Sunday, June 18, 2017

ಅಪ್ಪನಿಗೊಂದು ದಿನ

ಅಪ್ಪನಿಗೊಂದು ದಿನವಂತೆ....

ಈ ಭರತಖಂಡದಲ್ಲಿ.... ಈ ಪುಣ್ಯಭೂಮಿಯಲ್ಲಿ
ಹೆತ್ತ ತಪ್ಪಿಗೆ... ಸಾಕಿ ಸಲುಹಿ.. ಎದೆಯುದ್ದ ಬೆಳಸಿ
ನೌಕರಿಯೊ.. ಸ್ವಂತ ಉದ್ಯೋಗವೊ... ಒಕ್ಕಲುತನ
ವನ್ನು ಹೀಗೆ ದುಡಿದುಣ್ಣಲು ಹಚ್ಚಿ... ಬದುಕಿನ ಬಂಡಿಗೆ
ಒಂದು ತುಂಬು ಸಂಸಾರದ ಹೆಣ್ಣನ್ನು ತಂದು...ನಿನಗೆ
ಜೋಡಿಯನ್ನಾಗಿಸಿ... ಬೆಚ್ಚನೆ ಹೂ ಹಾಸಿಗೆಯ ಮೇಲೆ
ನಿಮ್ಮ ಮಲಗಿಸಿ.. ತಾ ನೆಮ್ಮದಿಯ ಮನಸೊಂದಿಗೆ
ಮನೆಯ ಜಗಲಿಯೊ... ಮಾಳಿಗೆಯೊ...ಅಂಗಳದಲೊ
ಊರ ಮುಂದಿನ ಗುಡಿಯ ಕಟ್ಟೆಯ ಮೇಲೆಯೊ..
ಮಲಗುವ ಅಪ್ಪನಿಗೆ.... ಈ ಒಂದು ದಿನದಲ್ಲಿ ಇಷ್ಟು
ವರ್ಷಗಳ ಅವನ ಕಸುವಿನ ದಿನಗಳಿಗೆ ಬೆಲೆ ಕಟ್ಟಲಾದಿತೆ
ಅರಳಿದ ನಾಕು ಕೆಂಗುಲಾಬಿ.. ಹೊಸ ಬಟ್ಟೆ ಬರೆಗಳ
ಕೊಡಿಸಿಬಿಟ್ಟರೆ ತೀರಿಬಿಡುವುದೆ ಋಣ...

ಏನಾಗಿದೆ... ನಮಗೆ ? ಏಕೆ ಪಾಶ್ಚಾತ್ಯ ಸಂಸ್ಕೃತಿಯೆ
ನಮ್ಮ ದೇಹದಲಿ ಹೊಕ್ಕ ಭೂತಗಳಂತೆ ಆಡುತ್ತಿದ್ದೇವೆ..
ಇದೊಂದೆ ದಿನಕೆ ಸೀಮಿತವೆ... ತಂದೆಯ ಸಾಧನೆಗಳ..
ಅವನ ಮೇಲಿರುವ ಪ್ರೀತಿಗಳ ವ್ಯಕ್ತಪಡಿಸುವುದಕ್ಕೆ
ಯಾಕೆ ?  ತಂದೆಯ ವಚನಕ್ಕಾಗಿ ನವವಧುವಿನ
ಜೊತೆಯಲಿ ಕಾಡಿಗೆ ನಡೆದ ರಾಮನ.. ತಂದೆಯ
ಆಜ್ಞೆಯ ಮೇರೆಗೆ ಹೆತ್ತ ತಾಯಿಯ ರುಂಡವ ಚೆಂಡಾಡಿ
ಮತ್ತೆ ತಾಯಿಗೆ ಮರುಜೀವ ಕರುಣಿಸು ಎಂದು
ಪರಶುರಾಮನ.. ಪ್ರತಿಯೊಬ್ಬರ ಜೀವನದ ಅತಿ ಮಧುರ
ಮಧು ತುಂಬಿದ ರಾತ್ರಿಯ ಹೊಸ್ತಿಲಲ್ಲಿ... ತಂದೆ
ಯಯಾತಿ ಮಗ ಪುರನ ಯೌವ್ವನವನೇ ಬೇಡಿದಾಗ
ತಿರುಗಿ ಮಾತನಾಡದೆ ಯೌವ್ವನವ ಧಾರೆಯೆರೆದ..
ಇಂತಹ ಮಹಾನ್ ಪುತ್ರರಿಗೆ ಜನ್ಮವಿತ್ತ ಭೂಮಿಯಲ್ಲಿ
ಅವರ ಆದರ್ಶಗಳ ಎದೆಯಲ್ಲಿ ಬಿತ್ತಿಕೊಂಡು ಜೀವನ
ಪೂರ್ತಿ ಬಾಳಿ... ಹೊರಲೋಕಕ್ಕೆ ಭವ್ಯ ಭಾರತದ
ತಂದೆ ಮಕ್ಕಳ ಅನುಬಂಧವ ಸಾರುವದ ಬಿಟ್ಟು...

