Monday, November 28, 2016

ಎಲ್ಲಿ ಕಳೆದಿರುವಿರಿ ಕವಿತೆಗಳೆ

ಎಲ್ಲಿ ಕಳೆದಿರುವಿರಿ ಕವಿತೆಗಳೆ
ಎಲ್ಲಿ ಅಡಗಿರುವಿರಿ ಪದಗಳೆ
ಬನ್ನಿ ಸೇರಿಕೊಳ್ಳಿರಿ ನನ್ನಲೊಮ್ಮೆ
ದಾರಿ ಕಾಯುತ್ತಿರುವೆ ನಿಮ್ಮನ್ನೆ

ಕೇಳಿರಿಲ್ಲಿ ಅವಳ ನೋವನ್ನು
ಸೀರೆ ಸೇರಗಂಚಲಿ ಕಟ್ಟಿರುವಳು
ಕಣ್ಣಂಚಲಿ ಹಿಡಿದಿಟ್ಟಿರುವಳು
ತುಟಿಯಂಚಲಿ ತಡೆಹಿಡಿದಿಹಳು
ಬರೆಯಬೇಕಿದೆ, ಕರಗಿಸಿ ನಲಿಸಬೇಕಿದೆ
ಅವಳ ಮನವನ್ನು
ಬಂದುಬಿಡಿ ಅಕ್ಷರಗಳೆ

ನೋಡಿರಿಲ್ಲಿ ಇವನ ಸಂಕಟವನು
ಹೇಳಲಾಗದೆ, ನುಂಗಲಾಗದೆ, ಮರೆಯಲಾಗದೆ 
ಬಾಟಲಿಯ ಮದ್ಯವ ಹಿಡಿದು ಲೋಕದ 
ಮಧ್ಯದಲಿ ಕುಳಿತಿರುವನು
ಮರೆಸಬೇಕಿದೆ, ಬದುಕಿಸಿ ಗೆಲ್ಲಿಸಬೇಕಾಗಿದೆ
ಇವನ ಬದುಕನ್ನು
ಓಡಿ ಬನ್ನಿ ಅಕ್ಷರಗಳೆ

ಬರೆಯಬೇಕಿದೆ ಬಹಳಷ್ಟು
ಬರದುದಿದೆ ತೃಣದಷ್ಟು
ಜಗದ ನೋವನೆಲ್ಲವ
ಬೆರಸಬೇಕಿದೆ ನಿಮ್ಮಲ್ಲಿ
ಜಗದ ಸುಖವನೆಲ್ಲವ
ತುಂಬ ಬೇಕಿದೆ ನಿಮ್ಮಲ್ಲಿ

ಬನ್ನಿ ಪದಗಳೆ
ಈ ಪೆದ್ದು ಕವಿಯೊಳಗೆ

Sunday, November 27, 2016

ನಮ್ಮಿಬ್ಬರ ಕಾವು

ಈರುಳ ಬಾನ ಚಂದಿರ
ತುಂಬು ಮನದ ಮಂದಿರ
ಕರಗಬೇಡ ಈ ದಿನ
ನಲ್ಲ ಬರುವ ನೀ..ದಿನ

ಗಾಳಿ ಬೀಸು ಮೆಲ್ಲಗೆ
ದೂಡು ರಾತ್ರಿಯ ತಂಪಿಗೆ
ನಿಲ್ಲಬೇಡ ಎಲ್ಲಿಯೂ ಥಟ್ಟನೆ
ನಲ್ಲನೀರುವ ತೆಕ್ಕೆಯಲಿ ಬೆಚ್ಚನೆ

ಮಲಗಬೇಡ ಮಲ್ಲಿಗೆ
ರಾತ್ರಿ ಇನ್ನೂ ಬಹಳಿದೆ
ಸುರಿಸು ನೀ ಕಂಪನೆ
ಹರಿದು ಬರಲಿ ವಾಸನೆ

ಕರಗದಿರು ಕತ್ತಲೆ
ಸುಳಿಯುತಿರು ಸುತ್ತಲೆ
ಕಾಡುತಿರುವ ಪದಗಳೇ
ಬರದಿರಿ...ಈ ವೇಳೆ

ಅವನೊಂದು ದುಂಬಿ
ಬಂದಿರುವನು ಮೈದುಂಬಿ
ನಾನೊಂದು ಹೂವು
ಆರಲಿ ನಮ್ಮಿಬ್ಬರ ಕಾವು

ನನ್ನೊಳಗಿನ ಕಾವು

ನನ್ನೊಳಗಿನ ಕಾವು ಕಾವ್ಯವ
ಹುಟ್ಟಿ ಹಾಕಿತು
ಮನದೊಳಗಿನ ನೋವನು
ಹೊಡೆದು ಹಾಕಿತು

ನನ್ನೆದೆಯ ಮದವನು
ಸುಟ್ಟು ಹಾಕಿತು
ಕಣ್ಣೀನ ಪದರನು
ಹರಿದು ಹಾಕಿತು

ಅಂತರಂಗದ ಕಲ್ಮಷವ
ತೊಳೆದು ಹಾಕಿತು
ಬಹಿರಂಗದ ಅಹಂನು
ತೊಡೆದು ಹಾಕಿತು

ಕತ್ತಲು ಕಳೆಯುವ
ದೀವಿಗೆಯಾಯಿತು
ಜ್ಞಾನವ ತೋರುವ
ದೀಪವಾಯಿತು

ನಲಿವಿನ ಕ್ಷಣಗಳಿಗೆ
ಬೆಸುಗೆಯ ಹಾಕಿತು
ಸುಂದರ ಬದುಕಿಗೆ
ಮುನ್ನುಡಿಯಾಯಿತು

Wednesday, November 23, 2016

ಬಂಗಾರಿ

ನೋಡ ಚಂದ್ರ ಹತ್ರಕ್ಕ
ಬಂದ್ರಷ್ಟ ಕಡಲು ಉಕ್ಕೇರತ್ಯೆತಿ
ನೀ.. ದೂರಾ ಇದ್ರೂನೂ
ನನ್ನ ಪ್ರೀತಿ ಉಕ್ಕಿ ಹರಿತೈತಿ
.
ಗುಡ್ಯಾಗ ದೇವರಿದ್ರ
ಅಷ್ಟ ಘಂಟಿ ಭಾರಸ್ತಾರ
ನನ್ನೆದಿ ಘಂಟಿನರ ಕೇಳು
ನೀನಿರದಿದ್ರೂ ಹೊಡಿತಿರತೈತಿ

ಮಳಿಯಾದ್ರಷ್ಟ ಕಾಲುವೆಕ
ನೀರ ಹರೀಸ್ತಾರ
ನನ್ನ ಕಣ್ಣನರ ಕೇಳು ನೀನಿಲ್ಲಂದ್ರ
ಊರ ತುಂಬಾ ಕಣ್ಣೀರ ಹೊಳಿನ ಹರಸ್ತಾವು

ಎಷ್ಟೋ ಮಂದಿ ಕೈ ಕತ್ರಿಸಿದ್ರು
ತಾಜಮಹಲ ಕಟ್ಟಿದ ಮ್ಯಾಲ
ನೀನೊಂದ ಕೈಯಿಟ್ಟ ನೋಡ
ನನ್ನೆದಿಮ್ಯಾಲ ಅಂತಾವು ಸಾವ್ರ ಹುಟ್ತಾವು 

ನನ್ನ ಎದಿಯಾಗ
ಬಂಗಾರ ಅಂತ ಗೊತ್ತಿದ್ರು ತಿಕ್ಕಿ
ತಿಕ್ಕಿ ನೋಡ್ತಾರ ಖರಾಬ ಐತನು ಅಂತ
ನನ್ನ ಪ್ರೀತಿನ ತಿಕ್ಕೆರ ನೋಡು, ಸುಟ್ಟರ ನೋಡು
ಅದು ಒಂದ ಹೆಸರು ಕರಿತೈತಿ ಬಂಗಾರಿ
ಬಂಗಾರಿ ಅಂತ

ಕಣ್ಣಂಚಿನ ಹನಿ

ಜಾರದೆ ನಿಂತಿರಲಿ ಕಣ್ಣಂಚಿನ ಹನಿಯೂ
ಜಾರಿದೊಡೆ ಒಡಲ ಕಡಲುಕ್ಕಿ ಹರಿದು
ಪ್ರೇಮದ ಗದ್ದೆಯೂ ಮುಳುಗಿ ಬೆಳೆದ
ಒಲವಿನ ಫಸಲೆಲ್ಲ ಉಪ್ಪೆರುವ ಮೊದಲೆ
ಹಿಡಿದಿಟ್ಟಿಕೊ ಮನದ ದುಗುಡುವ

ಅಳದಿರು ಕಡಲತಟದಲಿ ಕಾರಣ
ನೀನ್ನ ಕಣ್ಣೀರು ಕಡಲಲಿ ಸೇರಿದರೆ
ಆ ಹನಿಗಳ ನಾ ಹೇಗೆ ಎತ್ತಿ ತರಲಿ
ಕಡಲ ಒಡಲು ಉಪ್ಪು
ನಿನ್ನೊಡಲ ಜಾರಿದ ಹನಿಯು ಉಪ್ಪು

ಹೇಳದಿರು ನಿನ್ನ ಮಾತುಗಳನ್ನು ಆ
ಶೀಲಾಬಾಲೆಯರ ಮುಂದೆ ಅವರ
ಮುಂದೆ ನಿನ್ನ ನೋವ ತೊಡಿಕೊಂಡರೆ
ನಾ ಹೇಗೆ ಕೇಳಲಿ ನಿನ್ನ ದುಃಖವನು
ಆ ಕಲ್ಲು ಶೀಲೆಗಳ ಮುಂದೆ ನಿಂತು

ನಾ ಬರುವವರೆಗೂ ಕಟ್ಟೆಯ ಕಟ್ಟಿ
ತಡೆಹಿಡಿದಿರು ಕಣ್ಣೀರನು
ನಿನ್ನ ತೆಕ್ಕೆಯಲಿ ಸೇರುವವರೆಗೂ
ಹಗ್ಗಗಳ ಬಿಗಿದು ಕಟ್ಟಿಟ್ಟಿಕೊ
ಮಾತುಗಳನು

ಕಣ್ಣೀರ ಒರೆಸುವ ಬೆರಳಾಗುವೆ
ಮಾತುಗಳನಾಲಿಸುವ ಮನವಾಗುವೆ

ಜಾರದೆ ನಿಲ್ಲಲಿ ಆ ಹನಿಗಳು
ಬರುವವರೆಗಾದರೂ....

ಬದುಕಿನ ಸತ್ಯ

ಮುಂಜಾವಿನ ನಸುಕಿನಲಿ
ಹೊರಟಿದ್ದೇನು ವಿಹಾರಕ್ಕೆಂದು
ಕಾಣಿತೊಂದು ನಿತ್ಯ ಸತ್ಯವದು
ಬದುಕಿನ ವಿಪರ್ಯಾಸವದು

ಅವನು ರೈತ ಎರಡು ಹೊತ್ತು
ಹೊಟ್ಟೆಯ ಊಟದಗುಳಿಗಾಗಿ
ನಡೆದಿರುವನು ಭೂತಾಯಿ
ಸೇವೆಗೆ, ದೇಹವ ಬಗ್ಗಿಸಿ
ರವಿಕಿರಣಕೆ ಕಾಯವ ಕಾಯಿಸಿ
ಬೆವರ ಹರಿಸುವನು
ಭಾನು ಭೂಮಿ ತೋರಿದರೆ ಕರುಣೆ 
ಒಯ್ಯುವನು ಒಂದಗಳನು ಮನೆಗೆ

ಇವನು ಉದ್ಯಮಿ ದಿನದ ನಾಲ್ಕು
ಹೊತ್ತುಂಡು ಹೊಟ್ಟೆಯ ಭಾರವ
ಕರಗಿಸಲು ಬರುವನು ವಿಹಾರಕ್ಕೆ
ಉಸ್ಸೆಂದು ಕೂರುವನು, ಅಲೆದಾಡದೆ
ಬಾಯಾರಿತೆಂದು ಕುಡಿಯುವನು
ಜ್ಯೂಸ್ ನ್ನು ಮಲಗಿಯೂ ಬಿಡುವನು
ಯೋಗಾಸನದ ನೆಪದಲ್ಲಿ

ಹೊಟ್ಟೆಯ ಹೊರೆಯಲು ಪಡಪಾರದ
ಕಷ್ಟವ ಪಟ್ಟು , ವರುಣನ ಕೃಪೆ, ಭೂ ತಾಯಿಯ
ಕರುಣೆಯಿದ್ದರೆ ತಾನುಣ್ಣವದರ ಜೊತೆಗೆ
ಜಗಕೆ ಅನ್ನವನಿಯ್ಯುವನು

ಹೊಟ್ಟೆಯ ಹೊತ್ತುಕೊಂಡು, ಇನ್ನೊಬ್ಬರ
ದುಡಿಮೆಯ ಅನ್ನವನುಂಡು ಭೂಮಿಗೆ ಭಾರವಾಗಿ
ತಮಗೂ ತಾವೆ ಭಾರವಾಗಿ ಬರುವರಿವರು ವಾಯು
ವಿಹಾರಕ್ಕೆ

