Friday, June 30, 2017

ಶೇಖರಜ್ಯೋತಿ ಮಗಳಿಗೆ

ಆ ರವಿವರ್ಮನ ಕುಂಚವು
ನಿನ್ನಂದದ ಕೆನ್ನೆಗಳ ಸ್ಪರ್ಶಿಸಿದ್ದರೆ...
ಇನ್ನೂ... ಅದೇಷ್ಟೊ ವರ್ಣಮಯ
ತೈಲವರ್ಣಗಳ ಚಿತ್ರಿಸುತ್ತಿತ್ತೊ...

ಕಾಳಿದಾಸನು ನಿನ್ನ ಸ್ನಿಗ್ದ ಸೌಂದರ್ಯವ
ಕಂಡಿದ್ದರೆ ನಿನ್ನ ಸೊಬಗಿಗಿನ್ನೆರಡು ಕಾವ್ಯ
ಗಳ ರಚಿಸಿ.. ಶಾಕುಂತಲೆಯ ಮೊಗದಲ್ಲೂ
ನಾಚಿಗೆಯ ತರಿಸುತ್ತದಿದ್ದನೇನೊ...ಅಂದಕೆ
ಚೆಂದದ ಪದಗಳ ಸಾಲುಗಳ ಕಟ್ಟಿ..

ಕಣ್ಣುಗಳ ಕಾಂತಿಗೆ ಇಂದ್ರನ ಸುರಲೋಕವೆ
ಮಂಕಾಗಿರುವುದೇನೊ... ರಂಭೆ..ಊರ್ವಶಿ
ತಿಲೋತ್ತಮೆ..ಮೇನಕೆಯರ ನಾಟ್ಯವು
ಸೊರಗಿರಬಹುದೇನೊ...ಆ ಜೋಡಿ ತಾರೆಗಳ
ಹೊಳಪಿಗೆ ಚಂದ್ರನು ನಾಚಿ.. ಮೋಡದ
ಮರೆಯಲ್ಲಿ  ಅವಿತುಕೊಂಡಾನೇನೊ...

ಕೆಂದುಟಿಯ.. ಕೆಂಗುಲಾಬಿಯ ರಂಗಿಗೆ
ಪಾರ್ವತಿಯ ಹೂ ಬನವೆ ಬಡವಾಗಿವುದೇನೊ
ನಿನ್ನ ರೂಪವ ಸಾಕಾರಗೊಳಿಸಲೆಂದೆ ಏನೊ..
ಜಕಣಾಚಾರಿಯು ನಾಡಿನಾದ್ಯಂತ ಶಿಲೆಯ
ಕಲೆಯ ಬಲೆಯ ಹೆಣೆದನೇನೊ...

ನೀಳ ಕೇಶರಾಶಿಗೆ.. ಸ್ವಚ್ಛಂದ ಬಾನಲಿ
ಹಕ್ಕಿಗಳು ಹಾರುವುದ ಮರೆತು
ಮಲಗಿರಬಹುದೇನೊ.. ಹೀಗೆ ಆಗಿರಬೇಕು
ಅಲ್ಲವೆ ಚೆಲುವೆ..ಸೃಷ್ಟಿಯಲ್ಲಿ  ನಿನ್ನ ಅಂದಕೆ
ಬೇಲೂರ ಶಿಲಾಬಾಲಿಕೆಯರೇನು..
ಗಂಧರ್ವ ಕನ್ಯೆಯರು ಸಾಟಿಯೆ.. ನಮ್ಮ
ಕರುನಾಡ ಚಂದನದ ಚೆಲುವೆಗೆ...

ತಾಕದಿರಲಿ ಮಗಳೆ ನೀನಗಾರ ಕೆಟ್ಟ ಕಣ್ಣ ದೃಷ್ಟಿ

Thursday, June 29, 2017

ಕುರುಪಿ...

ನಾನೇಕೆ ಈ ವಸುಂಧರೆಯಲ್ಲಿ ಜನ್ಮಿಸಿದೇನೊ..?
ಜನ್ಮಿಸಿದರೂ... ಈ ಕುರುಪಿ ಬಾಳನು ವಿಧಿಯು
ನನಗೇತಕೆ ನೀಡಿತೊ...
ಕಾಮದ ಕಣ್ಣುಗಳಿಗೆ ಕುಕ್ಕುವ ಅಂದವನ್ನಾದರೂ..
ನನ್ನಲೇಕೆ ತುಂಬಿತೊ..
ಹೆತ್ತ ತಪ್ಪಿಗೆ ಹೆತ್ತೊಡಲುಗಳೆರಡು ದಿನವೂ
ಕಣ್ಣೀರಿನಲಿ ಕೈ ತೊಳೆಯುವ ಭಾಗ್ಯವನೇತಕೆ
ನೀಡಿತೊ..

ಹುಟ್ಟಿದಾಗ ಪುರಿಯಂತೆ ಉಬ್ಬಿದ್ದ ಕೆನ್ನೆಗಳ..ಎಣ್ಣೆಯ
ಹಚ್ಚಿ ತಿಕ್ಕಿ.. ತಿಕ್ಕಿ..ಕೆಂಪಗಾಗಿಸಿದ್ದ ಅಜ್ಜಿಯು
ಇಂದು ನನ್ನ ರೂಪವ ಕಂಡರೆ ಜೀವದಿಂದಿರುವಳೆ..
ಕಾಲೇಜಿಗೆ ಬರುವವರೆಗೂ ಅಮ್ಮನು.. ಮುಖಕ್ಕೆ
ನೋವಾಗುವುದೇನೊ ಎಂಬಂತೆ.. ಹತ್ತಿಯಿಂದ
ಮೆತ್ತಗೆ ಪೌಡರ ಹಚ್ಚಿ.. ಕಣ್ಣಿಗೆ ಕಾಡಿಗೆ ತೀಡಿ..
ಹಣೆಗೆ.... ಬಟ್ಟೆಗೆ ಹೊಂದುವಂತಹ ಬಿಂದಿಯನ್ನು ಹಚ್ಚಿ
ಗಲ್ಲಕೆ ದೃಷ್ಟಿಬೊಟ್ಟನಿಟ್ಟು.. ಹೇಳುತ್ತಿದ್ದಳು... ಎದುರಿಗೆ
ನಿಂತು ಲಟಿಕೆಯ ಮುರಿಯುತ್ತಾ... ನಿನ್ನನ್ನ ಹುಡುಕಿಕೊಂಡು
ಹತ್ತೂರ ಸರದಾರನೆ ಕಣೇ ಬರೊದು ಮದುವೆಯಾಗೋಕೆ
ಎನ್ನುತ್ತಿದ್ದ ನನ್ನ ಅವ್ವಳ ಕಂಗಳು ಸಹಿಸಿತೆ...ಹೆತ್ತ ಕರುಳು
ತಡೆದಿತೆ ಈ ಆಕಾರವ...
ಹತ್ತೂರಿನ ಸರದಾರನಿರಲಿ ಮನೆಯ ಮುಂದಿನ
ನಾಯಿಯು ಸಹ ಹೆದರುತ್ತಿದೆ ನನ್ನೆದುರು ಬರಲು
ಹೆಣ್ಣೆಂದು ಕಿಳಾಗಿ ಕಾಣದೆ.. ನನ್ನನು ಒಂದು ಗಂಡು
ಮಗುವಾಗಿ ಬೆಳಸಿ.. ಒಳ್ಳೆಯ ಅಭ್ಯಾಸವ ಕೊಡಿಸಿ
ನಿನ್ನ ಕಾಲಮೇಲೆ ನಿಲ್ಲುವಂತೆ ಮಾಡುವೆ ಮಗಳೆ
ಹೆಣ್ಣೆಂದರೆ ಅಸಹ್ಯಿಸುವ ಸಮಾಜವು ನಿನ್ನತ್ತ ತಲೆಯತ್ತಿ
ನೋಡುವಂತೆ ಮಾಡುವೆ ನೆಂದಿದ್ದ ತಂದೆಗೆ..
ನಾನೆ ಸಮಾಜದೆದುರು ಹೋಗಿ ನಿಂತರು...ಯಾರು
ತಲೆಯತ್ತಿ ನೋಡದ ಹಾಗಿದೆ ನನ್ನಿ ರೂಪ..
ಅಪ್ಪ.. ನೀನು ಒಂದು ಹೆಣ್ಣು ಹುಣ್ಣೆನ್ನುವವರ ಸಾಲಿಗೆ
ಸೇರಿದ್ದರೂ ಪರ್ವಾಗಿರಲಿಲ್ಲ.. ತಾಯಿಯ ಗರ್ಭದಲ್ಲೆ
ನನ್ನನು ಚಿವುಟಿಬಿಟ್ಟಿದ್ದರೆ ನಿಮಗೂ ನನಗೂ ಇಂದು
ಈ ವಿಷಮಸ್ಥಿತಿ ಬರುತ್ತಿರಲಿಲ್ಲ..

