ಮೊನ್ನೆ ಜಾತ್ರೆಯಲಿ ತಂದ ಕಟ್ಟಿಗೆಯ
ಗೊಂಬೆಯ ಎದೆಗವುಚಿ.. ಜೊ....ಜೊ..
ಎಂದು ಲಾಲಿಯ ಹಾಡುತ್ತಿರುವೆ... ನಡುಗತ್ತಲಲಿ
ಚಿಟ್ಟನೆ ಚೀರಿ ಎದೆಹಾಲಿಗಾಗಿ ಹಂಬಲಿಸುವ
ಕರುಳು ಕುಡಿಯು ನೀನಾಗಬಾರದೆ
ಕಂದ ನಿನ್ನಜ್ಜ ಮಾಡಿಸಿಟ್ಟಿರುವ ಗಂಧದ
ತೊಟ್ಟಿಲಲಿ ಹಾಕಿ ತೂಗಿ..ತೂಗಿ..ನನ್ನ
ತೋಳುಗಳು ಸೋತರು.. ನೀ ಮಲಗದೆ
ನನ್ನ ಸತಾಯಿಸುವ ರೀತಿಯಲ್ಲಿ ನಗುವುದ
ನಾ ನೋಡಬೇಕು
ಅಡುಗೆ ಮನೆಯ ಕೆಲಸದ ತರಾತುರಿಯಲ್ಲಿರುವಾಗ
ಅಂಬೆಗಾಲಲಿ ಬಂದು ಸೀರೆಯ ಚುಂಗನು ಎಳೆದು
ಬಟ್ಟಲು ಕಂಗಳಿಂದ ಹಸಿವು ಎಂಬಂತೆ ನೀ ನೋಡುವ
ನೋಟವ ಕಣ್ತುಂಬಿಕೊಳ್ಳುವಾಸೆ...
ಎಷ್ಟೇಷ್ಟೊ ಆಸೆಗಳಿವೆಯೀ..ಬಂಜರು ಮಡಿಲಲಿ
ನಿನ್ನ ಚಿಗುರುಗಾಗಿ ಕಾದು ಕಾದು ನೊಂದ ಮನದಲಿ
ಅವರಿವರು... ಮನೆಯವರೆಲ್ಲಾಡುವ ಚುಚ್ಚು ಮಾತುಗಳ
ನೋವಿಗೆ ನೀನೊಂದು ಅಮೃತವಾಗಿ ಬರಬಾರದೆ
ಈ ಬಾಳಲೊಂದು ಬೆಳ್ಳಿ ಕಿರಣವಾಗಿ ಮೂಡಬಾರದೆ
ಬಂಜೆ... ಬಂಜೆ... ಬಂಜೆ ಎಂದು ಜಗವೆಲ್ಲ ಜರಿದರೂ
ನನ್ನ ಕರಿಮಣೆಯ ಮಾಲೀಕ ಮಾತ್ರ... ಒಂದು ಮಾತನ್ನು
ಹೋಗಲಿ ನನಗೂ ಒಂದು ಮಗು ಬೇಕೆಂದು ಕೇಳಿದವನಲ್ಲ
ಅವನ ಮುಂದೆ ದುಃಖವ ತೋಡಿಕೊಂಡರೆ... ಅವ ಹೇಳುವುದೊಂದೆ ಮಾತು..
ನಾನಾಗುವೆ ನಿನ್ನ ಮಡಿಲಿಗೆ ಮಗು
ಮಗುವಂತೆ ಮಲಗಿಸಿ ನೀ.. ನಗು
ರಚ್ಚೆ ಹಿಡಿದು ಅಳುವವನಲ್ಲ..
ಅದು ಬೇಕು ಇದು ಬೇಕೆಂದು ಕೇಳುವವನಲ್ಲ
ಸುರವಮೃತವು ಸಮವೆ ನಿನ್ನ ಕೈ ತುತ್ತಿಗೆ
ಉಣಿಸಿ ಜಾರಿಸಿಬಿಡು ನನ್ನನು ನಿದಿರೆಗೆ
ತರಬೇಡ ಹನಿ ಮುತ್ತುಗಳ ಕಣ್ಣಂಚಲಿ
ನನಗೆ ನೀನು.. ನಿನಗೆ ನಾನು ಎಂಬಂತೆ
ಜೋತೆಯಿರೋಣ ಬಾಳಲಿ
ಕೊಡದಿದ್ದರೇನು ಅವನು ಒಂದು ಹಣ್ಣು
ತೆರೆದು ನೋಡೊಣ ಅಂತರಂಗದ ಕಣ್ಣು
ಜಗದ ತೋಟದಲಿ ಮಾಲಿಯಿಲ್ಲದ
ಸುಮಗಳು ಅದೇಷ್ಟಿಲ್ಲ...ಹೊತ್ತು
ತರೋಣವೊಂದು ಸುಮವನು
ನಮ್ಮ ಮಡಿಲಲಿ ಬೆಳೆಸೋಣ
ಜಗದ ತುಂಬ ತುಂಬಿರುವ ಕುಸುಮಗಳು
ನಮ್ಮದೆ ತೋಟದೆಂದುಕೊಳ್ಳುವ
ಚಿಂತಿಸಬೇಡ ಒಡತಿ...
ಸಾಕಿಷ್ಟು ಬದುಕಿಗೆ.. ನಿನಗೆ ನಾನು
ನನಗೆ ನೀನು... ಲೋಕದ ಚಿಂತೆ
ಬೇಡ ನಮಗಿನ್ನು...
No comments:
Post a Comment