ಬೇಡ ಬೇಡವೆಂದರೂ.. ಮತ್ತೆ ಮತ್ತೆ
ನೆನಪಾದವು ಶ್ರಾವಣದ ನೆನಪುಗಳು
ಮರಳಿ ಮರಳಿ ಕರೆದೊಯ್ದವು ಮನಸ್ಸನ್ನು
ಗತಕಾಲದಿ ಕಳೆದ ದಿನಗಳಿಗೆ...
ಜೋಡೆತ್ತಿನ ಬಂಡಿ.. ಎತ್ತುಗಳ ಕೊರಳಿಗೆ
ಕಟ್ಟಿದ ಗಂಟೆಗಳ ಘಳ ಘಳ ನಾದದಿ
ಸಾಗುತಿರಲು.. ಮುದ್ದು ಅಮ್ಮನ ಮಡಿಲಲಿ
ಕುಳಿತು.. ಸಾಲು ಸಾಲು ಬಸಿರು ಗಿಡದಲಿ
ಚಿಲಿಪಿಲಿಗುಟ್ಟುವ ಗಿಳಿ ಹಿಂಡುಗಳ ಕಾಣುತ
ಹಾದಿಯ ಪಕ್ಕದಿ ಬೆಳದ ಶೇಂಗಾ ಹೊಲದಲ್ಲಿ
ಸ್ವಚ್ಛಂದವಾಗಿ ವಿಹರಿಸುತ್ತಿರುವ ಕೊಕ್ಕರೆಗಳು
ಝುಳು ಝುಳೆಂದು ಹರೆಯುವ ಗಂಗಾಧರ
ಹಳ್ಳವ ಮೆಲ್ಲಗೆ ದಾಟಿಕೊಂಡು.... ಕಾಲಕಾಲೇಶ್ವರವ
ಪ್ರವೇಶಿಸಿದರೆ.. ಗುಡ್ಡಗಳ ಇಳಿಜಾರಿನಿಂದ ಸರಸರನೆ
ಹರಿದು ಹೋಗುವ ಹಾವಿನಂತೆ ಚಿಕ್ಕ ಹಳ್ಳವ ದಾಟಿ
ಬಲಕ್ಕೆ ಅಶ್ವತ್ಥ ಗಿಡದ ಕೆಳಗೆ ಬಂಡಿಯ ನಿಲ್ಲಿಸಿ
ಪೂಜೆಗೆಂದು ಎಲ್ಲರೂ ಹೊರಡುವರು..
ಅದೇಷ್ಟು ಗಾಢವಾಗಿ ಬೆಳೆದಿದ್ದವು ಮರಗಿಡಗಳು ಆ
ಮರಗಿಡಗಳ ತುಂಬಾ ಕೆಂಪು ಮಂಗಗಳು...
ಬೆಟ್ಟವ ಹತ್ತಲು ಹೆದರಿಕೆಯಾಗುತ್ತಿತ್ತು ಕೈಯಲ್ಲಿರುವ ಪ್ರಸಾದಗಳನ್ನು ಅವುಗಳು ಕಿತ್ತುಕೊಂಡು ಹೋಗುವುದಕ್ಕೆ
ಹೇಗೊ ಅವರಿವರ ಬೆನ್ನ ಹಿಂದೊ ನಮ್ಮ ಚಹಾದಂಗಡಿಯ
ಕೆಲಸದವರ ಭುಜದ ಮೇಲೊ ಕುಳಿತು ಬೆಟ್ಟವ ಹತ್ತುತ್ತಿದ್ದೇವು
ಜೋಡು ಕಾರ್ತಿಕದ ಕಂಬಗಳು ಕೈ ಬೀಸಿ ಕರೆಯುತ್ತಿದ್ದವು
ಕಳಕಮಲ್ಲಯ್ಯನ ಪೂಜೆಯ ನಂತರ.. ಧುಮ್ಮಿಕ್ಕಿ ಸುರಿಯುತ್ತಿದ್ದ ಅಂತರಗಂಗೆಯ ಕೆಳಗೆ ನಿಂತು.. ತೋಯಿಸಿಕೊಂಡು.. ಅವ್ವನೊಡನೆ ಬಡಿಸಿಕೊಂಡು..
ಅಪ್ಪನೊಡನೆ ಬೈಸಿಕೊಂಡು ನಮ್ಮನ್ನು ಕೆಳಗೆ ಕರೆತರುವುದೆ
ಅವರಿಗೊಂದು ಸಾಹಸವಾಗುತ್ತಿತ್ತು... ಅಂತರಗಂಗೆಯ
ದಾಟಿ ಮುಂದೆ ಬಂದು ವೀರಭದ್ರೇಶ್ವರನ ಮುಂದೆ ನಿಂತು
ಆ ಒಂದು ವಿಹಂಗಮ ನೋಟವ ನೋಡಿದರೆ.. ಆಹಾ..
