ವಾರ ಕಳೆಯಿತು. ಸೋಮಣ್ಣನ ತಾಯಿಯನ್ನು ಸುಟ್ಟ ಬೆಂಕಿಯು ಬೂದಿಯಾಗಿ, ಗಂಗೆಯ ಒಡಲನ್ನೆನೊ ಸೇರಿತ್ತು. ಇತ್ತ ಭರಮಪ್ಪನ ಒಡಲಲ್ಲಿ ಕಾಮದ ಬೆಂಕಿ ಮಾತ್ರ ದಿನ ದಿನವು ಕಾಡ್ಗಿಚ್ಚಿನಂತೆ ಅವನ ಅಂಗಾಂಗಗಳಲ್ಲೆಲ್ಲ ಹಬ್ಬಿ ಹೊತ್ತಿ ಉರಿಯುತ್ತಿತ್ತು, ತಾಳಲಾರದಂತಹ ತಾಪ, ಹೇಳಿಕೊಳ್ಳಲಾರದಂತಹ ಸಂಕಟ, ಆಫೀಸ್ ನಲ್ಲಿ ಅದೆ ತಾನೆ ದೇವರ ಪೂಜೆಯನ್ನು ಮುಗಿಸಿಕೊಂಡು, ಉರಿಯುವ ಮೈಯನ್ನು ತಣ್ಣಗಾಗಿಸಿಕೊಳ್ಳಲು ಕೊನೆಯ ಪಾಯಿಂಟ್ ನಲ್ಲಿ ಪ್ಯಾನ್ ನ್ನು ಹಾಕಿಕೊಂಡು ಖುರ್ಚಿಯ ಮೇಲೆ ಕಣ್ಮುಚ್ಚಿ ಕುಳಿತುಕೊಂಡಿದ್ದನು. ಕಣ್ಣ ತುಂಬೆಲ್ಲಾ ಲಕ್ಷ್ಮೀಯ ಚಿತ್ತಾರವೆ ಕುಣಿಯತೊಡಗಿತು, 'ಸಾಕಪ್ಪ ಸಾಕು, ಇನ್ನ ನನ್ನ ಕೈಲೆ ತಡ್ಕೊಳ್ಳದಾಗುದಿಲ್ಲ, ' ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಲೆ ಪಕ್ಕನೆ ಕಣ್ಬಿಟ್ಟು, ಟೇಬಲ್ ಮೇಲಿದ್ದ ಪೋನ್ ನ್ನು ಎತ್ತಿಕೊಂಡು ಸೋಮಣ್ಣನಿಗೆ ರಿಂಗಣಿಸಿದನು.
ಇತ್ತ ಸೋಮಣ್ಣನು ಹಿಂದಿನ ದಿನ ತಾಯಿಯ ದಿವಸದ ಕಾರ್ಯವನ್ನು ಮುಗಿಸಿ, ಹೆಂಡತಿಯನ್ನು ಅವರ ತಂದೆ ತಾಯಂದಿರ ಜೊತೆಗೆ ಕಳುಹಿಸಿಕೊಟ್ಟಿದ್ದನು ಒಂದೆರಡು ದಿನ ನೆಮ್ಮದಿಯಿಂದ ಇದ್ದು ಬರಲು. ನೆಮ್ಮದಿ...!!!! ಈ ಶಬ್ದವೆ ಒಂಥರಾ ವಿಚಿತ್ರ, ಇದ್ದವನಿಗೆ ಮತ್ತಿನ್ನೇನೊ ಬೇಕೆನ್ನುವ ಅಶಾಂತಿ, ಇಲ್ಲದವನಿಗೆ ಬೇಕು...ಬೇಕೆಂಬ ಶಾಂತಿಯಿಲ್ಲದೆ ಹೊಯ್ದಾಡುವ ಮನಸ್ಥಿತಿ. 'ಸೊಸಿ ಬಂದ ಎರ್ಡ ತಿಂಗ್ಳದಾಗ ಅತ್ತಿನ ನುಂಗಿದ್ಳು,' ಅಂತ ಜನರಾಡುವ ಚುಚ್ಚು ನುಡಿಗಳಿಂದಾಗಿ ಲಕ್ಷ್ಮೀಯ ಮನಸ್ಸು ಘಾಸಿಗೊಂಡಿತ್ತು. ಕೆಲವರು ನೇರವಾಗಿ ಸೋಮಣ್ಣನ ಮುಂದೆಯು ಹೇಳಿದ್ದರು, ಅಂತವರ ಮಾತನ್ನು ತಲೆಗೆ ಹಾಕಿಕೊಂಡಿರಲಿಲ್ಲವಾದರೂ.. ಲಕ್ಷ್ಮೀಯು ನೊಂದುಕೊಂಡಿದ್ದು ಅವನಿಗರ್ಥವಾಗಿತ್ತು ಅದಕ್ಕಾಗಿಯೆ ಒಂದೆರಡು ದಿನ ಆರಾಮಾಗಿ ಇದ್ದು ಬರಲೆಂದು ತವರು ಮನೆಗೆ ಕಳುಹಿಸಿಕೊಟ್ಟಿದ್ದನು. ಅಡುಗೆ ಮನೆಯಲ್ಲಿ ನಾಷ್ಟ ಮಾಡಿ, ಕೆಲಸಕ್ಕೆ ಹೊರಡುವ ಅವಸರದಲ್ಲಿ ಚಹಾವನ್ನು ಮಾಡಿಕೊಳ್ಳುತ್ತಿದ್ದನು. ಆಗ ಟಿಪಾಯ್ ಮೇಲಿಟ್ಟಿದ್ದ ಪೋನು ರಿಂಗಣಿಸತೊಡಗಿತು. ಗ್ಯಾಸ್ ನ್ನು ಆಫ್ ಮಾಡಿ ಚಹಾವನ್ನು ಲೋಟಕ್ಕೆ ಹಾಕಿಕೊಂಡು ಕುಡಿಯುತ್ತಾ ಹೊರಗೆ ಬಂದು ನೋಡಿದರೆ ಭರಮಪ್ಪನ ಕರೆ. ತಟ್ಟನೆ ಪೋನನ್ನು ರಿಸೀವ್ ಮಾಡಿ ' ಗೌಡ್ರ ಹೊಂಟಿನ್ರೀ ಈಗ ಕೆಲ್ಸಕ್ಕ' ಗಡಿಬಿಡಿಯಿಂದೆಂದ
'ಇವತ್ತ ಕೆಲ್ಸಕ್ಕೇನು ಹೋಗ್ಬ್ಯಾಡ ತಮ್ಮಾ, ಸೀದಾ ಮನಿ ಕಡೆ ಬಾ, ಒಂದು ಭಾಳ ಮುಖ್ಯವಾದ ವಿಷ್ಯ ಮಾತಾಡೋದ ಅದ'
' ಐದ ನಿಮಿಷ್ದಾಗ ಅಲ್ಲಿರ್ತೀನ್ರೀ,' ಎನ್ನುತ್ತಲೆ ಒಂದೆ ಗುಟುಕಿಗೆ ಚಹಾವನ್ನು ಕುಡಿದು, ಮನೆಗೆ ಬೀಗ ಹಾಕಿ ಗಾಡಿಯನ್ನು ಹತ್ತಿಕೊಂಡು ನೇರ ಭರಮಪ್ಪನ ಮನೆಯತ್ತ ಹೊರಟನು.
ಆಫೀಸ್ ನಲ್ಲೀಗ ಗಾಢ ಮೌನವು ಮನೆಮಾಡಿತ್ತು, ಒಂದೆ ಒಂದು ಪಿಸುಮಾತನ್ನು ಸಹ ಕಿವಿಗೊಟ್ಟು ಕೇಳಿದರು ಕೇಳಿಸದ ಹಾಗೆ ಮನೆಯಲ್ಲಿಯೆ ಆಫೀಸ್ ನ್ನು ನಿರ್ಮಿಸಿಕೊಂಡಿದ್ದನು ಭರಮಪ್ಪ, ಲಕ್ಷಾಂತರ ರೂಪಾಯಿಗಳ ಟೆಂಡರ್ ವ್ಯವಹಾರ ಯಾರ ಕಿವಿಗೆ ಬಿದ್ದರೆ ಟೆಂಡರ್ ಕೈ ತಪ್ಪುವ ಅವಕಾಶಗಳು ಸಾಕಷ್ಟು. ಆದ್ದರಿಂದಲೆ ತನ್ನ ಎಲ್ಲ ವ್ಯವಹಾರಕ್ಕೆ ಅನುಕೂಲವಾಗಲೆಂದು ಈ ಕೋಣೆಯನ್ನು ಭದ್ರ ಕೋಟೆಯನ್ನಾಗಿಸಿಕೊಂಡಿದ್ದನು. ಈಗ ಭರಮಪ್ಪನೆ ಕ್ಯಾಕರಿಸುತ್ತ ಮಾತನ್ನು ಪ್ರಾರಂಭಿಸಿದನು. ' ಏಲ್ಲಾ ಕೆಲ್ಸ ಆದ್ವಾ..' ಸ್ವಲ್ಪ ಅಧಿಕಾರಯುತ ಧ್ವನಿಯಲ್ಲಿ ಸೋಮಣ್ಣನನ್ನು ಕೇಳಿದನು.
'ಹೂನ್ರೀ..ಗೌಡ್ರ ' ತಲೆಯಾಡಿಸುತ್ತಲೆ ಮತ್ತಷ್ಟು ಕುರ್ಚಿಯಲ್ಲಿ ಮುದುಡಿಕೊಂಡು ಕುಳಿತನು.
