Saturday, July 7, 2018

ಸೋಮಣ್ಣ ಐಬಿಯ ವರಾಂಡದಲ್ಲಿ ಬಾಲ ಸುಟ್ಟ ಬೆಕ್ಕಿನಂತೆ ಅತ್ತಿತ್ತ ಅಲೆದಾಡುತ್ತಿದ್ದನು, ಕೈಯಲ್ಲಿ ಟಾರ್ಚನ್ನು ಹಿಡಿದುಕೊಂಡು. ಕೈಯಲ್ಲಿದ್ದ ವಾಚನ್ನು ನೋಡಿಕೊಂಡನು ಗಂಟೆ ಹತ್ತೂ ಇಪ್ಪತ್ತೆಂಟಾಗಿತ್ತು.' ಯಾಕ ಈ ಮುದಿ ಗೌಡ ಇಷ್ಟೊತ್ತಾದ್ರು ಬರ್ಲೆ ಇಲ್ವಲ್ಲ, ' ಮನಸ್ಸಿನಲ್ಲಿ‌ ಚಿಂತಿಸುತ್ತಿರುವಾಗಲೆ, ಐಬಿ ಗೇಟಿನ ಮುಂದೆ ಒಂದು ವಾಹನ ಬಂದು ನಿಂತಿತು.‌ ಅದರೊಳಗಿಂದ ಒಂದು ಆಕೃತಿ ಇಳಿದು ಮೆಲ್ಲನೆ ಗೇಟನ್ನು ತೆಗೆದು ಒಳಬರತೊಡಗಿತು, ಬಂದ ವಾಹನ ಮರಳಿ ಹೊರಟು ಹೋಯಿತು. ಸೋಮಣ್ಣನು ಟಾರ್ಚನ್ನು ಹಾಕಿಕೊಂಡು ಆಕೃತಿಯ ಎದುರು ಹೋಗಿ ನಿಂತು ' ಯಾರ್ ನೀನು ' ಎಂದು ಪ್ರಶ್ನಿಸಿದನು.  ತಲೆಯ ಮೇಲೆ ಬಿಳಿ ಟವಲ್ ನಿಂದ ಮುಸುಕನ್ನು ಹಾಕಿಕೊಂಡ ಬಂದ ಆಕೃತಿ ಸೋಮಣ್ಣನಿಗೆ ತನ್ನ ರೂಪವನ್ನು ತೋರಿಸಿತು. ಭರಮಪ್ಪ..!!!! 'ಎಲ್ಲಾ ರೇಡಿನಾ ' ಅತೀವ ಉತ್ಸುಕತೆಯಿಂದ ಕೇಳಿದ ಭರಮಪ್ಪ
'ಹೂನ್ರೀ ಗೌಡ್ರ, ನಿವ್ ಬರೋದ ಲೇಟಾಯ್ತು,'
'ಅದು ಬಿಡು, ಅದ್ರ ವಿಷ್ಯಾನ ಆಮೇಲೆ ಮಾತಾಡೋಣಂತ, ಕತ್ಲ್ಯಾಕ ಆಗೈತಿ ಐಬಿ, ಕರೆಂಟ ಏನರ ಹೋಗ್ಯಾವನು'
'ಇಲ್ರಿ ಗೌಡ್ರ ಯಾರ್ಗೂ ನೀವ್ ಬರೋದ ಗೊತ್ತಾಗ್ಬಾರದಂತಂದ ಲೈಟೆಲ್ಲಾ ಆಫ್ ಮಾಡಿನ್ರೀ '
'ಮತ್ತ ಲಕ್ಷ್ಮೀ ಒಪ್ಕೊಂಡ್ಳನು,'
' ಹೂನ್ರೀ..'