ಓ...ಕಾಮದ ಗಂಡೆ ನಿನ್ನ ವಿಕೃತ ಮನಸ್ಸಿನ
ಪ್ರೀತಿಯ ಒಪ್ಪಿಕೊಳ್ಳಲಾರದ್ದಕ್ಕೆ... ನಿನ್ನ ಕೆಟ್ಟ
ಮನಸ್ಸಿನ ಕಾರ್ಕೂಟಕ ವಿಷವನು ನನ್ನ ಮೊಗದ ಮೇಲೆಲ್ಲ
ಸುರಿದುಬಿಟ್ಟೆಯಲ್ಲ... ಅರಿವಾಗುವುದೊ ಗಂಡೆ.. ನಿನಗೆ
ನನ್ನ ಸಂಕಟವ..ಹನಿ ಹನಿಯು ನೀಡುವ ನರಕ ಯಾತನೆಯ
ಮೂರು ಹೊತ್ತು.. ನನ್ನ ಬದುಕಿನ ಅವಿಭಾಜ್ಯ ಅಂಗವೆ ಆಗಿದ್ದಂತಹ ಕನ್ನಡಿಯ ಮುಂದೆ... ನಾನಿಂದು ನಿಂತು ಸಿಂಗರಿಸಿಕೊಳ್ಳಬಲ್ಲೇನೆ.. ಗೆಳೆಯ ಗೆಳತಿಯರು ನನ್ನನು ಎದುರಿಸಿ ಮಾತನಾಡಬಲ್ಲರೆ.. ಅಂದವಿದ್ದಾಗಲೆ ತೀರಸ್ಕರಿಸಿ ಹೋಗುತ್ತಿದ್ದ ಮದುವೆಯ ಗಂಡುಗಳು..ಇನ್ನೂ ಈ ಚೆಲುವನು
ಮೆಚ್ಚುವರೆ.. ಬದುಕಿನ ಅಳಿದುಳಿದ ದಿನಗಳೆ.. ನನ್ನೊಡನೆ
ಜೊತೆಯಾಗಿರಲು ಅಸಹ್ಯಯಿಸುತಿರುವಾಗ... ಬದುಕಲೆ.?

ಬದುಕಬೇಕಿದೆ ಕಣೋ... ನಿಮ್ಮಂಥವರ ತಿದ್ದದೆ ಹಾದಿಯಲಿ
ಕೋಣಗಳ ಹಾಗೆ ಬೆಳೆಯಲು ಬಿಟ್ಟ ನಿನ್ನ ಹೆತ್ತವರಿಗೆ..
ನನ್ನಂಥವರ ಸಂಕಟವೆನೆಂದು ಅರಿವಾಗುವವರೆಗೂ..
ನನ್ನನು ಮಾತ್ರ ಮನೆಯ ಕತ್ತಲು ಕೋಣೆಯಲ್ಲಿ ಕುಳ್ಳರಿಸಿ
ನಿಮ್ಮಂಥ ಸಮಾಜಘಾತುಕರನ್ನು ಶಿಕ್ಷಿಸದೆ ಸುಮ್ಮನೆ ನೋಡುತ್ತ ಕೈ ಕಟ್ಟಿ ಕುಳಿತ ಸಮಾಜಕ್ಕೆ ಚಾಟಿಯ ಬೀಸುವವರೆಗೂ...
ನನ್ನಂಥ ನೂರಾರು ಅಬಲೆಯರ ಬಾಳಲಿ ಮತ್ತೆ
ಹೂ ನಗೆಯ ಅರಳಿಸುವವರೆಗೂ.. ನನ್ನ ತಂದೆ ಕಂಡ
ಕನಸಂತೆ ಈ ಸಮಾಜ ಮತ್ತೆ ನನ್ನತ್ತ ತಿರುಗಿ ನೋಡುವವರೆಗೂ.. ಬಾಳುವೆನು ಕಣೊ.. ಗಂಡೆ
ನೋಡುತಿರು.. ನೀನು ನನ್ನಂದದ ಎಸಳುಗಳನ್ನಷ್ಟೇ..
ಕಿತ್ತಿರುವುದು... ನನ್ನೊಳಗಿನ ನಗುವಿನ ಆತ್ಮವಿಶ್ವಾಸದ ಸುಗಂಧವನ್ನು ನಿನ್ನ ಕೈಲಿಂದ ಅಳಿಸಲಾಗದು..
ಬದುಕು ಬರಡಾಗಿರಬಹುದು ನಿನ್ನಿಂದ.. ನಿನ್ನಂಥವರ
ಮೆಟ್ಟಿ ನಿಲ್ಲುವೆನೆಂಬ ಮೊಗದ ಮೇಲಿನ ನಗುವ
ಅಳಿಸಲಾದಿತೆ ನಿನ್ನಿಂದ... ?

ನಿನ್ನದೆ ಒಲವಿನಲಿ

ಗೆಳೆಯ

ನಿನ್ನ ಮಾತುಗಳಿಲ್ಲದೆ ನನ್ನ
ಮನವಿದು ಮುದುಡಿ ಕೂತಿದೆ
ನಿನಗೆಂದೆ ತುಟಿಯಂಚಲಿ ಬಂದ
ಮಾತೊಂದು ಹೇಳದೆ ಸೋತು ನಿಂತಿದೆ

ಹೊತ್ತುಗಳು ನಲುಗುತಿವೆ
ನಿನ್ನದೆ ಕನಸುಗಳಲಿ..
ಕೂಡಿದ ಜಾಗಗಳು ಉರಿಯುತಿವೆ
ನಿನ್ನದೆ ನೆನಪುಗಳಲಿ...

ಗಾಳಿಗೆ ಆರಿದ ಪ್ರೀತಿಯ
ದೀಪದಂತಾಗಿದೆ ಮನವಿದು
ನೋಟದಲ್ಲಾದರು ಒಲವ ಕಿಡಿಯ
ಚಿಮುಕಿಸು... ಬೆಳಗಲಿ ಮತ್ತೆ ಮನವಿದು
ನಿನ್ನದೆ ಒಲವಿನಲಿ...

ನಿನ್ನದೆ ಒಲವಿನಲಿ

ಗೆಳೆಯ

ನಿನ್ನ ಮಾತುಗಳಿಲ್ಲದೆ ನನ್ನ
ಮನವಿದು ಮುದುಡಿ ಕೂತಿದೆ
ನಿನಗೆಂದೆ ತುಟಿಯಂಚಲಿ ಬಂದ
ಮಾತೊಂದು ಹೇಳದೆ ಸೋತು ನಿಂತಿದೆ

ಹೊತ್ತುಗಳು ನಲುಗುತಿವೆ
ನಿನ್ನದೆ ಕನಸುಗಳಲಿ..
ಕೂಡಿದ ಜಾಗಗಳು ಉರಿಯುತಿವೆ
ನಿನ್ನದೆ ನೆನಪುಗಳಲಿ...

ಗಾಳಿಗೆ ಆರಿದ ಪ್ರೀತಿಯ
ದೀಪದಂತಾಗಿದೆ ಮನವಿದು
ನೋಟದಲ್ಲಾದರು ಒಲವ ಕಿಡಿಯ
ಚಿಮುಕಿಸು... ಬೆಳಗಲಿ ಮತ್ತೆ ಮನವಿದು
ನಿನ್ನದೆ ಒಲವಿನಲಿ...

Wednesday, June 28, 2017

ಗೆಳೆಯ

ಗೆಳೆಯ
ನಿನ್ನ ನೆನಪುಗಳಲಿ ನನ್ನ
ದೇಹವಿದು ಮಿಂದೆದ್ದಿದೆ
ಕಾಯುತಿದೆ ತನುವಿದು
ನಿನ್ನ ಅಪ್ಪುವಿಕೆಯ ಬಿಸಿಗೆ

ಹಗಲೊಳು ನೆನಪುಗಳ
ಕಾಡಾಟದ ಸಂತೆ..
ಇರುಳೊಳು ನಿದಿರೆ ಹತ್ತಿಗೊಡದ
ನಿನ್ನ ಕನಸುಗಳದ್ದೆ ಚಿಂತೆ

ಬದುಕಿನ ತೋಟವಿದು
ಬರವಾಗಿದೆ ನೀನಿಲ್ಲದೆ
ಕಾದಿದೆ ನೀ ಸುರಿಸುವ
ಒಲವ ಸುಧೆಯ ಹನಿಗಳಿಗೆ

ತಿರುಗಬೇಡ ಹುಡುಗಿ ೪೩೧

ತಿರುಗಬೇಡ... ಹುಡುಗಿ
ತಿರುಗಬೇಡ...ಹುಡುಗನ
ಮೀಸೆಯಿನ್ನೂ ಚಿಗುರಿಲ್ಲ
ನನಗನ್ನಿಸುತ್ತೆ... ನಿನಗಿನ್ನೂ
ಹದಿನೆಂಟು ತುಂಬಿಲ್ಲ

Tuesday, June 27, 2017

ಅವಳು

ಅವಳು...
ಎನ್ನೆದೆಯಲಿ ಪ್ರೀತಿಯ ದೀಪವ
ಹಚ್ಚಿ...ನನ್ನನೆ.. ಬಿಟ್ಟು ಹೋದಳು
ಒಲವಿನ ಎಣ್ಣೆಯ ಸುರಿಸದೆ...
ಮರೆತು ನಡೆದವಳು..
ಮತ್ತೀಗ...
ಎನ್ನ ನೆನೆದು ಮರಳಿ ಬಂದಿಹಳು..
ಅವಳಿಲ್ಲದೆ... ವಿರಹದಲಿ ಎದೆಯ
ಹತ್ತಿಯಿದು ಸುಟ್ಟು ಬೂದಿಯಾದ
ಬಳಿಕ...