ಅವನದು ಹೊಟ್ಟೆಯ ಹೊರೆಯುವದರ ಚಿಂತೆ
ಇವನದು ಹೊಟ್ಟೆಯ ಹೊರುವುವದರ ಚಿಂತೆ

ಚೆನ್ನಮ್ಮ

ಕುದುರೆಯನೇರಿಕೊಂಡು
ಬರುತಿದೆಯೊಂದು ಕಾಳಿ ಕಣ್ಣಿನ
ನೆತ್ತರ ಹಸಿವಿನ, ಕತ್ತಿಯ ಹಿಡಿದು
ಬರುತಿದೆಯೊಂದು ಕಿತ್ತೂರಿನ
ಹೆಣ್ಣು ಹುಲಿ

ಹಸುಳೆಯ ಬೆನ್ನಿಗೆ ಕಟ್ಟಿಕೊಂಡು
ಸೈನ್ಯವನು ಮುನ್ನೆಡೆಸಿಕೊಂಡು
ಅಡ್ಡ ಸಿಕ್ಕ ಕೆಂಪಂಗಿಯರ ರುಂಡವನು
ಚಂಡಾಡಿ, ನೆತ್ತರಲೆ ತೊಯ್ದು
ಕಣ್ಣಿಂದಲೆ ಬೆಂಕಿಯ ಸುರಿಸುತ
ಕೋಟೆಯ ಕಾಯುತ ನಿಂತಿಹಳು
ನೆತ್ತರವ ಹರಿಸಲು

ದೇಶಕ್ಕಾಗಿ ಹೋರಾಡದಿದ್ದರೂ
ಕತ್ತಿಯ ಹೀರಿದಿದ್ದಳು ದತ್ತು ಪುತ್ರನ
ಶಾಸನಕ್ಕಾಗಿ, ತಾ ಹುಟ್ಟಿದ ಮಣ್ಣಿನ
ಋಣವ ತೀರಿಸಲಿಕ್ಕಾಗಿ, ಕನ್ನಡಿಗರ
ಸ್ವಾಭಿಮಾನವನೆತ್ತಿ ಹಿಡಿಯಲಿಕ್ಕಾಗಿ

ರಾಣಿ ಚೆನ್ನಮ್ಮಳು ಸೀರೆಯ ಸೇರಗನು
ತಲೆಮೇಲೆ ಹೊದ್ದರೆ ಗರತಿಯಂತಿದ್ದವಳು
ಅದೇ ಸೇರಗು ನಡುವ ಬಿಗಿದರೆ
ರುಂಡಗಳ ಮಾಲೆಯ ಕಟ್ಟುವ
ರಣಚಂಡಿಯಂತಿದ್ದಳು

ಹರಹರ ಮಹಾದೇವ ಎನ್ನುವ ಅವಳ
ಯುದ್ಧದ ಮಹಾ ಮಂತ್ರವ ಹರಿಸಿದ್ದಳು
ಸೈನಿಕರ ಕಣಕಣಗಳ ನರದೊಳಗೆ
ಧುಮುಕಿ ವಿಜೃಂಭಿಸಿದ್ದಳು ರಣರಂಗದೊಳಗೆ
ಗದ್ದುಗೆಯ ಆಸೆಗಾಗಿ , ಸುವರ್ಣಂಧರಾಸೆಯಾಗಿ
ಬೆನ್ನು ಕಾಯುವವರೇ ಬೆನ್ನಿಗೆ ಚೂರಿ ಹಾಕಿದರು
ಸಂಚಲಿ ಬಲೆಯ ಬೀಸಿ ಹುಲಿಯ
ಸೆರೆಯಾಗಿಸಿದರು

ಆ ಕಿತ್ತೂರಿನ ಹೆಣ್ಣು ಹುಲಿ
ಲೋಕಕೆ ತೋರಿಸಿಕೊಟ್ಟಳು ಕನ್ನಡದ
ಹೆಣ್ಣು ಒಲಿದರೆ ಹೂಮಾಲೆ
ಕೆದಕಿದರೆ ಕಟ್ಟುವಳು ರುಂಡಮಾಲೆ

ಅನುಮಾನದ ಹುತ್ತ

ನೀನೊಬ್ಬ ಅನುಮಾನದ ಹುತ್ತ
ಕುಳಿತಿರುವೆ ಎಲ್ಲರ ಅನುಮಾನಿಸುತ್ತ
ಉಸಿರುಗಟ್ಟಿಸುತಿರುವೆ ಸುತ್ತಮುತ್ತ
ಅಸಹ್ಯವಾಗುತಿರುವೆ ಮಾತನಾಡುತ್ತ
ನೋಡದಂತೆ ಮಾಡುತಿರುವೆ ನಿನ್ನತ್ತ

ಒಮ್ಮೆಯಾದರೂ ಹ್ಞೂಂನ್ನು ನಂಬುತ್ತ
ಮಾತು ಮಾತಿಗೂ ನೋಯಿಸುವೆ ಹಿಯ್ಯಾಳಿಸುತ್ತ
ಹಿಂದಿನದೆಲ್ಲವ ಕೇಳುವೆ ಕೆದರುತ್ತ
ಚಿಂತೆಯಿಲ್ಲ ನಿನಗೆ ನನ್ನ ಮನಸಿನತ್ತ
ಯಾಕಾದರೂ ಬಂಧಿಸಿದೆ ತಾಳಿಯ ಕಟ್ಟುತ್ತ

ವಂಚಿಸಿದೆ ಪ್ರೀತಿಯ ನಾಟಕವಾಡುತ್ತ
ನಂಬಿಸಿದೆ ಮೋಹದ ಬಲೆಯನು ಹೆಣೆಯುತ್ತ
ಬದುಕ ಬೇಕಿದೆ ನಿನ್ನೊಂದಿಗೆ ನರಳುತ್ತ
ಕಳೆಯಬೇಕಿದೆ ಇನ್ನೇಷ್ಟು ದಿನ ಅಳುತ್ತ
ಎಂದಾದರೂ ನಿನ್ನಿಂದ ನನಗೆ ಮುಕ್ತಿ ಸಿಕ್ಕುತ್ತ?

ನಿದಿರೆ ತೊಂದರೆ

ನಿದಿರೆ
ನೀನೊಂದು
ಮದಿರೆ

ಎಷ್ಟೊಂದು
ಕೊಡುವೆ
ತೊಂದರೆ

ನನ್ನವಳು
ಅಲ್ಲಿರೇ
ಮಾತು
ನೂರೆಂಟಿರೇ

ಮೌನ
ಮುರಿಯುತಿರೇ
ಗಾಳಿಯೂ
ನಿಶ್ಯಬ್ದವಾಗಿರೇ

ಅವಳಿಗೆ ಹೇಳುವದು
ಎಷ್ಟೋ ಇದೆ
ನಿದಿರೆ

ನೀ
ಕೊಡದಿರು
ತೊಂದರೆ

Tuesday, November 22, 2016

ಸೋಲು

||ಪ್ರೀತಿಯಲ್ಲಿ ಹುಡುಗ
ಮೊದಲು ಸೋಲುತ್ತಾನೆ||
ಗೆದ್ದ ಹುಡುಗಿ ಪ್ರೀತಿಯಲ್ಲಿ
ಎಲ್ಲವನ್ನೂ ಸೋಲುತ್ತಾಳೆ

ನಲ್ಲನೀರದ ಮಂದಿರ

ನಲ್ಲನೀರದ ಮಂದಿರ
ಬಾರದಿರು ಚಂದಿರ
ತೋರದಿರು ಸುಂದರ
ನಲ್ಲನಿಲ್ಲ ಹತ್ತಿರ

ಅವನಿಲ್ಲದ ಎದೆಗೆ
ನುಸುಳದಿರು ಒಳಗೆ
ಬಳಸದಿರು ಮೆಲ್ಲಗೆ
ಇರಿಸದೆಯೆಯಿರು ಬೆಚ್ಚಗೆ

ನಾನೊಂದು ಕನ್ನಿಕೆ
ಮುಖದಲ್ಲಿ ನಾಚಿಕೆ
ನೀ ತಂದ ಕಾಣಿಕೆ
ಅವನೀಲ್ಲದ ಮೇಲೆ
ಈ ಸಂಚೇಕೆ?

Monday, November 21, 2016

ಉತ್ತರ ತತ್ತರ

ಉತ್ತರ ತತ್ತರ  ಎನ್ನುವವರು ಬಲು ಎತ್ತರ
ನೀಡುವುದಿಲ್ಲಾವ ಸಮಸ್ಯೆಗಳಿಗೆ ಉತ್ತರ
ಬಿಟ್ಟುಕೊಳ್ಳುವುದಿಲ್ಲಾರು ಜನರನ್ನು ಹತ್ತಿರ
ಹರಿಸುವುದೊಂದಿದೆ ಅದು ನಮ್ಮ ನೆತ್ತರ

ತುಂಬಿಸಿಕೊಳ್ಳುತ್ತಾರೆ ತಪ್ಪದೆ ಮನೆಯ ಕರ
ಮನೆಯ ನಲ್ಲಿ ತಿರುಗಿಸಿದರೆ ಅದಕು ಬರ
ಕೇಳಲು ಹೋದರೆ ಇವರದು ಬರೇ ನಿರುತ್ತರ
ಇವರ ಕಾರ್ಯ ವೈಖರಿ ಕಂಡು ಜನರು ನಿಂತಿಹರು ಬಡಿದಂತೆ ಗರ

ಮಹಾದಾಯಿಯ ಕೂಗು ಕೇಳುತ್ತಿಲ್ಲ ಸರಕಾರ
ಮೂರು ರಾಜ್ಯಗಳು ತೋರುತ್ತಿಲ್ಲ ಸಹಕಾರ
ಧರಣಿ ಉಪವಾಸವ ಕೈಗೊಂಡಿಹನು ಮತದಾರ
ಬರಲಿಲ್ಲಾವ ಆಡಳಿತದ  ಸಾಹೇಬ ಸರದಾರ

ಮೇವು ನೀರಿಲ್ಲದೆ ಒದರುತಿವೆ ದನಕರ
ಭುವಿಯನು ಕಾದಕೆಂಡವಾಗಿಸುತಿಹನು ದಿನಕರ
ಸಭೆಯಲ್ಲಿ ತಣ್ಣಗೆ ಕುಳಿತವರಿಗಿಲ್ಲವೆ ಕನಿಕರ
ನಿದ್ರೆಗೆ ಜಾರಿ ಹೊಡೆಯುವರು ಗೊರಕೆ ಭಯಂಕರ

ಒಂದನ್ನಾದರೂ ಬಿಡುವುದಿಲ್ಲ ಸತ್ಕಾರ
ಹರಿಸುವರು ಮಾತಿನಲಿ ಭರವಸೆಗಳ ಭರಪೂರ
ಭರವಸೆಯ ಆಸೆಗೆ ಹೊಡೆದಾಡಿ ಸಾಕಷ್ಟು ಮಂದಿ ಸತ್ತಾರ
ಸೌಧದ ಮೊಗಸಾಲೆಯಲಿ ನಿಂತು ಮುಸುಮುಸು ನಕ್ಕಾರ

ನಮ್ಮ ಬೆಳೆಗಿಲ್ಲ ಮಾರುಕಟ್ಟೆಯಲ್ಲಿ ದರ
ಬೆಂಬಲ ಬೆಲೆಗೆ ಕೈಗೊಂಡಿಲ್ಲಿನ್ನೂ ನಿರ್ಧಾರ
ಹರಿಸಬೇಕು ಇನ್ನೇಷ್ಟು ದೇಹದ ಬೆವರ
ಇನ್ನೇಷ್ಟು ಸುರಿಸಬೇಕು ಬರದ ಕಣ್ಣೀರ

ಉತ್ತರದವರಿಗಿಲ್ಲವೇ ಯಾವುದೇ ಪರಿಹಾರ
ತೋರಿಸದಿರಿ ನಮಗೆ ಕಿಂಚಿತ್ತು ಮಮಕಾರ
ಹರಿಸಿರಿ ಕಾಲುವೆಗಳಿಗೆ ಮಹಾದಾಯಿ ನೀರ
ಹೊಲಗದ್ದೆಗಳ ಮಾಡುವೆವು ಬಿತ್ತಿ ಬಂಗಾರ

ನೀನಾದರೂ ಕಣ್ತೆರದು ನೋಡೊ ಹರಿಹರ
ತಾಯಿ ಗಂಗೆಯನಾದರೂ ಸುರಿಸು ಸರಸರ
ಸಕಲಜೀವಿಗಳ ಜೀವಕ್ಕಾಗಿ ಹರಿಯಲಿ ಪನ್ನೀರ
ಜಗವ ಕಾಯುವ ಜಗದೀಶನೆ ನೀನಾದರೂ
ತೋರು ಚಮತ್ಕಾರ

ಸ್ವೀಕರಿಸು ನಮ್ಮ ಧೀರ್ಘದಂಡ ನಮಸ್ಕಾರ
ಶಿಕ್ಷಿಸು ಬೆತ್ತವ ಬೀಸಿದ ನೀರ್ಧಯಿ ಪುಂಡರ
ನೀನಾಗು ನೋವುಂಡ ಮನಸಿಗೆ ಆಧಾರ
ಕಣ್ಣೀರ ಒರೆಸಿ ತೋರಿಸು  ಆದರ

