Tuesday, August 29, 2017

ಕಾವಿಗೂ... ಕಾವು ಬೇಕೆ ?

ಕಾವಿಗೂ... ಕಾವು ಬೇಕೆ ?
ಆಧ್ಯಾತ್ಮದ ಯಜ್ಞಕುಂಡಕ್ಕೂ
ಕಾಮದ ತುಪ್ಪ ಬೇಕೆ ?
ನಿಷ್ಕಲ್ಮಷ ಮನದಿ ದೇವರಡಿದಾವರೆಗಳ
ಪೂಜೆಗೆ ಸಲ್ಲಬೇಕಾಗಿದ್ದ ಹೂವುಗಳೆಲ್ಲ..
ಕೊಂದ ವ್ಯಾಘ್ರದ ಚರ್ಮದ ಮೇಲೆ
ಕುಳಿತು ಶಾಂತಿ ಮಂತ್ರವ ಬೋಧಿಸುವವರ
ಶಯನದಲಿ ಅಹಿಂಸೆಯಿಂದ ನಲಗುತಿವೆಯಲ್ಲ ....

ಕಾಲನ ಗರ್ಭದಲಿ ಅಬಲೆಯರದದೇಷ್ಟೊ
ಕೂಗುಗಳು ಹೂತು ಹೋಗಿವೆಯಲ್ಲ
ಕಾಮುಕರ ಕೋಣೆಯಲಿ ನತದೃಷ್ಟೆಯರ
ಮೈ ಮನಗಳು ಇನ್ನೂ ಮುದುಡುತಿಹುವೆಯಲ್ಲ
ಹುಲಿಯ ವೇಷದ ನರಿಯ ಮನಸುಗಳು
ಧರ್ಮನಿಷ್ಠೆಯ ಶರಣರನು ಭಕ್ತರ ಅನುಮಾನದ
ಅಲಗು ಕಣ್ಣಿಗೆ ನೂಕುತಿಹುವಲ್ಲ

ರಂಭೆ.. ಊರ್ವಶಿ.. ಮೇನಕೆ.. ತಿಲೋತ್ತಮೆ
ಯಂತಹ ಸುರಲೋಕದ ವೇಶ್ಯೆಯರು
ಋಷಿಮುನಿಗಳ ತಪವ ಭಂಗಗೊಳಿಸಿ.. ಅವರ
ಮನಕಾಮನೆಯ ಬಡಿದೆಬ್ಬಿಸಿ.. ಬದುಕಿನ
ಮಹೋನ್ನತ ಗುರಿಯ ತಪಕೆ ತಮ್ಮ ಕಾಮದ
ಕಿಡಿಯ ಸೊಕಿಸಿ ಹೊತ್ತಿ ಉರಿಸಿಬಿಡುತ್ತಿದ್ದರಂದು..

ಮನದ ಶಾಂತಿಗಾಗಿ... ಬಾಳ ಜಂಜಾಟಗಳ
ಗಂಟುಗಳ ವಿಮುಕ್ತಿಗಾಗಿ ಶರಣೆಂದು ಚರಣಕೆ
ಶರಣಾದವರಸಹಾಯಕತೆಯ ಹಾಸಿಗೆ ಮಾಡಿಕೊಂಡು
ದೇಹದ ತುಂಬ ಮಾಸದ ಮುಳ್ಳು ಗುರುತುಗಳ
ಮೂಡಿಸಿ.. ಲೌಕಿಕ ಅಲೌಕಿಕಗಳ ಸಹವಾಸವೆ 
ಸಾಕೆಂದು ಸಾಯಲು ಸಿದ್ದಗೊಳ್ಳುವಂತೆ ಮಾಡುವ
ಕಾಮಾ...ಸ್ತಿಕರೆ.. ಸ್ವಲ್ಪವಾದರೂ ಅಂತರಾತ್ಮದ
ಭಯವಿಲ್ಲವೆ ?

ಬದುಕಿದು ನಶ್ವರವೆಂದು ಸಾರುವವರು
ಸಾವಿರಾರು ಕೋಟಿಯ ಆಸ್ತಿಯ ಹೊಂದುವರು
ಹೆಣ್ಣು... ಹೊನ್ನು.. ಮಣ್ಣುಗಳೆಂಬ ಮೋಹವ
ತೊಡೆಯಲು ಬಯಲಿಗೆ ಬಂದು...ಮಣ್ಣನು
ಗಳಿಸಿ..ಮಣ್ಣಲಿ ಹೊನ್ನಿನ ಹಾಸಿಗೆಯ ಹಾಸಿ
ಮುಕ್ತಿಯ ನೆಪದಲಿ ಹೆಣ್ಣನು ಹರಿದು ಮುಕ್ಕುವರಲ್ಲ

ಇಂಥ ಧುರುಳರ ಪೂಜಿಸಬೇಕೆ..?
ಇವರ ದುರ್ಮಾರ್ಗವ ಅನುಸರಿಸಬೇಕೆ...?
ತಪ್ಪಿನ ಶಿಕ್ಷೆಗೆ ಒಳಗಾದವರನ್ನು ಅಪ್ಪಿಕೊಂಡು
ಪರರ ಆಸ್ತಿಯನ್ನು ಸುಟ್ಟು ಹಾಕುವುದು ಸರಿಯೆ..?
ನ್ಯಾಯಾಂಗದ ಮುಂದೆ ಎಲ್ಲರೂ ಒಂದೆ ಎಂಬ
ಉಕ್ತಿಗೆ.. ಅಗೌರವ ತೋರಿದಂತಾಗುವುದಿಲ್ಲವೆ..?
ಎಚ್ಚೆತ್ತುಕೊಳ್ಳುವುದಾದರೂ ಯಾವಾಗ..?
ಕಾವಿಯ ಕಾವು ನಮ್ಮ ಮನೆಯ ಬಾಗಿಲನ್ನು
ತಾಕುವವರೆಗೂ ಕಾಯಬೇಕೇನೊ...?

No comments:

Post a Comment