Friday, July 6, 2018

'ಹೇಳ್ಲೆ ತಮ್ಮಾ, ಏನ್ಮಾಡ್ಬೇಕಂತ ಮಾಡಿದೀಗ' ಕುಹಕ ನಗೆಯೊಂದಿಗೆ ಕೇಳಿದನು ಭರಮಪ್ಪ, ಸೋಮಣ್ಣನನ್ನೆ ದಿಟ್ಟಿಸಿ ನೋಡುತ್ತಾ. ಅವನ ನಗುವನ್ನು ಕಂಡು ಕಿಟಕಿಯ ಮಗ್ಗುಲಲ್ಲಿ ವಾಸ್ತುವಿಗೆಂದು ಇಟ್ಟಿದ್ದ ಗಿಡದ ಕುಂಡಲವನ್ನು ಎತ್ತಿ ತಲೆಯ ಮೇಲೆ ಹೊಡೆದು ಸಾಯಿಸಿಬಿಡಬೇಕು ಎನ್ನುವಷ್ಟು ಕೋಪವು ಉಕ್ಕಿ ಬಂದಿತ್ತು ಸೋಮಣ್ಣನಿಗೆ, ಎದೆಯೊಳಗೆ ತಡೆದಿಟ್ಟುಕೊಳ್ಳಲಾರದಷ್ಟು ರೋಷ, ಮೂಗಿನ ಹೊಳ್ಳೆಗಳಿಂದ ನಾಗರಹಾವು ಭುಸುಗುಡುವ ಹಾಗೆ ಉಸಿರಾಡುತ್ತಿದ್ದನು. ಕೈ ಕಾಲುಗಳೆಲ್ಲ ಸಿಟ್ಟಿನ ತಾಪಕ್ಕೆ ಸಣ್ಣಗೆ ಅದರಾಡತೊಡಗಿದ್ದವು. ತುಟಿಯನ್ನು ಅವುಡುಗಚ್ಚಿ ದೇಹದ ತುಂಬ ಕೊತ ಕೊತನೆ ಕುದಿಯುತ್ತಿದ್ದ ಆಕ್ರೋಶದ ಜ್ವಾಲಾಮುಖಿಯನ್ನು ಅದುಮಿಡಲು ಸಾಕಷ್ಟು ಪ್ರಯತ್ನಿಸತೊಡಗಿದ್ದನು.

    ಅವನು ಕುಳಿತಿದ್ದ ಆಫೀಸ್‌ನಲ್ಲೀಗ ಭರ್ರೆಂದು ಸದ್ದು ಮಾಡುತ್ತಾ ತಿರುಗುತ್ತಿದ್ದ ಸೀಲಿಂಗ್ ಫ್ಯಾನು ಆ ಫ್ಯಾನಿನ ರಭಸಕ್ಕೆ ಟೇಬಲ್ ಮೇಲಿಟ್ಟಿದ್ದ ಕೆಲವು ಹಾಳೆಗಳು ರೆಕ್ಕೆ ಬಿಚ್ಚಿ ಬೇಡನ ಬಲೆಯಿಂದ ಬಿಡಿಸಿಕೊಂಡು ಬಿಡುಗಡೆಯ ಹೊಂದಲು ಪರದಾಡುವ ಪಕ್ಷಿಗಳಂತೆ ಪರ್..ಪರ್.. ಎಂಬ ಶಬ್ದದೊಂದಿಗೆ ಹಾರಾಡುತ್ತಿದ್ದವು, ಅವುಗಳು ಹಾರದಂತೆ ಅವುಗಳೆದೆಯ ಮೇಲೊಂದು ಗಾಜಿನ ಗುಂಡೊಂದನ್ನು ಇಟ್ಟಿದ್ದನ್ನು ಭರಮಪ್ಪ, ಮತ್ತೊಂದು ಬದಿಯಲ್ಲಿ ಎರಡು ಸಾವಿರ ನೋಟಿನ ಕಂತೆಯ ಸೂಟಕೇಸ್ ಬಾಯ್ತೆರದು ಕುಳಿತಿತ್ತದು, ಭರಮಪ್ಪನು ಕುಳಿತಿದ್ದಂತಹ ಹಿಂಬದಿ ಗೋಡೆಯ ಮೇಲೆ ತಿಮ್ಮಪ್ಪನ ಪೋಟೊ ಇತ್ತು, ಆಗತಾನೆ ಘಮಗಮಿಸುವ ಸುಂಗಧಿಯ ಹಾರವನ್ನು ಹಾಕಿ, ಗಂಧದ ಊದಿನಕಡ್ಡಿಯನ್ನು ಹಚ್ಚಿದ್ದರು, ಕೋಣೆಯ ತುಂಬೆಲ್ಲಾ ಅದರದೆ ಘಮಲು, ಆದರೆ ಸೋಮಣ್ಣನಿಗೆ ಏಕೊ... ಸತ್ತು ನಾರುತ್ತಿರುವ ಹೆಣದ ಮುಂದೆ ಹಚ್ಚಿದ ಕಡ್ಡಿಗಳಂತೆ ಭಾಸವಾಗಿ ವಾಕರಿಕೆ ಬಂದಂತಿತ್ತು, ಬಂಗಾರ ಬಣ್ಣದ ನೀರನ್ನು ಕುಡಿದಿದ್ದ ಕಟ್ಟಿಗೆಯ ಚೌಕಟ್ಟಿನಲ್ಲಿರುವ ದೇವರು ಮಾತ್ರ ನಗುತ್ತಲೆ ಇದ್ದನು, ತಿರುಪತಿಯ ಮೈಮೇಲಿರುವ ಬಂಗಾರ, ಭರಮಪ್ಪನ ಮೈಮೇಲಿರುವ ಬಂಗಾರವನ್ನು ನೋಡುತ್ತಿದ್ದರೆ, ಹೊಟ್ಟೆಯಲ್ಲಿ ಹುಣಸೆ ಹಣ್ಣನ್ನು ಕಿವುಚಿ ಹಿಂಡಿದಂತಾಗುತ್ತಿತ್ತು.

   ಸೋಮಣ್ಣನು ಈಗಾರು ವರ್ಷದ ಹಿಂದೆ ಡಿಪ್ಲೋಮಾ ಪದವಿಯನ್ನು ಮುಗಿಸಿಕೊಂಡು ಮನೆಯಲ್ಲಿ ಮುಂದೆ ಕಲಿಸಲು ಅನಾನುಕೂಲವಾದ ಕಾರಣ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ, ತಮ್ಮ ಹಳ್ಳಿಯಲ್ಲಿಯೆ ಕಾಂಟ್ರಾಕ್ಟ್ ಕೆಲಸಗಳನ್ನು ಮಾಡಿಸುತ್ತಿದ್ದ ಭರಮಪ್ಪನ ಹತ್ತಿರ ತಿಂಗಳಿಗೆ ಹತ್ತು ಸಾವಿರ ಸಂಬಳಕ್ಕೆಂದು ಸೇರಿಕೊಂಡನು. ಭರಮಪ್ಪನೊ...ಹಾಲನ್ನು ಹಿಂಡಿ ಒಗೆದಂತಹ ಕಬ್ಬಿನ ಸಿಪ್ಪೆಯನ್ನು ಎತ್ತಿ ಮತ್ತೆ ಮತ್ತೆ ಹಿಂಡಿ...