'ಹ್ಞಾಂ... ಬಾರವ್ವ...ಬಾ..ಬಾ' ಎಂದು ಮಗಳನ್ನು ಒಳಗೆ ಕರೆದನು ಭರಮಪ್ಪ.
ಸೋಮಣ್ಣನನ್ನು ದಿಟ್ಟಿಸಿ ನೋಡುತ್ತಾ 'ಪಪ್ಪಾ, ನಾನೀಸಲ ಸರೆಗಮಪಾ ಕಾರ್ಯಕ್ರಮದಾಗ ಕಾಂಪಿಟ್ ಮಾಡ್ಬೇಕನ್ಕೊಂಡಿನಿ, ಪ್ರ್ಯಾಕ್ಟೀಸ್ ಗೆ ಎಂಟ್ರೇನ್ಸ ಫೀ ಅಂತಂದ ನಾಕ ಲಕ್ಷ ಬೇಕಾಗ್ಯಾವ ಕೊಡ್ರಿ ಪ್ಲೀಸ್' ಭಯಮಿಶ್ರಿತ ಧ್ವನಿಯಲ್ಲಿ ಕೇಳಿದಳು.
ಮಗಳ ಮಾತನ್ನು ಕೇಳಿ, ಸೋಮಣ್ಣ ಹಚ್ಚಿದ ಹೊಟ್ಟಿಯೊಳಗಿನ ಉರಿ ಈಗ ಮೈ ತುಂಬ ಹಚ್ಚಿದಂತವನಾಗಿ ಜೋರಾಗಿ ಕೂಗಾಡತೊಡಗಿದನು.
'ಥೂ ನಿನ್ನ ಹುಚ್ವಿ ಬುದ್ದಿ ಎಲ್ಲಿಟ್ಟಿ ಅದ್ಕ್ಯಾಕ ನಾಕ ಲಕ್ಷ ಕೊಡ್ಬೇಕ ಬೆ, ನಾನೇನ ಇಲ್ಲೆ ರೊಕ್ಕದ ಗಿಡಾ ನೆಟ್ಟಿನಿ ಅಂತಂದ ತಿಳ್ಕೊಂಡಿಯೇನ ಏನರ..? ಹೋಗ್ಲಿ ನಾಕ ಲಕ್ಷ ಕಮಾಯಿ ಮಾಡೋದ ಎಷ್ಟ ತ್ರಾಸ ಐತಂದ ಗೊತ್ತೈತೇನು ಏನಾರ, ಹೋಗ.. ಹೋಗವಾ ಸುಮ್ಕ, ನಾನು ಸೋಮಪ್ಪ ಭಾಳ ಒಂದ ಇಂಪಾರ್ಟೆಂಟ ವಿಷ್ಯಾ ಮಾತಾಡಕ್ಹತ್ತಿವಿ, ಕಾಲೇಜ್ ಗೆ ಹೊಂಡ ಮಿಕ್ಕ ವಿಷ್ಯಾನ ಸಂಜಿಕ ಮಾತಾಡೋನು ನಡಿ.. ನಡಿ' ಮಗಳ ಬೆನ್ನನ್ನು ತಟ್ಟುತ್ತಾ ಕೊಣೆಯಿಂದ ಹೊರಹಾಕಿ ಬಾಗಿಲನ್ನು ಮುಚ್ವಿಬಿಟ್ಟು, ಸೋಮಣ್ಣನ ಕಡೆಗೆ ನೋಡಿದನು, ಸೋಮಣ್ಣನು ಆವಾಗಲೆ ಹಣೆ ಹುಬ್ಬನ್ನು ಗಂಟಿಕ್ಕಿ ನಿಂತಿದ್ದನು. 