Friday, March 9, 2018

ನಮಗೇತಕೆ ಬೇಕು ? ಪ್ರತಿಮೆಗಳು

ಉರುಳಿಸಿಬಿಡಿ ಬಜಾರಿನ ಮುಖ್ಯರಸ್ತೆಯ
ಮಧ್ಯದಲಿ ನಿಲ್ಲಿಸಿಬಿಟ್ಟ ಪ್ರತಿಮೆಗಳನ್ನು....
ಅವರು ಹಾಕಿಕೊಟ್ಟ ದಾರಿ ನಮಗೇತಕೆ ಬೇಕಿದೆ ಈಗ
ಇರುವರೇನು ನಮ್ಮಷ್ಟು ಜಾಣರು ಯಾರಾದರೂ..
ಈ ಶತಮಾನದಲ್ಲಿ..!!!! ಹೆಣ್ಣು ಹೂವನು ಹೊಸಕುವವರನ್ನು
ಹೊತ್ತು ಮೆರೆಸುವೆವು ಹೊನ್ನ ಪಲ್ಲಕಿಯಲಿ,
ಏಷ್ಟಾದರೂ..ಕಳಬೇಡ..ಕೊಲಬೇಡನೆಂದವರನ್ನು
ಹೊಳೆಗೆ ಹಾರಿಸಿದಂತಹ ಧೀರರು ನಾವು...

ಮಸಿ ಬಳೆದುಬಿಡಿ... ವಾಯು ವಿಹಾರದ ತೋಟದಲಿ
ನಡೆಯುವ ಕಾಮಕೇಳಿಗಳ ಕಂಡು...ಕಾಣದ ಹಾಗೆ
ಕಣ್ಮುಚ್ಚಿ ನಗುತಿರುವ ಪುತ್ಥಳಿಗಳಿಗೆ....
ಕಾಯಕವೇ ಕೈಲಾಸದ ಹೆಸರಿನಡಿಯಲ್ಲಿ
ಕೈ ಬೆಚ್ಚಗಾಗಿಸಿಕೊಳ್ಳುವವರನ್ನು ಬೈಯ್ಯದೆ
ಇಷ್ಟೇಲ್ಲಾ...ಮಾಡಿ ಮತ್ತೆ ರಾಜರಂತೆ ಎದೆಯುಬ್ಬಿಸಿ
ನಡೆಯುವಂತೆ ಸಂವಿಧಾನ ರೂಪಿಸಿಕೊಟ್ಟ ಶಿಲ್ಪಿಗಳಿಗೆ

ಏಕೆ ಉರುಳಿಸುತ್ತೀರಿ ಸ್ವಾಮಿ..ಪ್ರತಿಮೆಗಳನ್ನು..
ಶಿಲ್ಪಗಳನ್ನು... ಮರೆತು ಮಲಗಿಬಿಟ್ಟಿರುವಿರೇನು..?
ಇಂದಿನ ನಿಮ್ಮ ಸುಖಕ್ಕೆ...ಅವರುಂಡ ನೋವಿನ
ದಿನಗಳನು, ಹನುಮನಂತೆ ಎದೆ ಸೀಳಿ ತೋರಿಸಬಲ್ಲಿರೇನು?
ಆ ಮಹಾನುಭಾವರ ಆದರ್ಶಗಳನು, ಇಲ್ಲವಲ್ಲ..!!!
ಮತ್ತೇಕೆ...? ಅವರ ಹಾಕಿಕೊಟ್ಟ ಹಾದಿಯು ನಿಮಗೆ
ಬೇಡವಾಗಿರುವಾಗ... ಇವ ನಮ್ಮವ...ಇವ ನಮ್ಮವನೆಂದು
ಜಯಂತಿಗಳ ದುಂದುವೆಚ್ಚವ ಮಾಡುವಿರಿ...

ಅಷ್ಟೊಂದು ಕೋಪ ಪ್ರಕೋಪವೆ..ನಿರ್ಜೀವ ಪುತ್ಥಳಿಗಳ ಮೇಲೆ, ಬನ್ನಿ..ಹಾಗಿದ್ದರೆ,... ಜಾತ್ಯಾತೀತವಾದಿಗಳೆ...೧೨ ನೇ
ಶತಮಾನದಲ್ಲಾಗದ್ದನ್ನು ಈ ೨೧ ನೇ ಶತಮಾನದಲ್ಲಾದರೂ
ಸಾಧಿಸೋಣ...ಮೇಲು ಕೀಳುಗಳ ಮಹಲನು ಒಡೆಯೋಣ
ರಾಜಕೀಯ ಪ್ರೇರಿತ ಧರ್ಮ ವಿಭಜನೆಗಳನು ಖಂಡಿಸೋಣ
ಬರುವಿರಾ...!! ಬರುವಿರಾ...!!! ಬರುವಿರಾ...!!!!!
ಹೇಗೆ ತಾನೆ ಬರುವಿರಿ...ಕುಲದ ರೇಖೆಯನು ದಾಟಿ...
ಹೊರಡಬನ್ನಿ... ಅಗೋ ನೋಡಿ..ರಸ್ತೆಯ ತಿರುವಿನಲ್ಲೊಂದು
ಪುತ್ಥಳಿ ನಗುತ್ತಿದೆ ನಮ್ಮನೆ ನೋಡಿ..
ಇಂದು ರಾತ್ರಿಗೆ ಅದಕ್ಕೆ ಗುಂಡಿಯ ತೋಡಿ..

No comments:

Post a Comment