ಹಿಂಡಿ ಹಾಲಿನ ರಸವನ್ನು ತೆಗೆಯುವಷ್ಟು ಕಂಜೂಸ ಆಗಿದ್ದನು. ಹಗಲಿರುಳು ಕೆಲಸ, ರಸ್ತೆ ಮಾಡಲು ಬೇಕಾಗುವ ಎಲ್ಲ ಬಿಡಿ ಸಾಮಾಗ್ರಿಗಳ ಆಗುಹೋಗುಗಳ ಸಂಪೂರ್ಣ ಮೇಲ್ವಿಚಾರಣೆ ಸೋಮಣ್ಣನಂದೆ ಆಗಿರುತ್ತಿತ್ತು. ಒಂದು ಪುಟ್ಟಿ ಮರುಳು ಕಡಿಮೆಯಾದರೂ ಸೋಮಣ್ಣನೆ ಅದಕ್ಕೆ ಬೆಲೆ ತೆರಬೇಕಾಗುತ್ತಿತ್ತು. ಹೀಗಿರುವಾಗ ಒಂದು ಬೆಳಿಗ್ಗೆ ಸೋಮಣ್ಣನ ತಂದೆ ಹೃದಯಾಘಾತದಿಂದ ತೀರಿಹೋದರು, ಅಕ್ಕಂದರಿಬ್ಬರ ಮದುವೆಗಾಗಿ ಮಾಡಿದ ಸಾಲ ಇವನ ಹೆಗಲ ಮೇಲೆ ಬಿದ್ದಿತು‌. ಎರಡು ಎಕರೆ ತೋಟ ಮತ್ತು ಮನೆಯ ಕಾಗದ ಪತ್ರವನ್ನು ಭರಮಪ್ಪನ ಹತ್ತಿರ ಒತ್ತೆಯಿಟ್ಟು ತಾನೊಂದು ಪಕ್ಕದ ಹಳ್ಳಿಯಿಂದ ಒಳ್ಳೆಯ ಬಡ ಕುಟುಂಬದ ಸುಸಂಸ್ಕೃತ ಹುಡುಗಿಯನ್ನು ಮದುವೆ ಮಾಡಿಕೊಂಡನು. ಮದುವೆಗೆ ಬಂದರೆ ಎಲ್ಲಿ ಉಡುಗೊರೆಯನ್ನು ಕೊಡಬೇಕಾಗುತ್ತದೊ ಎಂಬ ದುರಾಲೋಚನೆಯಿಂದ, ಅಂದು ನಾನು ಊರಲ್ಲಿ
ಇರುವುದಿಲ್ಲ ಎಂದು ಹೇಳಿ ಕಳುಹಿಸಿಬಿಟ್ಟಿದ್ದನು ಲಗ್ನ ಪತ್ರಿಕೆಯನ್ನು ಸೋಮಣ್ಣನು ಕೊಡಲು ಹೋದಾಗ. ಮದುವೆಯಾಗಿ ಎರಡು ತಿಂಗಳು ಕಳೆಯುವದರೊಳಗೆ ಸೋಮಣ್ಣನ ತಾಯಿಯ ಆರೋಗ್ಯ ತೀರಾ ಹದಗೆಟ್ಟುಬಿಟ್ಟಿತು.
ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋದರೆ ಅಲ್ಲಿ ಒಂದು ಚಿಕ್ಕ ಆಪರೇಷನ್ ಮಾಡಿಸಬೇಕೆಂದು ವೈದ್ಯರು ಹೇಳಿ ಕಳುಹಿಸಿಬಿಟ್ಟರು. ಆಪರೇಷನ್ ನ ಹಣಕ್ಕಾಗಿ ಸೋಮಣ್ಣನು, ಭರಮಪ್ಪನಲ್ಲಿ ಕೇಳಿಕೊಂಡಾಗ ಗದರಿಸಿ ಕಳುಹಿಸಿಬಿಡುತ್ತಾನೆ.