'ನಂಗೊತ್ತೈತೊ ತಮ್ಮಾ ನಿ ಮನಸ್ನ್ಯಾಗ ಏನ ಲೆಕ್ಕ ಹಾಕ್ಹೊಳಾಕ ಹತ್ತಿಯಂತಂದು, ಒಬ್ಬಾಕಿ ಮಗ್ಳ ನಂಗ, ಹಂಗಂತ ಕೇಳ್ದಂಗೆಲ್ಲ ರೊಕ್ಕಾ ಕೊಟ್ಬಿಟ್ರ ರೊಕ್ಕದ ಬೆಲಿ ಗೊತ್ತಾಗ್ಬೇಕಿಲ್ಲ, ಅದು ಅಲ್ದ ಮದ್ವಿ ಅಂತ ಮಾಡಿ ಕೊಟ್ಟಮ್ಯಾಲ ಎಲ್ಲಾ ಅಕಿ ಹಿಂದನ ಹೋಗ್ತದಲ್ಲಪಾ ಆಸ್ತಿ, ಅದ್ಕ ಭಾಳ ಹದ್ದಬಸ್ತನ್ಯಾಗಿಟ್ಟ ಕಲ್ಸಕ್ಹತ್ತೀನಿ,' ಹಲ್ಲನ್ನು ಗಿಂಜುತ್ತಾ ನಿಂತನು. ಮತ್ತೆ ಬಾಗಿಲು ಬಡಿತದ ಶಬ್ದ, ಬಾಗಿಲನ್ನು ತೆರೆದರೆ ಈ ಸಲ ಅವನ ಧರ್ಮಪತ್ನಿ, 'ಏನ್ರೀ ಆ ಮಗಾ ಅಷ್ಟೊಂದು ಆಸೆಯಿಂದ ಕೇಳ್ಲಾಕ ಹತ್ತೈತಿ ಕೊಟ್ಟ ಕಳ್ಸಬಾಡ್ದರ್ಯಾ ರೊಕ್ಕಾನ,' ಅಳುತ್ತಾ ಸೇರಗಿನ ಅಂಚನ್ನು ಬಾಯಿಗೆ ಹಿಡಿದುಕೊಂಡು ಕೇಳಿದಳು.
ಈ ಸಲ ರೌದ್ರಾವತಾರ ತಾಳಿದ್ದು ಮಾತ್ರ ಭರಮಪ್ಪ, ಹೆಂಡತಿಯ ಮುಡಿಯನ್ನು ಹಿಡಿದು ಟೇಬಲ್ ಮೇಲೆ ಬಗ್ಗಿಸಿ ಹಿಡಿದು ಬೆನ್ನ ಮೇಲೆ ರಪ್...ರಪ್.. ಅಂತ್ಹೇಳಿ ನಾಕೈದು ಏಟನ್ನು ಹಾಕಿದನು, ' ಏನೆ ನಿಮ್ಮಪ್ಪನ ಮನಿ ಗಂಟ ಐತಂದ ತಿಳ್ದಿಯೇನ ಇಲ್ಲೆ, ಒಮ್ಮೆ ಹೇಳಿದ್ರ ಅರ್ಥ ಆಗಂಗಿಲ್ಲ ನಿಮ್ಮ ತಾಯಿ ಮಗ್ಳಿಗೆ, ಆಕಿಗ ಹೇಳ ಈಗ ಸೂಕ್ಷ್ಮೀ ಹೇಳ ಕಳ್ಸನಿ, ಹೊಳ್ಳಿ ಇನ್ನೊಮ್ಮೆ ಕಾಂಪೀಟೇಷನ್ ಅಂತೆನಾದ್ರು ಸುದ್ದಿ ತಗದ್ರಿ
ಹೆಣ ಎತ್ತಿ ಹಂಡ್ಗ್ಯಾಗ ತುಂಬಿ ಹುಗ್ದ ಬಿಡ್ತೀನಿ ಊರ ಹೊರಗ, ಗೊತ್ತಾತಿಲ್ಲೊ, ನಡಿ ಇನ್ನ ಹೊರಗ' ಎಂದು ಅವನ ಹೆಂಡತಿಯನ್ನು ಬಲವಂತವಾಗಿ ಕತ್ತನ್ನು ಹಿಡಿದು ಕೋಣೆಯಿಂದ ಹೊರನೂಕಿ, ಟೇಬಲ್ ಮೇಲಿಟ್ಟಿದ್ದ ನೀರಿನ ಟಬ್ ನ್ನು ಎತ್ತಿ ಗಟಗಟನೆ ನೀರನ್ನು ಕುಡಿದು, ಎದೆಯ ಮೇಲಿನ ಅಂಗಿಯ ಎರಡು ಬಟನ್ ಗಳನ್ನು ತೆಗೆದು ಖುರ್ಚಿಯ ಮೇಲೆ ಕುಳಿತುಕೊಂಡನು. ಹತ್ತು ನಿಮಿಷ ಕಳೆದ ನಂತರ ಮೇಲಿನ ಮಾತನ್ನು ( ಈಗ ಹೆಂಗ ಮಾಡ್ಬೇಕಂತ ಮಾಡಿಯೊ ತಮ್ಮಾ ) ಕೇಳುತ್ತಾ ಗಹಗಹಿಸಿ ನಗತೊಡಗಿದನು.
ಎಷ್ಟೆ ರೊಚ್ಚಿಗೆದ್ದರು, ಯಾರ ಹತ್ತಿರ ಹೋದರು ಬಗೆ ಹರಿಯದ ವಿಷಯವಿದು, ಹೊಟ್ಟಿಯೊಳಗ ಹುಟ್ಟಿದ ಮಗ್ಳ ಬಗ್ಗಿನ ಖಾಜಿ ಮಾಡಲಾರ್ದಾವ, ಹೆಂಡ್ತಿನ ನನ್ಮುಂದ ಹಿಂಗ ಹೊಡ್ದಾಂವ ಇನ್ನ ಹತ್ತಿಲ್ಲ, ಸಂಬಂದಿಲ್ಲ ಸೂತ್ರಿಲ್ಲ, ನಮ್ಮನ್ನ ಇಂವ ಏನ ಮಾಡಾಕು ಹೇಸುದಿಲ್ಲ ಅನ್ನೊದನ್ನ ಮನಗೊಂಡ ಸೋಮಣ್ಣನು, ಎದ್ದು ನಿಂತು ಬಲಗೈಯನ್ನು ಮುಷ್ಟಿ ಮಾಡಿ ತೊಡೆಗೆ ಬಡೆದುಕೊಳ್ಳುತ್ತಾ, 'ನಂಗೆ ಎರ್ಡ ದಿನ ಟೈಂ ಕೊಡಿ ಹೇಳ್ತೀನಿ, ಲಕ್ಷ್ಮೀ ತವ್ರ ಮನೆಗೆ ಹೋಗ್ಯಾಳ, ನಾಳೆ ಬರ್ತಾಳ ಬಂದ ನಂತ್ರ ವಿಚಾರ್ಸಿ ನಿಮ್ಗೆ ಹೇಳ್ತಿನಿ'.
'ಎರ್ಡೆ ದಿನ ತಮ್ಮಾ, ಇಷ್ಟ ದಿನ ತಡ್ಕೊಂಡಿದ್ದ ದೊಡ್ದಾಗೈತಿ ನಂಗ, ನನ್ನಾಸೆನ ನಿರಾಸೆ ಮಾಡ್ಬೇಡ, ಮತ್ತ ನೀನೇರ ಈ ಊರ ಬಿಟ್ಟ ಎತ್ಲಾಗರ ಹೋದೆಂದ್ರ, ಪಾತಾಳ್ದಾಗ ಹುದಕ್ಕೊಂಡ್ರು ಹುಡ್ಕೊಂಡ ಕರ್ಕೊಂಡ ಬರ್ತೀನಿ ತಿಳ್ಕೊಂಡಿರು, ಗೊತ್ತಾತಿಲ್ಲ, ಹಂಗ ಒಂದ ವ್ಯಾಳೆ ನಿ ಸಿಗ್ಲಿಕ್ಕಲಿಲ್ಲಂದ್ರ ನಿಮ್ಮತ್ತಿ ಮಾವರ ಅದಾರಲ್ಲ ಕೋರ್ಟ ಜೈಲಂತಂದ ಅಡ್ಯಾಡಾಕ. ಹ್ಞಾಂ...ಬೇಕಿದ್ರ ಈ ಸೂಟಕೇಸ್ ಒಯ್ಯಿ ' ಸೂಟಕೇಸ್ ನ್ನು ಮುಂದಕ್ಕೆ ಸರಿಸುತ್ತ ಮುಗುಳ್ನಕ್ಕನು.
