ಓ... ಸಾವೆ ನಿನಗೆ ಶರಣು....
ಸಾವಲ್ಲೂ... ನಮ್ಮಿಬ್ಬರ ಒಂದುಗೂಡಿಸಿದ
ನಿನಗೆ.. ಇಗೋ..ಇನ್ನೊಮ್ಮೆ ನಿನಗೆ
ಶರಣು... ಶರಣು...
ನಾ ಸತ್ತು.. ಅವಳು ಬದುಕುಳಿದಿದ್ದರೆ..
ಏನು ಮಾಡುತ್ತಿದ್ದಳೊ.. ನನಗಂತು ಗೊತ್ತಿಲ್ಲ
ಅವಳು ಸತ್ತು ನಾ ಬದುಕಿದ್ದರೆ... ಒಂದರಘಳಿಗೆಯು
ನಾನು ಬದುಕುತ್ತಿರಲಿಲ್ಲ...
ಓ.. ಸಾವೆ ನೀನೆಷ್ಟು ಕರುಣಾಮಯಿ..
ಸಂಜೆ ತಂದ ಮಲ್ಲಿಗೆಯ ಮುಡಿದು..
ಬಂದಳೆನ್ನುದುರಿಗೆ ಸಂಜೆಯ ಚಹಾವ ಹಿಡಿದು..
ಅವಳ ಮಧು ತುಂಬಿದ ಬಟ್ಟಲು ಚಹಾವ ಕುಡಿದು
ಬರಸೆಳೆದು ಕುಳ್ಳರಿಸಿಕೊಂಡೆ ನನ್ನೆರಡು ತೊಡೆಗಳ
ಮೇಲೆ.. ಮಲ್ಲಿಗೆಯ ಮುಡಿದು ರಂಗೇರಿದ ಗಲ್ಲಕೆ
ಸವಿ ಮುತ್ತನೊಂದ ನೀಡುವ ಮೊದಲೆ..
ಕ್ಷಣಾರ್ಧದಿ ಧರೆಯ ಗಡಗಡ ನಡುಗಿಸಿ ನಿನ್ನ ತೆಕ್ಕೆಗೆ
ಎಳೆದುಕೊಂಡುಬಿಟ್ಟೆ.. ನಮ್ಮಿಬ್ಬರ ಪ್ರೀತಿಗೆ ಇನ್ನಾರ
ಭಯವು.. ತೊಂದರೆಯ ಕೊಡದ ಹಾಗೆ..ಶಾಶ್ವತವಾಗಿ
ನಮ್ಮನು ನಿನ್ನ ಮರಣದ ತೊಟ್ಟಿಲಲಿ ಹಾಕಿ ತೂಗಿಬಿಟ್ಟೆ...
ಓ... ಸಾವೆ ನಿನ್ನನೆಷ್ಟು ಶಪಿಸುವರಲ್ಲ ನೀನೊಬ್ಬ ಕಟುಕ
ಅದು ಹೇಗೆ ಅಂದಾರೆಲ್ಲರು..? ನನ್ನವಳ ಎದೆಯ
ಮೇಲೊರಗಿಸಿ.. ಎದೆಯ ಹಕ್ಕಿಯ ಬಿಡುಗೊಡೆಗೊಳಿಸಿದ
ನೀನೊಬ್ಬ ಕರುಣಾಜನಕ
ಎಷ್ಟು ಜನ್ಮಗಳ ಪುಣ್ಯವಿರಬಹುದು ಅವಳದು.. ನನ್ನದು
ಅವಳ ಮಡಿಲಲಿ ಮಗುವಾಗಿಸಿ ಮಣ್ಣು ತೂರಿಬಿಟ್ಟೆಯಲ್ಲ
ನಿನ್ನನು ಕಟುಕನೆನ್ನುವವರ ಬಾಯಿಗೆ ನಾನೇನು
ಹೇಳಲಿ...
ನಿಜ.. ನಿನೇಷ್ಟಿದ್ದರೂ ಕಟುಕನೆ.. ಈ ವಿಷಯದಲ್ಲಿ
ನೋಡು ಒಂದು ತಪ್ಪನು ಮಾಡಿಬಿಟ್ಟೆ.. ಆಡಲು ಹೋದ
ಮಕ್ಕಳೆರಡು ನಮ್ಮೊಟ್ಟಿಗೆ ನೀ ಕರೆದು ಕಳಿಸಿದ್ದರೆ ಎಷ್ಟು
ಸುಖವಾಗಿರುತ್ತಿತ್ತು.. ಸಾವಲ್ಲೂ... ಅಳಿದುಳಿದ
ಆ ಮಕ್ಕಳ ಅಳುವಿಗೆ ಕಿವಿಯಾಗುವರಾರು... ?
ಅವುಗಳ ಹಸಿವಿಗೆ ತುತ್ತಾಗುವರಾರು.. ?
ಕೆನ್ನೆಗೆ ಮೆತ್ತಿದ ಕಂಬನಿಯ ಮುತ್ತನು... ಒರೆಸುವರಾರು...? ರಾತ್ರಿ ಬೀದಿ ನಾಯಿಗಳಿಗೆ ಆಹಾರವಾಗಿಸದೆ ಒಂದು
ಸೂರಿನಡಿ ತಂದು.. ಲಾಲಿಯ ಹಾಡಿ.. ಕಿಟಕಿಯ ಸರಳುಗಳ
ನಡುವಿನಿಂದ ಬಾಲ ಚಂದಿರನ ಅಂದವ ತೋರಿಸುತ್ತ...
ಕೈ ತುತ್ತನುಣಿಸುವರಾರು..?
ಎದೆಗೆ ನಾಲ್ಕಕ್ಷರದ ಬೀಜವ ಬಿತ್ತುವರಾರು..?
ಆಗು ನೀ ಇನ್ನೊಂಚೂರು ಕಟುಕ...
ನೀನಾಗಿಬಿಡು ಅವರ ಬಾಳಿಗೆ ಕಂಟಕ...
ದಯತೋರಿ ನೀಗಿಬಿಡು ಮಕ್ಕಳೆರಡರ ಸಂಕಟ..
ಕೊನೆಯ ಸಾಲುಗಳ ನೀ..ಬರೆದುಬಿಡು ಅವರ ಜಾತಕ....
ನೀಗಲಿ ಅವರ ಬಾಲ್ಯದ ನರಕ..
ಜಗವಿದು... ಅತ್ತು ಕಳೆಯುವರು ಎರಡು ದಿನಗಳ ಸೂತಕ..
ಓ.. ಸಾವೆ ನೀ ದಯಾಮಯ..
ನಮ್ಮಿಬ್ಬರನು ಸಾವಲ್ಲೂ ಒಂದು ಗೂಡಿಸಿದ್ದಕ್ಕೆ..
ಓ.. ಸಾವೆ ನೀ ಮಕ್ಕಳೆರಡ ತಬ್ಬಲಿ ಮಾಡಿದಕ್ಕೆ
ನೀನೊಬ್ಬ ಕಟುಕ.. ಕಟುಕ.. ಕಟುಕ
No comments:
Post a Comment