Sunday, June 4, 2017

ನಾನು ಮರ

ನಾನು ಮರ...
ಇಂದು ನನ್ನ ಜನ್ಮ ದಿನದ ದಿನಾಚರಣೆಯಂತೆ
ಹುಲು ಮಾನವರು ನಿಗದಿ ಪಡಿಸಿದ್ದಾರಂತೆ
ನಿನ್ನೆಯಷ್ಟೆ ಕಡೆದು ಹಾಕಿದ ನನ್ನ ಕೊರಡಿನ
ಮೇಲೆ ಕುಳಿತ ಈ ವಿಸ್ಮಯ ಲೋಕದ ಜನರು
ವಿಮರ್ಶಾತ್ಮಕವಾಗಿ ಮಾತನಾಡುತ್ತಿದ್ದರು....

ಮರಗಳನ್ನು ಕಡೆದರೆ ಭೂಮಿಯ ಉಷ್ಣತೆ
ಏರುತ್ತದಂತೆ... ಉಸಿರಾಡುವ ಉಸಿರಾಟಕ್ಕೆ
ತೊಂದರೆಯಾಗುತ್ತದಂತೆ.. ಪಕ್ಷಿ ಸಂಕುಲವು
ವಿನಾಶದ ಅಳಿವಿಗೆ ಬಂದಿದೆಯಂತೆ... ಹಸಿರು
ಮನೆ ಪರಿಣಾಮವಾಗುತ್ತಿದೆಯಂತೆ.. ಸೂರ್ಯನ
ಅತೀ ನೇರಳಾತೀತ ಕಿರಣಗಳು ನಮ್ಮ ಸುಕೋಮಲ
ಚರ್ಮವನ್ನು ಕಪ್ಪಾಗಿಸುವದಂತೆ.. ಓಜೋನ್ ಪದರವು
ತೆಳುವಾಗಿ ಹರಿದು ಸೂರ್ಯನ ನೇರವಾದ ರಶ್ಮಿಗಳಿಗೆ
ಚರ್ಮದ ಕ್ಯಾನ್ಸರ್ ಬರುವುದಂತೆ... ಮಣ್ಣಿನ ಫಲವತ್ತತೆ
ಕಡಿಮೆಯಾಗುತ್ತದಂತೆ.. ಮಣ್ಣಿನ ಸವಕಳಿ.. ಬೆಟ್ಟ ಗುಡ್ಡಗಳ
ಕುಸಿತವುಂಟಾಗುತ್ತದಂತೆ.. ಪರ ಊರಿನಿಂದ ಬಂದವರಿಗೆ
ದಣಿವಾರಿಸಿಕೊಳ್ಳಲು ನೆರಳಾಗುತ್ತದಂತೆ.. ಹೀಗೆ ಕಂತೆ
ಕಂತೆಗಳ ಲೆಕ್ಕಗಳನ್ನಿಟ್ಟರು.. ಆಗ ನನಗನ್ನಿಸಿತು..
ಇವರೊಂದಿಗಷ್ಟೆ ಮಾತನಾಡಲಾದರೂ... ಆ ದೇವರು
ಅರೆ ಘಳಿಗೆಯ ಹೊತ್ತಿಗಾದರೂ ಬಾಯಿಯನ್ನು ಕೊಟ್ಟಿದ್ದರೆ
ಕೇಳಬೇಕೆನಿಸಿತ್ತು ಈ ಮಾತುಗಳ..

