Friday, July 6, 2018

ಎರಡ್ಮೂರು ದಿನಗಳು ಹೀಗೆ ಕಳೆದುಹೋದವು, ಅದೊಂದು ದಿನ ಸೋಮಣ್ಣನ ಬೀಗರ ಮನೆಯಲ್ಲಿ ದೇವರ ಪೂಜೆಯನ್ನು ಇಟ್ಟುಕೊಂಡಿದ್ದರು, ಅದಕ್ಕಾಗಿ ಭರಮಪ್ಪನನ್ನು ಕಾಡಿ...ಬೇಡಿ ಒಂದು ದಿನದ ರಜೆಯನ್ನು ಪಡೆಯಲು ಹರಸಾಹಸಪಟ್ಟಿದ್ದನು, ಆದರೆ ಅವನು ಕರುಣಿಸಿದ್ದು ಅರ್ಧ ದಿನದ ರಜೆಯನ್ನು ಮಾತ್ರ, ಇಷ್ಟು ಸಿಕ್ಕಿದ್ದೆ ಪುಣ್ಯವೆಂದುಕೊಂಡು,  ಹೆಂಡತಿಯನ್ನು ಬೆಳಿಗ್ಗೆ ಬೇಗ ಅವಳ ತವರೂರಿಗೆ ಕರೆದುಕೊಂಡು ಹೋಗಿ, ಪೂಜಾ ಕಾರ್ಯವನ್ನು ಮುಗಿಸಿಕೊಂಡು ಊಟ ಮಾಡಿಕೊಂಡು ತಾಂಬೂಲಕ್ಕೂ... ಕಾಯದೆ ಹೊರಟಿದ್ದರು. ಬರುವ ದಾರಿಯಲ್ಲಿ ಕಾಂಟ್ರ್ಯಾಕ್ಟರ ಭರಮಪ್ಪನ ಕಾರು ಡಿಸೇಲ್ ಖಾಲಿ ಆಗಿ ಕೈ ಕೊಟ್ಟು ನಿಂತಿತ್ತು, ದಾರಿಯ ಮಧ್ಯದಲ್ಲಿ ಭರಮಪ್ಪ ನಿಂತಿರುವುದನ್ನು ನೋಡಿ ಸೋಮಣ್ಣನಿಗೆ ಕೈ ಕಾಲುಗಳೆ ಆಡಲಿಲ್ಲ, 'ಅಲೆಲೆ...ಏನಪಾ ತಮ್ಮಾ.. ಕಾರ್ಯ ಮುಗ್ಸಿಕೊಂಡ ಈಗ ಬಂದೇನು..?' ಎಂದು ತಲೆಯತ್ತಿ ಸೋಮಣ್ಣನ ಹಿಂದೆ ಕುಳಿತಿದ್ದಂತಹ, ಅವನ ಹೆಂಡತಿ ಲಕ್ಷ್ಮೀಯತ್ತ ಕಣ್ಣು ಹಾಸಿದನು.
' ಹ್ಞೂಂ ನ್ರೀ ಗೌಡ್ರ' ತೊದಲುತ್ತಲೆ, ನುಡಿದು ಗಾಡಿಯನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ, ಕಾರಿನ ಹತ್ತಿರ ಬಂದನು, ಕಾರೊಳಗಡೆ ನೋಡಿದರೆ, ಭರಮಪ್ಪನ ಧರ್ಮಪತ್ನಿ, ಮತ್ತು ಮಗಳು ಕುಳಿತಿದ್ದರು. ಅವರಿಬ್ಬರನ್ನು ಕಂಡು ಮನಸ್ಸಿಗೊಂದಿಷ್ಟು ಸಮಾಧಾನವಾಯಿತವನಿಗೆ,