ಯಾರಾದರೂ ಹೇಳಿರಿ
ಉತ್ತರಕ್ಕೆ ಉತ್ತರ 

ಯಾಕೆಂದರೆ ಉತ್ತರ
ಈಗ ತತ್ತರ
ಬರದ ಬವಣೆಗೆ ನಿರುತ್ತರ

Sunday, November 20, 2016

ನನ್ನ ಪ್ರೀತಿ

ಉಪ್ಪಿನ ರುಚಿ ಹೆಂಗಂತ
ಯಾರರ ಕೇಳ್ತಾರನು

ಹಾಲಿನ ಬಣ್ಣ ನೋಡಂತ
ಯಾರರ ಹೇಳ್ತಾರನು 

ಜೇನು ಸಿಹಿ ಐತೊ ಇಲ್ಲೊ
ಅಂತ ಯಾರರ ವಿಚಾರಿಸ್ತಾರನು

ನಿನ್ನ ಪ್ರೀತಿ ನಿಜಾನೊ ಸುಳ್ಳೊ
ಅಂತ ನೀ ಕೇಳಿದ್ರ
ನೋಡ್ದೊರು ನಕ್ಕಾರು
ಕೇಳ್ದೊರು ಬೈದಾರು 

ಯಾಕಂದ್ರ
ನಿನ್ನ ಪ್ರೀತಿಯನ್ನೊದು
ನನ್ನ ಎದೆಯಾಗ ಇಲ್ನೊಡದು
ನನ್ನ ಉಸಿರನ್ಯಾಗೈತದು

ಮನದಿಂದ ಗೋಡೆಗೆ

ಬಸವ ಬುದ್ಧ, ಗಾಂಧೀ ಭೋಸ್
ದೇವಿ ಚೆನ್ನಮ್ಮ, ಬೇಂದ್ರೆ ಕುವೆಂಪು
ಜೋಷಿ ಹಾನಗಲ್, ವಿಶ್ವೇಶ್ವರಯ್ಯ ಮಿರ್ಜಾ
ಕನ್ನಡದ ಎಲ್ಲ ಮಹನೀಯರು
ಬಂದಿಹರು ಮನದಿಂದ ನಿಲ್ದಾಣದ
ರಸ್ತೆಯ ಗೋಡೆಗಳಿಗೆ, ರಂಗು ರಂಗಿನ
ಹರಿದು ಕಾಲ ಕಸವಾಗುವ ಭಿತ್ತಿಪತ್ರಗಳೊಳಗೆ

ಬಿಸಿಲುಮಳೆಗಾಳಿಗೆ ನಗುತ
ಚಿತ್ರಿತವಾಗಿಹರು ಕಲ್ಲು ಗೋಡೆಗಳ ಮೇಲೆ
ನೋಡಿ ನಾವು ಕಟ್ಟಿರುವ ನಾಡನೆನುತ
ಇಂದು ಮನದಿಂದ, ನಾಳೆ ಪುಸ್ತಕದಿಂದ
ಮುಂದೆ ನಾಡಿನಿಂದ ಇವರನ್ನು ಗಡಿಪಾರು
ಮಾಡಿದರು ಮಾಡುವರು ಏಕೆಂದರೆ ಇವರಿರುವುದೀಗ
ಕೇವಲ ಭಿತ್ತಿಪತ್ರಗಳ ಮೇಲೆ, ಸುಣ್ಣ ಬಳಿಯುವ
ಗೋಡೆಗಳ ಮೇಲೆ

ಚಿತ್ರಿಸುವುದಕೆ ಇವರನು ಗೋಡೆಗಳಿಗೆ, ನಿಲ್ದಾಣಗಳಿಗೆ
ಮತ್ತೆಲ್ಲಿ ಚಿತ್ರಿಸುವರಿವರು ಮನೆಯ ಗೋಡೆಗಳು ನೀರ್ಭಾವ 
ತೈಲವರ್ಣಗಳ ಚೌಕಟ್ಟುಗಳಿಂದ ತುಂಬಿದ್ದರೆ,ಕಪಾಟುಗಳು, 
ಕಾರ್ಬೋಡುಗಳು ಇವರಿಗೆ ಸನ್ಮಾನಿಸಿದ ಫಲಕಗಳಿಂದ,
ಊಡುಗರೆಗಳಿಂದ ತುಂಬಿ ತುಳುಕುತಿರುವಾಗ ಇವರನ್ನು 
ಇವರ ಸಾಹಿತ್ಯವನ್ನು ಇಡುವುದಾದರೂ ಇನ್ನೇಲ್ಲಿ

ಇವರನ್ನು ಮನದಲಿಡಬಹುದಾಗಿತ್ತು ಕಾರಣ ಅದು
ಕಾಂಚಣದ ಜಪದಲಿ ತೊಡಗಿದೆ
ಓದಲು ಸಮಯವನಾದರೂ ತೆಗೆಯಬೇಕಾಗಿತ್ತು
ಇಲ್ಲ ಊಣ್ಣಲು ಮಲಗಲು ಸಮಯವಿಲ್ಲದಿರುವಾಗ
ಇನ್ನು ಓದಲೆಲ್ಲಿ ಓದಿ ಮಕ್ಕಳಿಗೆ‌ ತಿಳಿಸುವುದಾದರೂ ಎಲ್ಲಿ?
ಪುಣ್ಯಕ್ಕೆ ನಿಲ್ದಾಣದ ಗೋಡೆಗಳಾದರು ಇವೆ
ಇವರನ್ನು ಚಿತ್ರಿಸಲು

ಇದ್ದಾಗ ಇಲ್ದಾಗ

ನಾನೀದ್ದಾಗ
ನಾನಿದ್ದಾಗ ನನ್ನ ಕಷ್ಟಗಳಿಗೆ
ಹೆಗಲು ಕೊಡದ ಸ್ನೇಹಿತರು
ನಾನು, ನನ್ನ ಸಂಸಾರ ಹಸಿದಾಗ
ಅನ್ನವನಿಕ್ಕದ ಬಂಧುಗಳು
ಆಸ್ತಿಯಲ್ಲವ ಹೋಗಿ ಬೀದಿಗೆ ಬಿದ್ದಾಗ
ಇರಲು ಜಾಗವ ನೀಡದ ಸಮಾಜ
ಹಸಿವು ಹಸಿವೆಂದಳುತಿರಲು
ಮೂಸಿಯೂ ನೋಡದ
ಮೂರ್ಲೋಕ

ನಾನಳೀದಾಗ
ನನ್ನ ಹೆಣದ ಚೆಟ್ಟಕ್ಕೆ ಹೆಗಲು
ನೀಡಲು ಬಂದರು ಸ್ನೇಹಿತರು
ಕೊನೆಯ ದರ್ಶನವೆಂಬಂತೆ ಬಾಯಿಗೆ
ಅಕ್ಕಿ ಹಾಕಿದರು ಬಂಧುಗಳು
ಸ್ಮಶಾನದಲ್ಲಿ ನನಗಾಗಿ ಗುಂಡಿ
ತೊಡಿಟ್ಟರು ಸಮಾಜದವರು
ಗುಂಡಿಯಲೆನ್ನವಿಟ್ಟು ಮಣ್ಣು
ಸುರಿಯುತಿರಲು, ಅಳುವ ಮಡದಿ
ಮಕ್ಕಳ ಕಂಡು ಮಮ್ಮಲ ಮರಗುತಿದೆ
ಮೂರು ಲೋಕ
ಇದ್ದಾಗ ಇರದ ಈ ದೇಹಕ್ಕೆ ಬೆಲೆ
ಸತ್ತಾಗ ಅರಿಯುವರು

ಶಂಕೆ

ದೇವರು ಹುಟ್ಟಿಸಿದ ದಿನದಿಂದ ಸಮಾನವಾಗಿ
ಎಲ್ಲ ಜೀವಿಗಳಿಗೂ ಮರಣವ ಕಟ್ಟಿ ಬಿಟ್ಟಂತೆ
ನನಗೊಬ್ಬಳಿಗೇಕೆ ? ಮರಣದ ಜೊತೆಗೆ ಸಂಶಯ
ಎನ್ನುವ ನಕ್ಷತ್ರಿಕನನ್ನು ಹೆಗಲೆರಿಸಿ ಭೂಮಿಗೆ ಬಿಟ್ಟೆ

ಹಸುಗೂಸು ನಾನಾಗಿದ್ದಾಗ ಅಜ್ಜಿಗೆ ಶಂಕೆ
ನಾನುತ್ತಮ ರಾಶಿಯಲಿ ಜನಿಸಿರುವೇನೊ ಇಲ್ಲವೆಂದು
ಇದ್ದ ಮನೆಗೆ, ಹೋದ ಮನೆಗೆ ಶುಭ ಅಶುಭವಾಗವಳೆ? ಎಂದೂ
ಹರೆಯ ಬರುವವರೆಗೂ ತಾಯಿಗೆ ಶಂಕೆ
ಇವಳು ಮನೆಗೆಲಸವನೆಲ್ಲವ ಬಲ್ಲವಳಾಗುವಳೊ
ಇಲ್ಲವೊ, ಹಿರಿಯರಿಗೊಪ್ಪುವಳೊ ಇಲ್ಲವೊ ಎಂದು ಹರೆಯದ ನಂತರ ತಂದೆಯ ಶಂಕೆ
ಕಾಲೇಜಿನ ಹಾದಿಯಲ್ಲಿ ದಾರಿ ತಪ್ಪುತ್ತಿರುವಳೊ
ಇಲ್ಲವೋ, ಹರೆಯದ ಚಂಚಲತೆಯನು ಹಿಡಿದಿಡುವಳೊ
ಹರಿಬಿಡುವಳೊ, ಕೊಟ್ಟ ಮನೆಗೆ ಊರುಗೋಲಾಗುವಳೊ, ಹೆತ್ತ ಮನೆಗೆ ಎರವಾಗುವಳೊ
ಎಂದು
ಮದುವೆಯ ನಂತರ ಗಂಡನ ಶಂಕೆ
ಮದುವೆಗೂ ಮೊದಲು ಇವಳು ಶೀಲವಂತಳೆ?
ಯಾರೊಂದಿಗೂ ಒಡನಾಟಗಳಿಲ್ಲವೇ, ನನ್ನೊಂದಿಗೆ
ಸಹಕರಿಸುವಳೆ ? ನನ್ನೆಲ್ಲ ರಾತ್ರಿ ಕನಸುಗಳನೀಡೆರಿಸಬಲ್ಲಳೆ ? ನನ್ನ ಕುಡಿಗಳ ಹೆತ್ತು, ಹೊರಬಲ್ಲಳೆ ?
ಅವರ ಜವಾಬ್ದಾರಿಗಳನೆಲ್ಲವ ನಿಭಾಯಿಸಬಲ್ಲಳೆ  ?
ಎಲ್ಲಕ್ಕೂ ಮೀಗಿಲಾಗಿ ನನಗೆ ನಿಷ್ಠೆಯಾಗಿರುವಳೇ?

ಏಕೇ ಇಷ್ಟೊಂದು ಶಂಕೆಗಳ ನಡುವೆ ಬಾಳುವ
ಬದುಕನ್ನು ನೀಡುವೆ, ಏಕೇ ಇಷ್ಟೊಂದು ಜಂಜಾಟದಲಿ
ಹುಟ್ಟಿಸಿ, ಸಿಲುಕಿಸಿ, ನಲುಗಿಸಿ, ಹಿಂಸಿಸಿ ಶಂಕೆಯೇನುವ
ಬೆಂಕಿಯೊಳು ಕಾಯಿಸಿ ಅನುಮಾನದ ಸುತ್ತಿಗೆಯಿಂದ
ನನ್ನನ್ನು ಹೊಡೆದು ಹೊಡೆದು ಮನವು ನೋವಿಗೆ
ಒಗ್ಗುವ ಹಾಗೇಕೆ ಮಾಡುವೇ

ನನಗೇಕೆ ಭೂಮಿಯಷ್ಟು ತಾಳ್ಮೆಯ ನೀಡಿರುವೆ
ಬರೀ ಉಪ್ಪು ನೀರನೆ ಅಪ್ಪುವಂತ ದಂಡೆಯನೇಕೆ ಮಾಡಿರುವೆ
ಉಳಿಯ ಪೆಟ್ಟನುಂಡು ರೂಪಗೊಳ್ಳುವ ಬಾಲೆಯನೆಂತೇಕೆ ಮಾಡಿದೆ
ಗಂಧವ ಹೀರಿ ಬಿಸಾಡುವ ಹೂವನ್ನಾಗೇಕೆ ಸೃಷ್ಟಿಸುವೆ
ನಂಬಿಕೆ ಇರದ ಆ ಏಳು ಜನುಮಗಳಲಿ
ಒಂದಾದರೂ ನೀಡು ನನಗೆ
ಶಂಕಿಸದ ಜನ್ಮವನು