   ಸೋಮಣ್ಣನು ಪಕ್ಕದೂರಿನ ರಸ್ತೆಯ ಕಾಮಗಾರಿಗೆಂದು ಹೊರಟಿದ್ದಾಗ, ಊರ ಹೊರಗಿನ ಕೆರೆಯ ದಂಡೆದಲ್ಲಿ ಒಂದು ಹೆಣ್ಣು ಮಗಳ ಶವವನ್ನಿಟ್ಟುಕೊಂಡು ಯಾರೊ ಗೋಳಾಡುತ್ತಿರುವುದನ್ನು ಕಂಡು ಬೈಕನ್ನು ನಿಲ್ಲಿಸಿ, ದಂಡೆಯನ್ನು ಹತ್ತಿ ಹೆಣವನ್ನು ದಿಟ್ಟಿಸಿ ನೋಡಿ ಒಂದು ಕ್ಷಣ ದಂಗಾಗಿಬಿಡುತ್ತಾನೆ. ಇವಳು ನಮ್ಮ ಕಂಟ್ರ್ಯಾಕ್ಟರ ಮನೆಯ ಮನೆಗೆಲಸದವಳಲ್ಲವೆ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾ, ಅಲ್ಲೆ ಪಕ್ಕದಲ್ಲಿ ನಿಂತಿದ್ದ ಒಬ್ಬನನ್ನು 'ಏನ ಮಾಡ್ಕೊಂಡ್ಳ ಈ ಹೆಣ್ಮಗ್ಳು, ' ಅಂತಾ ಪ್ರಶ್ನಿಸುತ್ತಾನೆ, ಸೋಮಣ್ಣನ ಮೊಖವನ್ನೊಮ್ಮೆ ನೋಡಿ ಅಲ್ಲಿ ನೆರೆದಿದ್ದಂತಹ ಜನರೆಲ್ಲರು ದೆವ್ವ ಕಂಡವರಂತೆ ಹೌಹಾರಿ ಹಿಂದೆ ಸರಿದು ಬಿಡುತ್ತಾರೆ. ಅವರ ಈ ವಿಚಿತ್ರ ವರ್ತನೆಯನ್ನು ಕಂಡು ಅವನಿಗೆ ಆಶ್ಚರ್ಯವಾಗುತ್ತದೆ. ತುಟಿಗೆ ಹೊಲಿಗೆಯನ್ನು  ಹಾಕಿಕೊಂಡಂತೆ ಅವನ ಬಳಿ ಏನಾಯಿತೆಂಬ  ವಿಷಯವನ್ನು ಯಾರೊಬ್ಬರು ಹೇಳುವುದಿಲ್ಲ, 'ಹಾಳಾಗಿ ಹೋಗ್ಲಿ ಬಿಡು ಊರಿನ ಉಸಾಬರಿ ನನಗ್ಯಾಕೆ?, ಕೆಲ್ಸಕ್ಕೆ ಹೊತ್ತಾದ್ರೆ ಭರಮಪ್ಪ ಅಷ್ಟೇ... !!!!!' ಎಂದು ಮನಸ್ಸಿನಲ್ಲಿ ಮಾತನಾಡುತ್ತಾ, ಬಿಸಿಲಿಗೆ ಹಣೆಯಿಂದ ಇಳಿಯುತ್ತಿದ್ದ ಬೆವರನ್ನು ಅಂಗೈಯಿಂದ ಒರೆಸಿಕೊಳ್ಳುತ್ತಾ, ಬೈಕಿನ ಹತ್ತಿರ ಬಂದು ಗಾಡಿಯನ್ನು ಸ್ಟಾರ್ಟ್ ಮಾಡಿಕೊಂಡು  ರಸ್ತೆ ಕಾಮಗಾರಿ ಮಾಡುವತ್ತ ಸಾಗುತ್ತಾನೆ.

   ಮಧ್ಯಾಹ್ನ ಮೂರರ ಹತ್ತಿರ ಸಮಿಪಿಸುತ್ತಿತ್ತು ಸಮಯ, ಎಲ್ಲ ಕೆಲಸಗಾರರು ಊಟದ ಹೊತ್ತಾಯಿತೆಂದು ಕೆಲಸವನ್ನು ನಿಲ್ಲಿಸಿ, ಕೆಲಸಕ್ಕೆಂದು ತಂದು ನಿಲ್ಲಿಸಿದ್ದ ನೀರಿನ ಟ್ಯಾಂಕರ್ ನ ನಲ್ಲಿಯನ್ನು ತಿರುಗಿಸಿ ಕೈಕಾಲು ಮುಖಗಳನ್ನು ತೊಳೆದುಕೊಂಡು ತಾವುಗಳ ತಂದ ಬುತ್ತಿಯನ್ನು ಬಿಚ್ಚಿ  ಉಣ್ಣತೊಡಗಿದರು, ಮನೆಯಲ್ಲಿ ತಾಯಿಯ ಅನಾರೋಗ್ಯ, ಇನ್ನೂ ಸರಿಯಾಗಿ ಉಪ್ಪು ಖಾರ ಹಾಕಿ ಅಡುಗೆ ಮಾಡಲು ಬಾರದ ಹೆಂಡತಿ, ಇವರಿಬ್ಬರ ನಡುವೆ ಸೋಮಣ್ಣನಿಗೆ ಹೋಟೆಲ್ ನ ಪಲಾವೆ ಗತಿಯಾಗಿತ್ತು, ತಾನು ಕೈಕಾಲುಗಳನ್ನು ತೊಳೆದುಕೊಂಡು, ಬೈಕ್ ನ ಸೈಡ ಬ್ಯಾಗನಲ್ಲಿಟ್ಟಿದ್ದ ಪಲಾವ್ ಪಾರ್ಸಲನ್ನು ತೆಗೆದುಕೊಂಡು ಕೆಲಸಗಾರರು ಉಣ್ಣಲು ಕುಳಿತಿದ್ದ ಮರಳಿನ ದಿಬ್ಬದ ಹಿಂಬದಿಯಲ್ಲಿ ಉಣ್ಣಲಿಕ್ಕೆಂದು ಕುಳಿತುಕೊಂಡನು, ಪಾಕೀಟನ್ನು ಬಿಚ್ಚಿ, ಸಾಂಬಾರನ್ನು ಹಾಕಿ ಕಟ್ಟಿದ್ದ ಚೀಲವನ್ನು ಕಚ್ಚಿ ಹರಿದು ಪಲಾವ ಮೇಲೆಲ್ಲ ಹಾಕಿ, ಚೆನ್ನಾಗಿ ಕಲಿಸಿಕೊಂಡು ಒಂದೆರಡು ತುತ್ತುಗಳನ್ನು ಹೊಟ್ಟೆಗೆ ಹಾಕಿಕೊಂಡನು, ಸಾಂಬಾರಗೆ ಖಾರ ಹೆಚ್ಚಾಗಿತ್ತೇನೊ, ಒಮ್ಮಲೆ ನೆತ್ತಿಗೆ ಹತ್ತಿಬಿಟ್ಟಿತು, ಬಿಕ್ಕಳಿಕೆ ಪ್ರಾರಂಭವಾಗಿ ಬಿಕ್ಕತೊಡಗಿದನು, ಕುಡಿಯಲಿಕ್ಕೆಂದು ನೀರನ್ನೆ ಎತ್ತಿಟ್ಟುಕೊಂಡಿರಲಿಲ್ಲ, ತನ್ನನ್ನು ತಾನೆ ಬೈದುಕೊಳ್ಳುತ್ತಾ, ಎದ್ದು ಕೆಲಸಗಾರರ ಹತ್ತಿರವಾದರು ಹೋಗಿ ನೀರನ್ನು ಕುಡಿಯೋಣ ಎಂದುಕೊಳ್ಳುತ್ತಾ, ಅವರ ಹತ್ತಿರ ಹೋಗಲನುವಾದಾಗ, ಅವರಾಡುತ್ತಿದ್ದ ಮಾತುಗಳನ್ನು ಕೇಳಿ, ಬಿಕ್ಕಳಿಕೆ ನಿಂತು, ಮೈಯೆಲ್ಲಾ ಬೆವೆತುಬಿಟ್ಟು, ನಾನು ಭರಮಪ್ಪನ ಹತ್ರ ಕೆಲ್ಸಕ್ಕಿರೊದು ಅವ್ರಿಗೆಲ್ಲ ಗೊತ್ತೈತಿ, ಹಂಗಾಗೀನ ಹೆದರ್ಯಾರ ಅವ್ರು‌ ನನ್ಮುಂದ ವಿಷ್ಯಾ ಹೇಳಾಕ,' ಮನಸ್ಸಿನಲ್ಲಿಯೆ ಮಾತನಾಡಿಕೊಳ್ಳುತ್ತಾ ಕಾರ್ಮಿಕರ ಮಾತುಗಳಿಗೆ ಕಿವಿಗೊಟ್ಟನು.
