ಹತ್ತು ದೇವರಿಗೆ ಹರಕೆ ಹೊತ್ತು
ಹೆತ್ತೊಡಲಿಗೆ ಹೊತ್ತು ಕೂಳಿಲ್ಲದೆ
ಬೀದಿಗೆ ತಳ್ಳಿದ ಕರುಳ ಬಳ್ಳಿಗಳು
ಕರುಳ ಕತ್ತರಿಸಿ ಜನ್ಮವನಿತ್ತವಳಿಗೆ
ಹೊತ್ತಿನೂಟಕು ಹೊರೆಯಾಗಿ
ಬಿಟ್ಟೇನೆ ಈ ಮಕ್ಕಳಿಗೆ..
ಅಂದು ಎನಗೆ ಭಾರವಾಗದ
ಈ ಕಾಯಿಗಳು.... ಇಂದು
ಈ ಕಾಯಿಗಳಿಗೆ ಬಳ್ಳಿಯೆ
ಭಾರವಾಗಿಬಿಟ್ಟಿದೆ..
ಹರೆಯ ಹರೆದು ಹೋಗಿ
ಸೌಭಾಗ್ಯ ಅಳಿಸಿಹೋಗಿ
ನಡುವು ನಿಲ್ಲದಾಗಿ.. ಕಣ್ಣು ಕಾಣದಾಗಿ
ನಿಮ್ಮ ತುಂಬು ಆಶ್ರಯದ ಬಯಕೆಯ
ಹೊಸ್ತಿಲಲಿ ನಾ ನಿಂತಿರುವಾಗ
ಕೈಗೊಂದು ನಿರ್ಜೀವ ಕಟ್ಟಿಗೆಯೆ..
ಆಸರೆಯಾಯಿತೆ ವಿನಃ...
ಅದನ್ನು ಕಡೆದು ಹಾಕಿದ ಬಲಶಾಲಿ
ಭುಜಗಳಾವವು ಕೈ ಹಿಡಿಯಲಿಲ್ಲ
ಹರಿಯುವ ನೀರು ಹೊಲಸಾದರೇನು..
ತಿಳಿಯಾದರೇನು.. ದಾಹನಿಂಗಿಸುವುದು
ಕಣ್ಣಲಿ ಬರುವ ಉಪ್ಪು ನೀರು ಕೇವಲ
ದುಃಖವ ನೀಗಿಸುವುದು...ಹಸಿವನ್ನು
ಇಂಗಿಸದು
ನರಜನ್ಮವು ಈ ಒಂದು ಜನ್ಮಕೆ
ಸಾಕೆನಿಸಿಬಿಟ್ಟಿದೆಯಲ್ಲ....
ಹಸಿವೆಯಂತು ಬೆನ್ನು ಬಿಡುತಿಲ್ಲ
ಸಾವಂತೂ ಸನಿಹ ಸುಳಿಯುತಿಲ್ಲ
ಬದುಕಿದ್ದೇನೆ ಬದುಕಬೇಕಲ್ಲ
No comments:
Post a Comment