Sunday, July 30, 2017

ಮೇಘರಾಜ

ಓ... ಮೇಘರಾಜ ನೀನೇಕೆ ನಿದ್ರಿಸುತ್ತಿರುವೆ
ಕುಂಭಕರ್ಣನ ಹಾಗೆ... ನಮ್ಮಳಲು ಕೇಳುತ್ತಿಲ್ಲವೆ
ಸಾಲು.. ಸಾಲು ಭಜನೆ ಪೂಜೆಗಳು ನಿನ್ಮನವ ತಣಿಸುತ್ತಿಲ್ಲವೆ
ಹಸಿವು ಬಾಯಾರಿಕೆಯಿಂದ ಕೂಗುವ
ದನಕರುಗಳ ಕೂಗು ಕಣ್ಣುಗಳನ್ನು ತೆರೆಸುತ್ತಿಲ್ಲವೆ
ನಿನ್ನ ನೆನೆ ನೆನೆದು ಮಣ್ಣಿನ ಮಕ್ಕಳು
ಬಿಡುತ್ತಿರುವ ನಿಟ್ಟುಸಿರು ನಿನಗೆ ತಟ್ಟುತ್ತಿಲ್ಲವೆ

ಮೊದಲೇಕೆ ಸುರಿಸಿದೆ ಭರವಸೆಯ
ನಾಲ್ಕು ಹನಿ ಮುತ್ತಗಳನು..
ನಂಬಿ ಮನೆಯ ಹಳೆಯ ಟ್ರಂಕಿನೊಳಗಿನ
ಬಟ್ಟೆಯ ಗಂಟೊಳು ಕಟ್ಟಿಟ್ಟಿದ್ದ.. ಆಪತ್ಕಾಲದ
ಹಣವನೆಲ್ಲವ ಖರ್ಚು ಮಾಡಿ ಬಿತ್ತಿದೆವಲ್ಲ
ಬೀಜಗಳನು....
ಗರ್ಭವ ಸೀಳಿ... ತಾಯಿ ಮಡಿಲಲಿ ನಳನಳಿಸಿ
ಬೆಳೆಯಬೇಕಾದ ಸಸಿಗಳಿಗಿಂದು ಅಮೃತವನುಣಿಸದೆ
ಮಲತಾಯಿ ಧೋರಣೆಯನೇಕೆ ತೋರುತಿರುವೆ...

ನೋಡಿಲ್ಲಿ... ನಿನ್ನ ಕರುಣೆಯ ಹನಿಗಳಿಲ್ಲದೆ
ಒಣಗುತಿವೆ ಬೆಳೆಗಳೆಲೆಗಳು.. ಬಾಡಿ ಉದುರುತಿರುವುದು
ಎಲೆಗಳಲ್ಲ... ನಮ್ಮ ನಂಬಿಕೆಯ ಬಾಳಿನ ದಿನಗಳು
ಕೇಳಿಲ್ಲಿ... ಮೊದಲ ಮಗಳು ಮನೆಗೆ ಬಂದಿಹಳು
ತುಂಬು ಗರ್ಭಿಣಿ.. ಅವಳ ಉಡಿಯ ತುಂಬ ಬೇಕಿದೆ ಸೀಮಂತ ಕಾರಣವ ಮಾಡಿ.. ಅವಳ ಒಡಲ ಮಗುವಿಗೊಂದು  ತೊಟ್ಟಿಲು ತೂಗಿ ಲಾಲಿ ಹಾಡಬೇಕಾದಂತ ಕನಸುಗಳು ಕಮರುತಿವೆ..
ಎರಡನೇಯ ಮಗಳು ಹಬ್ಬಕ್ಕೆಂದು ಬಂದವಳು
ಇಲ್ಲೆ ಇರುವಳು... ಮದುವೆಯ ವರದಕ್ಷಿಣೆಯ ಹಣವ
ಕೊಟ್ಟು ಕಳಿಸಬೇಕಿದೆ.... ಅವಳೂ... ನಾಲ್ಕು ಜನ ತನ್ನ
ಒರಗಿತ್ತಿಯರ ಹಾಗೆ ಗಂಡನ ಮನೆಯಲ್ಲಿ ಸುಖವಾಗಿ
ಸಂಸಾರ ಮಾಡಬೇಕು.. ಗಂಡ ಬಿಟ್ಟವಳೆಂಬ ಅಪವಾದ
ಬಾರದಿರಲೆಂದು ನಡೆಸುತಿರುವ ಹೋರಾಟವು
ಹುಸಿಯಾಗುತಿಹುದು...
ಮೂರನೆ ಮಗಳು... ಓದಿ ನಮ್ಮ ಮನೆಗೆ..
ನಮ್ಮೂರಿಗೆ ಒಂದು ಹೆಸರು ತರುತ್ತೇನೆ ಎಂಬವಳ
ಅತ್ಮ ವಿಶ್ವಾಸಕ್ಕೆ ಹಣದ ತೊರೆಯನು ಹರಿಸಲಾರದೆ
ಹೈರಾಣಾಗಿರುವೆ...

ನೀ ಬಾರದೆ ಈ ಲೋಕದಲಿ..
ಬದುಕುವುದಾದರೂ ಹೇಗೆ ಈ ಭೂಮಿಯಲಿ
ನಾನೆ ಬರಲೆ ನಿನ್ನಲ್ಲಿಗೆ... ಏನು ಮಾಡಲಿ
ಒಬ್ಬಂಟಿಗನಲ್ಲವಲ್ಲ ಬಾಳಲಿ
ಸುರಿದು ಹರಿದಾಡಿಬಿಡೊ ಈ ಧರೆಯಲಿ
ನೀ ಬರುವೆ ಎಂಬ ಆಶಾ ಕಿರಣ
ಮಸುಕಾಗುವ ಮೊದಲೆ ಧುಮುಕಿಬಿಡು
ಧರಣಿಗೆ... ಬೆಳಕಿನ ಕಿರಣವಾಗು ನಿನ್ನನೆ ನಂಬಿದ
ನೊಂದ ಮನಗಳಲಿ...

No comments:

Post a Comment