Monday, June 26, 2017

ಚು ೪೧೩

ಭಾವನೆಗಳು ಭಾರವಾಗಿ
ಬಿರುಕುಂಟಾಗಿರುವಾಗ
ಕಲ್ಪನೆಗಳು ಕದಡಿ
ಕಸವಾಗಿರುವಾಗ
ಕನಸುಗಳು ಕತ್ತಲಲೆ
ಕರಗಿರುವಾಗ...
ಬರೆಯಲೆ ನಾನು
ಏನನ್ನೀಗ...?

ನನ್ನ ಬಿಡುತಿಲ್ಲ

ಹೊತ್ತುಗಳು.... ಸರಿದವು
ಮುತ್ತುಗಳು.. ನೆನಪಾದವು
ಬಿಡುವ ಉಸಿರುಸಿರು... ಬಿಸಿಯಾಯ್ತು..
ನಿನ್ನ ನೆನೆ ನೆನೆದು.. ಆದರೂ ನೀ..
ಬರಲಿಲ್ಲ...
ನಿನ್ನ ನೆನಪುಗಳು ಮಾತ್ರ
ನನ್ನ ಬಿಡುತಿಲ್ಲ..

ಕಿರಣ್ ದೇಸಾಯಿ ಸರ್

ಯಾಕ ಮಾಂವ..
ಬೆಳಗಾಂವ ಕುಂದಾ ತರ್ತೀನಂತ
ಹೋದಾತ.. ಹಿಂಗ ನಿಂತ ನಿಂತಬಿಟ್ಟಿಯಲ್ಲ
ನಕ್ಕೊತ.. ಆ ನಿನ್ನ ನಗು ನನ್ನೆದಿಯಾಗ
ಪ್ರೀತಿ ರಾಗಾನ... ಮೀಟಾಕ್ಹತ್ತಾವು..

ಕಾದು.. ಕಾದು... ಹೊತ್ತಿನ ಕಾಲುಗಳು
ಸೋತ ಹೊಗ್ಯಾವು...
ಮುಂಜಾನಿಂದ ನಿನ್ನ ದಾರಿಕಾಯಕ್ಹತ್ತ
ಈ ಕಾಲುಗಳಿಗೆ... ನಿನ್ನ ಪ್ರೀತಿ ನನ್ನ ಕಾಲಿಗೆ
ನೂರಾನೆ ಬಲ ತುಂಬ್ಸಿ ಹುರುಪು ತಂದಾವು

ನಿನಗಂತ ಮಾಡಿದ್ದ.. ಕಡ್ಲಿಬ್ಯಾಳಿ ಹೊಳ್ಗಿ
ಗಂಗಾಳದಾಗ ಆರಿ ಕುಂತೈತಿ... ಅದರ
ಮ್ಯಾಲ ಹಾಕಿದ ಆಕ್ಳ ತುಪ್ಪ...ಹೆಪ್ಪಿ
ತಣ್ಣಗ ಮಲಗೈತಿ
ಕರ್ದ ಸೊಂಡ್ಗಿ...ಖಾರದ ಮೆಣಸಿನಕಾಯಿ
ತಂಡಿ ಗಾಳಿಗೆ ಮೆತ್ತಗಾಗ್ಯಾವು..

ಬೇಗ ಬಾರೊ.. ಮಾಂವ.. ಈ
ಆಷಾಡದ ಗಾಳಿ ನಿನ್ನ ನೆನಪಿನ
ಹಸಿ ಹೆಚ್ಚು ಮಾಡೊ ಮೊದ್ಲ..
ಕತ್ಲಾನ ಚುಕ್ಕಿ ಬೆಳಕ.... ತಲಬಾಗ್ಲ ತಟ್ಟಿ
ರಾತ್ರಿ ಕನಸಿಗೆ ಬಿಸಿ ತಟ್ಸೊ ಮೊದ್ಲ..
ಬಂದು ಬಿಡೊ... ಮಾರಾಯಾ..
ಈ ಕಾಯೊ ಕೆಲ್ಸಕ್ಕ ಕೊಡಿಸಿ ಬಿಡು
ನೀ... ವಿದಾಯ

Friday, June 23, 2017

ಚಿತ್ತಾರ

ಅವಳೊಂದಿಗೆ ಕಳೆದ
ದಿನಗಳ ನೆನಪಿನ
ಕಲೆಗಳೆ ಅಲ್ಲವೆ...
ಆ ಚಿಟ್ಟೆಯ ರೆಕ್ಕೆಯ
ಮೇಲಿನ ಚಿತ್ತಾರ..

ಆನಂದದಿಂದ

ಕಣ್ಣಲ್ಲೆ... ಕೊಲ್ಲುತಿದೆ
ನಿನ್ನ ಅಂದ
ನಿ ಹೀಗೆ ನಿಂತರೆ
ಸುಮ್ಮನೆ ಏನ್ಚಂದ
ನಕ್ಕುಬಿಡು ಹಾಗೆ ಮನವಿದು
ಅರಳಲಿ
ಆನಂದದಿಂದ

Thursday, June 22, 2017

ಕಾದು ಕಾದು

ಮತ್ತೆ.. ಮತ್ತೆ...
ನಿನ್ನ ಬಿಸಿಯಪ್ಪುಗೆಯ
ಅಪ್ಪುಗೆಗೆ ಕಾಯುತಿರುವ
ಈ ತೋಳುಗಳಿಗೆ ತಬ್ಬುಗೆಯ
ಹಸಿವನು ಹೆಚ್ಚಿಸದಿರು..
ನಿನ್ನ ತನುವಿನಪ್ಪುಗೆಗೆ
ಕಾದು.. ಕಾದು... ಕಾದ
ದೇಹವಿದು ಉರಿದು ಹೋಗುವ
ಮೊದಲೆ.. ಬಂದು ಸುರಿಸಿಬಿಡು
ನಿನ್ನ ಅಧರದ ತಂಪಿನ ಮಳೆ
ನಿನ್ನ ಮುತ್ತಿನ ಮಳೆಯಲಿ
ಹರಿದು ಹೋಗಲಿ.... ಈ
ಯೌವ್ವನದ ಹೊಳೆ

ಅವಳೆಂದರೆ

ಅವಳೆಂದರೆ....
ಈ ಬಾಳಲಿ ಎಂದಿಗೂ ಬತ್ತದ
ಪ್ರೀತಿಯ ಚಿಲುಮೆಯ ಚಿಮ್ಮಿಸುವವಳು
ಕಣ್ಣೊಳಗೆ ಎಂದು ಮಾಸದ ಬಣ್ಣ ಬಣ್ಣದ
ಕನಸುಗಳ ಕಟ್ಟಿಕೊಟ್ಟವಳು
ಬಾಳ ಹಾಳೆಯಲಿ ಎಂದೂ ವಿರಹದ
ಚುಕ್ಕಿಯು ಮೂಡದ ಹಾಗೆ.. ಒಲವ
ಸಾಲುಗಳ ಬರೆದವಳು

Wednesday, June 21, 2017

ಖಾಂಟೊ ೪೩೫

ಖಾಂಟೊಂಕೆ ಉಪರ್ ಪೈರ್
ರಖ್ಹೇತೊ.. ಆಂಖೊಮೆ.. ಆಂಸು
ಹೀ... ಆತೆ ಹೈಂ....

ಪ್ಯಾರ್ ಮೆ ಜಬ್ ದಿಲ್ ಬರ್
ಬಿಚಡ ಜಾಯೇ ತೊ...
ಜೀವನ್ ಮೆ ಆಂಸು ಕೀ
ನದಿಯಾ ಹೀ ಬೆಹ್ ಜಾತಿ ಹೈ

ಏನ ಹುಡ್ಗಿ

ಏನ ಹುಡ್ಗಿ..
ಉಟ್ಕೊಂಡ ನಿಂತಿಯಲ್ಲ.. ಒಂಬತ್ತ
ಮೊಳ್ದ ಇಳಕಲ್ ಸೀರಿ..
ಕೆಂಪ ಬಣ್ಣದ ಜಂಪರ ತೊಟ್ಟು
ಹಿಂಗ್ಯಾಕ ನೋಡ್ಲಾಕ ಹತ್ತಿ ನನ್ನ ಮಾರಿ..
ಆ ನೋಟಕ್ಕ ಸೋತ ಬರಬೇಕಾದಿತೇನ
ನಿನ್ನ ಹಿಂದಿಂದ... ನಾಲ್ಕ ಎಕರೆ ಎರಿ ಹೊಲ ಮಾರಿ

ಯಾಕೀಷ್ಟ ನಿನ್ನ ಕೈ ಬಳಿ ಸೊರಗಿಬಿಟ್ಟಾವು
ನಾ ಕೊಟ್ಟ ಗಾಜಿನ ಬಳಿ ಸಾಕಾಗಿಲ್ಲ ಅಂತೇನರ
ಕೈಗಳೇರಡು ಏನರ ಸೆಟಗೊಂಡ ಕುಂತಾವನು
ಕೊಳ್ಳಾಗಿನ ಸರ ಯಾಕೀಷ್ಟು ಮಬ್ಬಾಗೈತದು
ನಾ ಕೊಟ್ಟದ್ದು ನಕಲಿಯಂತ ಗೊತ್ತಾಗಿ
ಏನರ ಬ್ಯಾಸ್ರ ಮಾಡ್ಕೊಂಡಾವನವು

ಹಂಗ ಯಾಕ ನಿಂತಿ ನೀನು.. ನಾ ಕೊಟ್ಟ
ಕಳ್ಸಿದ ಮಲ್ಗಿ ದಂಡ್ಯಾಗ ಪ್ರೀತಿ ವಾಸ್ನಿ ಏನಾರ
ಕಮ್ಮಿಯಾಗೈತನು....
ನನ್ನ ಜೊತಿಗಿ ಮಾತಾಡಿಲ್ಲಂತ ಆ ತುಟಿಗೆ
ಹಚ್ಚಿದ ಬಣ್ಣ ಎಷ್ಟರ ಕಳೆಗುಂದೈತದು
ನಿನ್ನ ಮುಖದಾಗ ಕಳೆ ಇಲ್ಲದ್ದ ನೋಡಿ..
ಆ ಕತ್ಲುನು.. ಮತ್ತಷ್ಟು ಕತ್ಲಾಗೈತದು..