ಕಲ್ಲ ಮೇಲೊಂದ ಕಲ್ಲು

ಕಲ್ಲ ಮೇಲೊಂದು ಕಲ್ಲನಿಟ್ಟೊಡೆ
ಮನೆಯಾಗದೂ, ಮಂದಿರವೂ ಆಗದು

ಹೂವಿಗೊಂದು ಹೂ ಸೇರಿಸಿಟ್ಟೊಡೆ
ದಂಡಿಯಾಗದೂ, ಹಾರವು ಆಗದು

ದೇಹಕೊಂದು ದೇಹವ ಬೇರಸಿಟ್ಟೊಡೆ
ಮದುವೆಯಾಗದು, ಸಂಸಾರವು ಆಗದು

ಮನಕೊಂದು ಮನ ಕೂಡಿಟ್ಟೊಡೆ
ಒಲವರಳುವದು, ಬಾಳಾಗುವದು

ದೀನಬಂಧು

ಹಾದಿಯ ದೀಪದೊಳೊದಿ
ದೇಶಕೆ ಬೆಳಕಾದೆ | ಊರು
ಸೂರಿಲ್ಲದವರ ಬಾಳಿಗೆ
ನೇರವಾದೆ

ದಲಿತರ ಪಾಲಿನ ಧೀನ
ಬಂದುವಾದೆ | ತುಳಿತ
ಗೊಳ್ಳುವವರ ಬದುಕಿಗೆ
ಆಸರೆಯಾದೆ

ಜನರ ನಿಂದನೆಗೊಳಗಾಗಿ
ಬೆಂದೆ | ಮಾತನಾಡುವ
ಬಾಯಿಗಳಿಗೆಲ್ಲ ಶಾಸನವ
ತಂದೆ

ಅವರು ಇವರೆಂದು ಬೇಧಿಸದೆ
ಬದುಕಿದೆ | ಯಾರಿಗೂ
ಬೇಧವ ತೋರದೆ ಸಂವಿಧಾನವ
ಬರೆದೆ

ಆತ್ಮಸ್ಥೈರ್ಯ

ನೋಡು ನನ್ನನೊಮ್ಮೆ ತಲೆಯತ್ತಿ
ನಿಮ್ಮೂರಿನ ತಲೆಭಾಗದಲೆ ಇರುವೆ
ಗಡಗಡನೆ ಗುಡುಗುವ ಗುಡುಗಿಗಂಜದೆ
ಕಣ್ಣು ಕುಕ್ಕುವ ಕೋಲ್ಮಿಂಚು ಮಿಂಚಿ
ಮರಗಳೆ ನೆಲಕ್ಕುರುಳುವ ಹಾಗೆ ಬಿರುಗಾಳಿಯೇ
ಬೀಸಿದರೂ, ಕಲ್ಲುಬಂಡೆಗಳೆ ಚೂರಾಗುವಷ್ಟು
ಬಿಸಿಲು ಬಿದ್ದರೂ ಹೇಗೆ ನಿಂತಿರುವೆ ಎದೆಯೊಡ್ಡಿ

ಏಕೇ ಅಂಜುವೆ, ಅಳುಕುವೆ ಬದುಕಿನ
ಕಷ್ಟ- ಕಾರ್ಪಣ್ಯಗಳಿಗೆ
ನೋವು ತರಿಸುವ ಘಳಿಗೆ ದಿನಗಳಿಗೆ
ಸುರಿಸದಿರು ಒಂದು ಹನಿ ಕಣ್ಣೀರನೂ
ಚಿಂತಿಸದಿರು ಅರೇ ಘಳಿಗೆಯನು
ಸಹಿಸದಿರು ಪ್ರತಿ ಕ್ಷಣವನು
ತಪ್ಪಿಯಿಡದಿರಿನ್ನು ಒಂದು ಹೆಜ್ಜೆಯನು

ನೀನೊಂದು ಕಷ್ಟಗಳ ಕತ್ತರಿಸುವ ವಜ್ರಾಯುಧವಾಗು
ಚಿಂತೆಗಳ ಸುಡುವ ಸುದರ್ಶನ ಚಕ್ರವಾಗು
ಕಾಮನೆಗಳ ಹಿಡಿಯಲ್ಲಿಟ್ಟುಕೊಳ್ಳವ ಸವಾರನಾಗು
ದೌರ್ಬಲ್ಯವನೆಲ್ಲ ಬಲಿಯ ತುಳಿದಂತೆ ತುಳಿದುಬಿಡು
ಜಂಜಾಟದ ಬದುಕಿಗೆ ಬ್ರಹ್ಮಾಸ್ತ್ರವಾಗು
ಕೇಳಿದೊಡೆ ಫಲಕೊಡುವ ಕಲ್ಪವೃಕ್ಷವಾಗು

| ಒಂದನರೀತಿಕೊ
"ನೀನು ಹುಟ್ಟಿದ ಮೇಲೆ ನಿನಗೆ ಕಷ್ಟಗಳು ಹುಟ್ಟಿಕೊಂಡವು
ಕಷ್ಟಗಳು ಹುಟ್ಟಿದ ಮೇಲೆ ನೀನು ಹುಟ್ಟಲಿಲ್ಲ
ಕಷ್ಟಗಳು ನೀ ಭೂಮಿಗೆ ಬರುವ ಮೊದಲೆ ಇದ್ದವು
ನೀನು ಹೋದ ಮೇಲೂ ಇರುತ್ತವೆ"

ಬೆಟ್ಟಕಂಜಿದರೆ ಮೆಟ್ಟಿಲು ಹತ್ತಲಾಗದು
ಅಲೆಗಂಜಿದರೆ ದಡ ಮುಟ್ಟಲಾಗದು
ನೋವಿಗಂಜಿದರೆ ಬದುಕು ದೂಡಲಾಗದು
ಕಷ್ಟ ಅದು ನಿನ್ನ ಕಾಲಿನ ಮೆಟ್ಟಾಗಿರಬೇಕು
ನಿನ್ನ ತಲೆಯನೇರಿ ಕುಳಿತುಕೊಳ್ಳುವ
ಮೆಟ್ಟಾಗಬಾರದು

ಮಮತೆಯ ಮೇಕೆ

ಓ ನನ್ನ ಮಮತೆಯ ಮೇಕೆಯೇ
ಕಪ್ಪು ಬಿಳುಪಿನ ಬಣ್ಣದ ಸಿರಿಯೇ
ಈ ಗುಡಿಸಲು ಮನೆಯ ಗಣಿಯೇ
ನನ್ನೆರಡು ಮಕ್ಕಳ ಮಲತಾಯೇ

ಅವಳಿ ಮಕ್ಕಳ ಈ ತಾಯಿಗಿಲ್ಲದಿರೆ
ಎದೆಹಾಲು | ಹಂಚಿದೆ ನಿನ್ನ ಕೆಚ್ಚಲಿನ
ಹಾಲು ಮಾಡಿ ಪಾಲು | ಈ ಮಕ್ಕಳ
ತಾಯ್ತನದಲಿ ನಿನ್ನದೂ ಇದೆ ಸಮಪಾಲು

ದಾರಿಯಿಲ್ಲದೇ ನಿನ್ನ ಕರುಳ ಕುಡಿಗಳ ಮಾರಿ
ತಂದಿರುವೆ ಅಡುಗೆ ಮನೆಗೆ ತರಕಾರಿ
ಕೂಗಿ ಕೂಗಿ ನಿಲ್ಲಬೇಡ ಬಾಯಾರಿ
ಗಂಡನಿಲ್ಲದ ನನ್ನ ಬದುಕಿಗೆ ನೀನೇ ದಾರಿ

ದೇವಿ ಬಂದಿರುವಳಂತೆ ನಿನ್ನ ಮೈಯೊಳಗೆ
ಉಣದೆ ನಿಂತಿರುವೆ ಸಾಯುವ ಹಾಗೆ
ಬಾಳ ಪಯಣದಲಿ ಜೊತೆಯಿನ್ನಾರು ನನಗೆ
ಮಾರಲೆ ಹೇಗೆ ಅವಡುಗಚ್ಚಿ ನಿನ್ನನ್ನು ಕಟುಕನಿಗೆ

ಹೇಗೆ ದೂಡಲಿ ನಿನ್ನನು ಕಸಾಯಿಖಾನೆಗೆ
ಬಿಟ್ಟು ಬರಲಾದಿತೆ ಒಬ್ಬಳೆ ಮನೆಗೆ
ನಾನೇನ ಉತ್ತರಿಸಲಿ ಮಕ್ಕಳ ಪ್ರಶ್ನೆಗೆ
ಸಮಾಧಾನಿಸಲಿ ಹೇಗೆ ಕಣ್ಣೀರ ಕಂಗಳಿಗೆ

ದೇವರೆ ಮರಳಿ ಕಳಿಸಬಾರದೆ ಹಟ್ಟಿಗೆ
ನೀಡು ನೆಮ್ಮದಿಯನಾದರೂ ಮೂಕ ಪ್ರಾಣಿಗೆ
ಹಸಿವ ಬತ್ತಿಸು ನನ್ನೆರಡು ಮಕ್ಕಳಿಗೆ
ದುಡಿದು ತಿನ್ನಲು ಶಕ್ತಿಯ ನೀಡು ರಟ್ಟೆಗೆ

ಪೂಜೆ ಕಾಣದಿರುವುದೆ ಕಣ್ಣಿಗೆ
ಪ್ರಾರ್ಥನೆ ಕೇಳದಿರುವುದೆ ಕಿವಿಗೆ
ಮನವಿ ಮುಟ್ಟುತಿಲ್ಲವೆ ಮನಸ್ಸಿಗೆ
ಗೋಳು ನೀಡದಿರಿನ್ನು ಬಾಳಿಗೆ

ಇಲ್ಲವಾದರೇ?
ನಿನ್ನಂಥೆ ಕಲ್ಲಾದ ಮೂರ್ತಿಯಾಗಲೇ
ಹೇಗೆ?

ಜೂಜಾಟ

ನನ್ನಿಂದ ನೀನಗೇನು ಕಡಿಮೆಯಾಯಿತೆಂದು
ಜೂಜಾಟದ ಕೊಳದಲ್ಲಿ ನೀನು ಹಾರಿಬಿಟ್ಟೆ
ಇಜಲಾಗದೆ ಕೈಕಾಲು ಸೋತು ಒದ್ದಾಡುತಿರಲು
ಒಂದು ಸಲವಲ್ಲದೇ ಎರಡೆರಡು ಬಾರಿ ನಿನ್ನನು
ಉಳಿಸಿದ್ದೆವು, ಹರಸಿದ್ದೆವು, ಪೋಷಿಸುತಿರುವೆವು

ಮರೆತೆಯೆ, ಅಗುಳಗುಳಿಗು ನಾನು ನಿಮ್ಮಣ್ಣ
ಪಟ್ಟ ಪಾಡನ್ನು, ಬದುಕಿನ ಹೋರಾಟದ ಹಾದಿಯಲಿ
ಯಾರೊಂದಿಗೂ ಸೋಲದೆ, ರಾಜೀಯಾಗದೆ ಬದುಕಿರುವ
ನಮಗೇಕೆ ಸಮಾಜದೆದುರು ತಲೆಯೆತ್ತದಂತೆ ಮಾಡುತಿರುವೆ

ಕಾಣುತ್ತಿಲ್ಲವೇ ನೀನಗಾಗಿ ಮನೆಯಂಗಳವೇ
ರಣರಂಗವಾಗಿದೆ, ಬಿಡುವ ಉಸಿರೆಲ್ಲವೂ ವಿಷವಾಗಿದೆ
ಆಡುವ ಮಾತುಗಳು ಕರ್ಣ ಕಠೋರವಾಗಿವೆ
ನೆಮ್ಮದಿ ತುಂಬಿದ ಮನೆಯು ಕಲ್ಲು ಹೊಡೆದ
ಜೇನುಗೂಡಿನಂತಾಗಿದೆ

ನಿನ್ನ ತಾಯಿ ಹಗಲಿರುಳು ನಿನ್ನ ಭವಿಷ್ಯಕ್ಕಾಗಿ
ಚಿಂತಿಸುತಿರುವಾಗ, ಅಕ್ಕ ತಂಗಿಯರು ನಿನ್ನ
ಆರೋಗ್ಯದ ಬಗ್ಗೆ ಕನವರಿಸುತಿರುವಾಗ
ನಾನು ನಿನ್ನಣ್ಣ ನಿನ್ನ ದುಡಿಮೆಯ ಬಗ್ಗೆ ಯೋಚಿಸುತಿರುವಾಗ ಎಂಥ ಕಾರ್ಯವ ಮಾಡಿಬಿಟ್ಟೆ

ಇನ್ನು ಹೇಗೆ ನಿನ್ನ ಕಂಕಣ ಬಲವ ಹೊಂದಿಸಲಿ
ಬರುವ ಸೊಸೆಗೆ ನಾನೇನು ಭರವಸೆಯ ನೀಡಲಿ
ನಮ್ಮಂಥೆ ಅವಳನ್ನು ನಡು ಬಾಳಿನಲಿ ಕೈ ಬಿಟ್ಟರೆ
ನಮ್ಮಿಂದ ಅವಳನ್ನು ನಿನ್ನ ಮಕ್ಕಳನು ಸಾಕಲಾದಿತೆ
ಅವರ ಹೊರೆಯಲು ನನ್ನ ದೇಹ ಬಲವು ಸಹಕರಿಸುವುದೆ?