'ಅಲ್ಲಾ, ಮತ್ತ ನಾ ಒಮ್ಮೆ ಒಳೆಕ ಹೋದಮ್ಯಾಲ ಆಕಿ ಕೊಸರಾಡೊದು ಪಸರಾಡೊದ ಮಾಡಿದ್ರ ನಾ ಕೇಳವಲ್ಲಾ ನೋಡ, ಹಣ್ಣ ಹಿಂಡದೊ ರಸ ಕುಡಿಯೋದ'
ಭರಮಪ್ಪನ ಮಾತಿಗೆ ಸೋಮಣ್ಣನ ಮೈಗೆಲ್ಲ ಉರಿ ಹಚ್ಚಿ, ಎದೆಗೆ ಕೊಡ್ಲಿಯಿಂದ ಜೋರಾಗಿ ಮೇಲೆತ್ತಿ ಒಂದು ಖಚ್ಚ ಹಾಕದ್ಹಂತಹ ನೋವಿನನುಭವ, ಅವುಡುಗಚ್ಚಿಕೊಂಡು ಸಮಾಧಾನದಿಂದ, ' ಹೇ.. ಹಂಗೇನ ಆಗೋದಿಲ್ಲ ತಗೋರಿ ನಾ ಎಲ್ಲಾ ತಿಳ್ಸಿ ಹೇಳಿನಿ, ಮೊದ್ಲ ನಿಮ್ಮ ಮೊಬೈಲ ಕೊಡ್ರಿ, ನಿಮ್ಮ ಸುಖಕ್ಕ ಯಾರರ ಪೋನ್ ಮಾಡಿ ಮುಳ್ಳ ಚುಚ್ಚ್ಯಾರು' ಭರಮಪ್ಪನ ಮಾತಿಗೂ ಕಾಯದೆ ಪೋನ್ ನ್ನು ಕಸಿದುಕೊಂಡು ರೂಂನ ಹತ್ತಿರ ಕೈ ಹಿಡಿದು ಕರೆದುಕೊಂಡು ಹೋದನು.
'ನೀವ್ ಒಳಕಾ ಹೋಗ್ರಿ, ಒಂದೈದ ನಿಮಿಷ ಬಿಟ್ಟ ನಾನ ಲೈಟ್‌ ಹಾಕ್ತೀನಿ'
'ನಂಗ ಕಾಣ್ಬೆಕಲ್ಲೊ‌ ಆಕಿ '
' ನಾ ತೋರ್ಸತ್ತೀನ ಬರ್ರಿ, ಸ್ವಲ್ಪ ಸೈಲೆಂಟಾಗಿರಿ, ಒಳಗ್ಹೋಗಿ ಆಕಿನ ತಬ್ಕೊಳ್ಳ ತನ್ಕ ಮಾತ ಆಡಬ್ಯಾಡ್ರಿ, ಹೆದರ್ಗಿದ್ರ್ಯಾಳು, ಫಸ್ಟ ಟೈಂ ನೋಡ್ರಿ'
'ಹೇ...ಹೆ ನಿ ಏನ ಚಿಂತಿ ಮಾಡ್ಬೇಡಾ ಇಂತಾದ್ರಗೆಲ್ಲಾ ನಾವ್ ಭಾರಿ ಎಕ್ಸಪರ್ಟ ಅದೀವಿ'. ಅಷ್ಟರಲ್ಲಾಗಲೆ ರೂಮಿನ ಹತ್ತಿರ ಬಂದುಬಿಟ್ಟಿದ್ದರಿಬ್ಬರು. ಸೋಮಣ್ಣನು ಮೆಲ್ಲಗೆ ರೂಮಿನ ಬಾಗಿಲನ್ನು ತೆಗೆದು ಮೊಬೈಲ್ ಟಾರ್ಚ್ ಮೂಲಕ ಬೇಡ್ ಮೇಲೆ ಬಾಗಿಲಿಗೆ ಬೆನ್ನನ್ನು ಮಾಡಿ ಕುಳಿತುಕೊಂಡಿದ್ದವಳನ್ನು ತೋರಿಸಿ, ಭರಮಪ್ಪನನ್ನು ಒಳಗೆ ಕಳುಹಿಸಿ ಬಾಗಿಲನ್ನು