ಸ್ವಲ್ಪ ಹೊತ್ತು ಯೋಚಿಸುತ್ತಾ ನಿಂತು ನಂತರ ಒಲ್ಲದ ಮನಸ್ಸಿನಿಂದ ಸೂಟಕೇಸ್ ನ್ನು ಎತ್ತಿಕೊಂಡು ಭಾರವಾದ ಹೆಜ್ಜೆಗಳನ್ನು ಹಾಕುತ್ತಾ ಆಫೀಸ್ ನ ರೂಂ ನಿಂದ ಹೊರಬಂದು ಗಾಡಿಯನ್ನು ಪ್ರಾರಂಭಿಸಿ ಮನೆಯತ್ತ ಹೊರಟನು.
ಒಂದು ದಿನ ಕಳೆಯಿತು, ಭರಮಪ್ಪ ಎಂದಿನಂತೆ ಆಫೀಸನಲ್ಲಿ ಯಾರೊಂದಿಗೊ ಮಾತನಾಡುತ್ತ ಕುಳಿತಿದ್ದನು. ಟೇಬಲ್ ಮೇಲಿಟ್ಟಿದ್ದ ಪೋನು ರಿಂಗಣಿಸತೊಡಗಿತು, ನೋಡಿದರೆ ಸೋಮಣ್ಣನ ಕರೆ, ತಟ್ಟನೆ ಎದುರಿಗಿದ್ದವರೆನ್ನೆಲ್ಲ ಕೋಣೆಯಿಂದ ಹೊರಗಡೆ ಕಳುಹಿಸಿ ಒಂದೆ ಉಸಿರಿನಲ್ಲಿ ಪೋನ್ ನ್ನು ರಿಸೀವ್ ಮಾಡಿ' ಹೇಳು ತಮ್ಮಾ ಏನ್ಮಾಡ್ದಿ ' ಕುತುಹಲದಿಂದಲ ಕೇಳಿದನು.
' ನೀವ್ ಹೇಳ್ದಂಗ ಆಗಲ್ರೀ, ಗೌಡ್ರ ನಾವು ದುಡ್ಕೊಂಡ ತಿನ್ನೊರು ಮಾನಪಾನ ಅಂತ ಕುಂತಗೊಂಡ್ರ ಹೊಟ್ಟಿ ತುಂಬ ಬೇಕಲ್ರೀ, ಅದ್ರಾಗ ನಿಮ್ಮನ್ನ ಎದ್ರ ಹಾಕ್ಕೊಂಡ ಈ ಊರಾಗ ಬಾಳೆ ಮಾಡಕ ಆಕ್ಕೈತನ್ರೀ, ಇವತ್ತ ರಾತ್ರಿ ಹತ್ತ ಗಂಟೆಕ ಹಳೆ ಐಬಿಗೆ ಬಂದ ಬಿಡ್ರಿ ಎಲ್ಲ ವ್ಯವಸ್ಥೆ ಮಾಡಿರ್ತೀನಿ, ಮತ್ತ ಗೌಡ್ರ ಮನಿಯಾಗ ಯಾರಿಗೂ ಹೇಳಾಕ ಹೋಗ್ಬ್ಯಾಡ್ರೀ, ಸುಮ್ನ ತೊಂದ್ರಿ'
'ಥೂ...ಥೂ... ಎಂತ ಮಾತೊ ತಮ್ಮಾ ಇದನ್ನೆಲ್ಲ ಮನಿಯಾಗ ಹೇಳಾಕ ಆಗ್ತದನ ಈಗ ಎಮ್ಎಲ್ಎ ಅವರ್ನ ಭೇಟಿಯಾಗಾಕ ಸಿಟಿಗ ಹೊಂಟಿನ, ನಾಳೆ ಮಧ್ಯಾಹ್ನಕ್ಕನ ನಾ ಬರೋದಂತಂದು ಹೇಳಿ ಐಬಿಗ್ಯಾ ಬಂದ ಕುಂತ್ಬಿಡ್ತೀನಿ' ಅತಿ ಉತ್ಸುಕತೆಯಿಂದ ನುಡಿದನು.
