ಮದುವೆಯಾಗಿ ಬಹಳ ವರ್ಷಗಳ ನಂತರ ಹುಟ್ಟಿದ್ದ ಮಗವೊಂದು, ಜನಿಸಿದ ಕೆಲವೆ ದಿನಗಳಲ್ಲಿ ಸತ್ತು ಹೋದರೆ ಮನೆಯಲ್ಲೆಲ್ಲ ಯಾವ ರೀತಿಯ ಸೂತಕದ ಛಾಯೆ ಮೂಡಿರತ್ತದೊ, ಹಾಗೆ ಮನಸ್ಸುಗಳನ್ನು ಕೊಂದುಕೊಂಡವರು ಸ್ಮಶಾನ ಮೌನಕ್ಕೆ ಜಾರಿಬಿಟ್ಟಿದ್ದರು. ಸೋಮಣ್ಣನು ಭರಮಪ್ಪನ ಮುಖವನ್ನೊಮ್ಮೆ ನೋಡಿ, ಕೈ ಮುಗಿದು ' ಕ್ಷಮೆಯಿರಲಿ ಗೌಡ್ರೆ, ನಿಮ್ಮ ಮಗ್ಳನ್ನೆ ನಿಮ್ಮ ಸುಖಕ್ಕೆಂದು ತಂದು ಕೂಡಿಸುವ ಆಸೆ ನಂಗೇನು ಇರ್ಲಿಲ್ರೀ, ಆದ್ರ ನನ್ನ ಬಡತನ, ಅಸಹಾಯಕತೆಯನ್ನ ನೀವು ನಿಮ್ಮ ಕಾಮದಾಸೆಕ ಬಂಡವಾಳ ಮಾಡ್ಕೊಳ್ಳಾಕ ನೋಡಿದ್ರಿ, ನಮ್ಮ ತಾಯಿಗೆ ಆರಾಮಿಲ್ಲಂತಂದ ನಿಮ್ಹತ್ರ ರೊಕ್ಕಾ ಕೇಳಾಕ ಬಂದಾಗ್ನ ನೀವು ಕೊಟ್ಟಿದ್ರ ಆಕಿ ಬದುಕಿರ್ತಿದ್ಲು, ನನ್ ಹೆಂಡ್ತಿ ಅಂದ ಕಂಡ ದುರಾಸೆಯಿಂದ ಹಣ ಸುರದ್ರೀ ನನ್ ತಾಯಿ ಉಳಿಲಿಲ್ಲ, ಹೋಗ್ಲಿ ನಿಮ್ಮ ಹೊಟ್ಯಾಗ ಹುಟ್ಟಿದ ಮಗ್ಳಿಗಾದ್ರೂ ನೀವ್ ರೊಕ್ಕಾ ಕೊಟ್ಟಿದ್ರ ಇವತ್ತ ನಾವು ಯಾರು ಅಪರಾಧಿ ಸ್ಥಾನದೊಳ್ಗ ನಿಂದ್ರತಿದ್ದಲ್ರೀ, ಒಬ್ರ ಮನಿಗೆ ಬೆಂಕಿ ಹಚ್ಚಿ ಚಳಿ ಕಾಯ್ಸಕೊಳ್ಳೊ ಚಟ ಒಳ್ಳೆದಲ್ರೀ ಗೌಡ್ರ, ಇಂದಲ್ಲ ನಾಳೆ ನಮ್ಮ ಮನಿಗೂ ಬೆಂಕಿ ಹಚ್ಚವ್ನ ಆ ದೇವ್ರು ಈ ಭೂಮಿ ಮ್ಯಾಲ ಹುಟ್ಸಿರ್ತಾನ, ಮರಿಬ್ಯಾಡ್ರೀ.. '
ತಿರುಗಿ ಭರಮಪ್ಪನ ಮಗಳಿಗೆ ಕೈ ಮುಗಿದು 'ನೋಡ ತಂಗ್ಯಮ್ಮಾ ನಿನ್ನೆ ನೀನು ನನ್ನ ಪಾಲ್ಗೆ ದೇವ್ರ ಬಂದ್ಹಂಗ ಬಂದಿ ನೀನು. ನಿನ್ನ ಜೀವಾನೇನೊ ನಾನುಳ್ಸಿನಿ ನಿಜ, ಆದ್ರ ನನ್ನ ಜೀವಾ ಉಳ್ಸಕಾ ನೀನ ಸಿಕ್ಕಿದಿ ಅಂತ್ಕೋತೀನಿ, ನನ್ನ ದೇಹ್ದಾಗ ಉಸಿರಿರೊವರ್ಗೂ ನಿನ್ನ ಋಣಾನ ಮರಿಯದಿಲ್ಲವ್ವ, ನೀನೇನರ ನಿನ್ನೆ ನನ್ಗ ಸಿಗ್ದ ಹೋಗಿದ್ದಿದ್ರ, ಇಷ್ಟೊತ್ತಿಗೆ ನನ್ನ ಚಿತಿ ಸುಟ್ಟು ಬೂದಿಯಾಗಿ ಗಂಗವ್ವನ ಹೊಟ್ಯಾಗ ತೇಲ್ತಿರ್ತಿತ್ತು, ಬಂದ ಬೀಗ್ರ ತಲಿಮ್ಯಾಲ ನೀರ ಸುರ್ಕಂಡ ಊರ ಸೇರ್ತಿದ್ರು, ಕಾಲಿಟ್ಟ ವರ್ಷಾಗ್ಲಿಲ್ಲ ಅತ್ತಿನ್ನ, ಗಂಡನ್ನ ನುಂಗ್ಬಿಟ್ಟಾಕಿ ಅಂತಂದ ಊರೆಲ್ಲ ನನ್ಹೆಂಡ್ತಿಗೆ ಪಟ್ಟ ಕಟ್ತಿದ್ರು, ಆದ್ರೇನ್ಮಾಡ್ಲಿ ನಿಮ್ಮಪ್ಪನ ಕಣ್ಣಿಗೆ ಕಟ್ದಂತ್ಹ ಹಳ್ದಿ ಪೊರೆನ ನಾನ ತೆಗಿಬೇಕಿತ್ತು. ನೀನು ನನ್ನ ಕ್ಷಮಿಸುವ್ವ, ಒಂದ ಮಾತ ಹೇಳ್ತೀನ ತಾಯಿ.... ಇವತ್ತ ನಾ ನಿನ್ನ ತಲಿತುಂಬಿ ಹಣ್ದ ಆಸೆಕ ಕರ್ಕೊಂಡ ಬಂದೀನಿ, ನಾಳೆ ಇನ್ನಾರೊ ಕರೀತಾರ, ಹಂಗಂತಂದ ಮಾನಬಿಟ್ಟ ಹೋಗ್ಬ್ಯಾಡವ್ವ, ಹಣ ನಿನ್ನೆ ನಿಮ್ಮ ತಂದಿ ಕಡಿಯಿತ್ತ ಸಂಜಿಕ ನನ್ಹತ್ರ ಇತ್ತ, ಇವತ್ತ ನಿನ್ನ ಕೈಯ್ಯಾಗ ಐತಿ, ನಾಳೆ ಇನ್ಯಾರ್ದೊ ಕಡಿಗ ಇರ್ತದ. ಆದ್ರ ಮಾನ ? ಎಷ್ಟ ರೊಕ್ಕ ಸುರದ್ರರ ಬರ್ತದೆನವ್ವ..?'
ಸೋಮಣ್ಣನ ಮಾತುಗಳಿಗೆ ಕಣ್ಣೀರೊಂದೆ ಇಬ್ಬರುತ್ತರವಾಗಿತ್ತು, ಕೊನೆಯದಾಗಿ ಇಬ್ಬರಿಗೂ ಕೈ ಮುಗಿದು ಕೋಣೆಯಿಂದ ಹೊರಬಂದು ಬಿರುಸಿನಿಂದ ನಡೆಯುತ್ತಾ ಕತ್ತಲೆಯಲ್ಲಿ ಕರಗಿಹೋದನು. ದೀಪ ಹತ್ತಿತ್ತು ಅದರ ಬೆಳಕಿನಲ್ಲಿ ಎಷ್ಟು ದೂರ ನಡೆಯುವುದು..? ಎಂಬುದೊಂದೆ ಪ್ರಶ್ನೆಯಾಗಿ ಉಳಿದದ್ದು.
Saturday, July 7, 2018
೮
Subscribe to:
Post Comments (Atom)
No comments:
Post a Comment