ಅವಳು ಬರುವ ಹೊತ್ತಾಯಿತು...
ನಿನ್ನ ಮಧುಶಾಲೆಯ ಗುಲಾಬಿಯ ತೋಟಕ್ಕೊಂದು
ಪರದೆಯನ್ನು ಕಟ್ಟಿಸಿಬಿಡು ಸಾಕಿ....
ಅವಳಂದವ ಕಂಡು...ಹೂಗಳೆಲ್ಲ ಸುಟ್ಟು ಹೋದಾವು..!!!
ನಾನೇನೊ....ಅಧರದ ಮಧುವು ಸಿಗದೆ, ಬಿಕ್ಕಿ...
ಬಿಕ್ಕಿ.....ಬಂದಿರುವೆನಿಲ್ಲಿಗೆ,
ಹೂವೆದೆಯ ಗಂಧವು ಸಿಗದೆ...ಹಾರಾಡುವ ದುಂಬಿಗಳು
ಸದ್ದಿಲ್ಲದೆ ಗೋರಿಯನ್ನು ಸೇರಿ ಹೋದಾವು...!!!
ಅವಳ ಮುಖಕ್ಕೆ ಪರದೆಯನ್ನಾದರೂ...
ಕಟ್ಟಿಕೊಂಡು ಬರಲು ಹೇಳಿ ಕಳುಹಿಸು ಸಾಕಿ...
ಹೆಚ್ಚಾಗಿಬಿಟ್ಟಿದೆ...ಬೀದಿಯಲ್ಲಿ ಹಿಂದೆ ಬಿದ್ದು ಕಣ್ಣು ಹೊಡೆಯುವವರ ಸಾಲು...
ಅವಳಾದರೂ...ಹಂಚುವಳದೇಷ್ಟು ಪ್ರೀತಿಯಲ್ಲಿ ಪಾಲು..
ದಕ್ಕದೆ ಹೋದವರೆಲ್ಲ ನಿನ್ನ ಮಧುಶಾಲೆಯ ಬಟ್ಟಲನು
ಹಿಡಿದು.....ಬಿದ್ದಿರುವರಲ್ಲ ಮುರಿದುಕೊಂಡು ಕಾಲು
ನೋಡಲ್ಲಿ...!!! ಊರ ಹೊರಗಿನ ದೇವಿಯ ಜಾತ್ರೆಯಲ್ಲಿ
ಸದ್ದುಗದ್ದಲವಿಲ್ಲದೆ ಎಷ್ಟೋ...ಪ್ರಾಣಿಗಳ ನೆತ್ತರು ಮಣ್ಣಿನಲ್ಲಿ
ಇಂಗಿ ಹೋಗುತ್ತಿದೆ ಸಾಕಿ....
ಅವಳು ನಗುವುದನ್ನು ಕೆಲದಿನ ಮರೆಯಲಿಕ್ಕಾದರು ಹೇಳು..
ಹಿಂದೆ ನಗುವಿಗೆ ಸೋತವರೆಲ್ಲ, ನೆತ್ತರನ್ನೆ ಕಾರಿಕೊಳ್ಳುತಿಹರು
ನಿನ್ನ ಹೂದೋಟದಲ್ಲಿ... ರಕ್ತ ಮೆತ್ತಿದ ಗುಲಾಬಿಗಳೇನೊ
ನಗುನಗುತಿಹವು...ಏನು ಆಗಿಲ್ಲದಂತೆ, ಕೊಟ್ಟ ಹೂವನು
ಮೂಸಿಯು ನೋಡದೆ, ಹೊಸಕಿ ಹೋದಳವಳು
ಏನು ಗೊತ್ತಿಲ್ಲದಂತೆ...
ಆ ಮಿಣಮಿಣಗುವ ತುಟಿಗಳಿಗಾದರೂ...
ನೋಡುಗರೆದೆಯಲ್ಲಿ ಮತ್ತೇರಿಸುವಂತಹ ..ಬಣ್ಣವನ್ನು
ಹಚ್ಚಿಕೊಳ್ಳದಿರೆಂದು ವಿನಂತಿಸಿಕೊ.. ಸಾಕಿ....
ತುಟಿಯಂಚಿನ ಸವಿಯನು ಸವಿಯಲು ಹೋದವರೆಲ್ಲ...
ಬಟ್ಟಲೊಳಗಿನ ಕಹಿ ಮದ್ಯಕ್ಕೆ......ದಾಸರಾಗಿಹರೆಲ್ಲ
ತುಟಿಯ ರಂಗಿನ ಗುಂಗಿನೊಳು ಬಿದ್ದವರೆಲ್ಲ.....ಹೂಜಿ..
ಹೂಜಿಗಳನೆ ಖಾಲಿ ಮಾಡುತ್ತಿದ್ದರೂ......ನಶೆ ಇಳಿಯುವ
ಸೂಚನೆಯೆ ಇನ್ನೂ ಸಿಗುತ್ತಿಲ್ಲ...ಮಧುಶಾಲೆಯಲ್ಲಿ ಮಲಗಿದ
ಲಕ್ಷ್ಮೀಗೂ...ಕೂಡಾ ಎಚ್ಚರವಾಗಿಲ್ಲ...!!!!
No comments:
Post a Comment