ಹಾಕಿಕೊಂಡುಬಿಟ್ಟನು. ಕತ್ತಲಲ್ಲಿ ಎರಡು ನಿಮಿಷ ನಿಂತು, ಕತ್ತಲೆಗೆ ಕಣ್ಣುಗಳು ಹೊಂದುಕೊಂಡ ಮೇಲೆ ಕಣ್ಣುಗಳನ್ನು ಹಿಗ್ಗಿಸುತ್ತಾ ಕಳ್ಳ ಬೆಕ್ಕಿನ ಹಾಗೆ ಹೆಜ್ಜೆಗಳನ್ನು ಹಾಕುತ್ತಾ, ಜಡೆಯ ತುಂಬ ಮುಡಿದಿದ್ದ ಮಲ್ಲಿಗೆಯ ವಾಸನೆಯನ್ನು ಗ್ರಹಿಸುತ್ತಾ, ಅವಳ ಭುಜದ ಮೇಲೆ ಕೈಯಿಟ್ಟು ಎಬ್ಬಿಸಿ, ಗಬಕ್ಕನೆ ತೆಕ್ಕಗೆ ಎಳೆದುಕೊಂಡು ಮಲ್ಲಿಗೆಯ ಘಮಲನ್ನು ಆಸ್ವಾದಿಸುತ್ತಾ, 'ಲಕ್ಷ್ಮೀ ಭಾಳ ದಿವ್ಸದ ಕನಸಿಗೆ ಇವತ್ತ ಹೇರಿಗೆಯಾಗೊ ಸಮಯಾ ಬಂದೈತ ನೋಡ,' ಎಂದು ತನ್ನ ತೋಳ್ಬಲವನ್ನು ಬಿಗಿಮಾಡಿದನು, ಅಷ್ಟೇ.. ಕ್ಷಣದಲ್ಲಿ ಕೋಣೆಯೆ ಪ್ರತಿಧ್ವನಿಸುವಂತೆ ಚೀರಿ ಆ ಹೆಣ್ಣು ಭರಮಪ್ಪನ ತೆಕ್ಕೆಯಿಂದ ಕೊಸರಿಕೊಂಡು ದೂರ ಸರಿದು ನಿಂತುಬಿಟ್ಟಳು.
ಫಕ್ಕನೆ ಕೋಣೆಯೆ ಝಗಮಗಿಸುವ ಹಾಗೆ ಲೈಟ್ ಹೊತ್ತುಕೊಂಡಿತು. ಆ ಬೆಳಕಿನ ಪ್ರಕಾಶಕ್ಕೆ ಕ್ಷಣ ಕಣ್ಣುಗಳು ಮಂಜಂತಾದರು ಉಜ್ಜಿಕೊಂಡು ಆ ಹೆಣ್ಣಿನ ಕಡೆ ನೋಡಿದ ಭರಮಪ್ಪನಿಗೆ ಎದೆಯೊಡೆದು ಸತ್ತುಬಿದ್ದಂತಹ ಅನುಭವ
ನೆತ್ತಿಗೇರಿದ್ದ ಕಾಮದ ಪಿತ್ತವು ಜರ್ರನೆ ನೆಲಕ್ಕಿಳಿದು ಹೂತು ಹೋಗಿತ್ತು.  ಆಗ ಸೋಮಣ್ಣನು ಬಾಗಿಲನ್ನು ತೆರದು ಒಳಗೆ ಬಂದು ಗಹಗಹಿಸಿ ನಗುತ್ತಾ ನಿಂತನು, ಆಘಾತದಿಂದ ಚೇತರಿಸಿಕೊಂಡ ಭರಮಪ್ಪನು ಸಿಟ್ಟಿನಿಂದ ಎದ್ದು ಸೋಮಣ್ಣನ ಎದೆಯ ಮೇಲಿನ ಅಂಗಿಯನ್ನು ಹಿಡಿದುಕೊಂಡು ಗೋಡೆಗೆ ತಾಗಿಸಿ, ಬೆಂಕಿ ಕಾರುವ ಕಣ್ಣುಗಳಿಂದ ' ಏನ್ಲೆ‌ ಇದು ಸೋಮ್ಯಾ '
' ಹೆಣ್ರೀ ಗೌಡ್ರ....'
