Monday, November 21, 2016

ಉತ್ತರ ತತ್ತರ

ಉತ್ತರ ತತ್ತರ  ಎನ್ನುವವರು ಬಲು ಎತ್ತರ
ನೀಡುವುದಿಲ್ಲಾವ ಸಮಸ್ಯೆಗಳಿಗೆ ಉತ್ತರ
ಬಿಟ್ಟುಕೊಳ್ಳುವುದಿಲ್ಲಾರು ಜನರನ್ನು ಹತ್ತಿರ
ಹರಿಸುವುದೊಂದಿದೆ ಅದು ನಮ್ಮ ನೆತ್ತರ

ತುಂಬಿಸಿಕೊಳ್ಳುತ್ತಾರೆ ತಪ್ಪದೆ ಮನೆಯ ಕರ
ಮನೆಯ ನಲ್ಲಿ ತಿರುಗಿಸಿದರೆ ಅದಕು ಬರ
ಕೇಳಲು ಹೋದರೆ ಇವರದು ಬರೇ ನಿರುತ್ತರ
ಇವರ ಕಾರ್ಯ ವೈಖರಿ ಕಂಡು ಜನರು ನಿಂತಿಹರು ಬಡಿದಂತೆ ಗರ

ಮಹಾದಾಯಿಯ ಕೂಗು ಕೇಳುತ್ತಿಲ್ಲ ಸರಕಾರ
ಮೂರು ರಾಜ್ಯಗಳು ತೋರುತ್ತಿಲ್ಲ ಸಹಕಾರ
ಧರಣಿ ಉಪವಾಸವ ಕೈಗೊಂಡಿಹನು ಮತದಾರ
ಬರಲಿಲ್ಲಾವ ಆಡಳಿತದ  ಸಾಹೇಬ ಸರದಾರ

ಮೇವು ನೀರಿಲ್ಲದೆ ಒದರುತಿವೆ ದನಕರ
ಭುವಿಯನು ಕಾದಕೆಂಡವಾಗಿಸುತಿಹನು ದಿನಕರ
ಸಭೆಯಲ್ಲಿ ತಣ್ಣಗೆ ಕುಳಿತವರಿಗಿಲ್ಲವೆ ಕನಿಕರ
ನಿದ್ರೆಗೆ ಜಾರಿ ಹೊಡೆಯುವರು ಗೊರಕೆ ಭಯಂಕರ

ಒಂದನ್ನಾದರೂ ಬಿಡುವುದಿಲ್ಲ ಸತ್ಕಾರ
ಹರಿಸುವರು ಮಾತಿನಲಿ ಭರವಸೆಗಳ ಭರಪೂರ
ಭರವಸೆಯ ಆಸೆಗೆ ಹೊಡೆದಾಡಿ ಸಾಕಷ್ಟು ಮಂದಿ ಸತ್ತಾರ
ಸೌಧದ ಮೊಗಸಾಲೆಯಲಿ ನಿಂತು ಮುಸುಮುಸು ನಕ್ಕಾರ

ನಮ್ಮ ಬೆಳೆಗಿಲ್ಲ ಮಾರುಕಟ್ಟೆಯಲ್ಲಿ ದರ
ಬೆಂಬಲ ಬೆಲೆಗೆ ಕೈಗೊಂಡಿಲ್ಲಿನ್ನೂ ನಿರ್ಧಾರ
ಹರಿಸಬೇಕು ಇನ್ನೇಷ್ಟು ದೇಹದ ಬೆವರ
ಇನ್ನೇಷ್ಟು ಸುರಿಸಬೇಕು ಬರದ ಕಣ್ಣೀರ

ಉತ್ತರದವರಿಗಿಲ್ಲವೇ ಯಾವುದೇ ಪರಿಹಾರ
ತೋರಿಸದಿರಿ ನಮಗೆ ಕಿಂಚಿತ್ತು ಮಮಕಾರ
ಹರಿಸಿರಿ ಕಾಲುವೆಗಳಿಗೆ ಮಹಾದಾಯಿ ನೀರ
ಹೊಲಗದ್ದೆಗಳ ಮಾಡುವೆವು ಬಿತ್ತಿ ಬಂಗಾರ

ನೀನಾದರೂ ಕಣ್ತೆರದು ನೋಡೊ ಹರಿಹರ
ತಾಯಿ ಗಂಗೆಯನಾದರೂ ಸುರಿಸು ಸರಸರ
ಸಕಲಜೀವಿಗಳ ಜೀವಕ್ಕಾಗಿ ಹರಿಯಲಿ ಪನ್ನೀರ
ಜಗವ ಕಾಯುವ ಜಗದೀಶನೆ ನೀನಾದರೂ
ತೋರು ಚಮತ್ಕಾರ

ಸ್ವೀಕರಿಸು ನಮ್ಮ ಧೀರ್ಘದಂಡ ನಮಸ್ಕಾರ
ಶಿಕ್ಷಿಸು ಬೆತ್ತವ ಬೀಸಿದ ನೀರ್ಧಯಿ ಪುಂಡರ
ನೀನಾಗು ನೋವುಂಡ ಮನಸಿಗೆ ಆಧಾರ
ಕಣ್ಣೀರ ಒರೆಸಿ ತೋರಿಸು  ಆದರ

ಯಾರಾದರೂ ಹೇಳಿರಿ
ಉತ್ತರಕ್ಕೆ ಉತ್ತರ 

ಯಾಕೆಂದರೆ ಉತ್ತರ
ಈಗ ತತ್ತರ
ಬರದ ಬವಣೆಗೆ ನಿರುತ್ತರ

No comments:

Post a Comment