ತಿಳಿದಿಕೋ ಅಡ್ಡಹಾದಿಯ ಹಿಡಿದು ಊರ
ಸೇರಬಹುದಲ್ಲದೆ, ಸಂಸಾರವ ಸಾಗಿಸಲಾಗದು
ದುಡುದ ತಿಂದ್ರ ಅಗಳಿನ ಶ್ರಮ ಗೊತ್ತಾಗತೈತಿ
ಹರಾಮಿದ ತಿಂದ್ರ ಹರಾಜ ಆಗಿ ಹೋಗ್ತಿವಿ

ಅದ್ಕ ಅಣ್ಣವರು ಹೇಳ್ಯಾರ
"ಪಾಪಿಯ ಹಣ ಪ್ರಾಯಶ್ಚಿತ್ತಕಲ್ಲದೆ
ಸತ್ಪಾತ್ರಕೆ ಸಲ್ಲದಯ್ಯಾ" ಎಂದು
ಹಾರದಿರಿನ್ನು ಕೊಳದಲ್ಲಿ ಜಿಗಿದರೆ ನಿನ್ನನೆತ್ತಲು
ನನ್ನ ಭುಜದಲಿ ಶಕ್ತಿಯೊಂದಿಷ್ಟು ಉಳಿದಿಲ್ಲ
ನಿಟ್ಟುಸಿರು ಬಿಡುವದ ಹೊರತು

ನನ್ನನೇಕೆ ಬರೆಯುವೆ

ನನ್ನನೇಕೆ ಬರೆಯುವೆ
ದುಬಾರಿಯ ಪುಸ್ತಕದಲಿ
ಹೀಗೇಕೆ ಬಚ್ಚಿಡುವೆ
ಕಲ್ಲುಗೋಡೆಯ ಕಪಾಟಿನಲಿ

ಕಂಡ ಕನಸುಗಳಿಲ್ಲವೆ
ಬರೆದ ಅಕ್ಷರಗಳಲಿ
ಸಾಕಾರ ರೂಪವಿಲ್ಲವೆ
ಬರೆದ ಕವನದಲಿ

ನನ್ನ ನೆನಪಾಗುತ್ತಿಲ್ಲವೆ
ಬದುಕಿನ ಹಾದಿಯಲಿ
ಮನದಲ್ಲೇಕೆ ಮರೆತಿರುವೆ
ಮಡದಿಯ ಮಡಿಲಲಿ

ಬರೆಯಲು ಛಲವಿಲ್ಲವೆ
ಬುದ್ದಿಯ ಬಲದಲಿ
ಓದಲು ಒಲವಿಲ್ಲವೆ
ಬಲವಿಲ್ಲದ ನಾಲಿಗೆಯಲಿ

ಮಂಕನಂತಯೇ ಕುಳಿತಿರುವೆ
ಲೋಕದ ಮಧ್ಯದಲಿ
ಜಗದೊಳಗೆ ಬೆರೆಸುವೆ
ನನ್ನನಿರಿಸು ಕರಗಳಲಿ

ಮನ ಬೆಳಗುವೆ
ಓದು ಮನೆಯಲಿ
ಜನ ಬೆಸೆಯುವೆ
ವಾಚಿಸು ಸಮ್ಮೇಳನಗಳಲಿ

ಇವಾಗುತ್ತಿಲ್ಲವೆ?
ಮತ್ತೆ ನನ್ನನ್ನೇಕೆ ಬರೆಯುವೆ
ಅರ್ಥವಿರದ ಬದುಕಿನಲಿ

Monday, November 14, 2016

ಆದರೆ..

ದೇವರು ಎಲ್ಲವು ನೀಡಿದ
ನೆಲ,ಜಲ,ಭಾನು, ಬೆಳಕು
ಗಾಳಿ, ಬೆಳೆ, ಬೆಟ್ಟ ಗುಡ್ಡ
ಕಾಡುಮೇಡು ಪ್ರಾಣಿ ಪಕ್ಷಿ
ಪ್ರಕೃತಿ ಸಂಪತ್ತು ಮಾನವ
ಸಂಪತ್ತು

ಎಲ್ಲ ಸಂಪತ್ತುಗಳ ನೀಡಿ
ಹುಟ್ಟಿನ ಹಿಂದೆ ಸಾವು ಕೊಟ್ಟಂತೆ
ಬದುಕಿನ ಜೊತೆಗೆ ಈ ಆದರೆ...
ಎಂಬ ಪದವನ್ನು ಕಟ್ಟಿಕೊಟ್ಟೆ
ಸಾಯುವವರೆಗೂ ನಮ್ಮ ಬೆನ್ನು
ಬಿಡದಂತೆ

ಆಗರ್ಭ ಶ್ರೀಮಂತ, ಆದರ್ಶ ಪತ್ನಿ
ಮುದ್ದಾದ ಇಬ್ಬರು ಮಕ್ಕಳು ಸ್ವರ್ಗಕ್ಕೆ
ಕಿಚ್ಚು ಹಚ್ಚುವ ಕುಟುಂಬ ಆದರೆ...
ಮಗ ಹುಟ್ಟು ಕುರುಡ, ಮಗಳು ಬುದ್ದಿಮಾಂದೆ
ಎಲ್ಲವೂ ಇದ್ದು ಈ ಆದರೆ ಏನೂ ಇಲ್ಲದಂತೆ
ಮಾಡಿದೆ

ಕಡು ಬಡವ ಮನೆತುಂಬ ಮಕ್ಕಳು
ಇರಲು ಜಾಗವಿಲ್ಲ ಉಡಲು ಬಟ್ಟೆಯಿಲ್ಲ
ಆರೋಗ್ಯಕ್ಕೇನು ಕೊರತೆಯಿಲ್ಲ ಆದರೆ...
ಕೈತುಂಬ ಕೆಲಸವಿಲ್ಲ, ರೋಗಕ್ಕೆ ಹಣವಿಲ್ಲ
ಆರೋಗ್ಯ ಭಾಗ್ಯವಿದ್ದ ಇವರಿಗೆ ಈ ಆದರೆ
ದುಡಿಮೆಯೆ ಕೊಟ್ಟಿಲ್ಲ

ಹುಟ್ಟುವ ಕವನಗಳು

ಹುಟ್ಟುವ ಕವನಗಳನೇಕೆ ನಿರ್ಭಂದಿಸಲಿ
ಸಾವಿನ ನೋವು ಇಲ್ಲದಿರುವಾಗ
ಹಾಡುವ ಕವಿತೆಗಳನೇಕೆ ಕಟ್ಟಲಿ
ಬದುಕಿನ ಲಗಾಮು ಹಿಡಿದಿರುವಾಗ

ಬರೆಯುವ ಕಥೆಯನೇಕೆ ನಿಲ್ಲಿಸಲಿ
ಕನಸುಗಳು ನಿದ್ರಿಸಲು ಬಿಡದಿರುವಾಗ
ಆಡುವ ಮಾತುಗಳನೇಕೆ ತಡೆಯಲಿ
ಮನತುಂಬಿ ನಿಂತಿರುವಾಗ

ಬಣ್ಣಿಸ ಪದಗಳ ಹೇಗೆ ಬಂಧಿಸಲಿ
ಬದುಕು ಹಸನಾಗಿರುವಾಗ
ಉಕ್ಕುವ ನುಡಿಗಳ ಹೇಗೆ ನಿರಾಕರಿಸಲಿ
ಮೌನದ ಗೀತೆ ಗಗನ ಚುಂಬುತಿರುವಾಗ

ಹುಟ್ಟಲಿ ಬಿಡಿ ಮರಳಿ ಮರಳಿ
ನನ್ನೊಳಗೆ |ಅವುಗಳಿಲ್ಲದೆ ನನ್ನ
ಬದುಕು ಸವೆಯುವದಾದರೂ
ಹೇಗೇ?

Saturday, November 12, 2016

ನಾನು ಮಠ ಮೈಸೂರ ಮಠ

ನಾನು ಮಠ ಮೈಸೂರು ಮಠ
ಎಲ್ಲರೂ ಅಕ್ಕರೆಯಿಂದ ಕರೆಯುವರು
ನನ್ನನ್ನು ಚೌಕಿಮಠ | ನಗರದ ಹೃದಯ
ಭಾಗದಲ್ಲಿ ನಿರ್ಮಿಸಿರುವ ಕಲ್ಲು ಬಂಡೆಯ
ಮಠ

ಮೂಲತಃ ನಾನು ಧಾರ್ಮಿಕ ಮಠ
ಶ್ರಾವಣ ಬಂತೆಂದರೆ ನನ್ನ ಅಂಗಳದೊಳಗೆ
ನಡೆಯದೆ ಇರುವ ಕಾರ್ಯಕ್ರಮಗಳಿಲ್ಲ
ಬರದೆ ಇರುವ ಪುರಾಣಿಕರಿಲ್ಲ, ಹಾಡದೆ
ಇರುವ ಗಾಯಕರಿಲ್ಲ ಎಷ್ಟೊಂದು ಧಾರ್ಮಿಕ
ಕಾರ್ಯಗಳು, ಸಭೆಗಳು, ಸಮಾರಂಭಗಳು
ಅನ್ನಸಂತರ್ಪಣೆ, ಉತ್ಸವಗಳು ಹೀಗೆ ಎಲ್ಲ
ಕಾರ್ಯಕ್ಕೆ ಬೇಕಾಗಿದ್ದ ನನ್ನ ಅಂಗಳ ಇತ್ತೀಚಿನ
ಕೆಲ ವರ್ಷಗಳ ಹಿಂದೆ ಒಂದು ಪ್ರಾಥಮಿಕ ಶಾಲೆಯನ್ನು
ಪ್ರಾರಂಭಿಸಿದ್ದಾರೆ

ಆ ಶಾಲೆ ಆರಂಭವಾದಾಗಿನಿಂದ ನನ್ನ ಅಂಗಳ
ಎಷ್ಟು ಅಮೃತಮಯವಾಗಿದೆಯೆಂದರೆ ಅದು
ವರ್ಣಾತೀತ ಆ ಮಕ್ಕಳ ಮಧುರ ಕಂಠದಿಂದ
ದಿನನಿತ್ಯ ಕುವೆಂಪು,ಠಾಗೋರ ಅವರ ಗೀತೆಗಳ
ಕೇಳುತ ನಿತ್ಯವು ಪುನೀತವಾಗುವ ಬಗೆ, ಓದುವ,
ಆಡುವ, ಬೀಳುವ, ಅಳುವ, ನಗುವ, ಓಡಾಡುವ, ಹಾಡುವ, ಕುಣಿಯುವ ಬರೇ ಮಕ್ಕಳಿಂದಲೆ
ತುಂಬಿರುವ ನನ್ನಂಗಳಕೆ ಮತ್ತೆ ಹೊಸದಾಗಿ ಎರಡು ಶಾಖೆಗಳು ಪ್ರಾರಂಭವಾಗಿವೆ

ಒಂದು ಶಿವಾನುಭವ ಗೋಷ್ಠಿ, ಇನ್ನೊಂದು ಸಾಹಿತ್ಯಸಂಜೆ
ಇವೆರಡು ಆರಂಭವಾದಾಗಿನಿಂದ ನನ್ನ ಅಂಗಳದ ಕಂಬಗಳು ರಂಗು ರಂಗಾಗಿ ಮೀನುಗುತಿವೆ, ದೀಪದ ಹೊನಲು ತುಂಬಿದೆ ಅಲ್ಲದೆ ಮಾತನಾಡಲು ಬಾಯಿ ಬಂದಿವೆ, ಮಾಸದ ಗೋಷ್ಠಿಗಂತು ಶರಣರ ಜೀವನ, ವಚನಗಳು, ತತ್ವಗಳು ಅವರ ಆದರ್ಶಗಳನೆಲ್ಲ ಶಾರದಾಸುತರು ತುಂಬಾ ಮನೋಜ್ಞವಾಗಿ ಮಠದ
ಕಲ್ಲುಗಳು ಅರಳುವಂತೆ, ತುಂಬು ಜೀವನದ
ಮನಸ್ಸುಗಳ ಬದುಕು ಸಾರ್ಥಕವೆನಿಸುವಂತೆ
ವಾಚಿಸುತ್ತಾರೆ

