Wednesday, July 26, 2017

ವಂದೇ ಮಾತರಂ

ಗುಳ್ಳೆ ನರಿಗಳಂತೆ ನಮ್ಮ ನೆಲದಲ್ಲಿ ಬೀಲವ
ತೊಡಿಕೊಂಡು.. ನಮ್ಮ ಸರಹದ್ದನ್ನು ಮೀರಿ
ನೆಲಜಲವನ್ನು ಅತಿಕ್ರಮಿಸಿಕೊಂಡು...
ದೇಶದ ಆಂತರಿಕ ಭದ್ರತೆಯನ್ನು.. ಧರ್ಮ
ಧರ್ಮಗಳ ನಡುವೆ ಆಂತರಿಕ ಕಲಹವನ್ನು
ಜನ ಸಾಮಾನ್ಯರ ಪ್ರಾಣಹರಣ ಮಾಡಲು
ಉಗ್ರರ ನುಸುಳುವಿಕೆಗೆ ಸಹಾಯ ಮಾಡುತ್ತಿದ್ದವರನ್ನು
ಸದ್ದಿಲ್ಲದೆ.. ಕಗ್ಗತ್ತಲಲಿ ಬೆಟ್ಟಗಳನೇರಿ... ಕಡು ವೈರಿಗಳ
ಸದೆ ಬಡಿದು... ಅಡಗಿ ಕುಳಿತು ಮೇಲಿಂದ ಷಂಡರಂತೆ
ಗುಂಡು ಹಾರಿಸಿ ಕೇಕೆ ಹಾಕಿ ನಗುತ್ತಿದ್ದವರ
ಹುಟ್ಟಡಗಿಸಿ..ಹಸಿದ ಚಿರತೆ ಜಿಂಕೆಯನು ಓಡಾಡಿಸಿ
ಓಡಾಡಿಸಿ ಬೇಟೆಯಾಡಿ.. ತಿಂದು ತೇಗಿದಂತೆ
ನಮ್ಮ ನೆಲದಲ್ಲಿ ಅಕ್ರಮವಾಗಿ ಕಾಲಿಟ್ಟವರು
ಹೆಣವಾಗಿ ಹೋಗುವರೆಂಬ ಸತ್ಯವನು ಜಗಕೆ
ಸಾರಿ ಹೇಳಿದ ದಿನವಿದು..

ಮರೆಯಲಾಗದ ದಿನವಿದು ಭರತ ಸಂಜಾತಗಳಿಗೆ
ವಿಶ್ವ ಭೂಪಟದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಟ್ಟಂತಹ
ತ್ರಿವರ್ಣ ಧ್ವಜವು ಸ್ವಚ್ಛಂದ ಸ್ವತಂತ್ರವಾಗಿ ಹಾರಾಡುವಂತಹ
ಮಕ್ಕಳೆಲ್ಲರಿಗೂ ವಿಜಯೋತ್ಸವದ ಕಥೆಯನ್ನು ಹೇಳುವಂಥಹ
ಶತ್ರುಗಳು ನಮ್ಮ ನೆಲದಲ್ಲಿ ಕಾಲಿಡಲು ಹತ್ತತ್ತು ಸಾರಿ
ಯೋಚಿಸಿ ಗಡಿ ರೇಖೆಯ ದಾಟಲು ಹೆದರಿ ಗಡಗಡನೆ
ನಡುಗುವಂತಹ...ಮನುಕುಲ ಇರುವವರೆಗೂ ನೆನೆಯುವಂತೆ
ಇತಿಹಾಸ ಪುಟದಲಿ ಸೇರಿದ ಈ ದಿನವ ಮರೆಯಲಾಗುವುದೆ..