' ಥೂ... ಇಲ್ಲೂ ಕಂಜೂಸ್ ಬುದ್ದಿ, ಊರಿಗೆ ಹೊಂಟಿವಿ ಅಂತ ಗೊತ್ತಿದ್ದು ಗಾಡಿಗೆ ಎಣ್ಣಿ ಹಾಕ್ಸಕೊಂಡ ಹೋಗ್ಬೇಕ ಅನ್ನೊ ಕಬರ್ ಬ್ಯಾಡ ಇದ್ಕ' ಸಣ್ಣ ಧ್ವನಿಯಲ್ಲಿ ಗೊಣಗಿಕೊಳ್ಳುತ್ತಿದ್ದಳು ಭರಮಪ್ಪನ ಹೆಂಡತಿ, ಅವಳ ಮಾತುಗಳನ್ನು ಕೇಳಿ ಹ್ಞೂಂ... ಎಂದು ಗಂಟಲಿನಿಂದಲೆ ಗದರಿಸಿದನು ಭರಮಪ್ಪ, ಸೋಮಣ್ಣನು ಕಾರಿನ ಹತ್ತಿರ ಬಂದು ನಿಂತದ್ದನ್ನು ಅವಳು ಗಮನಿಸಿಯೆ ಇರಲಿಲ್ಲ, ಕಿಡಕಿಯಿಂದ ಸೋಮಣ್ಣನ್ನು ನೋಡಿ ಸುಮ್ಮನಾದಳಾಗ. ಜೇಬಿನಿಂದ ಎರಡು ಸಾವಿರ ನೋಟಿನ ಕಟ್ಟನ್ನು ತೆಗೆದು ಅದರೊಳಗಿಂದ ಒಂದು ನೋಟನ್ನು ಹಿರಿದು ಸೋಮಣ್ಣನಿಗೆ ಕೊಡುತ್ತಾ, 'ತಗೋಳಪಾ ಹಿಂದ ಕಾರಿನ ಡಿಕ್ಯಾಗ ಒಂದ ಕ್ಯಾನ ಐತಿ, ಇಲ್ಲೆ ಎರ್ಡ ಕಿ.ಮೀ. ದೋರ್ದಾಗ ಒಂದ ಬಂಕ್ ಐತಿ, ಆ ಕ್ಯಾನ ತುಂಬಾ ಎಣ್ಣಿ ಹಾಕ್ಸಿಕೊಂಡು ಬಾ, ಉಳ್ದ ರೊಕ್ಕಾನೇನ ನಂಗ ಕೊಡಬ್ಯಾಡ, ಮನ್ಯಾಗ ನಿಮ್ಮ ತಾಯಿಗ ಆರಾಮಿಲ್ಲಂತಂದೆಲ್ಲ..? ಮನಿಗೆ ಏನರ ಒಂದಿಷ್ಟು ಹಣ್ಣ ಹಂಪ್ಲ ಒಯ್ಯಿ, ಹ್ಞಾಂ.... ಆತಿಲ್ಲೊ...' ಅವನ ಮರು ಮಾತಿಗೂ ಕಾಯದೆ ಲಕ್ಷ್ಮೀಯ ಸೌಂದರ್ಯವನ್ನು ನೋಡುತ್ತಾ, ನೋಟನ್ನು ಸೋಮಣ್ಣನ ಅಂಗಿ ಜೇಬಿನಲ್ಲಿ ತುರುಕಿದನು. ಭರಮಪ್ಪನ ನೋಟ ತನ್ನ ಹೆಂಡತಿಯ ಮೇಲೆ ಬಿದ್ದಿದ್ದನ್ನು ಗಮನಿಸಿದ ಸೋಮಣ್ಣನು, ತಡಮಾಡದೆ ಬಿಲ್ಲಿನಂತೆ ಬಿಟ್ಟ ಬಾಣದಂತೆ ಹೋಗಿ ಡಿಸೇಲ್ ನ್ನು ತಂದುಕೊಟ್ಟು ಭರಮಪ್ಪನನ್ನು ಸಾಗುಹಾಕಿ ಹೆಂಡತಿ ಲಕ್ಷ್ಮೀಯನ್ನು ಕರೆದುಕೊಂಡು ಮನೆಗೆ ಬರುವ ಹೊತ್ತಿಗೆ ಜೀವಹೋಗಿ ಬಂದಂತಾಗಿತ್ತು ಸೋಮಣ್ಣನಿಗೆ.