ಹೀಗೇಕೆ? ವಾರದ ಚಿಂತನೆಗೆ ಬರುವ ಕೆಲವು
ವಾಚಕರು  ನನ್ನನ್ನೆ ಚಿಂತೆಗೊಳಗಾಗುವಂತೆ
ಮಾಡುವರಲ್ಲ 'ಮಠ ತುಂಬ ದೊಡ್ಡದು ಆದರೆ
ಸಭಿಕರೆ ಕಮ್ಮಿ ' ಎನ್ನುವ ವಾಚಕರು ನಿಮ್ಮ ಅಹಂ ನೇಕೆ
ಬಿಟ್ಟು ಬರುವುದಿಲ್ಲ, ಸಮಯವನೇಕೆ ನೀವು
ಅರಿಯುವುದಿಲ್ಲ, ನಿಮಗೆ ಕೊಟ್ಟ ವಿಷಯಕ್ಕೆಕೆ
ನ್ಯಾಯವನ್ನೊದಗಿಸುವುದಿಲ್ಲ, ವಾರ ವಾರದ ಚಿಂತನೆಗೆ
ಬರಲಾರದೆ ಸಂಘಟಿಕರನೇ ಪ್ರಶ್ನಿಸುವಿರಲ್ಲ
ನೀವೆಷ್ಟು ಸಾಹಿತ್ಯವ ಓದಿದ್ದಿರಿ, ಬರೆದಿದ್ದಿರಿ
ನೀವೆಷ್ಟು ಕವನಗಳನೊದಿರುವಿರಿ, ಬರೆದಿರುವಿರಿ
ನಿಮ್ಮಾತ್ಮಾವಲೋಕನವಮಾಡಿಕೊಳ್ಳಿಯೊಮ್ಮೆ
ನಿಮ್ಮ ವಾಚನದ ಮೂಲಕ ಬಂದವರ ಮನದಲಿ
ಸಾಹಿತ್ಯವರಳಬೇಕು, ಅರಳಿ ಈ ಅಂಗಳ ತುಂಬುವಂತೆ
ಮಾಡಬೇಕು, ಬರುವಿರೇಕೆಯೊಬ್ಬರೆ ಕರೆದು ತನ್ನಿ
ನಿಮ್ಮ ಕುಡಿಗಳನ್ನು, ಶಾಲೆಯಲ್ಲರಳದ ಮನಸ್ಸು
ನನ್ನ ಅಂಗಳದಲ್ಲಾದರೂ ಅರಳಲಿ, ಕನ್ನಡದ ಕೆಚ್ಚು,
ಅಭಿಮಾನ, ನನ್ನ ಮಣ್ಣಿನ ವಾಸನೆಯನರಿಯಲಿ
ಇಷ್ಟಾಗ್ಯೂ ನಿಮ್ಮ ಕೊರಳುಪಟ್ಟಿ ನೆಟ್ಟಗಾಗದಿದ್ದರೆ
ನಿಮ್ಮಂಥ ವಾಚಕರ ಮಾತಿಗೆ ನಾನೊಂದು ಕೇವಲ
ಕಲ್ಲಿನ ಮಠ,

ನನ್ನ ಜನ್ಮ

ಹೇಗೆ ಜನ್ಮಿಸಲಿ ನಿನ್ನ ಕೈ
ಬೆರಳ ತುದಿಯಲಿ
ಹೇಗೆ ಮೂಡಲಿ ಆ ಬಿಳಿ
ದಸ್ತಿನ ಹಾಳೆಯಲಿ

ಹೇಗೆ ಉಸಿರಿರಿಸುವೆ ನನ್ನಲಿ
ಸಾಹಿತ್ಯದುಸುರೆ ಇರದಿರೆ ನಿನ್ನಲಿ
ನಾಡಿನ ನುಡಿಯಿರದಿರೆ ಮನದಲಿ
ಕವಿ,ಕಾವ್ಯಗಳನರಿಯದ ಸಮಯದಲಿ
ಪದಗಳ ಗುಚ್ಛವನೇಕೆ ಇರಿಸುವೆ ಹಾಳೆಯಲಿ

ಅರಿತು ಅನುಭವಿಸೆನ್ನನೂ ಅಂತರಂಗದಲಿ
ಓದಿ ಹದವಾಗಿಸೆನ್ನನೂ ಜ್ಞಾನದಲಿ
ನೋಡು ನನ್ನನ್ನು ಅಂತರಂಗದಲಿ
ಬೇರೆಸಿಕೊ ನನ್ನನು ಭಾವದಲಿ
ಉಸಿರಾಗಿಸು ನನ್ನನು ನಿನ್ನಯ ಬರಹದಲಿ

ಕವಿ ಕಿವಿ

ಎಲ್ಲರೂ ಹೇಳುವರು
ನೀವು ತುಂಬಾ ಚೆನ್ನಾಗಿ
ಬರೆಯುವ
ಕವಿ

ಬರೆಯಲು ಕುಳಿತರೆ
ನನ್ನಾಕೆ ಹಿಂಡುತ್ತಾಳೆ
ಚೆನ್ನಾಗಿ ನನ್ನ
ಕಿವಿ

Wednesday, November 9, 2016

ಹರಕೆ ಸಾಲದೆ

ಎಷ್ಟೋ ಹರಕೆಗಳ ಹೊತ್ತು ಹಡೆದಿದ್ದೆ
ಒಬ್ಬ ಮಗನನ್ನು ಯಾವ ಹರಕೆಯು
ನಿನಗೆ ಒಪ್ಪಲಿಲ್ಲವೆಂದು ಅವನನ್ನು
ಚಿವುಟಿಬಿಟ್ಟೆ

ಅನ್ನ ದಾನವೊ, ವಸ್ತ್ರ ದಾನವೊ
ತುಲಾಭಾರವೊ, ಉರುಳು ಸೇವೆಯೊ
ಉಪವಾಸ ವೃತವೊ, ಪೂಜೆಯ ಸಂಕಲ್ಪವೊ
ಯಾವುದು ನಿನಗೆ ಒಪ್ಪಲಿಲ್ಲವೆಂದು ಆರಿಸಿಬಿಟ್ಟೆ
ಅವನ ಬಾಳ ಜ್ಯೋತಿಯನು

ನೋಡೊಮ್ಮೆ ಕಣ್ತೆರೆದು ಪರರೊಬ್ಬರ ಮನೆಯಿಂದ
ಅವನಿಗೆ ಮಡದಿ ತಂದಿರುವೆ ಇಂಥ ಅಲ್ಪಾಯುಷ್ಯ
ಮಗನನ್ನು ನನಗೇಕೆ ಕಟ್ಟಿದೆ, ನನ್ನ ಬಾಳಿನಲ್ಲಿನ್ನು
ರಂಗೋಲಿ ಬಿಡಿಸದ ಅಂಗಳವನ್ನೇಕೆ ನೀಡಿದೆ, ನಿನಗೆ ಕೊಟ್ಟ ವರವನವನೇ ಮರಳಿ ಕಿತ್ತುಕೊಂಡನಲ್ಲ
ನನ್ನ ಬಾಳಿಗೆ ಭಾಗ್ಯವೆಲ್ಲಿ ಎಂದು ಕೇಳುವಂತಿದೆ
ಅವಳ ಅಳಲು

ನೋಡು ಮನೆಯನೊಮ್ಮೆ ಅವನು ಮಗುವಾಗಿದ್ದಾಗ
ನನ್ನ ಸೀರೆಯಂಚನು ಹಿಡಿದುಕೊಂಡು ಓಡಾಡಿದ ಹಜಾರ
ಅವನಿಗೆ ಕೈತುತ್ತು ತಿನಿಸಿದ ತುಳಸಿ ಕಟ್ಟೆ, ನನ್ನ ಕರೆದುಕೊಂಡು ಮೊದಲ ಸವಾರಿ ಎಂದು ಸುತ್ತಾಡಿಸಿದ ಬೈಕು, ಸಮಯಕ್ಕೆ ಸರಿಯಾಗಿ ಊಟ, ಆರೋಗ್ಯ ವಿಚಾರಿಸಲು ಅವನು ಕೊಡಿಸಿದ ಫೋನು ಎಲ್ಲವು
ಬರಿದಾಗಿವೆ

ಮತ್ತಾವ ತಾಯಿ ಹೆಂಡತಿಗೂ ನೀಡದಿರಿಂತ ನೋವು
ತಾರದಿರು ಹೆತ್ತವರೆ ಮಕ್ಕಳಿಗೆ ಚಿತೆ ಹಚ್ಚುವದನು
ಹೇರದಿರು ಭೂಮಿಯೇ ಹೊರಲಾರದಷ್ಟು ಸಂಕಟವನು
ಉಳಿಸದಿರು ಕಳೆದ ಮಕ್ಕಳ ನೋವಿನ ಹೆತ್ತವರನು
ಕರೆದುಕೋ ನಮ್ಮನ್ನು ಯಾವ ಸುಖವನುಣ್ಣುವದಕ್ಕಾಗಿ
ಉಳಿಸಿರುವೆ
ನೀ ನೀಡಿದ ಫಲ ನಮಗಿಲ್ಲವಾದಾಗ
ನಮ್ಮಯ ಹರಕೆ ನೀನಗೊಪ್ಪದಾದಾಗ

Tuesday, November 8, 2016

ನಾನು ಭಾರವೆ?

ತಂದೆಯೇ
ಹೆತ್ತು ಹೊತ್ತು ಸಾಕಿ ಸಲುಹಿ
ಲಾಲಿಸಿ ಪಾಲಿಸಿ ಆಡಿಸಿ
ತಕ್ಕ ಮಟ್ಟಿಗೆ ನನ್ನನ್ನೊದಿಸಿ ಮನೆಯ
ಒಳಹೊರಗನ್ನು ಪರಿಚಯಿಸಿ
ಬೆಳೆಸಿರುವೆ ಗಿಣಿಯಂತೆ

ಗಂಡು ಗಂಡೆಂದು ಸಾಲು ಸಾಲಾಗಿ
ಆರು ಹೆಣ್ಣು ಮಕ್ಕಳ ಹಡೆದೆ ಅವ್ವನ
ಮನವರಿಯದೆ, ಐದಕ್ಕಂದಿರ ಮದುವೆ
ಮುಂಜಿ , ಅಳಿಯನ ಉಡುಗರೆ ,ಬಸುರಿ ಸೀರೆ, 
ಮೊಮ್ಮಕ್ಕಳ ತೊಟ್ಟಿಲು ಇವರದೆಲ್ಲವ ಮುಗಿಸಿ
ನನ್ನತ್ತ ತಿರುಗಿ ನೋಡಿದಾಗ

ಮೈಯ ಕಸವು ಕುಂದಿ, ನಡವು ಬಾಗಿ
ಎದೆಯುಸಿರು ಬಿಡುತ, ನಿನ್ನದೊಂದು ಭಾರ
ಕಳೆದರೆನ್ನುವ ನೋಡುವ ನೋಟಕ್ಕೆ ನಾನೊಂದು
ಊರುಗೋಲಾಗಬಾರದೆ ನಿನ್ನ ಬಾಳಿಗೆ ,ಅಪ್ಪಾ..
ನನ್ನ ಕಂಕಣ ಭಾಗ್ಯಕ್ಕಾಗಿ ಅವರಿವರ ಕಾಲು ಹಿಡಿದು,
ಹಣವ ಪಡೆದು ನೂಕಬೇಡ ನನ್ನನ್ನು ಸಂಸಾರನೌಕೆಗೆ

ನಾನೊಬ್ಬಳು ನಿನಗೆ ಮಗನಾಬೇಕು, ನಿನ್ನ ಇಳಿ
ವಯಸ್ಸಿನ ಕನಸುಗಳನ್ನು ಸಾಕಾರಾಗೊಳಿಸಲು 
ಕುಡಿಕುಡಿದು ಮಡಿದ ಹಿರಿಯಕ್ಕನ ಮಕ್ಕಳ 
ಜವಾಬ್ದಾರಿಯನ್ನು ಹೊರಲು, ಅವ್ವನ ಔಷಧದ
ಹಣವನ್ನು ಹೊಂದಿಸಲು 

ಈ ಕೆರಿಗೆ ನಾನೊಂದು ಗುರುತಾಗಬೇಕು 
ಈ ಊರಿಗೆಯೊಂದು ಮಾದರಿಯಾಗಬೇಕು
ಊರೊರ ಮನೆ ಮುಸರಿಯ ತೊಳೆದು ಬಟ್ಟೆಯ ಒಗೆದು
 ಸಂಜೆಗೆ ಹೂವನು ಕಟ್ಟಿ ಈ ಸಂಸಾರವನುಳಿಸುವೇನು ಗಟ್ಟಿ
ನೀ ಮೆಚ್ಚಬೇಕು ನನ್ನ ಭುಜವ ತಟ್ಟಿ

ಲೋಕದೊಳಗದೆಷ್ಟು ಮಹಿಳೆಯರಿಲ್ಲ, ಮದುವೆಗೆ 
ವರದಕ್ಷಿಣೆಯನು ಹೊಂದಿಸದೆ, ಮದುವೆಯ ನಂತರ
ಜಗಳಗಂಟನ ಬಿಟ್ಟು ಬಂದವರು, ಹಣವಿಲ್ಲದವರೂ,
ಬಣ್ಣವಿಲ್ಲದವರೂ, ಗುಣವಿಲ್ಲದವರೂ, ವಿಧವೆಯರು
ಇವರೆಲ್ಲರ ನೋವಿನ ಮುಂದೆ ನನ್ನ ಬದುಕೇನು ದೊಡ್ಡದಲ್ಲ 
ನಿರ್ಧರಿಸು ನಾನು ನಿನ್ನ ಮಗನೆಂದು

ಬಳ್ಳಿಗೆ ಕಾಯಿ ಭಾರವೆ?
ನಿಮಗೆ ನಾನು ಭಾರವೆ?