'ನೋಡು ತಮ್ಮಯ್ಯ, ಸೀದಾ ವಿಷಯಕ್ಕ ಬಂದ್ಬಿಡ್ತೀನಿ, ಮತ್ತ ಮೊನ್ನೆ ನಿಮ್ಮ ತಾಯಿಗೆ ತೋರ್ಸಿದ್ದು, ನಿನ್ನ ಮತ್ತ ನಿಮ್ಮಕ್ಕಾರ ಮದ್ವಿ ಖರ್ಚಿಗೆಂತ ಕೊಟ್ಟಿದ್ದ ಒಟ್ಟ ಬಡ್ಡಿ ಅಸಲು ಸೇರಿ ಹನ್ಯಾಡ ಲಕ್ಷ ರೂಪಾಯಿ ಆಗೈದ, ತಿಂಗ್ಳ ತಿಂಗ್ಳ ಬಡ್ಡಿನು ಹೆಚ್ಚಾಕ್ಕೊಂತ ಹೊಂಟದ, ನಿಂಗ ಕೊಡೊ ಹತ್ತ ಸಾವ್ರ ಸಂಬ್ಳದಾಗ ಬರೆ ಬಡ್ಡಿ ಮುರ್ಕೊಳ್ಳಾಕ ಆಗೋದಿಲ್ಲ, ಹಿಂಗಿದ್ದಾಗ ಮತ್ತ ಈ ಸಾಲಾನೆಲ್ಲ ಹ್ಯಾಂಗ ತೀರ್ಸಸ್ತೀಯಪಾ ?'
ಅಂತಹ ವೇಗದ ಫ್ಯಾನಿನ ಗಾಳಿಯಲ್ಲೂ ಸೋಮಣ್ಣನಿಗೆ ಮೈ ತುಂಬಾ ಬೆವರಿಳಿದುಬಿಟ್ಟಿತು. ಖರ್ಚಿಫನಿಂದ ಬೆವರನ್ನು ಒರೆಸಿಕೊಳ್ಳುತ್ತಾ, ' ನಂಕಡೆ ಏನೈತ್ರೀ ಗೌಡ್ರ, ಅದ ಎರ್ಡ ಎಕ್ರೆ ಹೊಲ, ಹಳೆಮನಿ, ದುಡ್ದ ತೀರ್ಸಾನಂತಂದ್ರ ನಿಗಲಾರ್ದ ಸಾಲ ಆಗ್ಬಿಟ್ಟೈತಿ, ನನ್ಗೂ ಏನು ತಿಳಿವಲ್ದರಿ ಗೌಡ್ರ, ಬಜಾರ್ದಾಗ ಎಕ್ರೆಕ ನಾಲ್ಕ ಲಕ್ಷ ರೂಪಾಯಿ ನಡದೈತ್ರಿ, ಎರಡ ಎಕ್ರೆ ಮಾರಿದ್ರ ಎಂಟ ಲಕ್ಷ ಬರ್ತಾವು, ಮನಿನ ಮಾರಾಕಂತ ಹಚ್ಚಿದ್ರ ನಮ್ಮ ಹಳ್ಳ್ಯಾಗ ಅಷ್ಟಾಕೊಂಡ ರೊಕ್ಕಾ ಕೊಟ್ಟ ಯಾರ ಹಿಡಿತಾರ್ರೀ..., ಅದು ಅಲ್ದ ಮ್ಯಾಲಿ ಛತ್ತು ಇವತ್ತೊ, ನಾಳ್ಯೊ ಅನ್ನೊಹಂಗ ಐತದು, ಅಬ್ಬಬ್ಬಾ ಅಂದ್ರ ಒಂದ ಮೂರ ಲಕ್ಷಕ್ಕ ಹೋಕ್ಕೈತ್ರಿ, ಅಲ್ಲಿಲ್ಲೆ ಅಡ್ಡಾಡಿ ಮಾರೊದ್ಕೀನ, ದೊಡ್ಡ ಮನ್ಸ ಮಾಡಿ ನೀವಾ ಎಲ್ಲಾ ಸುದ್ದ ಮಾಡ್ಕೊಂಡ ಬಿಡ್ರೀ.. ನೀವೆಲ್ಲೆ ಬಂದು ಸೈನ ಹಾಕಂದ್ರ ನಾನು ನನ್ಹೆಂಡ್ತಿ ಅಲ್ಲಿಗೆ ಬಂದ ಸೈನ ಮಾಡ್ತೀವ್ರಿ, ನೀವ್ ನಮ್ಮ ಪಾಲಿನ ದೇವ್ರ ಇದ್ಹಂಗ ನೋಡ್ರಿ ಗೌಡ್ರ, ನಮ್ಗೂ ಮನಿಯ್ಯಾಗ ಹೀರೆರಂತ ಯಾರದರ್ರೀ.., ಹಗ್ಗಾನು ನಿಮ್ಮ ಕೈಯ್ಯಾಗ, ಕುಡ್ಗೊಲು ನಿಮ್ಮ ಕೈಯ್ಯಾಗ ಕೊಟ್ಟಿವ್ರಿ, ಕತ್ರಸ್ತೀರೊ, ಕಾಪಾಡ್ತೀರೊ, ನೇಣ ಹಾಕ್ತೀರೊ ಬಾಳೆಕ ಹಚ್ತೀರೊ ಎಲ್ಲಾ ನಿಮ್ಮ ಕೈಯ್ಯಾಗ ಐತ ನೋಡ್ರಿ ಗೌಡ್ರ', ಕಣ್ಣಂಚಿನಲ್ಲಿ ಕಣ್ಣೀರನ್ನು ತುಂಬಿಕೊಂಡು ದೀನತೆಯಿಂದ ಎರಡು ಕೈಯನ್ನು ಜೋಡಿಸಿ ಮುಗಿಯುತ್ತಾ ನುಡಿದನು.