    ಸಂಜೆ ಆರರ ಸಮಯ, ಏನೊ ಚಿಂತಿಸುತ್ತ ಮನೆಯ ಜಗಲಿಯಲ್ಲಿ ಚಹಾವನ್ನು ಕುಡಿಯುತ್ತ ಕುಳಿತುಕೊಂಡಿದ್ದನು ಸೋಮಣ್ಣ. ದೂರದಿಂದ ಯಾವುದೊ ಒಂದು ಕಾರು ರಸ್ತೆಯ ತುಂಬಾ ಧೂಳನ್ನು ಎಬ್ಬಿಸುತ್ತಾ ಬಂದು ಸೋಮಣ್ಣನ‌ ಮನೆಯ ಮುಂದೆ ನಿಂತುಕೊಂಡಿತು. ನೋಡಿದರೆ ಕಾಂಟ್ರ್ಯಾಕ್ಟರ ಭರಮಪ್ಪನ ಕಾರು, ಎದೆ ಝಲ್ ಎಂದುಬಿಟ್ಟಿತು ಸೋಮಣ್ಙನಿಗೆ, ದಡಬಡಬನೆ ಜಗಲಿಯಿಂದ ಇಳಿದ ಏರು ಕಟ್ಟಿದ್ದ ಲುಂಗಿನ್ನು ಉಚ್ಚಿ, ಕಾರಿನ ಬಾಗಿಲ ತನಕ ಹೋಗಿ ನಿಂತನು. ಕಾರಿನ ಬಾಗಿಲ ತೆಗೆದು ಹೊರಬಂದ ಭರಮಪ್ಪನು 'ಇದೇನಯ್ಯ ನಿನ್ನರಮನೆ' ಎಂದು ಹಂಗಿಸುವ ಧ್ವನಿಯಲ್ಲಿ ಕೇಳಿದ, ಹೌದೆನ್ನುವಂತೆ ತಲೆಯಾಡಿಸತ್ತಾ
'ಅಲ್ಲಾ, ಇಷ್ಟು ದೂರ ಯಾಕ ಬರಾಕ ಹೋದ್ರಿ.., ಒಂದ್ ಪೋನ್ ಮಾಡಿದ್ರ ನಾನ ಬರ್ತಿದ್ನೆಲ್ಲರಿ.' ಮೆಲುದನಿಯಲ್ಲಿ
'ಅಯ್ಯೊ ನಿನ್ನ ಪೋನ್ ನ್ಯಾಗ ನಿಂ ತಾಯಿ ಹೆಂಗಾದರ್ ಅಂತಂದ‌‌ ಏನಾರ ನೋಡಾಕ ಬರ್ತದನು...? ಬುದ್ದಿ ಎಲ್ಲಿಟ್ಟಿಯೊ ತಮ್ಮಾ, ಮೊನ್ನೆರ ಹೇಳಿದ್ದಿ ನಿಮ್ಮ ತಾಯಿಗೆ ಭಾಳ
ಹುಷಾರಿಲ್ಲಂತಂದ, ಅದ್ಕ ಇದ ದಾರ್ಯಾಗ ಹೊಂಟಿದ್ನ್ಯಾ, ನೊಡ್ಕೊಂಡ ಹೋದ್ರಾತಂದು ಬಂದ್ನಿ ನೋಡ್ಪಾ..' ಮಾತನಾಡುತ್ತಲೆ ಸೋಮಣ್ಣನ ಹೆಗಲಿನ ಮೇಲೆ ಕೈ ಹಾಕಿಕೊಂಡು ಅವನ ಅನುಮತಿಗೂ ಕಾಯದೆ ಮನೆಯೊಳಕ್ಕೆ ನಡೆದೆಬಿಟ್ಟನು. ಒಳಗೆ ಬಂದಂತಹ ಭರಮಪ್ಪನು ಸೀದಾ ಹೋಗಿದ್ದು ಅನಾರೋಗ್ಯ ಪೀಡಿತ ಸೋಮಣ್ಣನ ತಾಯಿಯ ಹತ್ತಿರವಾದರೂ.... ಕಣ್ಣುಗಳು ಮಾತ್ರ ಬೇಟೆಯನ್ನು ಹುಡುಕುವ ಶಿಕಾರಿಯ ನೋಟದಂತೆ, ಕಣ್ರೆಪ್ಪೆಗಳನ್ನು