ಅರವತ್ತರ ಇಳಿ ವಯಸ್ಸಿನಲ್ಲೂ... ಅವನನ್ನು ಹೊರಗೆ
ದುಡಿಯಲು ಕಳಿಸುವ.. ಊಟ ಹಾಕದೆ ಹಸಿವಲಿ
ಬಳಲಿಸುವ... ದುಡ್ಡು ದುಡ್ಡೆಂದು ನಗರಗಳಿಗೆ ಬಂದು
ಹೆಂಡತಿ ತನ್ನೆರಡು ಮಕ್ಕಳೊಂದಿಗೆ ಆರಾಮವಾಗಿ
ಬದುಕುತಿರುವ ಇಂದಿನ ಪೀಳಿಗೆ.. ಕುಳಿತರೆ ಎದ್ದು
ನಿಲ್ಲಲಾಗದ.. ಮಲಗಿದರೆ ಎದ್ದು ಕುಳ್ಳಿಸಲು ಆಗದ
ದೇಹಕ್ಕೆ ಜ್ವರ ಬಂದು ಮಲಗಿದಾಗ ನೋಡಿಕೊಳ್ಳಲು
ಅವರ ಪಕ್ಕದಲಿ ಇಲ್ಲದಿದ್ದಾಗ ಆ ಹಿರಿಜೀವ ಎಷ್ಟು
ನೊಂದಿತು... ತಿಂಗಳು ತಿಂಗಳು ಹಣವು ಖಾತೆಗೆ
ಹಾಕಿ ಕುಳಿತುಬಿಟ್ಟರೆ ನಾವು.. ಆ ಹಣವ ತರಲಿಕ್ಕಾದರೂ
ಆ ನಡುಗವ ಕೈಗಳೊಂದಿಗೆ ಬ್ಯಾಂಕ್ ಮೆಟ್ಟಿಲುಗಳ ಹತ್ತಿ
ಸರತಿ ಸಾಲಿನಲಿ ನಿಂತು ಹಣವ ಪಡೆದು ಬರುವ
ಹೊತ್ತಿಗೆ.... ಆ ಜೀವಕೆ ಮತ್ತೆ ನಿಮ್ಮನು ಹಡೆದು..
ಬೆಳಸಿ.. ನಿಮ್ಮ ಕಾಲ ಮೇಲೆ ನಿಲ್ಲಿಸಲು ಪಟ್ಟ ಕಷ್ಟದಷ್ಟು
ಕಷ್ಟವುಂಟಾಗುತ್ತದೆ...

ತಂದೆ ನಿನಗೆ ನಾ ರಾಮನಾಗಲಾರೆ.. ಪರಶುರಾಮನೂ
ಆಗಲಾರೆ.. ಪುರನೂ ಆಗಲಾರೆ.... ನಿನ್ನ ಮುಸ್ಸಂಜೆಯ
ದಿನಗಳಿಗೆ ಊರುಗೋಲಾಗಿರುವೆ... ಇಷ್ಟೇ ನನ್ನ ಕೊಡುಗೆ

ಮುಂದೊಂದು ದಿನ ಅವಿಭಕ್ತ ಕುಟುಂಬ ದಿನಾಚರಣೆ
ಬರುವ ದಿನವು ದೂರ ಉಳಿದಿಲ್ಲ...

No comments:

Post a Comment