ಕಡೆದು ಹಾಕುವ ಮುನ್ನ ಯೋಚಿಸಲಿಲ್ಲವೇಕೆ...
ಹಬ್ಬ ಹರಿದಿನಗಳಲ್ಲಿ ನನ್ನ ರೆಂಬೆಗೆ ಹಗ್ಗವ ಕಟ್ಟಿ
ಜೀಗಿದ ಜೋಕಾಲಿಯು ನೆನಪಾಗಲಿಲ್ಲವೆ..
ಬಾಲ್ಯದಲಿ ನಿಮ್ಮೆಲ್ಲ ಸ್ನೇಹಿತರೊಡಗೂಡಿ ನನ್ನ
ಮೈ ತುಂಬ ಮಂಗಗಳಿಗಿಂತಲೂ ಹೆಚ್ಚಾಗಿ ಹತ್ತಿ ಹಾರಾಡಿ
ನನ್ನ ರೆಂಬೆಗಳ‌ ಮುರಿದದ್ದು.. ಎಲೆಗಳ ಹರಿದು ಕೇಕೆ
ಹಾಕಿ ನಕ್ಕದ್ದು ನೆನಪಿಲ್ಲವೆ...
ಸೊಂಪು ಸೊಂಪಾಗಿ.. ಗುಂಪು ಗುಂಪಾಗಿ ಇಳೆಬಿದ್ದ
ನನ್ನ ಹಣ್ಣುಗಳಿಗೆ..ಕಲ್ಲೆಟಿನ ರುಚಿಯ ನನಗೆ ತೋರಿಸಿ
ನೀವು ಮಾತ್ರ ಹಣ್ಣಿನ ಸವಿಯ ಸವೆದದ್ದು ಮರೆತಿರೆ...
ಬಾಲ್ಯದಲಿ ನಿಮ್ಮಜ್ಜ/ಜ್ಜಿಯ ಜೊತೆ ಬಂದು ಇಲ್ಲಿ
ನೆರಳಲಿ ಕುಳಿತಾಗ ನಿಮಗೆ ಸೊಂಪಾದ ಗಾಳಿಯ
ಬೀಸಿ ಮಲಗಿಸಿದ್ದು...
ಹರೆಯದಲಿ ನಿಮ್ಮ ತುಂಟಾಟಗಳಿಗೆ.. ಆ ನಿಮ್ಮ
ಪ್ರಿಯತಮ/ಳನು ಕರೆದು ತಂದು ನನ್ನ ಮಡಿಲಲಿ
ಮಾಡಿದ ಪವಿತ್ರ ಅಪವಿತ್ರ ಕೆಲಸಗಳಿಗೆ ಜೊತೆಯಾದದ್ದು...
ನಿಮ್ಮ ಮುಸ್ಸಂಜೆ ವಯಸ್ಸಿನಲ್ಲಿ... ನನ್ನ ನೆರಳಿನ ಕಟ್ಟಿಯ
ಮೇಲೆ ಕುಳಿತು ಹಡೆದ ಮಕ್ಕಳು ಕೊಟ್ಟ ನೋವನು
ನೆನೆದು ಕಣ್ಣೀರಿಟ್ಟ ಕಟ್ಟೆಯಿದು... ಇದಾವುದು ಮನಸಲಿ
ಮೂಡಲಿಲ್ಲವೆ...ಆ ಸುಡುವ ರವಿಯ ಝಳಕ್ಕೆ ನನ್ನ
ನೆರಳು ನೆನಪಾಗಲಿಲ್ಲವೆ..?
ಹೋಗಲಿ ಬಿಡಿ... ಸರಿ ನನ್ನ ಕಡೆದದ್ದಾರೂ ಏಕೆ?

ಅವರೆ ಹೇಳುತ್ತಾರೆ...
ರಸ್ತೆಗೆ ಅಡ್ಡವಾಗಿರುವೆನಂತೆ... ನಾ ಬೀಸುವ ಗಾಳಿಗೆ
ವಿದ್ಯುತ್ ತಂತಿಗಳು ಹರಿದು ಬೀಳುತ್ತವಂತೆ.. ಇಲ್ಲೊಂದು
ವಿಶಾಲವಾದ ಉದ್ದವಾದ ಕರಿ ಹೆಬ್ಬಾವೊಂದು ಹಾದು ಹೋಗಲಿದೆಯಂತೆ... ಒಂದು ಸುಂದರ ಸುಸಜ್ಜಿತ ಮಹಲನ್ನು
ಕಟ್ಟುವರಂತೆ.. ನೀರು ಸಂಗ್ರಹಕ್ಕೆ.. ಉರುವಲಿಕ್ಕೆ... ಅದಕ್ಕೆ
ಇದಕ್ಕೆ ಅಬ್ಬಬ್ಬಾ ನನ್ನ ವಧೆಗೆ ಅದೇಷ್ಟೊಂದು ಕಾರಣಗಳು..

ನರರೇ...
ನಾನು ನಿಮ್ಮ ಮುತ್ತಾತನ ಆಸ್ತಿ ಕಣ್ರೋ... ಮುಂದೆ
ನಮ್ಮ ಮಕ್ಕಳು ಮೊಮ್ಮಕ್ಕಳು ಆಡಿ ನಲಿದಾಡಲಿ
ಸ್ವಚ್ಛವಾದ ಗಾಳಿಯನ್ನು ಉಸಿರಾಡಲೆಂದು... ಸಧೃಢವಾದ
ಆರೋಗ್ಯವಾದ ಸಮಾಜ ತಲೆ ಎತ್ತಲೆಂದು... ಊರ
ಮಧ್ಯದಲಿ ನನ್ನ ನೆಟ್ಟು ಕಟ್ಟೆಯ ಕಟ್ಟಿದರು.. ಇದನರೀಯದ
ದನದಾಹಿಗಳಾದ ನೀವು ನನ್ನ ಕಡೆದು ಕಟ್ಟೆಯ ಒಡೆದು
ಸಮಾಧಿಯ ಕಟ್ಟಿದೀರಿ.. ನಿಮ್ಮ ಕರುಳ ಕುಡಿಗಳಿಗೆ
ವಿಷಾನಿಲದ ಗುಂಡಿಯ ತೋಡುತ್ತಿರುವಿರಿ...
ಎಚ್ಚೆತ್ತುಕೊಳ್ಳಿ...ಕಾದು ಕಾದು ಬೆಂಕಿಯುಂಡೆಯಾದ  ಭೂ ಒಡಲಿನ ಬೆಂಕಿ ಉಕ್ಕಿ ನಿಮ್ಮೆಲ್ಲರ ಆಹುತಿಯ ಪಡೆಯುವ
ಮುನ್ನ...

No comments:

Post a Comment