'ಹಂಗದ್ರ ಹ್ಯಾಂಗೊ ತಮ್ಮಾ, ಊರಾನ ಮಂದಿ ಏನ ತಿಳ್ಕೊಳಕ್ಕಿಲ್ಲ ನನ್ನ, ಅಲ್ಲಾ ದುಡಿಯಾಕಂತ ಇಟ್ಕೊಂಡು ಒಷ್ಟು ಆಸ್ತಿನ ನುಂಗಿ ನೀರ ಕುಡ್ದಬಿಟ್ಟ ಅಂತಾರಪಾ '
' ಗೌಡ್ರ, ಊರಾನ ಮಂದಿ ನೂರ ಮಾತ ಆಡ್ತಾರ, ಬೆಂಕ್ಯಾಗ ಬೆಂದ ಬಂಗಾರದ್ಹಂತ ನಡ್ತಿ ಹೊತ್ತಬಂದ ಸೀತವ್ವನ ಶೀಲದ ಮ್ಯಾಲ ಸಂಶಯಪಟ್ಟಂತ ದೇಶಾ ನಮ್ದು, ಇನ್ನೂ ಇಂತಾದಕೆಲ್ಲಾ, ತಲಿ ಕೆಡ್ಸಿಕೊಳ್ಳಾಕ ಆಗ್ತದೇನ್ರೀ..'
'ಆದ್ರೂ ಇರ್ಲೆಪಾ ಜನಪವಾದ ಬರ್ಬಾರ್ದ ನೋಡ ನಂಗ, ಯಾಕಂದ್ರ ಬೆಳ್ಕ ಹರ್ದ ಕೋಳಿ ಕೂಗಿದ್ರ, ನಾಕ್ಮಂದಿ ದೊಡ್ಡೊರ ಜತಿ ಅಡ್ಡಾಡಂವಪಾ ನಾ, ಹೋದಲೆಲ್ಲ ನಂದ ನ್ಯಾಮೆ ಕೆಡಬಾರ್ದ ನೋಡ, ಹೌದಲ್ಲ..?'
ಹೌದೌದು ಎನ್ನುವಂತೆ ತಲೆಯಾಡಿಸಿದನು ಸೋಮಣ್ಣ
ಮುಂದುವರೆಯುತ್ತಾ, ' ನೋಡ್ಪಾ ನೀನು ಬಾಯ್ಸತ್ತಾವ ಇದ್ದೀದಿ, ಏನ್ಮಾಡಬೇಕು ನಂಗೂ ಹಣ್ದ ಅವಶ್ಯಕತಿ ಭಾಳಂದ್ರ ಭಾಳ ಐತಿ, ಮುಂದಿನ ತಿಂಗ್ಳ ಎಮ್ ಎಲ್ಎ ಎಲೆಕ್ಷನ್ ಬಂತ ಸಾಹೇಬ್ರಗೊಂದಿಷ್ಟು ರೊಕ್ಕಾ ಕೂಡ್ಸಿ ಕೊಡ್ಬೇಕಾಗೈತಿ, ಹ್ಞೂಂ.... ಹ್ಯಾಂಗ ಮಾಡೋದನ್ನೊದ ತಿಳಿವಲ್ದಾಗೈತಿ ನೋಡ ನನ್ಗೂನು,'
ಗಲ್ಲಕ್ಕೆ ಕೈ ಇಟ್ಟುಕೊಂಡು ಚಿಂತಾಕ್ರಾಂತವಾದಂತಹ ರೀತಿಯಲ್ಲಿ ಕುಳಿತುಕೊಂಡನು ಭರಮಪ್ಪ.
No comments:
Post a Comment