Saturday, March 10, 2018

೮೫ ನೇ ವಾರ

ವಾರದ ೮೫ ನೇ ಉಪನ್ಯಾಸಕರಾಗಿ ಆಗಮಿಸಿದ್ದಂತಹ
ಶ್ರೀಮತಿ ಎಸ್. ಎಮ್.ಕುಲಕರ್ಣಿ, ಪ್ರಧಾನಗುರುಮಾತೆ, ಜ.ತೋಂಟದಾರ್ಯ ಪ್ರಾಥಮಿಕ ಶಾಲೆ.  ಸಂಗೀತ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಎಂಬ ವಿಷಯದ ಕುರಿತು ಮಾತನಾಡುತ್ತಾ , ಮನೆಯೆ ಮೊದಲ ಪಾಠ ಶಾಲೆ ಎಂಬಂತೆ ಮನೆಯಲ್ಲಿ ತಾಯಿಯಿಂದಲೆ ಸಂಗೀತಾಭ್ಯಾಸವನ್ನು ಪ್ರಾರಂಭಿಸಬೇಕು ಎಂದು ಹೇಳುತ್ತಾ, ಹಿಂದಿನ ಕಾಲದ ಮಹಿಳೆಯರು ವಳ್ಳಿನಲ್ಲಿ ಬ್ಯಾಳಿಯನ್ನು ಹಾಕಿ ಒರಗಿತ್ತಿಯರೊಂದಿಗೆ ಜನಪದ ಹಾಡನ್ನು ಹಾಡುತ್ತಾ.. ಕೆಲಸ ಕಾರ್ಯಗಳನ್ನು ಮಾಡುತ್ತಿದ್ದರಲ್ಲದೆ, ಭತ್ತಗಳನ್ನು ಕುಟ್ಟುವುದು, ಹೊಲಗಳಲ್ಲಿ ಕಳೆ ತೆಗೆಯುವಾಗ ನೆತ್ತಿಯ ಮೇಲಿನ ಸುಡು ಸೂರ್ಯನ ಶಾಖವನ್ನು ಮರೆಯಲು ಹಾಡುತ್ತಿದ್ದರು, ಸಂಸಾರದ ಜಂಜಾಟಗಳಿಂದ ಹೊರಬರಲು ಭಕ್ತಿಗೀತೆ ಭಾವಗೀತೆಗಳನ್ನು ಹಾಡಿಕೊಳ್ಳುತ್ತಾ ಗೃಹಿಣಿಯರು ಮನೆಯೊಳಗಿನ ಎಲ್ಲ ಸಂಕಷ್ಟಗಳನ್ನು ಮರೆಯಬಹುದಾಗಿದೆ ಎನ್ನುತ್ತಾ ಈಗಾಗಲೆ ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ಲತಾ ಮಂಗೇಶ್ಕರ, ಎಂ.ಡಿ.ಪಲ್ಲವಿ, ಮಂಜುಳಾ ಗುರುರಾಜ, ನಮ್ಮ ಧಾರವಾಡದವರೆ ಆದ ಶಾಸ್ತ್ರೀಯ ಸಂಗೀತಗಾರರಾದಂತಹ ಗಂಗೂಬಾಯಿ ಹಾನಗಲ್, ಸಂಗೀತಾ ಕಟ್ಟಿ ಹೀಗೆ ಅನೇಕರನ್ನು ನೆನೆಯುತ್ತಾ ದಾಸರಪದ, ವಚನ, ಭಾವಗಿತೆಯನ್ನು ಹಾಡುವುದರ ಮೂಲಕ ತಮ್ಮ ಉಪನ್ಯಾಸವನ್ನು ಮುಕ್ತಾಯಗೊಳಿಸಿದರು. ಗೀತಾ ಯಾಳಗಿಯವರು ಕವನ ವಾಚನವನ್ನು ಮಾಡಿದರು. ಅಧ್ಯಕ್ಷರ ನುಡಿಯಲ್ಲಿ ಕಸಾಪ ಮಹಿಳಾ ಘಟಕದ ಅಧ್ಯಕ್ಷರಾದಂತಹ ಶರಣಮ್ಮ ಅಂಗಡಿಯವರು ಮಾತನಾಡುತ್ತಾ ಇಪ್ಪತ್ತೊಂದನೇ ಶತಮಾನದಲ್ಲೂ ಮಹಿಳೆಯರ ಶೋಷಣೆಯು ನಿಂತಿಲ್ಲ ಅಲ್ಲದೆ ಇಂದಿನ ಮಹಿಳೆಯರು ಎಲ್ಲ ರಂಗದಲ್ಲಿ ಮುನ್ನುಗ್ಗುತ್ತಿರುವುದು ಖುಷಿಯ ಮತ್ತು ಸಮಾಧಾನಕರ ವಿಷಯವೆನ್ನುತ್ತಾ ತಮ್ಮ ಭಾಷಣವನ್ನು ಮೊಟಕುಗೊಳಿಸಿದರು. ಶ್ರೀ ಜಗದ್ಗುರು ತೋಂಟದಾರ್ಯ ಶಾಲೆಯ ಮಕ್ಕಳಿಂದ ಮನಸೊರೆಗೊಳ್ಳುವಂತಹ ನೃತ್ಯವನ್ನು ಮಾಡದರು. ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷರಾದಂತಹ ಐ.ಎ.ರೇವಡಿ, ಕೆ.ಎಸ್. ಗಾರವಾಡ ಹೀರೆಮಠ, ಬಿ.ಟಿ. ಹೊಸಮನಿ ಬಿ.ವ್ಹಿ.ಮುನವಳ್ಳಿ , ಐ.ಎ.ರೇವಡಿ, ಹೆಚ್ಚ.ಎ.ಚಿಂತಗುಂಟಿ, ಇಂದಿರಾ ಪಾಟೀಲ್ ,  ಎ.ಎಸ್.ನರಗುಂದ, ಸಂಗಮ್ಮ ಸಿನ್ನೂರ, ವಿಜಯಲಕ್ಷ್ಮಿ ಕಮ್ಮಾರ, ವಿಜಯಲಕ್ಷ್ಮೀ ಕೋಟಿ, ದಾನಮ್ಮ ಪಟ್ಟೇದ, ಆರ್.ಎಸ್.ಇಟಗಿ ಎಮ್.ಎಸ್. ಮಕಾನದಾರ, ಹುಚ್ಚಪ್ಪ ಹಾವೇರಿ, ಶರಣಪ್ಪ ಬೇವಿನಕಟ್ಟಿ ಮುಂತಾದ ಕನ್ನಡದ ಮನಸ್ಸುಗಳು ಉಪಸ್ಥಿತರಿದ್ದರು.

No comments:

Post a Comment