Sunday, July 9, 2017

ಶರೀಪಜ್ಜನ ಅಂಗಳದ ಸಂತೆ

ನೀವೊಮ್ಮೆ ಬರಬೇಕಾಗಿತ್ತು ಕಣ್ರೀ..
ಆ ಜೋಡು ಮಹಾದ್ವಾರಗಳ ನಡುವೆ
ನಡೆದು ಹೋಗುವಾಗ ಎಡದಲಿ ಹಚ್ಚ ಹಸಿರನೆ
ಹಾಸಿ ಹೊದ್ದು ಮಲಗಿದ ಹೊಲದ ಕಣ್ತಣಿಸುವ
ಸೌಂದರ್ಯ... ಬಲದಲಿ ಭೂವಿಗೆ ಮುತ್ತಿಕ್ಕಿ ತಾನು
ಕೆಂಪಾಗಿ ಕರಗುತಿರುವ ರವಿಯ ಸೌಸುಂದರ ದೃಶ್ಯವ
ಕಾಣಲು.. ದೂರದ ನಡಿಗೆ ಎಂದು ಕವಿಮಿತ್ರ ಗುಡದಿ ತನ್ನ
ವಾಹನದಲ್ಲಿ ಕರೆದುಕೊಂಡು ಹೋಗುವ ಆತ್ಮೀಯತೆಯ
ಅನುಭವಿಸಲು... ಅಜ್ಜನ ಅಂಗಳದ ಸುತ್ತಮುತ್ತ ಕೂಗುವ
ಕೋಗಿಲೆಯ ಇಂಪಾದ ಗಾನಕೆ ಮನಸೋಲಲು....
ಆ ಅಜ್ಜನ ಕಟ್ಟೆಯ ಮೇಲೆ ಕುಳಿತರೊಮ್ಮೆ ಸಾಕು
ಬದುಕಿನ ಜಂಜಾಟಗಳ ಮರೆತು ಕಣ್ಣಿಗೆ ನಿದಿರೆ
ದೇವಿಯು ರೆಪ್ಪೆಗಳ ಹೊದಿಕೆಯ ಹೊದಿಸದೆ ಬಿಡಳು
ಮನದ ದುಗುಡ ದುಮ್ಮಾನಗಳೆಲ್ಲವ ಕಳೆದುಬಿಡುತ್ತಿತ್ತು
ಅಂತಹ ಒಂದು ಸುಂದರ ಸಂಜೆಯ ಸವಿಯನನುಭವಿಸಲು
ನೀವು ಬರಬೇಕಿತ್ತು ಕಣ್ರೀ...

ನಿಜವಾಗ್ಲೂ ನೀವು ಬರಬೇಕಿತ್ತು ಕಣ್ರೀ...
ಅಷ್ಟು ಜನರು ನಾವು ವಾಚಿಸುವ ಪ್ರತಿಯೊಂದು ಕವನಕ್ಕೆ
ಅವರು ತಟ್ಟುತ್ತಿದ್ದ ಚಪ್ಪಾಳೆಗೆ ಮನವದು ಅರಳಿ ಹೂವಾಗುವ
ಸಮಯದಲಿ... ಕಾರ್ಯಕ್ರಮ ಮುಗಿದು ಸಂಜೆಯ ಚಹಾಕ್ಕೆ
ಶಿರ್ಶಿಯ ಮಾರಿಕಾಂಬೆಯ ತಾಯಿಯ ರೂಪವ ಹೊತ್ತು
ಬಂದಿದ್ದ ಸಹೋದರಿ ಹವ್ಯಕ ನಾಗಮಂಜರಿಯವರು..
ತಮ್ಮ ಮನೆಯಿಂದ ಮಾಡಿ ತಂದಿದ್ದ ಕೊಡುಬಳೆ.. ಎರಡು
ತರದ ಸವಿಯುಂಡೆ.. ಸಿಹಿ ಖಾರದ ಮಿಶ್ರಣವ ಮಾಡಿ
ನಾಲಿಗೆ ಚಪ್ಪರಿಸಿ ತಿನ್ನುವ ಮಾವಿನಕಾಯಿಯ ಚಟ್ನಿ
ಆಹಾ...ಹಾ.. ನೆನೆಸಿದರೆ ಈಗಲೂ ಬಾಯಲಿ ನೀರು..
ರಾತ್ರಿಯೂಟಕ್ಕಂತೂ..ರೊಟ್ಟಿ.. ಚಪಾತಿ..ಬುಂದಿ..ಖಾರಾ
ಮೊಸರು.. ಹಾಲು.. ಶೆಂಗಾ ಚಟ್ನಿ.. ತತ್ತಿ ಸಾರು..
ಅಬ್ಬಬ್ಬಾ ಸಹೋದರಿಯವರು ಬಡಿಸಿದ್ದೆ ಬಡಿಸಿದ್ದು
ಉಂಡು ಮಲಗಿದ ಹೊಟ್ಟೆಗೆ ಬೆಳಗಿನ ಆರರ ತನಕ
ಪ್ರಯಾಣದ ಆಯಾಸವನೆಲ್ಲವ ಹೊಡೆದು ಹಾಕಿ
ಮಲಗಿಸಿಬಿಟ್ಟಿತ್ತು..

