ನೋಡಿದಿರಾ
ಸಿಂಹ ನಡಿಗೆಯ ಬೆಟ್ಟದೆದೆಯ
ಸಲಗರೆಟ್ಟೆಯ ನಕ್ಷತ್ರಪುಂಜವದನದ
ಕಾವಿಯ ಧರಿಸಿ ಬರುವ ಕಾಳಿ ಸುತನ
ಧಾರ್ಮಿಕ ಬುಟ್ಟಿಯೊಳಗಿನಿಂದ
ಭರತ ಖಂಡವ ಉದ್ಧರಿಸಲು
ಅವಳ ಕೀರ್ತಿ ಪತಾಕೆಯ ಜಗದ ಮನೆ
ಮನಗಳಲಿ ಹಾರಿಸಿಬರಲು
ವೀಣೆಯಸುತನೇತ್ತಿದ ಶಿಷ್ಯನ
ಅಬ್ಬಬ್ಬಾ ! ಮೊಗದಲೆಂದತಹ ಕಾಂತಿ
ಕಲ್ಲು ಮನಸ್ಸಿನ ನಾಸ್ತಿಕನು ಕಂಡೊಡೆ
ದೈವಾಸಕ್ತಿಯ ಹೊಂದುವಂತೆ
ಕತ್ತಲು ತುಂಬಿದ ಮನಗಳಿಗೆ ಜ್ಞಾನದ
ಹಾದಿಯ ತೋರುವ ದೀವಿಗೆಯಂತೆ
ಪಾಪದ ಗಂಟುಗಳೆಲ್ಲ ಸುಟ್ಟು
ಬೂದಿಯಾಗುವನುಭವ ತೋರಿದಂತೆ
ಮನದ ಸಂಕಟದ ಸಂಕೋಲೆಗಳ
ಕತ್ತರಿಸುವಂಥಹ ನೋಟ
ಆಡುವ ನುಡಿಗಳಾದರೂ ಬಯಲು
ಬಂಡೆಗೆ ಸಿಡಿಯುವ ಸಿಡಿಲ ನುಡಿಗಳು
ಈ ನೆಲವೆಂದರೆ ಅಸ್ಪೃಶ್ಯರ ಗೂಡು
ಮತಾಂಧರ ಕೋಟೆ, ಜಗದೊಟದ
ಪರಿವೆಯಿರದ ಕೊಳಚೆಯೊಳಗೆ ಬಿದ್ದು
ಹೊರಳಾಡುವವರೆಂದವರ ಕಣ್ಣಿಗೆ
ಕಟ್ಟಿದ ಪೊರೆಯನು, ಮನಸಲಿ
ಬೆಳೆಸಿದ್ದ ಕೊಳಕನು ಒಂದೇ ಮಾತಿನಲಿ
ತೊಡೆದು ಹಾಕಿದೆ
ನನ್ನ ಸಹೋದರ ಸಹೋದರಿಯರೆ
ಆ ಮಾತು
ಕೆಂಪು ಬಣ್ಣದ ಮುಖದವರ ಮನದ
ಕಪ್ಪು ಗೋಡೆಯನು ಒಡೆದು ಹಾಕಿತು
ವಿಶ್ವಕ್ಕೆ ಸಾರಿತು ಭರತ ಭೂಮಿ ಸರ್ವ
ಧರ್ಮ ಸಮನ್ವಯ ತೋಟವೆಂದು
ಅವರೆಲ್ಲ ತಲೆಯೆತ್ತಿ ಇತ್ತ ನೋಡಲಾರಂಬಿಸಿದರು
ಒಂದು ಹೂ ಇಷ್ಟೊಂದು ಸುಗಂಧ
ಬೀರುವುದೆಂದರೆ ಆ ಖಂಡದ
ಇತರ ಹೂವುಗಳು ಎಷ್ಟು ಸುಗಂಧಗಳ
ಸೂಸಬಹುದೆಂದು
ಪ್ರತಿ ಹೆಣ್ಣಿಗೂ ತಾಯಿ ತಾಯಿ ಎಂದು
ಕರೆಯುತ್ತ ಎಲ್ಲ ಹೆಣ್ಣು ರೂಪಗಳಲ್ಲಿಯೂ
ತಾಯಿಯ ಕಂಡ ಮಹಾನ ವಾಗ್ಮಿ
ಜಗತ್ತನ್ನೆ ಭರತಖಂಡದತ್ತ ನಿಬ್ಬೆರಗಾಗಿ
ನೋಡುವಂತೆ ಮಾಡಿದ ಸನ್ಯಾಸಿ
ಕ್ರೈಸ್ತರು ಕೈ ಕೈ ಹೊಸೆದು ಮತಾಂತರಗೈಯಲು
ಈ ಭೂಮಿಗೆ ಕಳಿಸುತ್ತಿದ್ದವರೆ ತಮ್ಮ
ನೆಲದಲ್ಲಿ ಸಂಕುಚಿತಗೊಳ್ಳುವಂತೆ
ಮಾಡಿದ ವೀರಸನ್ಯಾಸಿ
ಹೊಸತೊಂದು ಕಿರಣ ಚಿಮ್ಮುವದು
ನಿನ್ನ ಹೊತ್ತಿಗೆಯ ತೆರೆದರೆ
ಬಾಳಿಗೆ ದಾರಿ ಕಾಣುವುದು
ಸಾಧಿಸಲು ಗುರಿ ಸಿಕ್ಕುವುದು
ಈ ಪುಣ್ಯಭೂಮಿಯ ಮಗನೆಂದು
ಎದೆತಟ್ಟಿ ಹೇಳಲು ಹರುಷವಾಗುವುದು
No comments:
Post a Comment