ನೆನೆದಷ್ಟು ಮನ ಹಸಿಯಾಗುವುದು.. ಹಚ್ಚ ಹಸಿರನೆ ಹೊದ್ದು ಮಲಗಿದ ಹೊಲಗಳು ಗಿಡಮರಗಳಿಂದ ತುಂಬಿ ತುಳುಕುತ್ತಿದ್ದ
ಬೆಟ್ಟ ಗುಡ್ಡಗಳು... ಆ ಗುಡ್ಡಗಳಲ್ಲಿ ಮೇವಿಗಾಗಿ ಅಲೆಯುತ್ತಿದ್ದ ದನಕರುಗಳ ಹಿಂಡು.. ಅಲ್ಲಲ್ಲಿ ಕುರಿಗಳ ಗುಂಪು... ಆಗೊಮ್ಮೆ ಈಗೊಮ್ಮೆ ಜಿಟಿ ಜಿಟಿ ಸುರಿಯುತ್ತಿದ್ದ ಮಳೆ.. ಮಳೆ ಸುರಿದು
ಸರಿದು ಬಿಸಿಲಿನ ಕಿರಣಕೆ ಗಿಡಗಳಲೆಯ ಮೇಲೆ ಕುಳಿತ
ಮಳೆ ಹನಿಗಳ ಮಿಂಚಿನ ನರ್ತನ... ಆಹಾ...ಹಾ..
ಅಬ್ಬಬ್ಬಾ.. ಆ ದಿನಗಳು.. ಕೆಳಗೆ ಬಂದ ತಕ್ಷಣವೆ ಜಡೆಯಂತೆ ಜೋತುಬಿದ್ದ ಬೇರುಗಳ ಹಿಡಿದು ಆಡುತ್ತಿದ್ದ ಜೋಕಾಲಿ
ಅದರ ಹಿಂದೆಯೆ ಇದ್ದ ಭತ್ತದ ಗದ್ದೆಯಲಿ ಯಾರಿಗೂ
ಗೊತ್ತಾಗದ ಹಾಗೆ ಓಡಾಡಿ ಸಸಿಗಳನೆಲ್ಲ ಕಿತ್ತು ತಂದದ್ದು
ನಮ್ಮಜ್ಜ.. ಅವರೆಲ್ಲ ಸ್ನೇಹಿತರು ಆಡುತ್ತಿದ್ದ ಅರ್ಥವಾಗದ
೫೨ ಎಲೆಗಳ ಆಟ.. ಗೆದ್ದವರು ನಮಗೆ ನೀಡುತ್ತಿದ್ದ ಭಕ್ಷಿಸು
ಅದರಲ್ಲಿ ತಂದು ತಿನ್ನುತ್ತಿದ್ದ ಪುಡಿ ಬಜಿ... ಕಾಡಿಸಿ ಪೀಡಿಸಿ
ಮನೆಯವರೊಂದಿಗೆ ಕೊಡಿಸಿಕೊಳ್ಳುತ್ತಿದ್ದ ಆಟದ ಸಾಮಾನುಗಳು... ಪಣತಿ ಸಾಲಿನಲ್ಲಿ ಊಟಕ್ಕೆ ಕುಳಿತವರಿಗೆ
ಉಂಡೆ ಸಂಡಿಗೆ ಮೊಸರು ಚಟ್ನಿ ರೊಟ್ಟಿ ನೀಡುವ ಸಂತೋಷ
ಉಂಡು ಹೊರಡುವಾಗ ಅವರು ನಮಗೆ ನಲ್ಮೆಯಿಂದ
ನೀಡುತ್ತಿದ್ದ ಏಂಟಾಣೆ.. ನಾಲ್ಕಾಣೆಯಿಂದ ಮರುದಿನ
ಶಾಲೆಯಲ್ಲಿ ನಮ್ಮದೆ ದರ್ಬಾರು ಕಾಸಿರುವ ತನಕ..
ಅಬ್ಭಾ...!!! ಅದೇಷ್ಟು ನೆನಪುಗಳು ಬಿಚ್ಚಿದಷ್ಟು ಹೆಚ್ಚಾಗ್ತಾನೆ
ಇದೆ.. ಒಂದು ಕಡೆ ಸಂತೋಷ ಇನ್ನೊಂದೆಡೆ ದುಃಖ..
ನಮಗಿದ್ದ ಆ ಸಂತೋಷ ಸಡಗರ ನಮ್ಮ ಮಕ್ಕಳಿಗಿಲ್ಲವಾಗಿದೆಯಲ್ಲ.... ಕಡೆದು ಹಾಕಿದ ಮರಗಳು
ವಲಸೆ ಹೋದ ಮಂಗಗಳು ಆಧುನಿಕ ಭರಾಟೆಯಲ್ಲಿ ತಲೆ
ಎತ್ತಿರುವ ಅಂಗಡಿಗಳು... ಮಳೆ ಬೆಳೆಯಿಲ್ಲದೆ ಪಾಳು
ಪಾಳಾಗಿ ಮಲಗಿರುವ ಹೊಲಗದ್ದೆಗಳು.. ಒಣಗಿ ನಿಂತ
ಬೆಟ್ಟಗುಡ್ಡಗಳ ಸಸ್ಯರಾಶಿ ಎಲ್ಲವು ತದ್ವಿರುದ್ದ ಆಗಿನದಕ್ಕೂ ಈಗೀನದಕ್ಕೂ... ಗಾಡಿಯಲ್ಲಿ ಹೋದೆವು ಬಂದೆವು
ಯಾಂತ್ರಿಕವಾಗಿ...ಇಂದು ಹಣವಿದೆ ಸುಖವಿಲ್ಲ.. ಅಂದು
ಸುಖವಿತ್ತು.. ಹಣದ ಬಗ್ಗೆ ಚಿಂತೆಯಿರಲಿಲ್ಲ
ಹೊರಟುಬಿಡಿ ನೆನಪುಗಳೆ... ಕಣ್ಣಿಂದ
ನೋವಿನ ಹನಿಗಳು ಜಾರುವ ಮುನ್ನ
No comments:
Post a Comment