ನೀವು ಇರಬೇಕಿತ್ರಿ... ಈ ಮುಂಜಾವಲಿ ಎಲ್ಲೆಲ್ಲೂ
ಹಕ್ಕಿಗಳ ಚಿಲಿಪಿಲಿ ಕಲರವ... ನಾವುಳಿದ ಕಟ್ಟಡದ ಎದುರು
ಚಿಕ್ಕ ಕೆರೆಗಳಲೆಯಲಿ ರವಿಯ ನರ್ತನ... ಬೀಸಿ ಬರುವ ಗಾಳಿ
ಅಲೆಗಳ ಚುಂಬಿಸಿ.. ಮೈ ಮನಗಳಿಗೆ ತಂಪಗೈಯುತ್ತಿದ್ದ ಕ್ಷಣಕೆ
ಎಲ್ಲದಕೂ ಮಿಗಿಲಾಗಿ... ಈ ಸಂತೆಯ ಚಿಂತಕರು ಪ್ರತಿಯೊಂದು ವಿಷಯದಲ್ಲು ತೋರಿಸಿದ ಕಾಳಜಿ.. ತಂದೆಯ
ಹಾಗೆ ಊಟಕ್ಕೆ ಒಂದನ್ನು ಕೊರತೆ ಬರದ ಹಾಗೆ.. ತಾಯಿಯಂತೆ ಮಲಗಲು.. ಸ್ನಾನಕ್ಕೆ.. ಬೆಳಗಿನ ಚಹಾಕ್ಕೆ
ಕವನ ವಾಚನದಲ್ಲಿ ಗುರುವಂತೆ ಎಲ್ಲರ ಕವನಗಳ ಆಸ್ವಾದಿಸಿ
ಬೆಂಬಲಿಸುತ್ತಿದ್ದ ಅವರ ಕವಿ ಹೃದಯವ ಅನುಭವಿಸಲು..
ಆ ಸಂತನ ನೆಲದಲ್ಲಿ.. ಇಂತಹ ಚಿಂತಕರ ಆಶ್ರಯದಲ್ಲಿ
ನಡೆದ ಕಾರ್ಯಕ್ರಮದಲ್ಲಿ ಭಾಗಿಯಾದದ್ದೆ ನಮ್ಮ ಪೂರ್ವಜನ್ಮದ ಪುಣ್ಯ... ಎಲ್ಲಿಯ ಬಿಜಾಪುರ.. ಎಲ್ಲಿಯ
ಬೆಂಗಳೂರು.. ಎಲ್ಲಿಯ ಶಿರ್ಶಿ.. ಎಲ್ಲಿಯ ನಾನು ಕೂಡಿ
ಕಳೆದ ಸಮಯಕೆ ಬೆಲೆ ಕಟ್ಟಲಾದಿತೆ... ಇನ್ನೊಂದು ಗೊತ್ತೆ
ಸಹವಾಸ ದೋಷದಿಂದೇನೊ..ಸಹೋದರಿ ನಾಗಮಂಜರಿಯವರ ಮಗನಾದಂತಹ ಗಣೇಶನು ಅಲ್ಲಿ
ಕುಳಿತಲ್ಲಿಯೆ ಕವನ ಬರೆದು  ಎಲ್ಲರ ಹುಬ್ಬೇರಿಸುವಂತೆ
ಮಾಡಿದ್ದು ಮರೆಯಲಾದಿತೆ..

ನೀವೆಲ್ಲ ಅನುಭವಿಸಲೆ ಬೇಕಿತ್ತು ಕಣ್ರೀ.. ಕೂಡಿದ
ಒಂದೆ ದಿನದಲಿ ಬೆಸೆದ ಭಾಂದವ್ಯ.. ಎಲ್ಲರೂ ಮರಳಿ
ಅಜ್ಜನ ಆಶೀರ್ವಾದವ ಪಡೆದು ನಗುನಗುತ್ತಲೆ ಒಬ್ಬರಿಗೊಬ್ಬರು ಬಿಳ್ಕೊಟ್ಟು ನಮ್ಮೂರ ಬಸ್ ಹತ್ತಿ
ಮರಳಿ ಊರಿಗೆ ಪ್ರಯಾಣಿಸಿದಾಗ... ಕಿಟಕಿಯ
ಹತ್ತಿರ ಕುಳಿತು ಕಣ್ಮುಚ್ಚಿ ಕುಳಿತೆ.. ಆ ಸಂತೆಯೊಳಗಿನ
ಎಲ್ಲರು ತೋರಿದ ಭಾವಸಂಗಮದ ಪ್ರೀತಿ ವಿಶ್ವಾಸವ ನೆನೆದು..
ಮನದುಂಬಿ ಕಣ್ಣಂಚಲಿ ಒಂದು ಹನಿ ಜಾರದೆ
ನಿಲ್ಲಲಿಲ್ಲ...

No comments:

Post a Comment