ನೀ... ಕತ್ಲಾಗ ನಿಂತ ಅತ್ರ... ನಿನ್ನ ಕಣ್ಣೀರ..
ಕಾಣ್ಸೊದಿಲ್ಲ ನನ್ಗ.. ಆದ್ರ ಅತ್ತು... ಅತ್ತು..
ಕೆಂಪಗಾದ ಕಣ್ಣಿನ ಕೊಳ... ನಿನ್ನ ಮನದಾಗಿನ
ನೋವು ಎಷ್ಟಂತ ಹೇಳಾಕ ಹತ್ತಾವು...

ಬರ್ತೀನ ಗೌಡ್ತಿ.. ನಿನ್ನ ಅಂಗಳಕ್ಕ..
ಕಾಮತ ಹೊಟ್ಲ್ ಮಸಾಲಿ ದ್ವಾಸಿ ತಗೊಂಡ
ಸಾವಜಿ ಅಂಗಡ್ಯಾನ ಶರಬತ್ ಬಾಟ್ಲಿ ತುಂಬ
ತುಂಬ್ಸಗೊಂಡ... ಕುಂಡ್ರೊಣ ಹುಡುಗಿ..
ಆ ಕೆರಿ ದಂಡಿ ಮ್ಯಾಲ..ನಿನಗ ತುತ್ತ ತಿನಿಸಿ..
ಮುನಿಸ ಮರೆಸಿ.. ಮಲಗ್ತೇನ ಹುಡುಗಿ ನಿನ್ನ
ಮಡಿಲಾಗ.. ಎದೆಹಾಲ ಕುಡ್ದ ಸಂಪಾಗಿ..
ತೊಟ್ಲದಾಗಿನ ಕೂಸು ಮಲ್ಗದಂಗ...

Tuesday, June 20, 2017

ಒಂಟಿ ಮಾಡದಿರು

ಗೆಳತಿ...
ನೀ..ಒಬ್ಬಳೆ ಏಕೆ....?
ಈ ಒಂಟಿ ದಾರಿಯಲ್ಲಿ ನಡೆದುಬಿಟ್ಟೆ
ನಿನ್ನ ಹೆಜ್ಜೆಗಳ ಹಿಂದೆ.... ನೆರಳಾಗಿ
ಬರುವೆನೆಂದವಳು.... ನನ್ನ ಮುಂದೆ
ನಿನ್ನ ನೆನಪಿನಾ ಹೆಜ್ಜೆಗಳ ಬಿಟ್ಟು ಹೋದೆ

ಒಡಗೂಡಿ ನೆಟ್ಟ ನಮ್ಮ ಪ್ರೀತಿಯ
ಸಸಿಗೆ.. ನಿನ್ನೊಲವಿನ ರಸಧಾರೆಯ
ಸೂಸದೆ ಒಣಗಿ ನಿಂತಿದೆ... ಮೊದಲೆ
ಅರಳಿ ನಿಂತ ಕುಸುಮಗಳು
ನಿನ್ನ ವಿರಹದ ತಾಪಕೆ ಕಮರಿಬಿಟ್ಟಿವೆ..

ನೋಡು ಎಲ್ಲೆಲ್ಲೂ.. ನಾವು
ಕುಳಿತು.. ಓಡಾಡಿದ ಜಾಗದಲ್ಲೆಲ್ಲ
ನೆನಪುಗಳೆ ಮಾತನಾಡುತ್ತಿವೆ..
ನೀ ನಕ್ಕ ನಗುವಿನ ಪ್ರತಿಧ್ವನಿಯು
ನನ್ನೆದೆಯ ಇರಿಯುತಿದೆ...

ನೀ ಮರಳಿ ಬರುವ ದಾರಿಯ
ಕಾಯುತಿದೆ ಈ ಒಂಟಿ ಹೃದಯ
ಇದರ ಬಡಿತಗಳು ನಿನ್ನ ನೆನಪಲಿ
ನಿಲ್ಲುವ ಮೊದಲೆ... ಬಂದು ಬಿಡು..
ಈ ಜಂಟಿ ಪಯಣದಲಿ.. ನನ್ನನೊಬ್ಬನನ್ನೆ
ಒಂಟಿ ಮಾಡದಿರು...

ಅರಿವಿಲ್ಲದಂತೆ

ಮೂಡಣದಿ ಮೂಡಿದ ರವಿಯು
ಕಗ್ಗತ್ತಲಿನ ಚಂದಿರನಿಗೆ ಹಾಜರಿ
ಹಾಕುವವರೆಗೂ... ಶಶಿಯು ಮತ್ತೆ
ಹೊಂಬೆಳಕಿನ ದಿನಕರನಿಗೆ ಹಾಜರಿಯ
ಹಾಕುವವರೆಗೂ..‌

ಈ ತೋಳಲಿ ಉಳಿದುಬಿಡು ಗೆಳತಿ
ಇನ್ನೊಂದು ಅರೆ ಘಳಿಗೆ

ಲತೆಯಲಿ ಮೊಗ್ಗರಳಿ.. ಮೊಗ್ಗುಗಳು
ಸುಮವಾಗಿ.. ಸುಮಗಳು ಗಂಧವ
ಸೂಸಿ...ಗಂಧವ ದುಂಬಿಯು ಹೀರಿ
ಸಂಜೆಗೆ ನಲುಗಿ ಹೂವು ಉದುರುವ
ವರೆಗಾದರೂ...

ಈ ತೋಳಲಿ ಉಳಿದುಬಿಡು ಗೆಳತಿ
ಇನ್ನೊಂದು ಅರೆ ಘಳಿಗೆ

ನಾ ಮುಡಿಸಿದ ಮಲ್ಲಿಗೆಯ
ಘಮವು ಮಾಸುವವರೆಗಾದರೂ
ನಿನಗೆ ಹೇಳುವ ಮನದ ಮಾತುಗಳು
ಮುಗಿಯುವವರೆಗಾದರೂ
ನೀ ಕೊಟ್ಟ ಈ ಕೆನ್ನೆಗೆ ಮುತ್ತಿನ
ಮತ್ತು ಇಳಿಯುವವರೆಗಾದರೂ

ಈ ತೋಳಲಿ ಮಲಗಿಬಿಡು ಗೆಳತಿ
ಜಗದ ಪರಿವಿಲ್ಲದಂತೆ...
ಘಳಿಗೆ ಅರೆ ಘಳಿಗೆಗಳ
ಅರಿವಿಲ್ಲದಂತೆ

ಬದುಕಿದ್ದೇನೆ ಬದುಕಬೇಕಲ್ಲ

ಹತ್ತು ದೇವರಿಗೆ ಹರಕೆ ಹೊತ್ತು
ಹೆತ್ತೊಡಲಿಗೆ ಹೊತ್ತು ಕೂಳಿಲ್ಲದೆ
ಬೀದಿಗೆ ತಳ್ಳಿದ ಕರುಳ ಬಳ್ಳಿಗಳು
ಕರುಳ ಕತ್ತರಿಸಿ ಜನ್ಮವನಿತ್ತವಳಿಗೆ
ಹೊತ್ತಿನೂಟಕು ಹೊರೆಯಾಗಿ
ಬಿಟ್ಟೇನೆ ಈ ಮಕ್ಕಳಿಗೆ..

ಅಂದು ಎನಗೆ ಭಾರವಾಗದ
ಈ ಕಾಯಿಗಳು.... ಇಂದು
ಈ ಕಾಯಿಗಳಿಗೆ ಬಳ್ಳಿಯೆ
ಭಾರವಾಗಿಬಿಟ್ಟಿದೆ..

