುವ ದಿನಗಳಲಿ  ಸಂತಸವ ಹೊತ್ತು ಕಳಿಸಲಿ
ಎಂದು ಈ ಮುಖಪುಟದ ಸಹೋದರರ ಪರವಾಗಿ ಬೇಡಿಕೊಳ್ಳುತ್ತೇವೆ