'ನಿಮ್ಮೌನ, ನಿನ್ಹೆಡ್ತಿ, ಒಮ್ಮೆ ಹೇಳಿದ್ರ ಗೊತ್ತಾಗಲ್ಲ ಏನ್ಲೇ, ಆಕಿನ್ನ ನಮ್ಮ‌ ಗೌಡ್ರ ಕೆಡ್ಸಿದ್ದು, ಈ ವಿಷ್ಯಾನ ಯಾರ್ಹತ್ರಾನು ಹೇಳ್ಬ್ಯಾಡಂತ್ಹೇಳಿ ಯಾಡ ಲಕ್ಷ್ಯ ರೊಕ್ಕ ಕೊಟ್ಟಿದ್ನಂತಲೆ, ಆಕಿ ತಗೊಂಡ ಸುಮ್ನೀರ್ಬೇಕಿಲ್ಲ, ರೊಕ್ಕಾನು ತಗೊಂಡ ಹೋಗಿ ರಾತ್ರೊ ರಾತ್ರಿ ಮನಿಗೂ ಹೋಗಲಾರ್ದಂಗ ಆ ರೊಕ್ಕದ ಜೊತಿ ಕೆರಿಗೆ ಹಾರ್ಬಿಟ್ಟಾಳಕಿ, ಮಡ್ಸ ಮಾರೇಕಿ',
'ಅಲ್ಲಲೆ, ಇಂವಗೇನ ಕಮ್ಮಿ ಆಗೈತ್ಲೆ ಯಪ್ಪಾ, ಅಲ್ಲಾ ಮನ್ಯಾಗ ಬಂಗಾರದಂತ ಹೆಂಡ್ತಿನಿಟ್ಕೊಂಡು, ಆ ಕೆಲ್ಸದಾಕಿನ ಕೆಡ್ಸ್ಯಾನಂದ್ರ, ಇಂವ ಒಬ್ಬ ಅಪ್ಪಗ ಹುಟ್ಟಿಲ್ಲ ಬಿಡ್ಲೆ, ಅಲ್ಲಲೆ..
ಸಿಟಿಗ್ಹೋದ್ರ ಒಂದರಕಿಂತ ಒಂದ ಮಾಲ ಸಿಗ್ತಾವ, ರೊಕ್ಕ ಸುರಿವಿದ್ರ, ಇವಂಗೇನ ಧಾಡಿಲೇ ಎಂಜ್ಲಾ ನೆಕ್ಕೊ ಕರ್ಮದ ಕೆಲ್ಸಕ್ಕ ಕೈ ಹಾಕ್ಯಾನ',
'ಅದ್ಕ ಲೆ ಮಗ್ನ ನಿಂಗ ಜನಟರ್ ನಾಲೆಜ್ ಇಲ್ಲ ಅನ್ನೋದ, ಅದು ಸಿಟಿಯೊಳ್ಗಿನ ಮಾಲಿನ ಮಗ್ಲ ಮಲ್ಕೊಂಡ್ರ ಹೇಡ್ಸ ಅಂತಾದ ಜಡ್ ಬರ್ತದಂತ, ಅದು ಬಂದ್ರ ಎಷ್ಟ ಖರ್ಚ ಮಾಡಿದ್ರ ಬದುಕೊ ಛಾನ್ಸ ಕಮ್ಮೆಂತಲೆ, ಅದು ಬಡ್ಕೊಂಡ ಮ್ಯಾಲ ಉಪ್ಪಿನಕಾಯಿ ಅಷ್ಟ ನೆಕ್ಕೊದು, ಊಟಿಲ್ಲ...ಪಾಟೀಲ್ಲ..ಹ್ಹ....ಹ್ಹ...:
'ಪೋಲಿಸ್ರಗೆ ಗೊತ್ತಾದ್ರ..?'
'ಮಬ್ಬ ಹಳೆ ಮಬ್ಬ, ನಮ್ ತಾಲೂಕ ಎಮ್ಮೆಲ್ಲೆ ಅವ್ನ ಬಕ್ಣದಾಗ ಅದಾನ, ಪಿಎಸೈಗೊಂದಿಷ್ಟು ರೊಕ್ಕಾ ಕೊಟ್ಟು ಎಲ್ಲಾ ಮುಚ್ಚಿ, ಹೆಣಾ ಸುಟ್ಟು, ಊರ ಹೊರಗಿನ ಹೀರೆ ಹಳ್ಳದಾಗ ಬೂದಿನೆಲ್ಲ ಚೆಲ್ಲಿಬಿಡ್ತಾರಷ್ಟ'
' ಮತ್ತ ನಮ್ಮ ಮನಿ ಹೆಣ್ಮಕ್ಳ ಗತಿ ಏನ್ಲೆ ಯಪ್ಪಾ ?'