Monday, November 7, 2016

ಗಂಡನಿಲ್ಲದ ಬದುಕು

ಗಂಡನಿಲ್ಲದ ನನ್ನ ಬದುಕು
ನಾಯಿ ಹೊಕ್ಕ ಅಡುಗೆ ಮನೆಯಂತಾಗಿದೆ,
ಸಲಗ ನುಗ್ಗಿದ ಗದ್ದೆಯಂತಾಗಿದೆ, ದುಂಬಿ
ತೊರೆದು ಹೋದ ಜೇನುಗೂಡಿನಂತಾಗಿದೆ
ನೀರಿಲ್ಲದ ಫಸಲು ಒಣಗಿ ನಿಂತಂತಾಗಿದೆ

ಅವರಿದ್ದಾಗ ಆ ಚಿಕ್ಕ ಮನೆಯ ಸೊಬಗು
ನನ್ನ ನಿರ್ಧಾರಗಳು, ಚಿಕ್ಕ ಚಿಕ್ಕ ವಿಷಯಕ್ಕೂ
ಅವರು ನನ್ನನ್ನೂ ಕೂಗುತ್ತಿದ್ದ ಪರಿ, ನಾನೇಷ್ಟೆ
ಸಿಡುಕಿದರು ದುಡುಕದೆ ಸಮಾಧಾನಿಸುವ
ಅವರ ಗುಣ, ವಾರದ ಸಂಜೆಗೆ ತರುತ್ತಿದ್ದ
ಇಮಾಮು ಅಂಗಡಿಯ ಬಜೆ, ಹಜಾರದೊಳಗೆ
ಮಕ್ಕಳೊಂದಿಗೆ ಕುಳಿತು ತಿನ್ನುವಾಗ ತಾವು ತಿನ್ನದೆ
ಕದ್ದುಮುಚ್ಚಿ ತಮ್ಮದನ್ನೂ ನನಗೆ ಕೊಡುತ್ತಿದ್ದ
ತಾಯಿಯಂತ ಒಲವು , ಪುಣ್ಯವಂತರು ನೀವು
ನಡೆದುಬಿಟ್ಟಿರಿ ಬಾಳಿನ ಮದ್ಯದಲೆ

ಇಂದಿರುವೆ ಮಗನ ದೊಡ್ಡರಮನೆಯ ಮೂಲೆಯಲಿ
ಅವನಾಕೆ ನೀಡುವ ತಂಗಳೊ, ಹಳಸಿದ್ದನುಂಡು
ಕೊಡುವ ಬಣ್ಣ ಮಾಸಿದ, ಹರಿದ ಬಟ್ಟೆಯನುಟ್ಟುಕೊಂಡು
ಇರುವೆ ಮನೆಯ ಕಾಯ್ದುಕೊಂಡು, ಮಗನೇ ಊರ ಸಂತೆಯಲಿ ನಿನಗೆ ಕೊಡಿಸಿದ ಚಕ್ಕಲಿ, ಕರದಂಟು, ನಿನ್ನೇಷ್ಟೋ ಶಾಲೆಯ ಬರಹವನು ಬರೆದು ಕೊಟ್ಟಿದ್ದು, ಹೆಚ್ಚಿನ ಓದಿಗಾಗಿ ನನ್ನೆಲ್ಲ ಬಂಗಾರದೊಡವೆಗಳ ಒತ್ತೆಯಿಟ್ಟದ್ದು, ನೀನು ಮದುವೆಯೆ ವರದಕ್ಷಿಣೆಯು ಬೇಡವೆನ್ನುವ ವಿಚಾರದಲ್ಲಿ , ನೀನಾದ ಅಂತರ್ ಜಾತಿಯ ವಿವಾಹಕ್ಕೆ ಬಂಧುಗಳೆಲ್ಲರ ವಿರೋಧವ ಕಟ್ಟಿಕೊಂಡದ್ದು ಇವೆಲ್ಲದರ ನೆನಪಿಲ್ಲದೆ ಮಲಗಿರುವೆ ಬೆಚ್ಚಗೆ ಮಡದಿಯ ತೊಳಲಿ
ನನಗೆ ಹರಕು ಹಾಸಿಗೆಯ ನೀಡಿ

ಮಗಳೆಂದು ನಿನ್ನ ಮನೆಯ ಬಾಗಿಲಿಗೆ ಬಂದೆ
ಕಸಾನ ಎಷ್ಟು ದಬ್ಬಿದ್ರೂ ಹೊಳ್ಳಿ ನಮ್ಮನಿ ಅಂಗಳಕ
ಬಂದ ಬಿಳತೈತಿ ಅಂತಾ ಬಾಗಿಲಲ್ಲೇ ನೀನಾಡಿದ ಮಾತು ನನ್ನನ್ನು ಎದೆಯೊಡೆದು ಸಾಯುವಂತೆ ಮಾಡಿತ್ತು, ಏಕೆ? ಮಗಳೇ ನಿನ್ನನ್ನು ಒಂಬತ್ತು ತಿಂಗಳು ಭಾರವ ಹೊತ್ತ ನನ್ನನ್ನು ಎರಡು ದಿನವಿಟ್ಟುಕೊಳ್ಳಲಾರದಷ್ಟು ಭಾರವಾಗಿ ಹೋದೇನೆ, ಅಳುವಾಗ ಲಾಲಿ ಹಾಡಿ, ನೀ ಎಡವಿದಲ್ಲಲ್ಲಿ
ಹೇಳಿದ ಸ್ಥೈರ್ಯದ ನುಡಿಗಳು, ನಿನ್ನೆಲ್ಲ ಬೇಕುಗಳಿಗೆ ಬೇಕಾಗಿದ್ದ ನನ್ನ ಮಾತುಗಳು ಇಂದು ಕೇಳಲು ಸಮಯವಿಲ್ಲವೇ, ಹೋಗಲಿಬಿಡು ನಿನ್ನನೆತ್ತಿಯಾಡಿಸಿದ ಈ ಕೈಗಳಿಗೆ ಒಂದು ತುತ್ತನಾದರೂ ನೀಡು ಉಂಡು ಹೊರಡುವೆ, ಕೇಳದೆ ಕುಳಿತಿರುವೆಯೇಕೆ ಟಿ.ವಿ.ಯ ಮುಂದೆ ಓಹೋ!  ನೋಡುತಿರುವೆಯೆ ಚಲನಚಿತ್ರವನು
ಅದು ಹೆತ್ತಕರುಳು

ನಾನೊಂದು ಕೇಸರಿನ ಕಮಲ

ನಾನೊಂದು  ಕೇಸರಿನ ಕಮಲ
ಕಮಲ ಕೇಸರಿನಲ್ಲಷ್ಟೇ ಅರಳುವಂತೆ
ಅರಿವಿಲ್ಲದ ನನ್ನ ತಂದೆ ತಾಯಿಗಳಿಗೆ
ಹುಟ್ಟಿದ ಬುದ್ದಿಯಿಲ್ಲದ ಮಗಳು

ಯೌವ್ವನದ ಹೊಳೆಯಲ್ಲಿ ಕಾಲು
ಜಾರಿದ ನನಗೆ ಹುಟ್ಟಿದ ಮಗುವು
ನೀನು, ಹೆತ್ತವರು ಒಪ್ಪಿಕೊಂಡರು
ಕಾರಣ ಅವರು ಅರಿವಿಲ್ಲದವರು
ನಾನು ಒಪ್ಪಿದೆ, ಸಲುಹಿದೆ ಏಕೆಂದರೇ
ನಾನು ವೀವೆಚಿಸಲಾಗದ ವಯಸ್ಸಿನಲ್ಲಿ
ಕ್ಷಮಿಸಲಾರದ ಕಲ್ಲನ್ನು ಎಡವಿದ್ದಕ್ಕಾಗಿ

ಎಲ್ಲವನೊದಿದವರು, ಸಮಾಜದ ಕಷ್ಟ
ಕೋಟಲೆಗಳ ಅರಿತವರು ಇವರಾರೂ ಒಪ್ಪಲಿಲ್ಲ
ಕಾರಣ ನಾನೊಂದು ನಾಯಿ ಮುಟ್ಟಿದ ಮಡಕೆ
ನಿಂದಿಸಿದರು, ಹಿಯ್ಯಾಳಿಸಿದರು ಮತ್ತೆ ಮತ್ತೆ
ಜಾರುವಂತೆ ಮಾಡಲೆತ್ನಿಸಿದರು ಆದರಿದಾವದಕೂ
ಜಗ್ಗಲಿಲ್ಲ, ಹೆದರಲಿಲ್ಲ ತಲೆಯನ್ನು ಕಲ್ಲು ಬಂಡೆ
ಮಾಡಿ ಕಬ್ಬಿಣದ ಪುಟ್ಟಿಯ ಹೊತ್ತು ನೋವನು
ನುಂಗಿ ಜನರಿಗೆ ಹಣ್ಣನು ಮಾರಿದೆ, ದುಡಿದೆ
ಸಾಕಿದೆ, ಸಾಕುತಿರುವೆ ಮಗನನ್ನು

ಹೆಮ್ಮರವಾಗಿ ಬೆಳೆಸಿರುವೆ ಮಗನೇ ನೀನು
ವಿದ್ಯೆಯ ಹೊಂದಿ ನೌಕರನಾಗದಿದ್ದರೂ ನಾಲ್ಕು ಮಂದಿಯನಿಟ್ಟು ಕೊಂಡು ಬದುಕಿ ಬದುಕಿಸುವ ವ್ಯಾಪಾರಿಯಾಗಿರುವೆ ,ಮದುವೆ ಮಕ್ಕಳ ಹೊಂದಿದೆ, ಇಷ್ಟು ದಿವಸದಲ್ಲಿ ನಿನಗೆ ನೆನಪಾಗದ, ನಿನಗರಿವಾಗದ, ಗೊತ್ತಿದ್ದೂ ಗೊತ್ತಿಲ್ಲದಂತೆ ಕೇಳಿದೆಯೆಕಿಂದು ಈ ಮುಸ್ಸಂಜೆಯ ಮುದುಕಿಯನು

ನೀ ನಿತ್ಯ ಸುಮಂಗಲಿಯೇ ಎಂದು
ನನ್ನೆಲ್ಲ ಕಹಿಗಳ ಮರೆಸುವ ಅಮೃತವು
ನೀನಾಗಿದ್ದೆ, ಈ ಹಳೆ ಬೇರಿನ ಹೊಸ
ಚಿಗುರೆಂದೆ ನಾ ಭಾವಿಸಿದ್ದೆ ನಿನ್ನ ಸಲುಹುವಾಗ
ಇರದ ಸಮಾಜ, ನಿನ್ನ ಹಸಿವಿನಳಲಿಗೆ ಕಿವುಡಾಗಿದ್ದ
ಕುಲವು ಇಂದು ಎಚ್ಚರಿಸಿತೆ ನಿನ್ನನ್ನು, ಇಂದು ಕೆದಕಿತೆ
ನಿನ್ನ ಹುಟ್ಟಿನ ಮೂಲವನು, ನಿನಗೂ ಅನ್ನಿಸಿಬಿಟ್ಟಿತೆ
ನಾನವಳೆಂದು, ನೀನಗರಿವಾಗಲಿಲ್ಲವೇ?
ನಾನೊಂದು ಕೇಸರಿನ ಕಮಲವೆಂದು

Sunday, November 6, 2016

ಸಾಹಿತ್ಯ ಮತ್ತು ಹಣ

ಪ್ರ:- ಏನೂ! ಹಣ ಏಣಿಸುವ
ಕೈಯಲ್ಲಿ ಸಾಹಿತ್ಯವೇ?