' ಹಂಗೆಲ್ಲಾ ಮಾಡ್ಬ್ಯಾಡ್ರೀ ಗೌಡ್ರ, ಮತ್ತ ಮಂದಿ ನಿಮ್ಮನ್ನ ಹುಡ್ಕೊಂಡ ಅಲ್ಲಿಗೂ ಬಂದ್ರ ಎಲ್ಲಾ ಕೆಲ್ಸ ಕೆಟ್ಟ ಹೋಕೈತಿ, ಬರೊಬ್ಬರ ರಾತ್ರಿ ಹತ್ತ ಗಂಟೆಕ ನೀವೊಬ್ರ ಕಾರ ಹೊಡ್ಕಂಡ ಬಂದ್ಬಿಡ್ರೀ, ಯಾರಿಗೂ ಸಂಶಯನ ಬರೋದಿಲ್ಲ,'
' ಹೌದೌದು ನೀನ ಹೇಳೊದು ಖರೆ ಅದ, ಹಾಗಿದ್ರ ನಾನಿಗ್ಲೆ ಒಬ್ನ ಸಿಟಿಗೆ ಹೋಗಿ ರಾತ್ರಿ ವ್ಯವಸ್ಥಕ್ಕ ಏನೆನ ಬೇಕ ಎಲ್ಲಾ ತಗೊಂಡ ಸೀದಾ ಅಲ್ಲಿಗೆ ಬಂದ ಬಿಡ್ತೀನಿ ಆಯ್ತಾ.'
' ಏನ ಬ್ಯಾಡ್ರಿ ಗೌಡ್ರ ನಾನೇಲ್ಲ ರೆಡಿ ಮಾಡಿಟ್ಟಿರ್ತೀನಿ ನೀವು ಡೈರೆಕ್ಟ್ ಐಬಿಗೆ ಕೈ ಬಿಸಗೊಂಡ ಬಂದ್ರ ಸಾಕ, ಸರೀ ರಾ...
ಪೋನ ಇಡ್ತೀನ ನೋಡ್ರಿ ' ಸೋಮಣ್ಣ ಕಾಲನ್ನು ಕಟ್ ಮಾಡಿಬಿಟ್ಟನು.
ಭರಮಪ್ಪ ಸ್ವರ್ಗದ ಬಾಗಿಲಲ್ಲಿ ನಿಂತ ಅನುಭವದ ಸವಿಯನ್ನು ಸವಿಯಲಾರಂಭಿಸಿದನು. ರಾತ್ರಿ ಸುಖದ ಕ್ಷಣಗಳನ್ನು ನೆನೆಯುತ್ತಾ ಡ್ರಾಯರ್ ನಿಂದ ಕಾರಿನ ಕೀಯನ್ನು ತೆಗೆದುಕೊಂಡು ಸಿಟಿಗೆ ಹೋಗಲು ಅನುವಾದನು.
No comments:
Post a Comment