ಹರೆಯ ಹರೆದು ಹೋಗಿ
ಸೌಭಾಗ್ಯ ಅಳಿಸಿಹೋಗಿ
ನಡುವು ನಿಲ್ಲದಾಗಿ.. ಕಣ್ಣು ಕಾಣದಾಗಿ
ನಿಮ್ಮ ತುಂಬು ಆಶ್ರಯದ ಬಯಕೆಯ
ಹೊಸ್ತಿಲಲಿ ನಾ ನಿಂತಿರುವಾಗ
ಕೈಗೊಂದು ನಿರ್ಜೀವ ಕಟ್ಟಿಗೆಯೆ..
ಆಸರೆಯಾಯಿತೆ ವಿನಃ...
ಅದನ್ನು ಕಡೆದು ಹಾಕಿದ ಬಲಶಾಲಿ
ಭುಜಗಳಾವವು ಕೈ ಹಿಡಿಯಲಿಲ್ಲ

ಹರಿಯುವ ನೀರು ಹೊಲಸಾದರೇನು..
ತಿಳಿಯಾದರೇನು.. ದಾಹನಿಂಗಿಸುವುದು
ಕಣ್ಣಲಿ ಬರುವ ಉಪ್ಪು ನೀರು ಕೇವಲ
ದುಃಖವ ನೀಗಿಸುವುದು...ಹಸಿವನ್ನು
ಇಂಗಿಸದು

ನರಜನ್ಮವು ಈ ಒಂದು ಜನ್ಮಕೆ
ಸಾಕೆನಿಸಿಬಿಟ್ಟಿದೆಯಲ್ಲ....
ಹಸಿವೆಯಂತು ಬೆನ್ನು ಬಿಡುತಿಲ್ಲ
ಸಾವಂತೂ ಸನಿಹ ಸುಳಿಯುತಿಲ್ಲ
ಬದುಕಿದ್ದೇನೆ ಬದುಕಬೇಕಲ್ಲ

Monday, June 19, 2017

ನಿನ್ನ ನೆನಪುಗಳು

ನಿನ್ನ ನೆನಪುಗಳು
ಕಡಲೊಳಗಿನ ಮುತ್ತುಗಳಂತೆ
ಆರಿಸಿ...‌ಆರಿಸಿ.. ಎಷ್ಟೇ
ಎತ್ತಿಟ್ಟರೂ.. ಒಂದರಲ್ಲೂ ಹುಳುಕಿಲ್ಲ
ಯಾವದೊಂದಕ್ಕಾದರೂ....
ಬೆಲೆ ಕಟ್ಟಲಾಗುತ್ತಿಲ್ಲ.. ನೋವ
ನೀಡುವ ಚಿಪ್ಪುಗಳಿಗಿಂತಲೂ
ಅದರೊಳಗಿನ ಮುತ್ತಿನ
ನೆನಪುಗಳು ಮಾತ್ರ ನಿನ್ನನು
ಕಿಂಚಿತ್ತೂ ಮರೆಸುತ್ತಿಲ್ಲ

ತುಂಟ ಮಾತು

ತುಂಟು ಕಂಗಳ ತುಂಟಾಟದ ಹುಡುಗಿ
ನಿನಗೇನು ಗೊತ್ತು.. ಈ ಬಡವನೆದೆಯ
ಮಾತು.. ಶಾಲೆಯ ರಜೆಯಲ್ಲಿ ಓಡಾಡಿದ
ನಮ್ಮ ವಠಾರದ ಬೀದಿಗಳಿಗೆ ಗೊತ್ತು...
ನಾಗಪ್ಪನ ಕಟ್ಟೆಯ ಸುತ್ತ ಸುತ್ತಾಟ ಆಡುವಾಗ
ಆ ಜೋಡು ಕಲ್ಲುಗಳಿಗೆ ಗೊತ್ತು..
ಆಲದ ಮರದ ಕೆಳಗೆ ಬಾರಿ ಹಣ್ಣನ್ನು
ಮಾರುತ್ತಿದ್ದ ... ಮೊಗದ ತುಂಬ ಕರಿಯ
ಕಲೆಗಳ ಹೊತ್ತಿದ್ದ ಅಜ್ಜಿಗೆ ಗೊತ್ತು..
ಆ ಮರದ ಹಿಂದಿನ ಬಾವಿಯ ಕಟ್ಟೆಯ
ಮೇಲೆ ಕುಳಿತು ಶಾಲೆಯ ಉಪ್ಪಿಟ್ಟಿನ
ಮೇಲೆ ಹಾಕಿದ ಖಾರಕೆ ಗೊತ್ತು..
ಚೌತಿಯಲ್ಲಿ ನಿನ್ನ ಗೆಳತಿಯರೊಡಗೂಡಿ
ಸಾರ್ವಜನಿಕ ಗಣಪನ ನೋಡಲಿಕ್ಕೆ
ಹೋದಾಗ ನಿನ್ನ ಹಿಂದಿಂದೆಯೆ ಅಲೆದದ್ದು
ನಿನ್ನ ಜಡೆಯ ಹೂವಿಗೆ ಗೊತ್ತು..
ಯೌವ್ವನಕೆ ಬಂದಾಗ... ನಿನಗೆಂದೆ
ಕದ್ದು ಮುಚ್ಚಿ ತಂದು ಕೊಟ್ಟ ಸಿಹಿಯಲ್ಲಿ
ಅಡಗಿತ್ತು..
ಕಾಲೇಜಿನ ಪ್ರವಾಸದಲ್ಲಿ .. ಉದ್ಯಾನವನದಲ್ಲಿ
ಊಟಕ್ಕೆ ಕುಳಿತಾಗ ನಿನಗೆ ಕೊಟ್ಟ ಪಲಾವ್ ದ
ಡಬ್ಬಿಯಲ್ಲಿತ್ತು...
ಕಾಲೇಜಿನ ಬೀಳ್ಕೊಡುಗೆಯ ಸಮಾರಂಭದಲ್ಲಿ
ನಿ... ಸೀರೆಯಲಿ ದೇವತೆಯಂತೆ ಕಂಡಾಗ
ಅವರಿವರು ನಿನ್ನಂದದ ಬಗ್ಗೆ ಮಾತನಾಡುವಾಗ
ನನ್ನ ಚಡಪಡಿಕೆಯಲ್ಲಿ ಅದು ನಲುಗಿತ್ತು
ಕೊನೆಯವರೆಗೂ.. ಉಳಿದೆ ಹೊಯ್ತು
ಮನಸಿನ ಮಾತು
ತುಂಟು ಕಂಗಳ.. ತುಂಟು ಚೆಲುವೆಯ
ತುಂಟ ನಗುವಲಿ ಮರೆತೆಹೋಯ್ತು
ಆ ತುಂಟಿಗೆ ಹೇಳುವ ಎರಡು ತುಂಟು ಮಾತು