'ಅದ್ಕ ಮಗ್ನ ನನ್ಹೆಂಡ್ತಿ ಮಕ್ಳನ್ನ ಅವರ ತವರ ಮನಿಯಾಗ ಬಿಟ್ಟ ಬಂದಿದ್ದು, ನಾಳಿಲಿಂದ ನಿನ್ನ ಹೆಂಡ್ತಿಗ್ನು ಹೇಳ್ಬಿಡು, ಕೆಲ್ಸಕ್ಕ ಬರಬ್ಯಾಡಂತ, ಹಳ್ಯಾಗ ಹತ್ತ ರೂಪಾಯಿ ಕೊಡವಲ್ರಾಕ, ಆ ಮೂಲಿಮನಿ ಬಸ್ಯಾನ ತೋಟಕ್ಕ ಕಳಿಸಿಕೊಟ್ಬಿಡು,'
ಹೀಗೆ ಅವರಾಡುತ್ತಿದ್ದ ಮಾತುಗಳನ್ನು ಕೇಳಿ ತನ್ನ ಕಂಟ್ರ್ಯಾಕ್ಟರ ಇಷ್ಟೊಂದು ಕೀಳುಮಟ್ಟದವ್ನಾ, ಎಂದು ಆಲೋಚಿಸುತ್ತಾ ಕೈಲಿದ್ದ ಪಲಾವನ್ನು ಮಡಚಿಟ್ಟುಕೊಂಡು ಕೈಯನ್ನು ತೊಳೆದು ಎಲ್ಲ ಕೆಲಸಗಾರರನ್ನು ಕೂಗಿ ಕರೆದು ಅವಸರವಸರವಾಗಿ ಕೆಲಸವನ್ನು ಮುಗಿಸಿಕೊಂಡು ಮನೆಗೆ ಬಂದು ಸರಿಯಾಗಿ ಊಟವನ್ನು ಮಾಡದೆ ಹಾಸಿಗೆ ಮೇಲೆ ಮಲಗಿಕೊಂಡನು, ಮಧ್ಯಾಹ್ನ ಕೆಲಸಗಾರರು ಮಾತನಾಡಿದ ಮಾತುಗಳೆಲ್ಲ ಇವನ ತಲೆಯು ಸಿಡಿದು ಹೋಗುವಷ್ಟು ಕಾಡಿಸತೊಡಗಿದವು. ಹೆಂಡತಿ ಬಂದು ಪಕ್ಕದಲ್ಲಿ ಮಲಗಿದ್ದು ಇವನಿಗರಿವಿರಲಿಲ್ಲ, ಅವಳು ಇವನ ಎದೆಯ ಮೇಲೆ ಕೈಯಿಟ್ಟು ಎದೆಯ ರೋಮಗಳ ಮೇಲೆ ತನ್ನ ತೋರು ಬೆರಳಿಂದ ಶೃಂಗಾರ ರಸದ ಗೆರೆಯನ್ನು ಎಳೆದಾಗಲೆ ಅವನು ವಾಸ್ತವಕ್ಕೆ ಬಂದದ್ದು, ತಟ್ಟನೆ ಹಾವು ಕಂಡವರಂತೆ ಹೆದರಿ ಮತ್ತೆ ಸಾವರಿಸಿಕೊಂಡು, ' ಲಕ್ಷ್ಮೀ ಇವತ್ತ ಯಾಕ ಮನಸ್ಸ ಸರಿಗಿಲ್ಲ, ನಾಳೆ ಮಾತಾಡೋನು' ಎನ್ನುತ್ತಾ ಅವಳ ಮರು ಮಾತಿಗೂ ಕಾಯದೆ ಎದೆಯ ಮೇಲಿನ ಕೈಯನ್ನು ತೆಗದುಹಾಕಿ ಕೋಣೆಯ ಲೈಟನ್ನು ಆರಿಸಿಬಿಟ್ಟನು.

No comments:

Post a Comment