ನಿಜ ಮರೆಯಲಾಗುವುದೆ ಈ ದಿನ....
ಕಂಡೊಡನೆ ಮನಸಿಗೆ ಮುದ ನೀಡಿ.. ಬಾಳಿನ
ಜಂಜಾಟಗಳಿಗೆ ಮುಕ್ತಿಯ ದೊರಕಿಸಿ ಕೊಡುವ
ಪ್ರಶಾಂತತೆಯನೆ ಹೊದ್ದು ಮಲಗಿದ್ದ ಕಣಿವೆಗಳಲ್ಲಿ
ಮದ್ದು ಗುಂಡುಗಳ ಸದ್ದಿಗೆ... ದೊಡ್ಡ ದೊಡ್ಡ ಪರ್ವತಗಳೆ
ನಡುಗಿದ್ದವು... ಬಾಂಬುಗಳ ಸಿಡಿತಕ್ಕೆ ಸಿಕ್ಕು ಛಿದ್ರಗಳಾಗಿದ್ದವು
ನಮ್ಮವರದ್ದೊ...ವೈರಿಗಳದ್ದೊ ಗುಂಡಿಗೆ ಸಿಕ್ಕು ಅವರ
ದೇಹಗಳಿಂದ ಸುರಿದು ಬರುವ ನೆತ್ತರನು ಮೆಲ್ಲಗೆ
ಹೀರುತ್ತಿದ್ದವು...ಹಚ್ಚ ಹಸಿರಿನ ಹಿಮಾದ್ರಿಯ ತೆಪ್ಪಲಿನಲ್ಲಿ
ಹರಿಯುವ ಕೆಂಪು ರಕ್ತದ ಕಾಲುವೆಗೆ ಸಾಕ್ಷಿಯಾದವು..
ಛಿದ್ರಗೊಂಡ ದೇಹಗಳನು ಕುಕ್ಕಿ ಕುಕ್ಕಿ ತಿನ್ನುವ ರಣಹದ್ದುಗಳ
ಓಡಿಸಲಾಗದೆ ಹತಾಶೆಗಳಾಗಿದ್ದವು... ಮಡಿದ ವೀರರ
ಮಡದಿ ಮಕ್ಕಳ ಅಳುವಿನಾಕ್ರಂದನಕೆ ಕಿವುಡಾದವು.. ಅವರ
ಕೆಂಗಣ್ಣಿನ ಕಣ್ಣೀರಿನ ತಾಪಕೆ ನಲುಗಿಹೋದವು..
ಹೇಗೆ ಮರೆಯುವುದು ವಿಧವೆಯರನ್ನು...ಕೈ ಕಾಲುಗಳ
ಕತ್ತರಿಸಿಕೊಂಡು ಬಾಳುತಿರುವವರನ್ನು..ದೇಹದ ತುಂಬೆಲ್ಲಾ
ಹೊಕ್ಕಿರುವ ಗುಂಡುಗಳನ್ನು ತೆಗೆಯಲಾಗದೆ.. ಅವು
ನೀಡುವ ನೋವುಗಳ ಸಹಿಸಿಕೊಳ್ಳುತ್ತಿರುವುದನ್ನು
ಮರೆಯದು.. ಮರೆಯಲಾಗದು..ಮುಂದಿನ
ಪೀಳಿಗೆಯು ಮರೆಯದಂತೆ... ಭವಿಷ್ಯದಲ್ಲಿ ಯುದ್ಧವೆಂಬ
ಕರಾಳಛಾಯೆ ಮೂಡದಂತೆ ಬದುಕಬೇಕಿದೆ..

ಸ್ವಾರ್ಥ ರಾಜಕೀಯಕ್ಕಾಗಿ... ಸಾಮ್ರಾಜ್ಯದ ವಿಸ್ತರಣೆಯ
ದುರಾಸೆಗಾಗಿ.. ಮನುಕುಲಕ್ಕೆ ಶಾಂತಿ.. ಸನ್ಮಾರ್ಗ ನೀಡದ
ಧರ್ಮ ಸ್ಥಾಪನೆಗಾಗಿ...ಹೂಡುವ ಯುದ್ದವು...ಎಂದಿಗೂ
ಜಯಿಸಲಾರದು.. ಬಂದೂಕಿನಿಂದ ಹಾರಿದ ಗುಂಡಿಗೇನು
ಗೊತ್ತು..ಅವರು ನಮ್ಮವರೊ ಪರಕೀಯರೊ ಎಂಬುದ
ಸಿಕ್ಕ ದೇಹವ ಹೊಕ್ಕು ಘಾಸಿಗೊಳಿಸದೆ ಬಿಡದು...
ಏನೇ ಆದರೂ ನಮ್ಮ ನೆಲವನ್ನು ಕಬಳಿಸಲು... ನಮ್ಮ ಸಂಸ್ಕೃತಿಯನ್ನು ವಿನಾಶಮಾಡಲು ಬಂದವರನ್ನು
ಮಾತ್ರ ನಾವು ಶಿಕ್ಷಿಸದೆ  ಬಿಡೆವು..

ವಂದೇ ಮಾತರಂ

No comments:

Post a Comment