ರಾಮನ ವಂಶಾವಳಿ

*ಶ್ರೀ ರಾಮಚಂದ್ರನ ವಂಶವೃಕ್ಷ*

*ಬ್ರಹ್ಮನ ಮಗ ಮರೀಚಿ*

*ಮರೀಚಿಯ ಮಗ ಕಾಶ್ಯಪ*

*ಕಾಶ್ಯಪರ ಮಗ ಸೂರ್ಯ*

*ಸೂರ್ಯನ ಮಗ ಮನು*

*ಮನುವಿನ ಮಗ ಇಕ್ಷ್ವಾಕು*

*ಇಕ್ಷ್ವಾಕುವಿನ ಮಗ ಕುಕ್ಷಿ*

*ಕುಕ್ಷಿಯ ಮಗ ವಿಕುಕ್ಷಿ*

*ವಿಕುಕ್ಷಿಯ ಮಗ ಬಾಣ*

*ಬಾಣನ ಮಗ ಅನರಣ್ಯ*

*ಅನರಣ್ಯನ ಮಗ ಪೃಥು*

*ಪೃಥುವಿನ ಮಗ ತ್ರಿಶಂಕು*

*ತ್ರಿಶಂಕುವಿನ ಮಗ ದುಂಧುಮಾರ.(ಯುವನಾಶ್ವ)*

*ದುಂಧುಮಾರುವಿನ ಮಗ ಮಾಂಧಾತ*

*ಮಾಂಧಾತುವಿನ ಮಗ ಸುಸಂಧಿ*

*ಸುಸಂಧಿಯ ಮಗ ಧೃವಸಂಧಿ*

*ಧೃವಸಂಧಿಯ ಮಗ ಭರತ*

*ಭರತನ ಮಗ ಅಶೀತಿ*

*అಶೀತಿಯ ಮಗ ಸಗರ*

*ಸಗರನ ಮಗ ಅಸಮಂಜಸ*

*ಅಸಮಂಜಸನ ಮಗ ಅಂಶುಮಂತ*

*ಅಂಶುಮಂತನ ಮಗ ದಿಲೀಪ*

*ದಿಲೀಪನ ಮಗ ಭಗೀರಥ*

*ಭಗೀರಥನ ಮಗ ಕಕುತ್ಸು*

*ಕಕುತ್ಸುವಿನ ಮಗ ರಘು*

*ರಘುವಿನ ಮಗ ಪ್ರವುರ್ಧ*

*ಪ್ರವುರ್ಧನ ಮಗ ಶಂಖನು*

*ಶಂಖನುವಿನ ಮಗ ಸುದರ್ಶನ*

*ಸುದರ್ಶನನ ಮಗ ಅಗ್ನಿವರ್ಣ*

*ಅಗ್ನಿವರ್ಣನ ಮಗ ಶೀಘ್ರವೇದ*

*ಶೀಘ್ರವೇದನ ಮಗ ಮರು*

*ಮರುವಿನ ಮಗ ಪ್ರಶಿಷ್ಯಕ*

*ಪ್ರಶಿಷ್ಯಕನ ಮಗ ಅಂಬರೀಶ*

*ಅಂಬರೀಶನ ಮಗ ನಹುಶ*

*ನಹುಶನ ಮಗ ಯಯಾತಿ*

*ಯಯಾತಿಯ ಮಗ ನಾಭಾಗ*

*ನಾಭಾಗನ ಮಗ ಅಜ*

*ಅಜನ ಮಗ ದಶರಥ*

*ದಶರಥನ ಮಗ ರಾಮ*

***************👏👏👏

Sunday, June 18, 2017

ಅಪ್ಪ

ಎರಡು ತಾಸು ತನ್ನ ಹೆಗಲ ಮೇಲೆ
ಹೊತ್ತುಕೊಂಡು ಬಯಲು ನಾಟಕವ
ತೋರಿಸಿದಾತ..
ಸೈಕಲ್ ಬಂಪರ್ ಮೇಲೆ ಟವೆಲ್ ಹಾಕಿ
ಕುಳ್ಳರಿಸಿಕೊಂಡು ದವಾಖಾನೆಗೆ ಕರೆದುಕೊಂಡು
ಹೋಗಿ ನನ್ನೆರಡು ಕೈ ಕಾಲುಗಳ ಗಟ್ಟಿಯಾಗಿ ಹಿಡಿದು ಸೂಜಿಯನು ಚುಚ್ಚಿಸಿದಾತ..
ಶಾಲೆಗೆ ಹೋಗದ ಬೆನ್ನಿಗೆ ಬಾಸುಂಡೆಗಳ
ಬರೆಸಿದಾತ...
ನೊಂದು.. ಶಾಲೆಯ ಹತ್ತಿರ ಬಂದು ವಾಟೆಯ
ತುಂಬ ಹಾಲು ತಂದು ಕೊಟ್ಟಾತ..
ಹತ್ತು ದಿನದ ಎನ್ ಎಸ್ ಎಸ್ ಕ್ಯಾಂಪ್ ಗೆ
ಹೋದಾಗ.. ಎರಡೆ ದಿನಕ್ಕೆ ಇಪ್ಪತ್ತು ಪುರಿ
ಚಟ್ನಿಯ ತಂದು ಕೊಟ್ಟು ಮಾತಾಡಿಸಿದಾತ..
ಹೊಲದಲ್ಲಿ ಬಿಸಿಲ ತಾಪ ನನಗಾಗದೆಂದು
ಬೇವಿನ ಮರದಡಿಯಲ್ಲಿ ಬಲವಂತವಾಗಿ
ಕುಳ್ಳರಿಸಿ ತಾ ದುಡಿಯುವಾತ..
ಟೈಫಾಯ್ಡ ಆದಾಗ... ತನ್ನ ಅಂಗಡಿಯ ಕೆಲಸದಲ್ಲೂ
ಹಗಲಿರುಳು ನನ್ನ ಆರೈಕೆಯ ಮಾಡಿದಾತ
ಸಿಡಿಲು ಬಡಿದು ಕೂದಲೆಳೆಯಲಿ ಪಾರಾದ
ನನ್ನೆದುರು ಎರಡು ದಿನ ಕೈ ಹಿಡಿದುಕೊಂಡೆ
ಕುಳಿತಾತ....
ಅಪ್ಪ.. ನಿನ್ನೊಲವಿಂದಲೆ ಈ ಬದುಕಪ್ಪ

ತವರಿಗೆ

ನೀ ಕೊಟ್ಟು ಹೋದ
ಮುತ್ತಿನ ಮಳೆಗಳ
ಮತ್ತೆ... ಇಳಿದಿಲ್ಲವಿನ್ನೂ
ಆಷಾಡವು ಕೂಡುವ
ಮೊದಲೆ... ಇನ್ನಷ್ಟು
ಮುತ್ತುಗಳ ಮಳೆಯ
ಸುರಿಸಿ ಹೋಗಬಾರದೆ
ತವರಿಗೆ...

ಬಾಳಿನ ಗೂಡು

ನನ್ನವಳ
ನಗೆಯಲೊಂದು ಮಿಂಚಿಹುದು
ಮನದ ಮೌನಕೆ
ನವಿರಾದ
ಮಾತುಗಳ ಕಲಿಸುವುದು

ನನ್ನವಳ
ತೋಳಿನಲ್ಲಿವುದು
ಬದುಕಿನ ಜಂಜಾಟಗಳ
ಮರೆಸಿ
ಸ್ವರ್ಗವ ತೋರಿಸುವುದು

ನನ್ನವಳ
ಮಾತಿನಲ್ಲುಂಟು
ಸುಮದೆದೆಯ ಘಮವು
ಮೋಹಕವಾಗಿ
ಸೆಳೆಯುವ ನುಡಿಗಳಿಹುದು

ನನ್ನವಳ
ಕಾಲ್ಗೆಜ್ಜೆಯಲ್ಲಿಹುದು
ಎದೆಯ ವೀಣೆಯ ಮೀಟಿ
ಒಲವಿನ
ರಾಗವ ನುಡಿಸುವುದು

ನನ್ನವಳ
ಜೊತೆಯೊಂದಿಗಿನ
ಬದುಕಲುಂಟು ಸವಿಜೇನ
ತುಂಬಿದ
ಬಾಳಿನ ಗೂಡು

ಅಪ್ಪನಿಗೊಂದು ದಿನ

ಅಪ್ಪನಿಗೊಂದು ದಿನವಂತೆ....

ಈ ಭರತಖಂಡದಲ್ಲಿ.... ಈ ಪುಣ್ಯಭೂಮಿಯಲ್ಲಿ
ಹೆತ್ತ ತಪ್ಪಿಗೆ... ಸಾಕಿ ಸಲುಹಿ.. ಎದೆಯುದ್ದ ಬೆಳಸಿ
ನೌಕರಿಯೊ.. ಸ್ವಂತ ಉದ್ಯೋಗವೊ... ಒಕ್ಕಲುತನ
ವನ್ನು ಹೀಗೆ ದುಡಿದುಣ್ಣಲು ಹಚ್ಚಿ... ಬದುಕಿನ ಬಂಡಿಗೆ
ಒಂದು ತುಂಬು ಸಂಸಾರದ ಹೆಣ್ಣನ್ನು ತಂದು...ನಿನಗೆ
ಜೋಡಿಯನ್ನಾಗಿಸಿ... ಬೆಚ್ಚನೆ ಹೂ ಹಾಸಿಗೆಯ ಮೇಲೆ
ನಿಮ್ಮ ಮಲಗಿಸಿ.. ತಾ ನೆಮ್ಮದಿಯ ಮನಸೊಂದಿಗೆ
ಮನೆಯ ಜಗಲಿಯೊ... ಮಾಳಿಗೆಯೊ...ಅಂಗಳದಲೊ
ಊರ ಮುಂದಿನ ಗುಡಿಯ ಕಟ್ಟೆಯ ಮೇಲೆಯೊ..
ಮಲಗುವ ಅಪ್ಪನಿಗೆ.... ಈ ಒಂದು ದಿನದಲ್ಲಿ ಇಷ್ಟು
ವರ್ಷಗಳ ಅವನ ಕಸುವಿನ ದಿನಗಳಿಗೆ ಬೆಲೆ ಕಟ್ಟಲಾದಿತೆ
ಅರಳಿದ ನಾಕು ಕೆಂಗುಲಾಬಿ.. ಹೊಸ ಬಟ್ಟೆ ಬರೆಗಳ
ಕೊಡಿಸಿಬಿಟ್ಟರೆ ತೀರಿಬಿಡುವುದೆ ಋಣ...

ಏನಾಗಿದೆ... ನಮಗೆ ? ಏಕೆ ಪಾಶ್ಚಾತ್ಯ ಸಂಸ್ಕೃತಿಯೆ
ನಮ್ಮ ದೇಹದಲಿ ಹೊಕ್ಕ ಭೂತಗಳಂತೆ ಆಡುತ್ತಿದ್ದೇವೆ..
ಇದೊಂದೆ ದಿನಕೆ ಸೀಮಿತವೆ... ತಂದೆಯ ಸಾಧನೆಗಳ..
ಅವನ ಮೇಲಿರುವ ಪ್ರೀತಿಗಳ ವ್ಯಕ್ತಪಡಿಸುವುದಕ್ಕೆ
ಯಾಕೆ ?  ತಂದೆಯ ವಚನಕ್ಕಾಗಿ ನವವಧುವಿನ
ಜೊತೆಯಲಿ ಕಾಡಿಗೆ ನಡೆದ ರಾಮನ.. ತಂದೆಯ
ಆಜ್ಞೆಯ ಮೇರೆಗೆ ಹೆತ್ತ ತಾಯಿಯ ರುಂಡವ ಚೆಂಡಾಡಿ
ಮತ್ತೆ ತಾಯಿಗೆ ಮರುಜೀವ ಕರುಣಿಸು ಎಂದು
ಪರಶುರಾಮನ.. ಪ್ರತಿಯೊಬ್ಬರ ಜೀವನದ ಅತಿ ಮಧುರ
ಮಧು ತುಂಬಿದ ರಾತ್ರಿಯ ಹೊಸ್ತಿಲಲ್ಲಿ... ತಂದೆ
ಯಯಾತಿ ಮಗ ಪುರನ ಯೌವ್ವನವನೇ ಬೇಡಿದಾಗ
ತಿರುಗಿ ಮಾತನಾಡದೆ ಯೌವ್ವನವ ಧಾರೆಯೆರೆದ..
ಇಂತಹ ಮಹಾನ್ ಪುತ್ರರಿಗೆ ಜನ್ಮವಿತ್ತ ಭೂಮಿಯಲ್ಲಿ
ಅವರ ಆದರ್ಶಗಳ ಎದೆಯಲ್ಲಿ ಬಿತ್ತಿಕೊಂಡು ಜೀವನ
ಪೂರ್ತಿ ಬಾಳಿ... ಹೊರಲೋಕಕ್ಕೆ ಭವ್ಯ ಭಾರತದ
ತಂದೆ ಮಕ್ಕಳ ಅನುಬಂಧವ ಸಾರುವದ ಬಿಟ್ಟು...

