Tuesday, June 6, 2017

ಕವನ ವೇದನೆ

ಸೋತು ಸೊರಗಿವೆ ಬರೆದಿಟ್ಟ ಕವನಗಳು
ಓದುಗರ ಮೆಚ್ಚುಗೆಗಳಿಲ್ಲದೆ ನರಳುತಿವೆ ಸಾಲುಗಳು
ಪ್ರಕಟಗೊಳ್ಳದೆ ಧೂಳು ತಿನ್ನುತ್ತ.. ಗೆದ್ದಿಲುಗಳಿಗೆ
ಆಹಾರವಾಗುತ್ತ.. ಮನೆಯ ಅಟ್ಟವನೇರಿ...
ಭಾವಗಳು ತುಂಬಿಯೂ.. ಸತ್ತಂತೆ ಮಲಗಿರುವ
ಹಾಳೆಗಳು
ಇವೆಲ್ಲವುಗಳ ವೇದನೆ.. ರೋಧನೆಯ ಕಂಡು
ಲೇಖನಿಯು ಮೌನವಾಗಿಬಿಟ್ಟಿದೆ.. ಅದರ
ಒಡಲು ಆಗಿದೆ ಅತ್ತು ಅತ್ತು ಬರಿದಾದ ಕಂಗಳು..

ಕಟ್ಟಿದ ಕಟ್ಟಡಗಳಲ್ಲಿ ಸಾಹಿತ್ಯವಿಲ್ಲ
ರಾಜಕೀಯದ ವಾಸನೆಯೆ ಹರಡಿದೆ ಎಲ್ಲ
ಸಂಜೆಯಾದರೆ.. ಕುಡುಕರಿಂದ ತುಂಬುವುದು
ಸಾಹಿತ್ಯ ಕಟ್ಟಡದ ಅಂಗಳವೆಲ್ಲ..
ಕಾರಣ ಪ್ರಜ್ಞಾವಂತರಾರೂ ಮನೆಯ
ಬಾಗಿಲು ದಾಟಿ ಬರುವುದಿಲ್ಲ...
ಇನ್ನೂ ಹೆಚ್ಚಿಗೆ ಹೇಳಬೇಕೆಂದರೆ... ಒಬ್ಬರ
ಕಂಡರೆ ಒಬ್ಬರು ಹಾವು ಮುಂಗುಸಿಯಂತೆ
ಕಚ್ಚಾಡುವರಲ್ಲ
ಇವರಿಗೂ ರಾಜಕೀಯದ ಆಡಳಿತಾಶ್ರಯ ಬೇಕಲ್ಲ
ಬೇಕಾದವರು ಬೇಕಾದಂತೆ.. ಬೇಡವಾದವರು
ಬೇಡವಾದಂತೆ ಬರೆಯುವರಲ್ಲ
ಸತ್ಯವ ಹೆಕ್ಕಿ ತೆಗೆಯುವವನ ಬೆನ್ನು ತಟ್ಟದೆ
ಚೂರಿಯನಿರಿಯುವರಲ್ಲ

ಅಯ್ಯೋ... ಸಾಹಿತ್ಯಕ್ಕೂ ಅಂಟುಕೊಂಡಿದೆಯಲ್ಲ
ಜಾತಿಯ ನಂಟು
ಸವಿಯುವವರೆ ಇಲ್ಲವಾಗಿದ್ದಾರೆ ಎಲ್ಲ ಪ್ರಕಾರದ
ಸಾಹಿತ್ಯದ ಕರದಂಟು
ಇವರಿಗೆ ಕುವೆಂಪು... ಅವರಿಗೆ ಬೇಂದ್ರೆ.. ಒಬ್ಬರಿಗೆ
ಬೀchi ಮತ್ತೊಬ್ಬರಿಗೆ ಮಾಸ್ತಿ... ನಮ್ಮದು ದಲಿತ ಸಾಹಿತ್ಯ
ಕೇಳುವರು ನನ್ನನು ನೀವು...? ನಂದೆ..? ಉತ್ತರ...
ಕಸ್ತೂರಿ ಕನ್ನಡ ಸಾಹಿತ್ಯ
ಜಾತಿಯ ತೊಡೆಯುವ ಅಕ್ಷರಗಳಿಗೆ... ಜಾತಿಯ ಲೇಖಕರು
ತೊಡೆಸುವರು ಮತಾಂಧತೆಯ ಸಂಕೋಲೆಯ

ಜಾತಿ... ರಾಜಕೀಯ.. ಅಹಂ
ಇವು ಮೂರು ಬಿಡದೊಡೆ ಕನ್ನಡ ಸಾಹಿತ್ಯ
ಪರಂಪರೆಗೆ ಉಳಿಗಾಲವಿಲ್ಲ... ಒಂದು ಪ್ರಾತ್ಯಕ್ಷಿತೆಗೆ
೧೨ ನೇ ಶತಮಾನದಲ್ಲಿ ಬಸವಣ್ಣ ಜಾತಿಯನಳಿಸಿ
ಅಕ್ಷರ ಕ್ರಾಂತಿಗಾಗಿ ಹೋರಾಡಿದವನು.. ಬದುಕ
ಕನ್ನಡಿಗೆ ವಚನಗಳ ಬೆಟ್ಟವನೆ ಕಟ್ಟಿ ಕೊಟ್ಟವನು
ಇಂದು.. ಅಣ್ಣನನೇ ಬಿಟ್ಟು ತಮ್ಮ ಜಾತಿಯ ವಚನಕಾರರ
ಹಿಡಿದು.. ಅವರ ವಚನಗಳ ತೊರೆದು.. ಕೇವಲ
ಒಣಪ್ರತಿಷ್ಠೆಗಾಗಿ ಜಯಂತಿಗಳ ಆಚರಿಸುತ್ತಿರುವರಲ್ಲ
ಅದು ಸರಕಾರಿ ಖರ್ಚಿನಲ್ಲಿ ಲಕ್ಷ ಲಕ್ಷಗಟ್ಟಲೆ...
ಬೇರೊಬ್ಬ ಜಾತಿಯರು ದುಡಿದು ತುಂಬಿದ ತೆರಿಗೆಯಿಂದ...

No comments:

Post a Comment