Friday, October 12, 2018

ಭಾಗ ೧೭

'ಏನ ಬೇಕು ಏಳಯ್ಯ, ಬೆಳ್ಗ ಬೆಳಗ್ಗೆ ಟೇಬಲ್ ಮ್ಯಾಲ ಕೈಹಣೆ ಇಟ್ಕೊಂಡು ಮಲ್ಗೊಂಡ ಬಿಟ್ಟಿದ್ದೀಯಲ್ಲ,' ಅಂಗಡಿ ಮಾಣಿ ಜೋರಾಗಿ ಬಾಯಿ ಮಾಡುತ್ತಲೆ ಅಖಿಲನ ಭುಜವನ್ನು ಹಿಡಿದು ಅಲ್ಲಾಡಿಸಿದನು. ಮೈ ಮೇಲೆ ಹಾವು ಹರಿದಾಡಿದವರಂತೆ ಗಲಿಬಿಲಿಗೊಳ್ಳುತ್ತಾ ಎದ್ದು ಕುಳಿತು ಬ್ಯಾಗಿಗಾಗಿ ಹುಡುಕಾಡಿದನು, ಪಕ್ಕದಲ್ಲೆ ಇತ್ತು, ಅಬ್ಬಾ.. ಎಂದು ನಿಟ್ಟುಸಿರೊಂದನು ಬಿಡುತ್ತಾ,  ಅಖಿಲನು, ' ಕ್ಷಮಿಸಿ ಸರ್, ರಾತ್ರಿಯಲ್ಲ ನಿದ್ದೆಯಿಲ್ಲ, ಸ್ವಲ್ಪ‌ ಮುಖವನ್ನು ತೊಳೆದುಕೊಳ್ಳುವುದಕ್ಕೆ ನೀರನ್ನು ಕೊಡಿ ಹಾಗೆ ಸ್ಟ್ರಾಂಗ್ ಇರೊ ಒಂದು ಡಬ್ಬಲ್ ಟೀಯನ್ನು ಮಾಡಿಕೊಡಿ, ಹಾಗೆ ನಿನ್ನೆ ರಾತ್ರಿ ನಿಮ್ಮಂಗಡಿಯಿಂದ ಈ ಸಲಿಕೆ ಗುದ್ದಲಿಯನ್ನು ಒಯ್ದಿದ್ದೆ, ತೆಗೆದುಕೊಂಡು ಬಿಡಿ' ಎಂದು ಕಣ್ಣುಗಳನ್ನು ತಿಕ್ಕುತ್ತಾ ಸಮಯವನ್ನು ನೋಡಿಕೊಂಡನು ಆರು ನಲ್ವತ್ತೆರಡಾಗಿತ್ತು, ' ಓ... ನಾನಿಲ್ಲಿ ಬಂದು ಮಲಗಿ ಅರ್ಧ ಗಂಟೆಗೂ ಮೇಲಾಗಿದೆ' ಮನಸ್ಸಿನಲ್ಲಿ ಮಾತನಾಡಿಕೊಳ್ಳುತ್ತಲೆ ಎದ್ದು ನಿಂತು ಮಾಣಿಯು ತಂದು ಕೊಟ್ಟ ನೀರಿನಿಂದ ಮುಖವನ್ನು ತೊಳೆದುಕೊಂಡು, ತೋಳುಗಳಿಂದ ಮುಖವನ್ನು ಒರೆಸಿಕೊಂಡು ಅಂಗಡಿಯ ಮುಂಭಾಗದಲ್ಲಿ ಹಾಕಿದ್ದ ಕನ್ನಡಿಯಲ್ಲಿ ತನ್ನವತಾರವನ್ನೊಮ್ಮೆ ನೋಡಿಕೊಂಡನು. ಬೆವೆತು, ಬೆವೆತು ಮೈ ಮೇಲಿನ ಅಂಗಿಗಳೆಲ್ಲ ಕಮಿಟಿಟ್ಟು, ಬೇವರಿನ ವಾಸನೆ ಮೂಗಿಗೆ ಗಪ್ಪೆಂದು ಬಡಿಯುತ್ತಿತ್ತು, ತಾಯಿಯ ಹೆಣವನ್ನು ಹೂಳುವುದಕ್ಕಾಗಿ ಗುಂಡಿಯನ್ನು ತೆಗೆಯುವಾಗ ಪ್ಯಾಂಟೆಲ್ಲ ಕೆಸರಿನ ಗದ್ದೆಯಲ್ಲಿ ಅದ್ದಿ ತಗೆದಂತಾಗಿತ್ತು, ಕೆದರಿದ ಕೂದಲು, ಎರಡು ದಿನ ಸರಿಯಾಗಿ ನಿದ್ದೆಯಿಲ್ಲದ ಕಾರಣ, ಸರಾಯಿಯನ್ನು ಕುಡಿದವರಕ್ಕಿಂತಲು ಹೆಚ್ಚಾಗಿ ಕಾಣುತ್ತಿದ್ದ, ಕೆಂಪು ಕೆಂಪಾಗಿ ಊದಿಕೊಂಡಿದ್ದ ಕಣ್ಣುಗಳು, ಹಣೆಯ ಮೇಲಿನ ಗಾಯ ಸಣ್ಣಗೆ ಸೂಜಿಯಿಂದ ಚುಚ್ಚಿದ ಹಾಗೆ ನೀಡುತ್ತಿದ್ದ ನೋವು, ಅಬ್ಬಬ್ಬಾ... ಎರಡು ಸಲ ತಲೆಯನ್ನು ಕೊದರಿಕೊಂಡು, ಒಳಗೆ ಹೋಗಿ ಕುಳಿತುಕೊಂಡನು. ಮಾಣಿ ಆಗ ಬಿಸಿಬಿಸಿ ಹವೆಯಾಡುತ್ತಿದ್ದ ಡಬ್ಬಲ್ ಸ್ಟ್ರಾಂಗ್ ಟೀಯನ್ನು ತಂದುಕೊಟ್ಟನು. ಟೀ ಯನ್ನು ಕುಡಿಯುತ್ತಾ, ಆಗ ತಾನೆ ದಿನಪತ್ರಿಕೆಯ ಹುಡುಗ ಹಾಕಿ ಹೋದ ಅಂದಿನ ಪೇಪರನ್ನು ತೆಗೆದುಕೊಂಡು ಓದತೊಡಗಿದನು, ಪ್ರಂಟ್ ಪೇಜನಲ್ಲಿ ಊರಲ್ಲಿ ನಿನ್ನೆ ನಡೆದ ಘಟನೆಯ ಬಗ್ಗೆ ಸುದ್ದಿಯೊಂದಿಗೆ, ಕೆಲವು ಅಂಗಡಿ ವಾಹನಗಳಿಗೆ ಬೆಂಕಿ ಹಚ್ಚಿದ ಪೋಟೊಗಳಿದ್ದವು, ಅದರಲ್ಲಿ ನಿನ್ನೆ ತಾನು ಕಳ್ಳತನ ಮಾಡುವ ಮೊದಲು ಕಡಲೆಕಾಯಿಯನ್ನು ತಿಂದಂತಹ ಅಜ್ಜಿಯ ಅಂಗಡಿಯು ಸುಟ್ಟಿದ್ದನ್ನು ಕಂಡು, ಕರಳು ಕಿವಿಚಿದಂತಹ ಅನುಭವವಾಯಿತು ಅಖಿಲನಿಗೆ, '
ಛೆ, ನನ್ನಿಂದಾಗಿ ಆ ಅಜ್ಜಿಯ ಹೊಟ್ಟೆಗೂ ಕಲ್ಲುಬಿತ್ತು ' ಪೇಚಾಡುತ್ತಾ, ಹಾಗೆ ಕೆಳಗೆ ಕಣ್ಣಾಡಿಸಿಕೊಂಡು ಬಂದು ನೋಡಿದಾಗ ' ನಿನ್ನೆ ನಡೆದ ಈ ಗಲಭೆಯಲ್ಲಿ ಬ್ಯಾಂಕಿನಿಂದ ಹಣವನ್ನು ಡ್ರಾ ಮಾಡಿಕೊಂಡು ಬರುತ್ತಿದ್ದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ ಹಣವನ್ನು ದೋಚಿಕೊಂಡು ಹೋದ ಪರಿಣಾಮವಾಗಿ, ಆ ಆಘಾತವನ್ನು ತಾಳಲಾರದೆ ಹಣ ಕಳೆದುಕೊಂಡ ವ್ಯಕ್ತಿಯು ಸ್ಥಳದಲ್ಲೆ ಹೃದಯಾಘಾತದಿಂದ ನಿಧನರಾಗಿದ್ದಾರೆ, ಮೃತರಿಗೆ ವಿಧವೆ ಮಗಳು, ಕಾಯಿಲೆಯಿಂದ ಬಳಲುತ್ತಿರುವ ತಾಯಿ ಇದ್ದಾರೆ, ಕಳ್ಳರಿಗಾಗಿ ತೀವ್ರ ಶೋಧವನ್ನು ನಡೆಸಲಾಗುತ್ತಿದೆ ಎಂದು ಎಸ್ಪಿಯವರು ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.' ಆ ವಿಷಯವನ್ನು ಓದಿ ಕುಳಿತಕೊಂಡ ಜಾಗದಲ್ಲಿ ಭೂಮಿಯು ಬಾಯ್ತೆರೆದು ನುಂಗುವಂತೆ ಭಾಸವಾಗತೊಡಗಿತು ಅಖಿಲನಿಗೆ, ಕೈಯಲ್ಲಿ ಹಿಡಿದುಕೊಂಡಿದ್ದ ಟೀ ಕಪ್ ನ್ನು ಕೈ ಬಿಟ್ಟುಬಿಟ್ಟನು. ತನ್ನದೊಂದು ತಪ್ಪು ನಿರ್ಣಯದಿಂದ ಎಷ್ಟೇಲ್ಲ ಅನಾಹುತಗಾಳಗುತಿವು, ಸಾಕು...ಸಾಕು..ಇನ್ನೀಷ್ಟು ಅನಾಹುತಗಳಾಗುವ ಮುನ್ನವೆ, ರಮೇಶವರ ಮಗಳಿರುವ ಆಸ್ಪತ್ರೆಯನ್ನು ಹುಡುಕಬೇಕಿದೆ, ಹುಡುಕಿ ಅಂದುಕೊಂಡಂತೆ ಹಣವನ್ನು ಅವರ ಮಗಳ ಆಪರೇಷನ್ ಗೆ ಕೊಟ್ಟು ಅವಳನ್ನಾದರು ಬದುಕುಳಿಸಿದರೆ, ನನ್ನ ತಾಯಿಯನ್ನು ಉಳಿಸಿಕೊಂಡನೆಂಬ ಸಂತೃಪ್ತಿಯಾದರು ಸಿಗುತ್ತದೆ, ಹೌದು ನಾನೀಗ ಬೇಗ ಹೊರಡಲೆ ಬೇಕು,' ಎಂದವಸರದಿಂದೆದ್ದು, ನೂರರ ನೋಟನ್ನು ಟೇಬಲ್ ಮೇಲಿಟ್ಟು ಚಿಲ್ಲರೆಗೂ ಕಾಯದೆ ಹೊರಡಲು ಅನುವಾದಾಗಲೆ, ಒಂದು ಟ್ರ್ಯಾಕ್ಟರ್ ತನ್ನ ಟ್ರ್ಯಾಲಿಯ ತುಂಬಾ ಜನರನ್ನು ಹೊತ್ತುಕೊಂಡು ಚಹಾವನ್ನು ಕುಡಿಯಲಿಕ್ಕೆಂದು ಅಂಗಡಿಯ ಮುಂದೆ ಬಂದು ನಿಂತಿತು. ಗಾಡಿಯಿಂದಿಳಿದ ಜನರು ಅಂಗಡಿಯೊಳಕ್ಕೆ ಬರುತ್ತಿದ್ದಂತೆ, ಮಾಣಿಯು ಕೇಳಿದ, ' ಏನು ಇಷ್ಟೊಂದು ಜನ, ಊರಲ್ಲಿ ಕರ್ಪ್ಯೂ ಇದೆ ಊರಲ್ಲಿ ನಿಮ್ಮನ್ನೆಲ್ಲ ಬಿಡುವುದಿಲ್ಲ'
'ಏ ಇಲ್ರೀ ನಿನ್ನೆ ನಮ್ಮ ಬೀಗರ ಪೈಕಿ ಒಬ್ರ ತಿರ್ಕೊಂಡಾರಂತ ಅವರ ಶವ ಸಂಸ್ಕಾರಕ್ಕೆಂದು ಹೋಗುತ್ತಿದ್ದೇವೆ'
'ಯಾರದು..?'
' ಏ ನಿನ್ನೆ ಬ್ಯಾಂಕಿನೊಳಗಿಂದ ಹಣವನ್ನು ತರುವ ಸಮಯದಲ್ಲಿ ಯಾರೊ ಒಬ್ಬ ಕಳ್ಳ ಅವರಿಗೆ ಹೊಡೆದು ಹಣವನ್ನು ಹೊಡೆದುಕೊಂಡು ಹೋಗಿದ್ದಾನೆ, ಪಾಪ,ಒಬ್ಬಳು ಗಂಡ ಸತ್ತ ಮಗಳಿದ್ದಾಳೆ, ತಾಯಿ ಇವತ್ತೊ ನಾಳೆನೊ ಅನ್ನುವ ಹಾಗಿದ್ದಳು ಹೀಗಿರುವಾಗ ತಾನು ಸಾಯೊ ದಿನದಾಗ ಮಗನ ಬಾಯಿಗೆ ಮಣ್ಣ ಹಾಕ ಪರಿಸ್ಥಿತಿ ಬಂತು ಆ ಮುದುಕಿದು. ದೇವ್ರ ಆಟಾನ ಯಾರ ಬಲ್ಲಾರದಾರ ಹೇಳ್ರೀ' ಅವರ ಮಾತುಗಳನ್ನು ಕೇಳಿಸಿಕೊಂಡ ಅಖಿಲನು ಕ್ಷಣವು ನಿಲ್ಲದೆ ಅವಸರವಾಗಿ ಹೊರಟು ಅಂಗಡಿಯಿಂದ ಹೊರಗಡೆ ಬಂದುಬಿಟ್ಟನು, ಎರಡು ರಾತ್ರಿ  ಅಖಿಲನಿಗೆ ಸರಿಯಾಗಿ ನಿದ್ದೆಯಾಗಿರಲಿಲ್ಲ, ಮೈ ತುಂಬಾ ಸುಸ್ತಾಗಿದ್ದರಿಂದ ಕಣ್ಣು ಕತ್ತಲೆಗಟ್ಟಿದಂತಾಗಿ, ನಡೆಯುವಾಗ ತೊಡರಿ ನಡು ರಸ್ತೆಗೆ ಬಂದುಬಿಟ್ಟನು. ಏನಾಯಿತೆಂದು ಕಣ್ಣನ್ನು ತಿಕ್ಕಿ ತಲೆ ಜಾಡಿಸಿಕೊಂಡು ನೋಡುವ ಮೊದಲೆ, ಎದುರಿಗೆ ವೇಗವಾಗಿ ಬಂದ ಲಾರಿಯೊಂದು ಅಖಿಲನಿಗೆ ಡಿಕ್ಕಿಯನ್ನು ಹೊಡೆದು ಹೊರಟು ಹೋಯಿತು, ಗಾಡಿಯು ಗುದ್ದಿದ ರಭಸಕ್ಕೆ, ಗಾಳಿಗೆ ಸಿಕ್ಕ ತರಗಲೆಯಂತೆ ಅಖಿಲನ ದೇಹವು ಮೇಲೆ ಹಾರಿ ರೋಡಿನ ಮೇಲೆ ದಪ್ಪೆಂದು ಬಿದ್ದು ಬಿಟ್ಟಿತು, ಬೆನ್ನಿನ ಮೂಳೆ ಮೂರಿದು, ಬಿಕ್ಕಲಾರಂಬಿಸಿದನು, ಕೈಯಲ್ಲಿ ಹಿಡಿದುಕೊಂಡಿದ್ದ ಹಣದ ಬ್ಯಾಗು ಸಹ ಲಾರಿಯು ಡಿಕ್ಕಿ ಹೊಡೆದ ರಭಸಕ್ಕೆ ಹರಿದು, ಒಳಗಿದ್ದ ಬೀಡಿ ನೋಟುಗಳು, ನೋಟಿನ ಕಂತೆಗಳೆಲ್ಲ ಗೂಡಿನಿಂದ ಹೊರಬಂದು ರೆಕ್ಕೆಬಿಚ್ಚಿ ಹಾರುವ ಹಕ್ಕಿಗಳಂತೆ ಎಲ್ಲವು ಹೊರಗೆ ಬಿದ್ದು ಹಾರಾಡಾಲಾರಂಭಿಸಿದವು, ನೋಟುಗಳೆಲ್ಲ ಗಾಳಿಯಲ್ಲಿ ಹಾರಾಡುವುದನ್ನು ಟೀ ಕುಡಿಯಲೆಂದು ಬಂದ ಜನರೆಲ್ಲ ಕಂಡು ನಾ ಮುಂದು, ತಾ ಮುಂದು ಎಂದು ಹಣವನ್ನು ಆರಿಸಿಗೊಳ್ಳಲು ಮುಗಿಬಿದ್ದರು. ಅವರು ಆರಿಸಿಕೊಳ್ಳುವ ಭರದಲ್ಲಿ ರಸ್ತೆಯಲ್ಲಿ ಅಪಘಾತವಾಗಿ ಬಿದ್ದಿದ್ದ ಅಖಿಲನನ್ನು ಕೆಲವರು ತುಳಿದುಕೊಂಡೆ ಒಡಾಡಿದರು, ಬಿಕ್ಕುತ್ತಿದ್ದ ಅಖಿಲನು ಒಮ್ಮೆ ಸ್ಮಶಾನದತ್ತ ಕತ್ತನ್ನು ಹೊರಳಿಸಿ ನೋಡಿ, ಉರಿದು ಹೋದ ರಮೇಶನ ಬೂದಿ, ಹುಗಿದ ತಾಯಿಯ ಗೋರಿಯನ್ನು ನೋಡಿ, ತುಟಿಯಲ್ಲಿ ಚಿಕ್ಕ ನಗುವನ್ನು ತುಂಬಿಕೊಳ್ಳುತ್ತಾ, ಆಕಾಶದೆಡೆಗೆ ಮುಖವನ್ನು ಮಾಡಿದನು, ನೀಲಾಗಾಸದಲ್ಲಿ, ಅಖಿಲನ ತಾಯಿ, ರಮೇಶ, ಹಣವನ್ನು ಕಳೆದುಕೊಂಡು ಸತ್ತ ಆಸಾಮಿ, ಎಲ್ಲರು ನಗುತ್ತಾ, ಕೈ ಬಿಸಿ ಕೆರಯುವ ಹಾಗೆ ಭಾಸವಾಯಿತು. ಕಣ್ಣುಗಳು ಆಗಸವನ್ನೆ ನೋಡುತ್ತಾ ದೇಹವು ನಿಸ್ತೇಜಿತವಾಗಿಬಿಟ್ಟಿತು. ಬ್ಯಾಗಿನಿಂದ ಬಿಡುಗಡೆ ಹೊಂದಿ ಸ್ವಚ್ಛಂದವಾಗಿ ಗಾಳಿಯಲ್ಲಿ ಹಾರಾಡುತ್ತಿದ್ದ ಎರಡು ಸಾವಿರದ ನೋಟೊಂದು ಗಾಳಿಯಲ್ಲಿ ಅಲೆ ಅಲೆಯಾಗಿ ಇಳಿಯುತ್ತ ಬಂದು ಅಖಿಲನ ಎರಡು ಕಣ್ಣುಗಳು ಮೇಲೆ ಮಲಗಿಕೊಂಡಿತು.

No comments:

Post a Comment