Saturday, July 7, 2018

'ಗೌಡ್ರ... ನಿವೇನ ಅವತ್ತ ಖಡಕ್ಕಾಗಿ ಕಡ್ಡಿ ಮುರ್ದಂಗ ಹೇಳಿ ಕಳ್ಸಿಬಿಟ್ರಿ, ತಾಳಿ ಕಟ್ಟಿದ ಗಂಡ ನಾನು, ಲಗ್ನದಾಗ ನನ್ನಾಕಿ ಕೆನ್ನಿಗೆ ಹಚ್ಚಿದ ಅರಿಷ್ಣದ ಬಣ್ಣಾನ ಮಾಸಿಲ್ಲ, ತಲಿಮ್ಯಾಲ ಸುರ್ದ ಸುರ್ಗಿ ನೀರಿನ ತಂಪ ಇನ್ನ ಇಳ್ದಿಲ್ಲ, ಕೈಗೆ ಹಚ್ಗೊಂಡಿದ್ದ ಮದರಂಗಿ ಕೆಂಪೆರಿದ್ದ ನೆನಪ ನಮ್ಗಿನ್ನ ಮಾಸಿಲ್ಲ, ಕತ್ಲ ಕೊಣ್ಯಾಗ ಕುಂತ್ಗೊಂಡ ಮಾತಾಡೊ ಹಸಿಬಿಸಿ ಮಾತ್ಗಳ ಇನ್ನ ಮುಗ್ದಿಲ್ಲ, ಲಕ್ಷ್ಮೀ ಬಂದಾಳ... ಬಂದಾಳ ಸುಖ ಅನ್ನೊದ ಸುಣ್ಣದ ಗ್ವಾಡಿ ಮ್ಯಾಲಿನ ಕನ್ಡಿಯೊಳ್ಗಿನ ಗಂಟಾಗೈತಿ ಹಿಂಗಿದ್ದಾಗ, ನಿಮ್ಮ ಮನ್ಸನೊಳ್ಗಿನ ದುರಾಸೆನ ನಾ ಯಾ ಮುಖ ಹೊತ್ಗೊಂಡ ಹೋಗಿ ನನ್ಹೆಂಡ್ತಿ ಮುಂದ ನಿಂತ್ಕೊಂಡ ಹ್ಯಾಂಗ ಹೇಳ್ಲ್ರೀ, ನನ್ನ ಮಾಡ್ಕೊಂಡ ತಪ್ಪಿಗೆ ನೀನಿನ್ನೊಬ್ರ ಹಾಸ್ಗಿಗೆ ಹೂವಾಗಂತ ನಾ ಹ್ಯಾಂಗ ಒಪ್ಪಸ್ಲಿ ರೀ ಗೌಡ್ರ,  ಕಷ್ಟಾನೊ, ಸುಖಾನೊ, ಸಿರಿಯೊ, ಬಡ್ತನಾನೊ, ಒಟ್ನಲ್ಲಿ ಸಾಯೊತನ್ಕ ನಾನಕೀನ ಕಣ್ಣಾಗ ಕಣ್ಣೀಟ್ಟ ಕಾಪಾಡಕೊಳ್ತೀನಂತಂದ ಅಗ್ನಿ ಮುಂದ ಏಳ ಹೆಜ್ಜಿ ತುಳ್ದಾಂವದಿನ್ರೀ, ಅಂತಾದ್ರಾಗ ಆಕೀನ ನಿಮ್ಮ ಕಾಮದ ಕಾವಿಗೆ ನೂಕಿ ಆ ಕಾವನ್ಯಾಗ ನನ್ನ ಮೈನ ಬೆಚ್ಚಗಾಗ್ಸಿಕೊಳ್ಳುವಷ್ಟು‌ ಹೊಲ್ಸ ಮನಷ್ಯಾ ನಾನಲ್ರೀ.. ಗೌಡ್ರ ನಾನಲ್ಲ,  ತಂದಿಲ್ಲ, ಮದ್ವಿಯಾದ ಸ್ವಲ್ಪ ದಿನಕ್ಕ ತಾಯಿ ನನ್ನ ತಬ್ಲಿ ಮಾಡಿ ಹೋದ್ಳು, ಇನ್ನೊಬ್ರ ಮುಂದ ಹೇಳ್ಕೊಳ್ಲಾರ್ದ ನನ್ನ ಮನಸಿನ ಎಷ್ಟೊ ದುಃಖಾನ ಆಕಿ‌ ಮಡಿಲಾಗ ತುಂಬಿನ್ರೀ, ನಿದ್ರಿ ಇಲ್ದ ರಾತ್ರಿನೆಲ್ಲ ಆಕಿ ತೊಡಿಮ್ಯಾಲ ಮಲ್ಗಿ , ಆಕಿ‌ ಕಣ್ಣಾಗ ನೂರಾರ ಬಣ್ಣದ ಬದುಕಿನ ಕನ್ಸಗಳನ್ನ ತುಂಬಿನಿ, ಅಂತಾದ್ರಾಗ... ನಾನ ಮುಂದ ನಿಂತ ನಿಮ್ಮ ಜೊತಿ ಹಾದ್ರಕ್ಕ ಆಕಿನ ದೂಡ್ಲ್ಯಾ, ಇದೆಲ್ಲಾ ಆಗೊ ಮಾತಲ್ಲ ಅನ್ಕೊಂಡ, ನಾ ಗಟ್ಟಿ ಧೈರ್ಯ ಮಾಡಿ,  ಸೀದಾ ಹೋಗಿದ್ದ ಊರ ಹೊರಗಿನ ಕೆರಿಗ್ರೀ... ಸಾಕಿನ್ನ ಜೀವ್ನ ದೇವ್ರು ನನ್ನ ಹಣೆ ಬರ್ಹದಾಗ ಇಷ್ಟ ಸುಖಾ ಕೊಟ್ಟಾನಂತಂದ ತಿಳ್ಕೊಂಡು, ಕೆರಿಗೆ ಬಿದ್ದ ಸಾಯಾಕಂತಂದ ಹೋದನ್ರೀ.. ಹಗಲೊತ್ತಲ್ರೀ, ಅಲ್ಲೆ ಹಳ್ಳಿ ಹೆಣ್ಮಕ್ಳು ಬಟ್ಟಿ ಒಗಿಯಾಕ ಹತ್ತಿದ್ರು, ಅಲ್ಲೆ ಬೇನ ಗಿಡ್ದ ನೆಳ್ಳಿಗೆ ಒಂಚೂರ ಕುಂತೆ, ಅತ್ತೆ...ಸುಸ್ತಾದಾಗ ಆಗಿ ನಿದ್ದಿ ಯಾವಾಗ ಬಂತೊ ಗೊತ್ತಿಲ್ಲ ಹಾಗೆ ಅಡ್ಡಾಗಿಬಿಟ್ಟೆ, ಥಟ್ಟನೆ ಎಚ್ಚರವಾಯ್ತು ಆಗ್ಲೆ ಸಂಜಿ ಆರೂವರಿ ಆಗ್ಬಿಟ್ಟಿತ್ತು, ದನ ಕಾಯೋರು, ಬಟ್ಟಿ ಒಗಿಯೊರು ಎಲ್ಲಾರ ಹೋಗ್ಬಿಟ್ಟಿದ್ರು, ಇದೆ ಸರಿ ಸಮಯ ಅಂದ್ಕೊಂಡವನೆ ಒಂದೆ ಉಸಿರಿನಲ್ಲಿ ಓಡಿ ಹೋಗಿ ಕೆರೆಯ ದಂಡಿನ ಹತ್ತಿ ಇನ್ನೇನ ಹಾರ್ಬೇಕ ಅನ್ನುವಷ್ಟರೊಳ್ಗ ಯಾರೊ ಒಬ್ರು ಕೆರಿಯಾಗ ಅದಾಗ್ಲೆ ಹಾರಿ ಮುಳುಮುಳುಗಿ ಎಳಾಕ ಹತ್ತಿದ್ರ,  