' ನಂಗೊ ಗೊತ್ತೈತ್ಲೆ ಮಗನ, ಆದ್ರ ಆಕಿ ನನ್ನ ಮಗ್ಳ ಅದಾಳ'
'ಆದ್ರೇನಾತ್ರಿ...? ಸರ್...' ಗಾಯದ ಮೇಲೆ‌ ತಣ್ಣನೆ ಮಂಜುಗಡ್ಡೆಯಿಡುವ ಹಾಗೆ ಮೆಲ್ಲಗೆ ನುಡಿದನು.
'ನನ್ನ ಮಗ್ಳನ ನಾನು...ಛಿ...ಛಿ..ಎಂತಾ ಅನಾಹುತ ಆಗಿ ಹೋಕ್ಕಿತ್ಲೆ ಸೋಮ್ಯಾ, ಎಂತಾ ಪಾಪದ ಕೂಪಕ್ಕ ತಳ್ಬಿಡ್ತಿದ್ದಿ ನಿ ನನ್ನ'
' ಏ ತಗಿರ್ರೀ..ಗೌಡ್ರ, ನೀರ ಹಾಸಾಕ ಮಣ್ಣು ಯಾರ್ದಾದ್ರೇನು, ಹದವೊಂದಿರ್ಬೇಕಷ್ಟ ಹೌದಲ್ರೀ... ಅದು ಅಲ್ದ ನೀವ ಹೇಳಿದ್ರಲ್ರೀ  ಹೆಣ್ಣ ಯಾವ್ದಾದ್ರೇನ್ರೀ... ಮಗ್ಳಾದ್ರೇನ, ಅಕ್ಕಾದ್ರೇನ, ಹೆಂಡ್ರಾದ್ರೇನ, ಸುಖಾ ಮುಖ್ಯ ಅಂತಂದ, ತಗೋರಿ ನಿಮ್ಮ ಸುಖಕ್ಕಂತಂದ ನೀವ್ ಕೊಟ್ಟ ನಾಕ ಲಕ್ಷ ರೊಕ್ಕಾನ ಈಕೀಗೆ ಕೊಟ್ಟ ಕರ್ಕೊಂಡ ಬಂದಿನಿ‌ ನಾ, ಯಾಕ ಸುಮ್ಕ ನಿಂತ್ಬಿಟ್ರಿ..? ಓಹೋ....ಮಗ್ಳನ್ನೊ ಮಮಕಾರ ನಿಮ್ಮನ್ನ ಪಾಪದ ಕೂಪಕ್ಕ ತಳ್ಳಾಕ್ಹತ್ತೈತೆನ್ರೀ ಗೌಡ್ರ, ಛೆ....ಛೆ...ಪಾಪಾಗಿಪ ಕಾರ್ಯಫಲನ್ನೆಲ್ಲಾ ನಂಬೊರಲ್ಲ ನೀವು ಹೌದಲ್ರೀ, ಒಂದ ಹೆಣ್ಣಿನ ಸೀರಿ ಸೆರ್ಗಿನ ಹಿಂದ ಸಾವ್ರಾರು ಕನ್ಸಗಳು ಇರ್ತಾವು, ಸಂಕಟಗ್ಳಿರ್ತಾವು, ಅವನ್ನೆಲ್ಲಾ ಅರ್ಥ ಮಾಡ್ಕೊಲಾರ್ದ ಬರೀ ನಿಮ್ಮ ಕಾಮದ ತೀಟಿಗಿ ಆ ಸೆರ್ಗನ್ನ ಬಳ್ಸಕೊಂಡ್ಬಿಟ್ಟಿರಿ, ಇವಾಗ ನಿಮ್ಗ ಸಂಕ್ಟ ಆಗ್ಲಾಕ ಹತ್ತೈತೇನು..?