ಅರವತ್ತರ ಇಳಿ ವಯಸ್ಸಿನಲ್ಲೂ... ಅವನನ್ನು ಹೊರಗೆ
ದುಡಿಯಲು ಕಳಿಸುವ.. ಊಟ ಹಾಕದೆ ಹಸಿವಲಿ
ಬಳಲಿಸುವ... ದುಡ್ಡು ದುಡ್ಡೆಂದು ನಗರಗಳಿಗೆ ಬಂದು
ಹೆಂಡತಿ ತನ್ನೆರಡು ಮಕ್ಕಳೊಂದಿಗೆ ಆರಾಮವಾಗಿ
ಬದುಕುತಿರುವ ಇಂದಿನ ಪೀಳಿಗೆ.. ಕುಳಿತರೆ ಎದ್ದು
ನಿಲ್ಲಲಾಗದ.. ಮಲಗಿದರೆ ಎದ್ದು ಕುಳ್ಳಿಸಲು ಆಗದ
ದೇಹಕ್ಕೆ ಜ್ವರ ಬಂದು ಮಲಗಿದಾಗ ನೋಡಿಕೊಳ್ಳಲು
ಅವರ ಪಕ್ಕದಲಿ ಇಲ್ಲದಿದ್ದಾಗ ಆ ಹಿರಿಜೀವ ಎಷ್ಟು
ನೊಂದಿತು... ತಿಂಗಳು ತಿಂಗಳು ಹಣವು ಖಾತೆಗೆ
ಹಾಕಿ ಕುಳಿತುಬಿಟ್ಟರೆ ನಾವು.. ಆ ಹಣವ ತರಲಿಕ್ಕಾದರೂ
ಆ ನಡುಗವ ಕೈಗಳೊಂದಿಗೆ ಬ್ಯಾಂಕ್ ಮೆಟ್ಟಿಲುಗಳ ಹತ್ತಿ
ಸರತಿ ಸಾಲಿನಲಿ ನಿಂತು ಹಣವ ಪಡೆದು ಬರುವ
ಹೊತ್ತಿಗೆ.... ಆ ಜೀವಕೆ ಮತ್ತೆ ನಿಮ್ಮನು ಹಡೆದು..
ಬೆಳಸಿ.. ನಿಮ್ಮ ಕಾಲ ಮೇಲೆ ನಿಲ್ಲಿಸಲು ಪಟ್ಟ ಕಷ್ಟದಷ್ಟು
ಕಷ್ಟವುಂಟಾಗುತ್ತದೆ...

ತಂದೆ ನಿನಗೆ ನಾ ರಾಮನಾಗಲಾರೆ.. ಪರಶುರಾಮನೂ
ಆಗಲಾರೆ.. ಪುರನೂ ಆಗಲಾರೆ.... ನಿನ್ನ ಮುಸ್ಸಂಜೆಯ
ದಿನಗಳಿಗೆ ಊರುಗೋಲಾಗಿರುವೆ... ಇಷ್ಟೇ ನನ್ನ ಕೊಡುಗೆ

ಮುಂದೊಂದು ದಿನ ಅವಿಭಕ್ತ ಕುಟುಂಬ ದಿನಾಚರಣೆ
ಬರುವ ದಿನವು ದೂರ ಉಳಿದಿಲ್ಲ...

Friday, June 16, 2017

ಅವಳೊಲುಮೆ

ಅವಳ ಪ್ರೀತಿಯ ಕಡಲಲಿ
ನಾವಿಕನಾಗಲೆಂದೆ ಏನೋ..
ಈ ಪ್ರೇಮಲೋಕದಲಿ ನಾ
ಜನಿಸಿದ್ದು..

ಪ್ರೀತಿಯ ಬರ ಬಿದ್ದ ಬೀದಿಗಳಲಿ
ಇವಳ ಎನ್ನೆದೆಯ ಸಿಂಹಾಸನದಿ
ಆಸಿನಿಸಿ... ಹೊತ್ತು ತಿರುಗುವ ಪ್ರೇಮಿ
ಯಾಗಲೆಂದೊ ಏನೋ...
ಅವಳಿಗೆ ನಾ ದಾಸನಾಗಿದ್ದು..

ಒಣಗಿ ಕೊರಡಾಗಿ ನಿಂತಿದ್ದ
ಮನದ ಮರಕೆ.. ಪ್ರೀತಿಯ
ಚಿಗುರೆಲೆಗಳ ಜೀವವ ತುಂಬಲೆಂದೆ
ಬಂದ ಜೀವ ಗಂಗೆಯೇನೊ...

ಕನಸುಗಳೆ ಇಲ್ಲದ ಕಳೆಯುವ
ರಾತ್ರಿಗಳಿಗೆ ಹೊಸ ಕಲ್ಪನೆಗಳ
ಕತ್ತಲು ಹೊಲಕೆ ಬಿತ್ತಲು ಬಂದ
ದೇವತೆಯೇನೊ..

ಅವಳೊಂದು ಬದುಕಿಗೆ ಚಿಲುಮೆ
ಬಾಳ ಪಯಣದಲೊಂದು ಸುಂದರ ಪ್ರತಿಮೆ
ತೋರುತಿಹಳು ಅದೇಷ್ಟು ನನಗೆ ಒಲುಮೆ
ಇವಳ ಒಲವಿನಲಿ ನಾನೆಂದು ಆರದ ಕುಲುಮೆ

ಕಣ್ಣೀರು ನಿಲ್ಲಲಿಲ್ಲ

ಅವಳಿಗೆ ಹೇಳುವ ಮಾತುಗಳೆಲ್ಲವು
ತುಟಿಯಂಚಲಿ ಬಂದು ನಿಂತರು..
ಮೌನವು ಸಮ್ಮತಿಸಲಿಲ್ಲ ....
ಅವಳು ಬಿಟ್ಟು ಹೋದ ಘಳಿಗೆಯಲಿ
ಎಷ್ಟೇ ತಡೆಹಿಡಿದರೂ..
ಕಣ್ಣೀರು ನಿಲ್ಲಲಿಲ್ಲ...

Thursday, June 15, 2017

ನೀನಿಲ್ಲದ ವಿರಹ

ಘಳಿಗೆ ಅರೆಗಳಿಗೆಗೂ ನನ್ನ
ಕಾಡಿಸಿ ಪಿಡಿಸಿ ನಿನ್ನಂದದ
ವರ್ಣನೆಗೆ ಸಾಲುಗಳ ಬರೆಸಿಕೊಂಡು
ಪ್ರತಿ ಪದಗಳ ಅಮೃತದ ಸವಿಯಂತೆ
ಸವಿದವಳು.. ನೀನೆ ಅಲ್ಲವೆ ?

ಬೆಳಿಗ್ಗೆ ದೇವಸ್ಥಾನ.. ಮದ್ಯಾಹ್ನಕ್ಕೆ
ಸಿನಿಮಾ... ಸಂಜೆಗೆ ಉದ್ಯಾನವನ
ಹೀಗೆ ಹೊತ್ತು ಹೊತ್ತುಗಳಲಿ ನನ್ನೊಡಗೂಡಿ
ನಮ್ಮ ಪ್ರೀತಿಗೆ ಮಧುರ ಕ್ಷಣಗಳ
ತುಂಬುತ್ತಿದ್ದವಳು ನೀನೆ ಅಲ್ಲವೆ ?

ಮನೆಯ ಜಂಜಾಟಗಳ ತಲೆ
ನೋವಿಗೆ.... ನಿನ್ನ ಮಡಿಲಲಿ ಮಲಗಿಸಿಕೊಂಡು
ಹಣೆಯ ತಿಕ್ಕುತ... ಕೈ ಬೆರಳುಗಳ
ನನ್ನ ತಲೆಗೂದಲಿನಲಿ ಓಡಾಡಿಸುತ
ನೋವನ್ನು ಮರೆಸುತ್ತಿದ್ದವಳು
ನೀನೆ ಅಲ್ಲವೆ ?