ತಡಮಾಡ್ದನ ಕೆರಿಗ ಹಾರಿ, ದಂಡಿಗೆ ಎಳ್ಕೊಂಡ ಬಂದ ಕುಂದ್ರಿಸಿ  ನೋಡಿದ್ರ ನಿಮ್ಮ ಮಗ್ಳ, ಯಾಕವ್ವಂತಂದ ಕೇಳಿದ್ರ ನಿಮ್ಮ ಮಗ್ಳ ಹೇಳ್ತಾಳ, ಆಕಿ ಕಾಲೇಜನ್ಯಾಗ ತನ್ನ ಗೆಳ್ತ್ಯಾರ ಜೊತಿ ಚಾಲೆಂಜ್ ಮಾಡಿದ್ಲಂತ ನಾನು ಸರೆಗಮಪಕ್ಕ ಹೊಕ್ಕಿನಂತಂದ ನೀವ... ಹಣ ಕೊಡಾಕ ಹಿಂದ್ಮುಂದ ಮಾಡಿದ್ರಿ, ಇಷ್ಟು ಸಾವುಕಾರ ಕಂಟ್ರ್ಯಾಕ್ಟರ ನಮ್ಮಪ್ಪ ಇದ್ದು ನಾನು ಕಾರ್ಯಕ್ರಮಕ್ಕ ಹೋಗೊದ ಆಗುವಲ್ದಲ್ಲನ್ನೊದು ಒಂದು. ಎರಡ್ನೆದ್ದು ಎಲ್ಲಾ ಸ್ನೇಹಿತ್ರ ಎದ್ರಿಗೆ ಮರ್ಯಾದಿ ಹೋಗ್ತತನ್ನೊದೊಂದು ಇನ್ನೊಂದು ಮನಿಗ ಬಂದ ಮತ್ತ ರೊಕ್ಕ‌ ಕೇಳಿದ್ರ ನೀವ್ ಸಾಯ್ಸತಿದ್ರಂತ, ಅದ್ಕ ನಾನ ಸತ್ತ ಹೋದ್ರ ಛಲೊ ಅನ್ಕೊಂಡು ಕೆರಿಗೆ ಹಾರಿಬಿಟ್ಟಿದ್ಳು,‌'
ಭರಮಪ್ಪ ಮಗಳ ಮೊಖವನ್ನು ನೋಡಿ,
' ನಿಜ ಏನ್ಬೆ:
ಹೌದೆನ್ನುವಂತೆ ಕತ್ತನ್ನು ಆಡಿಸಿದಳು.
ಸೋಮಣ್ಣ ಮುಂದುವರೆದು' ಆವಾಗ ನೀವ್ ಕೊಟ್ಟ ನಾಕ ಲಕ್ಷ ನಂಗ ನೆಪ್ಪಿಗ ಬಂತ ಓಡ್ಹೋಗಿ ಗಾಡಿ ಬ್ಯಾಗನಿಟ್ಟಿದ್ದ ಸೂಟಕೇಸ್ ತಂದ ನಿಮ್ಮ ಮಗ್ಳಿಗೆ ತೋರಿಸಿ ಹೇಳಿದ್ನಿ, ನೀನ ಬದಕೋಕ‌‌ ಮತ್ತ ಕಾಂಪಿಟೇಷನ್ಗೆ ಹೋಗಾಕ ನನ್ಹತ್ರ ಒಂದ ದಾರಿ ಐತಿ ಮಾಡ್ತೀಯಾ ಅಂದೆ, ಹ್ಞೂಂ ಅಂದಳು ಆಗ ನಾನು  ಒಂದ ರಾತ್ರಿ ನೀನು ಒಬ್ಬನ ಜೊತಿಗೆ ಹಾಸ್ಗಿ ಹಂಚ್ಕೊಬೇಕಂತಂದೆ, ನಿಮ್ಮ ಮಗಳು ಸುತಾರಂ ಒಪ್ಪಲಿಲ್ಲ, ಇದ್ರಕ್ಕಿಂತ ಸಾಯೋದ ಭೇಷೈತಿ ಅಂತಂದ ಮತ್ತ ಎದ್ದ ನಿಂತ್ಲು, ಕೈ ಹಿಡ್ದ ಎಳ್ದ ಕುಂದ್ರಿಸಿ ಹೇಳ್ದ್ಯಾ, ನೋಡವ್ವಾ ಆ ಮನುಷ್ಯ ಭಾಳ ಶ್ರೀಮಂತ ಅದಾನು, ಮತ್ತ ಮುಂದ್ಕ ನಿ ಕೇಳದಷ್ಟ ರೊಕ್ಕಾನು ಕೊಡ್ತಾನು, ಏನ ಒಂದ ರಾತ್ರಿ ಕಣ್ಮುಚ್ಚಿಕೊಂಡ ಮಕ್ಕೊಂಡ್ಬಿಡು, ಹಣ ಸಿಗ್ತೈತಿ, ನಿ ಕಾರ್ಯಕ್ರಮದಾಗ ಕಾಂಪೀಟ್ ಮಾಡ್ಬೊದು, ನಿನ್ನ ಗೆಳತೆರ ಮುಂದ ಎದಿಯುಬ್ಬಿಸಿಕೊಂಡ ಅಡ್ಯಾಡ್ಬೊದು, ಈ ವಿಷ್ಯಾನ ನಾನು ಪ್ರಮಾಣ ಮಾಡಿ ಹೇಳ್ತಿನಿ ಯಾರ ಮುಂದನು ಹೇಳೊಂಗಿಲ್ಲ,
ನಾಳೆ ರಾತ್ರಿಗೆ ಹಳೆ ಐಬಿ ಹತ್ರ ಬಂದ್ಬಿಡು, ನಿಮ್ಮಪ್ಪಾರು ನಾಳೆ ಊರಾಗ ಇರಾಂಗಿಲ್ಲ ನಿಮ್ಮವ್ವರ್ರಿಗೆ ನಮ್ಮ ಗೆಳ್ತಿ ಮನಿಯ್ಯಾಗ ಓದ್ಕೊಳ್ಳಾಕ ಹೋಕ್ಕಿನಂತದ ಹೇಳಿ ಬಂದ್ಬಿಡು, ಅಂತಂದ ಹಾಳು ಮೂಳು ಸೇರ್ಸಿ ಇಲ್ಲಿ ತನ್ಕ ಕರ್ಕೊಂಡ ಬಂದನ್ರೀ.. ಆದ್ರೂ ಕೊನಿಕ ಒಂದ ಮಾತ ಕೇಳಿದ್ಲು, ನಂ‌ ತಂದಿ ಇಷ್ಟ ರೊಕ್ಕಾ ಎಲ್ಲಿಂದ ತಂದಿ ಅಂತ ಕೇಳಿದ್ರ ಅಂತಂದ್ಲು, ಆಗ ನಾ ಹೇಳಿದ್ಯಾ, ನನ್ನ ಗೆಳ್ತ್ಯಾರ ಜೊತಿ ಇಸ್ಕೊಂಡಿನ ಅನ್ನು ಸುಮ್ನಾಕ್ಕಾನ, ಯಾಕಂದ್ರ ನಿಮ್ಮಪ್ಪಗ ಕಾರ್ಯಫಲದ ಅಂಜ್ಕಿನ ಇಲ್ಲ, ನಿನೇನ ಹೆದರ್ಬ್ಯಾಡ ಎಲ್ಲ ನಾನದೀನಿ  ಅಂತಂದ ಹೇಳಿ ಇಲ್ಲಿ ತನ್ಕ ಕರ್ಕೊಂಡ ಬಂದನ್ರೀ' ಧೀರ್ಘ ನಿಟ್ಟುಸಿರೊಂದನ್ನು ಬಿಟ್ಟು ನಿಂತುಕೊಂಡನು.

No comments:

Post a Comment