ಯಾಕ ನಿಮ್ಮ ಮಗ್ಳ ಮೈ ನಿಮ್ಮ ದೇಹಾದ ಬೆಚ್ಗ ಮಾಡೊದಿಲ್ಲನು, ಇನ್ನೊಬ್ರ ಎದಿ ಬೆಣ್ಣಿನ ಕರ್ಗಿಸಿ ತುಪ್ಪ ಮಾಡ್ಕೊಂಡ ಕುಡಿಯೊರ ನೀವು, ಈಗೆಲ್ಲ ಹೋತ್ರಿಆ ತಾಕತ್ತ  ಗೌಡ್ರ, ನಿಮ್ಮ ಕಾಟಕ್ಕ ಊರ ಬಿಟ್ಟೊರ ನೋವು, ಕೆರೆಗ ಹಾರಿ ಜೀವ ಕಳ್ಕೊಂಡ ಆ ಹೆಣ್ಮಗಳ ಗಂಡ ಮತ್ತ ಮಗ್ವಿನ ಸಂಕ್ಟ, ನಿಮಗೇನರ ಅರಿವಾಗ್ತತೇನ್ರಿ..? ಹ್ಯಾಂಗ ಅರಿವಾಗ್ತದ ತಾಯಿ‌ ಮಮತೆ  ತುಂಬಿದ ಎದಿನ ಕಾಮದ ಕಣ್ಣಿಲೆ ನೋಡರ ನೀವು. ನಿಮ್ಗೇನಿದ್ರ ಬೇಕಾಗಿರೊದು ಹತ್ತ ನಿಮಿಷ್ದ ಸುಖ ಅಷ್ಟ.'
ಸೋಮಣ್ಣನ ಮಾತುಗಳನ್ನು ಕೇಳಿ ನಿಂತ ಭೂಮಿ ಬಾಯ್ತೆರೆದು ನುಂಗಿದ ಅನುಭವವಾಯಿತು. ನಿನ್ನೆ ತಾನಾಡಿದ ಮಾತುಗಳನ್ನು ನೆನಪಿಸಿಕೊಂಡು, ಹಿಡಿದಿದ್ದ ಶರ್ಟನ್ನು ಬಿಟ್ಟು,
ಪಲ್ಲಂಗದ ಮೇಲೆ ಕುಸಿದು ಕುಳಿತನು. ಭರಮಪ್ಪ ಮಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಲಾಗದೆ, ' ಏನ್ಬೇ ಮಗಳ ಇವ್ನ ಕೈಯ್ಯಾಗ ನಿ ಹ್ಯಾಂಗ ಸಿಕ್ಕಿ, ಇಲ್ಲಿಗ್ಹ್ಯಾಗ ಬಂದಿ,' ಕೇಳುತ್ತಾ ಕಣ್ಣೀರಾದನು.
' ನಿಮ್ಮ ಮಗ್ಳದೇನು ತಪ್ಪಿಲ್ರೀ ಗೌಡ್ರ,  ಆಕಿನ ಕರ್ಕೊಂಡ ಬಂದಿದ್ದ ನಾನಿಲ್ಗೆ '. ಸೋಮಣ್ಣ ನಿನ್ನೆ ನಡೆದ ಘಟನೆಯನ್ನು ವಿವರಿಸಲು ಪ್ರಾರಂಭಿಸಿದನು.

No comments:

Post a Comment