ಮಿಟುಕಿಸದೆ ಲಕ್ಷ್ಮೀಗಾಗಿ ಹುಡುಗಾಟತೊಡಗಿದವು. ಸೋಮಣ್ಣನಿಗೆ ಮಾತ್ರ ಜೇಡರ ಬಲೆಯಲ್ಲಿ ಸಿಕ್ಕಿಹಾಕಿಕೊಂಡ ಹುಳುವಿನಂತೆ ಚಡಪಡಿಸತೊಡಗಿದ್ದನು. ಭರಮಪ್ಪನು ಬಂದ ವಿಷಯವು ಗೊತ್ತಾಗಿ ಅಡುಗೆ ಮನೆಯಿಂದ ಲಕ್ಷ್ಮೀ ಚಹಾವನ್ನು ಮಾಡಿಕೊಂಡು ತಂದು ಭರಮಪ್ಪನ ಮುಂದೆ ಹಿಡಿದು ನಿಂತಳು. ಚಹಾದ ಲೋಟವನ್ನು ತಟ್ಟೆಯಿಂದ ತೆಗೆದುಕೊಳ್ಳುತ್ತಲೆ ಅವಳ ಸೌಂದರ್ಯ ರಾಶಿಯನ್ನು ಕಣ್ತುಂಬಿಕೊಳ್ಳತೊಡಗಿದನು, ಅವನ ಹುಳಕ ಮನಸ್ಸು ಇವಳನ್ನು ತನ್ನ ಹೂ ಹಾಸಿಗೆಗೆ ಆಹ್ವಾನಿಸುವ ಬಗ್ಗೆ ಮನಸ್ಸಿನಲ್ಲಿಯೆ ಹುತ್ತವೊಂದನ್ನು ಕಟ್ಟಲಾರಂಭಿಸಿತು, ಕೆಲಸದ ಅವಸರದಲ್ಲಿ ಲಕ್ಷ್ಮೀ ಸೀರೆಯ ಸೆರಗನ್ನು ನಡುವಿಗೆ ಸಿಕ್ಕಿಸಿಕೊಂಡಿದ್ದಳು, ಸೀರೆಯ ಚೂರು ಸರಿಸಿದ ಭಾಗದಿಂದ ಅವಳ ಹೊಕ್ಕಳು ಇವನಿಗೆ ದರ್ಶನಕೊಟ್ಟಿತ್ತು, ಮನದಲ್ಲಿ  ಅವಳನ್ನು ಪಡೆಯಬೇಕೆಂದು ಕಟ್ಟಿದ ಆಸೆಯ ಹುತ್ತದಲ್ಲಿ ಕಾಮದ ಹಾವು ಒಳಸೇರಿಬಿಟ್ಟು, ಹಸಿವಿನಿಂದ ಭುಸುಗುಟ್ಟತೊಡಗಿತು. ಅವಳನ್ನೆ ನುಂಗುವಂತೆ ನೋಡತೊಡಗಿದನು, ಹೇಳದೆ ಕೇಳದೆ ಹೀಗೆ ಅಚಾನಕ್ ಅಗಿ ಬಂದಿದ್ದರಿಂದ ಅವಳೇನು ಸಿಂಗರಿಸಿಕೊಂಡಿರಲಿಲ್ಲ, ಮುಡಿಯಿಂದ ಜಡೆಯಾಗಲು ಜಗಳವಾಡಿ ಅವಳ ಕೋಮಲ ಕೆನ್ನೆಗಳ ಮೇಲೆ‌ ನಾಟ್ಯವಾಡುತ್ತಿದ್ದ ಮುಂಗುರುಳುಗಳು, ಎರಡು ಕೆನ್ನೆಗಳಿಗೆ ತೆಳ್ಳಗೆ ಹಚ್ಚಿದ ಅರಿಶಿಣ, ಬೆವರಿನಿಂದ ಅವಳ ಮೈಯಲ್ಲಾ ಸಿಂಗರಿಸಿದ ಬೆವರಿನ ಹನಿಗಳು, ಬಳ್ಳಿಯಂತಹ ನಡುವು, ಜೇನು ತುಂಬಿ ನಿಂತ ಕೆಂದುಟಿಗಳು, ಆಹಾಹಾ..!!! ಹಾ... ಒಟ್ಟಿನಲ್ಲಿ ಬರಿ ತುಪ್ಪವನ್ನೆ ಹಾಕಿ ಮಾಡಿಟ್ಟ ಮೈಸೂರಪಾಕದಂತೆ ಕಂಡಳು. ಚಹಾವನ್ನು ಕುಡಿಯಲು ಮುಂದಾದಾಗ ತುಟಿಗೆ ಹತ್ತಿ ಚುರ್ರೆಂದಾಗಲೆ ಭರಮಪ್ಪನು ವಾಸ್ತವಕ್ಕೆ ಬಂದದ್ದು, ಸೋಮಣ್ಣನು ಇದನ್ನು ಗಮನಿಸಿ ಹೆಂಡತಿಯನ್ನು ಒಳಗಡೆ ಹೋಗು ಎಂದು ಕಣ್ಸನ್ನೆಯಿಂದಲೆ ಸೂಚಿಸಿದನು. ಲಕ್ಷ್ಮೀ ಅಯಿತೆಂದು ಗೋಣಾಡಿಸಿ ಒಳಗೆ ಹೋದಳು. ಭರಮಪ್ಪನಿಗೆ ಅತೀವ ರಸಭಂಗವಾಗಿಬಿಟ್ಟಿತು, ಚಹಾವನ್ನು ಕುಡಿಯದೆ ಲೋಟವನ್ನು ಟಿಪಾಯ್ ಮೇಲಿಟ್ಟು ಎದ್ದು ನಿಂತನು. ಸೋಮಣ್ಣನ ತಾಯಿಯ ಕೊಣೆಯಿಂದ ಬಿಕ್ಕಳಿಕೆಯ ಶಬ್ದವು ಬರಲಾರಂಭಿಸಿತು. ಭರಮಪ್ಪನು, ಸೋಮಣ್ಣನು ಒಳಗೆ ಹೋಗಿ ನೋಡಿದರೆ ಸೋಮಣ್ಣನ ತಾಯಿ ಮೆಲುಗಣ್ಣು ಮಾಡಿಕೊಂಡು ಬಿಕ್ಕತೊಡಗಿದ್ದಳು. ಭರಮಪ್ಪನಿಗೆ ಏನೊ‌ ಹೊಳೆದಂತಾಗಿ, ಅವಸರಿಸಿ ಅವನ ತಾಯಿಯನ್ನು ಕರೆದುಕೊಂಡು ತನ್ನ ಕಾರಿನಲ್ಲೆ ಹಾಕಿಕೊಂಡು ನಗರದ ದೊಡ್ಡಾಸ್ಪತ್ರೆಗೆ ಸೇರಿಸಿದನು. ಸೋಮಣ್ಣನು ಬೇಡ ಬೇಡ ಅಂತ ಎಷ್ಟೇ ಬೇಡಿಕೊಂಡರು,'ಸುಮ್ನಿರಯ್ಯಾ ತಾಯಿ ಅಂದ್ರೆ‌ ಎಲ್ರಿಗೂ ಒಂದೆ, ನನ್ನ ತಾಯಿ ಆಗಿದ್ರೆ ನಾನ್ ತೋರ್ಸ್ತಿರಲಿಲ್ವಾ..?' ಎಂದು ಸೋಮಣ್ಣನ ಬಾಯಿಯನ್ನು ಮುಚ್ವಿಸಿ, ಎರಡು ದಿನದಲ್ಲಿ ನಾಲ್ಕು ಲಕ್ಷ ಆಸ್ಪತ್ರೆಯ ಬಿಲ್ ಆಗಿಬಿಟ್ಟಿತ್ತು, ಆಪರೇಷನ್, ಆಯ್.ಸಿ.ಯು ರೂಮ್ ಹೀಗೆ ಅಂತೆಲ್ಲಾ ಹೇಳಿ, ಕೊನೆಗ ಮೂರನೆ ದಿನಕ್ಕೆ ಸೋಮಣ್ಣನ ತಾಯಿ‌ ತೀರಿಕೊಂಡುಬಿಟ್ಟಳು. ವಿಧಿಯಿಲ್ಲದೆ ಹೆಣವನ್ನು ಊರಿಗೆ ತೆಗೆದುಕೊಂಡು ಬಂದು ಎಲ್ಲ ಕಾರ್ಯವನ್ನು ಮಾಡಿ ಮುಗಿಸಿಬಿಟ್ಟರು.

No comments:

Post a Comment