Tuesday, July 25, 2017

ನಿನ್ನಾಟಕೆ ಎಣೆಯುಂಟೆ

ನಿನ್ನಾಟಕೆ ಎಣೆಯುಂಟೆ....

ನಿನ್ನಾಟಕೆ ಎಣೆಯುಂಟೆ ಭಗವಂತ
ಉಸಿರು ಕೊಟ್ಟ ಜೀವವ ಕಸಿದು
ಉಳಿಸಿಬಿಟ್ಟೆಯಲ್ಲ ನನ್ನನ್ನೊಬ್ಬನನ್ನೆ
ಈ ಬರಡು ಬದುಕಿನ ಬೆನ್ನಿಗೆ ಹಸಿವನ್ನು
ಹೊಸೆದು...
ಎಷ್ಟು ದಿನಗಳಿಂದ ಕಾಯುತ್ತಿದ್ದೆಯೊ...
ಮರಣ ಕುಣಿಕೆಯನು ಹೊಸೆದು
ತೀರಿಸಿಕೊಂಡುಬಿಟ್ಟೆಯಲ್ಲ.. ಒಂಚೂರು
ಕಹಿಯನುಳಿಸಿಕೊಳ್ಳದೆ ಎಲ್ಲವ ಮಸೆದು

ಸಾವು ನೋವೆಂಬುದನರಿಯದ ಮನಕೆ
ಕೊಟ್ಟೆಯಲ್ಲ.... ಅಮ್ಮಾ.. ಎಂಬ
ಹಸಿವಿನಳುವಿನ ಕಾಣಿಕೆ
ತೋರಿದೆಯಲ್ಲೊ ಎಂತಹ ದೊಡ್ಡಸ್ಥಿಕೆ
ತಾಯೆಂಬ ಪದವ ಮಾಡಿದೆಯಲ್ಲೊ
ಬದುಕಿನಲ್ಲಿನ್ನೂ ನನಗೆ ಮರಿಚೀಕೆ

ನನಗಿನ್ನೇನು ಉಳಿಸಿದೆ ಈ ಜಗದಲಿ
ನನ್ನಮೃತವ ಕೊಂದೆನ್ನ ಮಾಡಿರುವೆಯಲ್ಲ ತಬ್ಬಲಿ
ಇನ್ನಾವ ಎದೆಯ ಕ್ಷೀರಧಾರೆಯ ಸವಿಯಲಿ
ನಾ ಮಲಗುವ ಮಡಿಲನೆ ಮಲಗಿಸಿಬಿಟ್ಟಿರುವೆಯಲ್ಲ... ಮಣ್ಣಲಿ
ನನ್ನುಸಿರಿಗೆ ಉಸಿರನು ಕೊಟ್ಟ ಉಸಿರನ್ನೆ
ಕರಗಿಸಿಬಿಟ್ಟೆಯಲ್ಲ ಗಾಳಿಯಲಿ..

ನೀ... ಉರುಳಿಸುವ ದಾಳವ ಬಲ್ಲವರಾರು
ಕೊಟ್ಟು ಕಸಿದು ಅಳಿಸುವ ಪರಿ ಅರಿತವರಾರು
ಹಾಲುಗಲ್ಲದ ಹಸುಳೆಯ ಕಂಗಳಿಗೂ...
ಕಣ್ಣೀರಿನ ಕಟ್ಟೆಯ ಕಟ್ಟಿ ಕೊಡುವ ಕಲೆಯ ಕಲಿತವರಾರು
ತಾಯಿಲ್ಲದ ನೋವಿಗೆ... ಹೊತ್ತು ಹೊತ್ತಿಗೂ ಕಿತ್ತು
ತಿನ್ನುವ ಹಸಿವಿನ ನೋವನು ಮರೆಸುವ ಮದ್ದನು
ಕೊಡುವಿರಾ....?  ಯಾರಾದರೂ...

No comments:

Post a Comment