Sunday, June 11, 2017

ಹುಟ್ಟಿದೆ ಒಂದು ಕವಿತೆ

ಜಗವ ಗೆದ್ದು ತರುವ.. ಎದುರಾಡಿದ
ಗಂಡುಗಳ ರುಂಡವ ಚೆಂಡಾಡಿ ತರುವ
ಪಂಚ ಪಾಂಡವರು ಪಾಂಚಾಲಿಗಿದ್ದರೂ..
ಸಭೆಯಲಿ ಸೆರಗಿಗೆ ಮೈದುನನೆ.. ಕೈ ಹಾಕಿದಾಗ,
ಹುಟ್ಟಿದೆ ಮನದಾಗ್ನಿ ಕುಂಡದಳೊಂದು ಕವಿತೆ

ವನವಾಸಗಳ ಮೇಲೆ ವನವಾಸವ ಅನುಭವಿಸಿ....
ಅರ್ಧ ಬದುಕೆಲ್ಲ ಪತಿಯಿಂದ
ದೂರವೆ ಉಳಿದು... ಬದುಕುವ ಸ್ಥಿತಿಯ
ತಂದ ವಿಧಿಯ ನೆನೆದು, ಹುಟ್ಟಿದೆ ಅವಳ
ಮನದ ಗರ್ಭದೊಳಗೊಂದು ಕವಿತೆ

ಮೈ ದುಂಬಿ ಹರಿಯುವ ಯಮುನೆಯ
ತೀರದಲಿ, ಸೀರೆ ಕದ್ದ ಕಳ್ಳನಿಗಾಗಿ ಕಾದು..
ಕಾದು.. ಪ್ರೀತಿಯಲ್ಲಿ, ಬರಿ ವಿರಹ ದಾಹವನೆ
ಹೊಂದಿದಂತ, ರಾಧೆಯ ಮನದ ಕೊಳದಲೊಂದು
ಚಿಮ್ಮಿದೆ ಕವಿತೆ

ಹುಟ್ಟಿದ ಕವಿತೆಗಳಿಗೆಲ್ಲ ಕಿವಿಯಾಗುವರಾರು...?
ಅವರ ಮನದ ನೋವುಗಳ ಮರೆಸಿ...
ಹೊಸ ರಾಗವ ಹಾಡುವರಾದರು ಯಾರು..?
ಎಲ್ಲರೂ... ಜಗದೊದ್ಧಾರಕರೆ...!!!!!

No comments:

Post a Comment