ಉ:-  ಯಾಕೇ? ಸಾಹಿತ್ಯ ಬರೆದವರೂ
ಇಂದು ಎಣಿಸುತ್ತಿಲ್ಲವೇ ಹಣ

Saturday, November 5, 2016

ಸಾಹಿತ್ಯ ಸಂಜೆ

ನಮ್ಮೂರಿನಲ್ಲಿ ಪ್ರತಿ
ಶನಿವಾರಕ್ಕೊಮ್ಮೆ ನಡೆಯುತ್ತದೆ
ಸಾಹಿತ್ಯ ಸಂಜೆ ಅದು ಮೈಸೂರು
ಮಠದಲ್ಲಿ

ಸಾಹಿತ್ಯ ಕ್ಷೇತ್ರದ ಹಿರಿಯರು
ಸಾಹಿತ್ಯಭಿಮಾನಿಗಳು ಸೇರಿರುವರು
ಕೇವಲ ಬೆರಳಣಿಕೆಯಷ್ಟು
ದೇಶದ ಸಾಕ್ಷರತೆಯಲ್ಲೆ ಮೊದಲ
ಸ್ಥಾನದಲ್ಲಿರುವ ಕೇರಳವಿಂದು
ಉಗ್ರರ ಚಟುವಟಿಕೆಯ ಮೂಲಸ್ಥಾನ
ವಾದಂತೆ

ರೋಣ ತಾಲೂಕಿನಲ್ಲೆ ಹೆಚ್ಚು
ಮತಗಳನ್ನು ಹೊಂದಿರುವ ಗಜೇಂದ್ರಗಡ
ಇಲ್ಲಿಯ ಸಾಹಿತ್ಯ ಹಿರಿಯರ ಅಹಂನಿಂದಾಗಿ
ಸೊರಗುತಿದೆಂದೆನಿಸುತ್ತಿದೆ

ಸಂಜೆ ತುಂಬಿದರೆ ವಾಗ್ಮೀಯ ವಾರದ
ಪರಿಶ್ರಮ ಸಾರ್ಥಕವೆನಿಸುತ್ತದೆ, ಕವನ
ವಾಚಿಸುವನ ಮನಸ್ಸು ಅರಳುತ್ತದೆ
ಮಠದ ಕಲ್ಲು, ಕಬ್ಬಿಣದ ಕಂಬಗಳಿಗಿಂತ
ಕನ್ನಡದ ಕಂಬಗಳು ಬರವಾಗಿವೆ

ಕಲ್ಲು, ಕಬ್ಬಿಣದ ಕಂಬಗಳು ತಾರಸಿಯ
ಭಾರವನು ಹೊತ್ತು ತಮ್ಮ ಕಾರ್ಯದಕ್ಷತೆಯನು
ತೋರುತಿವೆ, ಎಲ್ಲಿರುವಿರಿ ಕನ್ನಡದ ಕಂಬಗಳೆ
ಗೊರಲೆ ಹತ್ತಿ, ಕಡಿದು ಸುಡುವ, ಸುಟ್ಟು ಕರಕಲಾಗುವ
ಕಂಬಗಳು ಬೇಡ ಈ ಸಂಜೆಗೆ

ಕನ್ನಡದ ಮಂಟಪಕೆ ಎಂಟು ಜ್ಞಾನಪೀಠದ
ಕಂಬಗಳು, ಎಣಿಸಲಾರಷ್ಟು ಕಥೆಗಾರರು
ಕವನಗಾರರು, ಕಾದಂಬರಿಗಾರರು ಚುಟುಕುದಾರರು
ಕವಿಯತ್ರಿಯರನೇಕರೂ ಕಲ್ಲುಗಳಾಗಿ
ಕನ್ನಡದ ಮಂಟಪವ ಕಟ್ಟಿಹರು

ನಾವೊಂದು ಕನ್ನಡದ ಕಂಬ, ಕಲ್ಲಾಗದಿದ್ದರೂ
ಸರಿ ಆ ಮಂಟಪವು ಅದರದಂತೆ, ಕೆಡವದಂತೆ
ಮಾಸದಂತೆ, ಮುಕ್ಕಾಗದಂತೆ, ಪಾಳು ಬೀಳದಂತೆ
ನಮ್ಮೂರಿನಿಂದಲೇ, ಈ ಸಂಜೆಗಳಿಂದಲೆ
ಪ್ರಾರಂಭಿಸೋಣ
ಬನ್ನಿ, ಕರೆದು ತನ್ನಿ 
ಸಾಹಿತ್ಯ ಸಂಜೆಗೆ

Friday, November 4, 2016

ಸುಲ್ತಾನರು

ಯಾರೂ ಗಟ್ಟಿ ನಿಮ್ಮೊಳಗೆ
ಹಣೆಗೆನಾದರೂ ಆಗಿಲ್ಲ ತಾನೆ
ದಸರೆ ಮುಗಿದರೂ ನಿಮ್ಮ
ಜಟ್ಟಿ ಕಾಳಗ ಮುಗಿದಿಲ್ಲವೆ
ಇನ್ನೂ

ನೋಡಿದರೆ ನೋವು ನಿಮ್ಮ
ಮೊಗದಲ್ಲೆ ಜಾಸ್ತಿ ವೀಕ್ಷಕರ
ಪ್ರಕಾರ ಗೆದ್ದವಳು ನಿಮ್ಮ
ಮಗಳೆ

ಸರಿ ಶುರುವಾಗಿದೆ ನಿಮ್ಮದೂ
ತಂದೆ ಮಮತೆಯ ಸೋಲಿನ
ಪಯಣ, ಪ್ರೀತಿಯ ಮಗಳ
ಗೆಲುವಿನ ಜೀವನ
ಪಾರ್ಟಿ ಯಾವಾಗ?

ಖನ್ನ

ನೋಡಿ ನಮ್ಮ
ರಸ್ತೆಗಳಲ್ಲಿ
ಎಷ್ಟೊಂದು
ಬಿದ್ದಿವೆ
ಗುನ್ನ

ಯಾರಾದರೂ
ಹಾಕಬಾರದೆ
ರಾಜಕಾರಣಿಗಳ
ಖಜಾನೆಗೆ
ಖನ್ನ

ಕವನಾ ?

ರಾತ್ರಿ ಹನ್ನೆರಡಾಗಿತ್ತು
ಮೊಬೈಲ್ ನಲ್ಲಿ
ಓದುತ್ತಿದ್ದೆ ಕವನ
ನನ್ನಾಕೆ ಎದ್ದು
ಕೇಳಿದಳು
ಏನ್ರೀ ಮಾಡ್ತಿದ್ದಿರಾ?
ನಾನೆಂದೆ ಕವನ
ಯಾರ್ರೀ ಅವಳು
ಇಷ್ಟೊತ್ತಲ್ಲಿ

ಅಯ್ಯೋ ಕವನಾ
ಓದತಾ ಇದ್ದೀನಿ ಕಣೇ

ಹಂಗ ಕೊಡಿ

ನಮ್ಮ ಅಂಗಡಿಗೆ ಬಂದಾಗಲೆಲ್ಲ
ಆಕೆ ಹೇಳುತ್ತಾಳೆ ಹಣ ಕೊಟ್ಟು
ಹಂಗ ಅದನ್ನ ಕೊಡಿ
ಹಂಗ ಇದನ್ನ ಕೊಡಿ

ಹಂಗ ಆದ್ರ ನನ್ನ
ಮನಸ್ಸನ್ನಾದ್ರ
ಕೇಳಬಾರ್ದ
ಹೆಂಗರ ಮಾಡಿ

ಉತ್ಸವ

ನವ್ಹಂಬರ್ ೧
ಕನ್ನಡ ರಾಜ್ಯೋತ್ಸವ
ನಾಡು, ಊರು,
ಕೇರಿ ಎಲ್ಲೆಲ್ಲೂ
ಉತ್ಸವ

ಯಾರಿಲ್ಲದ
ಮರುದಿನ
ತ್ಯಾಜ್ಯೋತ್ಸವ

ವಾಚು

ಸಿದ್ಧರಾಮಯ್ಯನವರ
ವಾಚು
ಲಕ್ಷದ್ದು

ಆದರೂ
ಸರಿಯಾಗಿಲ್ಲ
ಅವರ
ಟೈಮೂ

ರಾಜ್ಯೋತ್ಸವ

ನವ್ಹಂಬರ್-೧
ಕನ್ನಡ ರಾಜ್ಯೋತ್ಸವ

ಈಗಿರುವ
ಕನ್ನಡಿಗರ ಕಂಡು

ಯಾಕಾದರೂ
ಬಂದಿತೊ

ರಾಜ್ಯಕ್ಕೆ
ಉತ್ಸವ

ಹಣ

ನಾನೇಷ್ಟು
ಸಂಪಾದಿಸಿದ್ದೇನೆ
ಗೊತ್ತೆ
ಸಾಯುವವರೆಗೂ
ಹಣ

ಸತ್ತ ಮೇಲೆ
ಹಣವಿಲ್ಲದ
ಹೆಣ

ಕವನ ವಾಚನ ೪೪೮

ನಾನು ಓದಲು ಎದ್ದೆ ನನ್ನ
ಮೊದಲ ಕವನ ವಾಚನ

ಎಲ್ಲರೂ ನೋಡಿದರು
ತಮ್ಮ ಕೈ ವಾಚನ್ನ

ಯಶಸ್ಸಿನ ಗುಟ್ಟು

ಪ್ರ:-  ಈ ನಿಮ್ಮ ಯಶಸ್ಸಿನ
ಓಟದ ಹಿಂದಿರುವ ವ್ಯಕ್ತಿ
ಯಾರು?

ಉ:- ನನ್ನ ಹೆಂಡತಿ

ಪ್ರ:- ಅದು ಹೇಗೆ?

ಉ:- ಹೆಂಗದ್ರ ಆಕಿ ನನ್ನ
ಕುಂದ್ರಸಿಯಾ ಕೊಡಂಗಿಲ್ಲ

ಚೆಕ್ ಬುಕ್

ನನ್ನೆಲ್ಲ ಪುಸ್ತಕಗಳನ್ನು
ನೀಡುತ್ತೇನೆ ಅವಳಿಗೆ
ಓದಲಿಕ್ಕೆ, ಬರೆಯಲಿಕ್ಕೆ

ಒಂದನ್ನು ಹೊರತುಪಡಿಸಿ
ಅದುವೇ
ಚೆಕ್ ಬುಕ್

ಸಂತ

ತಂಬೂರಿಯ ನಾದವ ಮೀಟುತಲಿ
ಅರುಹಿದೆ ಬದುಕನು ತತ್ವದಲಿ
ಸರಳತೆ ತೋರುತ ಬಾಳಲಿ
ಬೆಳಗಿದೆ ನಾಡನು ಜ್ಞಾನದಲಿ

ರಾಮ ಮತ್ತು ರಾವಣ

ತಾಯಿಯ ದುರಾಸೆಗಾಗಿ
ಕಾಡಿಗೆ ನಡೆದನವನು ರಾಮ
ತಾಯಿಯ ಮಹದಾಸೆಗಾಗಿ
ಆತ್ಮಲಿಂಗವನೇ ತಂದನವನು ರಾವಣ

ಮಡದಿಯ ಪ್ರೀತಿಗಾಗಿ ಜಿಂಕೆಯ
ಬೆನ್ನು ಬಿದ್ದನವನು ರಾಮ
ಸೋದರಿಯ ಅಕ್ಕರೆಗಾಗಿ
ಸೀತೆಯ ಹಿಂದೆ ಬಿದ್ದನವನು ರಾವಣ

ಜನರ ಮಾತಿಗಂಜಿ ಬಸುರಿಯನು
ಕಾಡಿಗಟ್ಟಿದನವನು ರಾಮ
ನಿನ್ನಪ್ಪಣೆಯಿಲ್ಲದೆ  ಮೈಯ ಮುಟ್ಟುವುದಿಲ್ಲ
ನೆಂದನವನು ರಾವಣ

ಹೆಣ್ಣಿನ ಆಸೆ, ಜನರ ಮಾತು
ರಾಮನನ್ನ ಕಾಡಿದರೆ
ಹೆಣ್ಣಿನ ಮೋಹ, ಕಾಮದ
ವಾಂಛೆ ರಾವಣನನ್ನು ಕೊಂದು
ಹಾಕಿತು

ಗೊಲ್ಲ

ಅವನಿರುವನಲ್ಲ ಗೊಲ್ಲ
ಅವನೇ ನನ್ನ ನಲ್ಲ
ಮನದೊಳಗಿದನೆಲ್ಲ
ಇವನೊಬ್ಬನೇ ಬಲ್ಲ

ಕೊಳಲನೂದವ ನಲ್ಲ
ನೋವ ಮರೆಸುವನೆಲ್ಲ
ಸಖಿಯರೊಡನೆ ಕುಣಿಯುವ ನಲ್ಲ
ಮನೆಯ ಮರೆಸುವನಲ್ಲ

ಸೇರಗ ಕದಿಯುವ‌ ಕಳ್ಳ
ಬೆಣ್ಣೆಯನುಣ್ಣುವ ಮಳ್ಳ
ಗಿರಿಯನೆತ್ತುವ ಬಲವು
ನನ್ನಲೆಕಿಲ್ಲ ನಿನ್ನ ಒಲವು

ನಾಟ್ಯವಾಡುವದು ಉರಗದ ಮೇಲೆ
ಮಲಗುವದು ತಾಯಿ ಮಡಿಲ ಮೇಲೆ
ನಗುವಿರುವುದು ತುಟಿಯ ಮೇಲೆ
ಮನಸ್ಸಿಲ್ಲದಿರುವುದೆ ನನ್ನ ಮೇಲೆ

ಬರ

ನಾನು ಜೀವನದಾಗ ಸಾಕಷ್ಟು
ಬರ ನೋಡಿದ್ದೆ, ಉಂಡಿದ್ದೆ
ಆದ್ರ ನಿನ್ನ ಪ್ರೀತಿಯಷ್ಟು ಬರ
ನಾನೆಂದೂ ಉಂಡಿರಲಿಲ್ಲ ನೋಡ

ಮಳೆಯಿಲ್ದ ಭೂಮಿಗೆ ಬರ,
ನಾಡಿಗೆ ಬರ, ಊರಿಗೆ ಬರ
ನೀನಿಲ್ದ ದೇಹಕ್ಕ ಬರ,
ಮನಸಿಗೆ ಬರ, ಕಣ್ಣಿಗ ಬರ

ಕಾಯಿಲ್ದ ಗಿಡಕ್ಕ ಬರ
ಹೂವಿಲ್ಲದ ಬಳ್ಳಿಗೆ ಬರ
ಚಂದ್ರಿಲ್ಲದ ರಾತ್ರಿಗೆ ಬರ
ನೀನಿಲ್ದ ಬದುಕ ಬರೀ
ಬರ....ಬರ...ಬರ...ಬರ..