ಇಳಿಸಂಜೆ ಹೊತ್ತಿನಲಿ ನಿನ್ನ
ಮನೆಯ ಮುಂದೆ ಬಿಟ್ಟು ಹೊರಡುವಾಗ
ನನ್ನ ಕೈ ಹಿಡಿದು ತಡೆದು... ಹಣೆಗೆ
ಸಿಹಿ ಮುತ್ತನಿತ್ತು... ನಾಳಿನ ಕನಸು
ಗಳಿಗೆ ರೆಕ್ಕೆಯ ಕಟ್ಟುತ್ತಿದ್ದವಳು
ನೀನೆ ಅಲ್ಲವೆ ?

ಆ ಒಂಟಿ ಮರದ ಕೆಳಗೆ.. ನನ್ನೆದೆಯ
ಮೇಲೆ ಮಲಗಿ.. ನನ್ನೆದೆಯ ರೋಮಗಳನು
ನಿನ್ನ ತುದಿ ಬೆರಳಿಂದ ಸುತ್ತುತ್ತ.. ನೀನಿಲ್ಲದೆ
ನಾ ಹೇಗೆ ಬದುಕಲಿ... ನೀನಿಲ್ಲದೆ ಕ್ಷಣಗಳ
ಹೇಗೆ ಕಳೆಯಲಿ ಎಂದು ಹೇಳುತ್ತಿದ್ದವಳು
ನೀನೆ ಅಲ್ಲವೆ ?

ನೀನೆ ನನ್ನದೆಲ್ಲವಾಗಿದ್ದಾಗ ಈಗಿಲ್ಲವಾದೇಕೆ
ಜಾರಿದೆ ಹೇಗೆ ನೀನು ನನ್ನ ಪ್ರೀತಿಯ ಲೋಕದಿಂದ
ಎಲೆಯ ಮೇಲೆ ಕುಳಿತ ಮುತ್ತು ಕರಗಿದಂತೆ
ಹುಟ್ಟು ಕಳೆದ ದೋಣಿ ನಡು ನೀರಿನಲಿ ನಿಂತಂತೆ

ತೀರಿತೆ ನಿನ್ನ ಪ್ರೇಮದ ಮೋಹ
ಹೊತ್ತಿಸಿ ಎನಗೆ ಪ್ರೇಮದ ದಾಹ
ಬತ್ತಿಸಿ ಬದುಕಿನದೆಲ್ಲದರ ಉತ್ಸಾಹ
ನೀಡಿಬಿಟ್ಟೆಯಲ್ಲ ಬಾಳಿನುದ್ಧಕೂ
ನೀನಿಲ್ಲದ ವಿರಹ...

ನನ್ನುಸಿರಿದು

ಎನ್ನೆದೆಯ ಪ್ರೀತಿಗೆ ತುಂತುರು
ಮಳೆ ಹನಿಯ ಒಲವ
ಸುರಿಸೆಯಾ...
ಕಾದು ಸೋತ ಬಂಜರು
ಭೂಮಿಯಿದು  ತಣಿಸೆ
ಹನಿ ಹನಿಯಾಗಿಯಾದರೂ
ಉಸುರಲಿ ನಿನ್ನ ಹೆಸರಲಿ
ನನ್ನುಸಿರದು

ನನ್ನ ಮದುವೆ

ನನ್ನ ಮದುವೆ...

ಕಾಡಿ ಬೇಡಿ..ನಾ ಹೋಗಿ ಬರುವ
ದಾರಿಯಲಿ.... ಹೂ ನಗೆಯ ತುಂಬಿ
ನನಗೆ ಎದುರಾಗುವನು... ದಾರಿಯ
ಕೊನೆಯ ತಿರುವಿನಲ್ಲಿ ಅವನ ಪ್ರೀತಿಗೆ
ಮತ್ತಷ್ಟು ಕೆಂಬಣ್ಣವ ಹೊತ್ತು ... ನನಗೆಂದೆ
ಎರಡು ಸಾಲು ಬರೆದಿಟ್ಟ ಹಾಳೆಯ ಮೇಲೆ
ಮಲಗಿದ ಗುಲಾಬಿಯು ಸಿಗುವುದು...
ಅದನ್ನು ಎದೆಗವುಚಿ... ಯಾರಿಗೂ ಕಾಣದ
ಹಾಗೆ ಮನೆಗೆ ಬಂದು ಕೋಣೆಯ ಬಾಗಿಲು
ಮುಚ್ಚಿ.... ಅಕ್ಕನೊ... ತಮ್ಮನೊ.. ಅವ್ವನೊ
ಅವರೆಲ್ಲರ ಕಣ್ಣು ತಪ್ಪಿಸಿ ಆ ಪತ್ರವ ಓದುವಾಗ
ನಮ್ಮಿಬ್ಬರ ಮುಂದಿನ ಬಾಳನು ಕುರಿತು...
ನನ್ನನು ನಡೆಸಿಕೊಳ್ಳುವ ಪರಿ... ಭವಿಷ್ಯದ
ಬಗ್ಗೆ ಅವನು ಕಟ್ಟಿಕೊಂಡಿರುವ ಕನಸುಗಳನ್ನೆಲ್ಲವ
ಓದಿ...  ಮನೆಯವರೆಲ್ಲರನ್ನೂ ಎದುರಿಸಿ ಇವನ
ಮದುವೆಯಾಗಲೆ....?

ಉಬ್ಬು ಹಲ್ಲಿನ... ದಪ್ಪ ಹೊಟ್ಟೆಯ.. ಕರಿಮೊಗದವನ
ಮೇಳುಗಣ್ಣಿನ... ತಲೆಯೆ ಅರ್ಧ ಮರಭೂಮಿಯಾಗಿರುವ
ಮೈತುಂಬ ಸರ್ಕಾರಿ ನೌಕರನೆಂಬ ಹುಂಬುತನವನ್ನೆ
ತುಂಬಿಕೊಂಡಂತಹ ಅಪ್ಪನು ತೋರಿಸುವ ವರನೆದುರಿಗೆ
ಮನಸ್ಸಿಲ್ಲದೆ ಮಲ್ಲಿಗೆ ಮುಡಿದು... ಹುರುಪಿಲ್ಲದೆ ಹೊಸ
ಸೀರೆಯ ತೊಟ್ಟು .... ಮನದ ನೋವು ಮೊಗದಲಿ
ಮೂಡದಂತೆ ಬಣ್ಣವ ಹಚ್ಚಿ ಮಾರಾಟಕ್ಕಿಟ್ಟ ಬೊಂಬೆಯಂತೆ
ಕುಳಿತುಕೊಂಡು... ಅವರು ಕೇಳಿದ ದರಕ್ಕೆ ನಮ್ಮ
ಮನೆಯವರು ಒಪ್ಪಿ ನನ್ನನು.. ಆಸೆಗಳಿಲ್ಲದ ಅರಮನೆಯ
ರಾಣಿಯಾಗಲು ಮದುವೆಯಾಗಲೆ ..?

ನನಗಿಲ್ಲವಾಗಿದೆ ನನ್ನ ಮನದೊಡೆಯನ ಆರಿಸುವ
ನಿರ್ಧಾರ... ನಿನಗೆ ಅಡುಗೆ ಬರುತ್ತದೆಯೆ.. ನೃತ್ಯ..
ಗಾಯನ... ಉತ್ತಮ ವಿದ್ಯಾಭ್ಯಾಸ.. ಒಳ್ಳೆಯ ಎತ್ತರ
ಕೇಸರಿಯ ಹೊತ್ತಿರುವಂತ ಮೈ ಬಣ್ಣ.. ಅವರೆಲ್ಲ
ಬಂಧು ಬಳಗದವರೊಂದಿಗೆ ಹೊಂದಿಕೊಂಡು
ಹೋಗುವಂತ ಗುಣ...‌ಗುಣಗಳ ಗಣಿತವನೆ ಮಾಡಿ
ಕೊಂಡುಕೊಳ್ಳುವರು ನನ್ನನು.. ಹಾಗೆ ಸುಮ್ಮನೆನಲ್ಲ
ಹಣವ ಪಡೆದುಕೊಂಡು....

ನನ್ನ ದೇಶದ ವಿಪರ್ಯಾಸವೆಂದರೆ....
ಮಾತು ಬರದ... ಮೂರಿದು ಬೀಳುವ..‌. ಸುಟ್ಟು
ಕರಕಲಾಗುವ..ನೀರ್ಜಿವ ಚೆಂದದ ಗೊಂಬೆಗೆ
ಹಣವ ಕೊಟ್ಟು ಕೊಂಡು ತರುವರು....
ಜೀವವಿದ್ದು... ನಿಮ್ಮೆಲ್ಲರ ಮನಸ್ಥಿತಿಯನರಿತು
ಅಡುಗೆ ಮಾಡುವ.. ಮಕ್ಕಳು ಹೇರುವ
ಬಾಳಿನೂದ್ದಕು ನಿಮ್ಮ ಕಷ್ಟ ಸುಖಗಳಲಿ ಭಾಗಿಯಾಗುವ
ಈ ದೇಹವನು ಹಣವ ಪಡೆದು ಕರೆದೊಯ್ಯುವಿರಲ್ಲ...

ನಾನು ಒಂದು ಜೀವವಿಲ್ಲದ ಬೊಂಬೆಯಾಗಿಬಿಡಲೆ ?